ಸಿಂದಗಿ: ಧರ್ಮ ಮತ್ತು ಜಾತಿಗಳಲ್ಲಿ ವಿಷ ಬೀಜ ಬಿತ್ತಿ ಎಲ್ಲ ಸಮುದಾಯಗಳಲ್ಲಿ ಕಂದಕ ಸೃಷ್ಟಿಸಿ ಜಾತಿಗಳನ್ನು ಒಡೆದು ಬಿಜೆಪಿ ಪಕ್ಷ ಕಾರ್ಯನಿರ್ವಹಿಸುತ್ತಿದೆ ಎಂದು ಬಿಎಸ್ಪಿ ಅಭ್ಯರ್ಥಿ ಡಾ.ದಸ್ತಗಿರ ಮುಲ್ಲಾ ಆರೋಪಿಸಿದರು.
ಪಟ್ಟಣದ ಖಾಸಗಿ ಹೋಟೆಲಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತಾರೂಢ ಬಿಜೆಪಿ ಸರ್ಕಾರ ಒಂದು ಸಮುದಾಯವನ್ನು ಗುರಿಯಾಗಿ ಇಟ್ಟುಕೊಂಡು ಅಸಾಂವಿಧಾನಿಕವಾಗಿ ಮೀಸಲಾತಿಯನ್ನು ಕಿತ್ತೆಸೆಯಲಾಗಿದೆ.
ರಾಜ್ಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲೀಂರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯ ಎಂದು ಸಾಚಾರ್ ವರದಿ, ರಂಗನಾಥ ಮಿಶ್ರಾ ಆಯೋಗ, ಡಾ/ ಚಿನ್ನಪ್ಪ ಹಲವಾರು ಆಯೋಗಗಳು ಸರ್ಕಾರಗಳಿಗೆ ವರದಿ ಸಲ್ಲಿಸಿವೆ.
ಆದರೂ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಮುಸ್ಲಿಂ 2ಎ ಮೀಸಲಾತಿಯನ್ನು ತೆಗೆದಿರುವುದು ಅಸಾಂವಿಧಾನಕವಾಗಿದೆ ಅಲ್ಲದೆ ಒಕ್ಕಲಿಗರಿಗೆ ಮತ್ತು ಪಂಚಮಸಾಲಿ ಮೀಸಲಾತಿ ಕೊಟ್ಟಿದ್ದು ಸ್ವಾಗತಿಸುತ್ತೇವೆ ಆದರೆ ಒಂದು ಸಮುದಾಯದ ಮೀಸಲಾತಿಯನ್ನು ಕಿತ್ತುಕೊಂಡು ಸರ್ಕಾರವು ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ವಿರೋಧಿಸಬೇಕಾದ ವಿರೋಧ ಪಕ್ಷಗಳು ಸುಮ್ಮನೆ ಇರುವುದಾದರು ಏಕೆ ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಮುಸ್ಲಿಮರ ಓಟ್ ಬೇಕು ಆದರೆ ಮುಸ್ಲೀಂರ ಸಮಸ್ಯೆಗಳು ಬೇಡವಾಗಿದೆ ಒಕ್ಕಲಿಗ ಮತ್ತು ಪಂಚಮಸಾಲಿ ಸಮುದಾಯದ ಅಭ್ಯರ್ಥಿಗಳಿಗೆ ಮತ ಕೊಡುವುದಲ್ಲದೆ, ಮೀಸಲಾತಿಯನ್ನೂ ಕೊಡುವ ಪರಿಸ್ಥಿತಿ ನಿರ್ಮಾಣ ಆಗಿದೆ ಇವರಿಂದ ಅನ್ಯಾಯಕ್ಕೆ ಒಳಪಟ್ಟು ನ್ಯಾಯಸಮ್ಮತ ಓಟ್ ನೀಡಬೇಕು ಇದು ಯಾವ ನ್ಯಾಯ ? ಈ ನಾಟಕೀಯ ರಾಜಕಾರಣವನ್ನು ಬಿಟ್ಟು ಎಲ್ಲ ಸಮುದಾಯಗಳಿಗೆ ಸರಿಸಮನಾದ ನ್ಯಾಯ ಕೊಡುವುದಕ್ಕೆ ಮಾನದಂಡಗಳನ್ನು ಉಪಯೋಗಿಸಿ ಎಂದು ಆಕ್ರೋಶ ಹೊರಹಾಕಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಬಹುಜನ ಪಕ್ಷದ ರಾಜ್ಯ ಕಾರ್ಯದರ್ಶಿ ರಾಜು ಗುಬ್ಬೆವಾಡ, ಜಿಲ್ಲಾ ಮುಖಂಡರಾದ ಚಂದ್ರಶೇಖರ್ ದೇವೂರ, ಏಕನಾಥ ದ್ವಾಶಾಳ, ಜಿಲ್ಲಾ ಉಪಾಧ್ಯಕ್ಷ ಮಹ್ಮದ ಆಸ್ಪಾಕ ಕರ್ಜಗಿ, ತಾಲೂಕು ಅಧ್ಯಕ್ಷ ರಮೇಶ ಐಹೊಳೆ ಉಪಸ್ಥಿತರಿದ್ದರು.