ಬೀದರ – ಗಂಡ ಸತ್ತ ಹೆಣ್ಣು ಮಗಳಿಗೆ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿದೆ. ಗಂಡ ಸತ್ತವಳ ಮೇಲೆ ಈ ರೀತಿ ಪ್ರಹಾರ ಮಾಡ್ತಾರೆ ಅನ್ಕೊಂಡಿರಲಿಲ್ಲ ಎಂದು ಬಸವಕಲ್ಯಾಣದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ,ದಿ. ಬಿ ನಾರಾಯಣರಾವ್ ಅವರ ಪತ್ನಿ ಮಾಲಾ ಅಳಲು ತೋಡಿಕೊಂಡರು.
ಬಸವಕಲ್ಯಾಣದ ಟಿಕೆಟ್ ಕೈತಪ್ಪಿದ ಬೆನ್ನಲ್ಲೆ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟ ಅವರು ಕಾಂಗ್ರೆಸ್ ಪಕ್ಷ ನನಗೆ ಈ ರೀತಿ ಅನ್ಯಾಯ ಮಾಡುತ್ತದೆ ಎಂದು ಅಂದ್ಕೊಂಡಿರಲಿಲ್ಲ ಎಂದರು.
ಬಸವಕಲ್ಯಾಣ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ ಪುತ್ರ ವಿಜಯ್ಸಿಂಗ್ಗೆ ಪಕ್ಷದ ಟಿಕೆಟ್ ನೀಡಿದ್ದಕ್ಕೆ ಮಾಲಾ ನಾರಾಯಾಣರಾವ್ ಆಕ್ರೋಶ ವ್ಯಕ್ತಪಟಿಸಿದರಲ್ಲದೆ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟು ತಮ್ಮ ಪತಿಯನ್ನು ನೆನೆದರು.
ತಮಗೆ ಟಿಕೆಟ್ ತಪ್ಪಿದ್ದಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ, ಬೇರೆಯವರ ಹತ್ತಿರ ದುಡ್ಡಿದೆ ನನ್ನ ಹತ್ತಿರ ಇಲ್ಲ ಎಂದ ಅವರು, ದುಡ್ಡಿಗಾಗಿ ಬೇರೆಯವರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳುತ್ತಾರೆ ಆದರೆ ನನ್ನನ್ನು ಖರೀದಿಸುವ ಗಂಡು ಈ ದೇಶದಲ್ಲೇ ಹುಟ್ಟಿಲ್ಲ. ನಾನು ಮಾರಾಟಕ್ಕಿಲ್ಲ ಎಂದು ಅಗಲಿದ ಪತಿಯ ಮೇಲೆ ಆಣೆ ಮಾಡಿದರು.
ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಕುರಿತು ಇಂಗಿತ ವ್ಯಕ್ತಪಡಿಸಿದ ಮಾಲಾ ನಾರಾಯಣರಾವ್ ಈ ಬಗ್ಗೆ ಕ್ಷೇತ್ರದ ಜನತೆಯ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.
ವರದಿ: ನಂದಕುಮಾರ ಕರಂಜೆ, ಬೀದರ