Homeಲೇಖನಹೊಸ ಹೊಳಲು ಶ್ರೀ ಲಕ್ಷ್ಮೀನಾರಾಯಣ ಕ್ಷೇತ್ರ

ಹೊಸ ಹೊಳಲು ಶ್ರೀ ಲಕ್ಷ್ಮೀನಾರಾಯಣ ಕ್ಷೇತ್ರ

ಬೆಂಗಳೂರು – ಮಂಡ್ಯ ಜಿಲ್ಲೆ ಕೃಷ್ಣರಾಜ ಪೇಟೆಯಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿರುವ ಲಕ್ಷ್ಮೀನಾರಾಯಣ ಕ್ಷೇತ್ರವೇ ಹೊಸಹೊಳಲು. ಈ ಊರಿಗೆ ಈ ಹೆಸರು ಬಂದಿದ್ದು ಹೇಗೆ ಎಂಬ ಬಗ್ಗೆ ಐತಿಹ್ಯವಿದೆ.

ಇಲ್ಲಿ ಊರ ಮಧ್ಯದಲ್ಲಿ 13ನೇ ಶತಮಾನದಲ್ಲಿ ನಿರ್ಮಿಸಲಾದ ಹೊಯ್ಸಳರ ಕಾಲದ ಭವ್ಯವಾದ ದೇವಾಲಯವಿದೆ. ಈ ದೇವಾಲಯದ ನಿರ್ಮಾಣ ಕಾಲದಲ್ಲಿ ಗರುಡಗಂಬವನ್ನು ನಿಲ್ಲಿಸಲು ಭೂಮಿಯನ್ನು ಅಗೆದಾಗ, ಅಲ್ಲಿ ಹೊಳೆಯುವ ಹರಳುಗಳು ಸಿಕ್ಕವಂತೆ. ಹೊಚ್ಚ ಹೊಸ ಬಗೆಯ ಹೊಳೆಯುವ ಹೊಸ ಹರಳುಗಳು ಸಿಕ್ಕ ಊರು ಹೊಸ ಹರಳು ಎಂದೇ ಖ್ಯಾತಿವಾಗಿತ್ತಂತೆ. ಕಾಲಕ್ರಮೇಣ ಅಪಭ್ರಂಶವಾಗಿ ಹೊಸ ಹೊಳಲು ಆಗಿದೆ ಎನ್ನಲಾಗುತ್ತದೆ.

ಗಂಗರು ಮತ್ತು ಚೋಳರ ಆಳ್ವಿಕೆಗೆ ಒಳಪಟ್ಟಿದ್ದ ಈ ಊರು ಹೊಯ್ಸಳರ ಕಾಲದಲ್ಲಿ ಅಗ್ರಹಾರವಾಗಿತ್ತು ಎಂದು ತಿಳಿದುಬರುತ್ತದೆ. ವಿಜಯನಗರದ ಅರಸರ ಕಾಲದಲ್ಲಿ ಈ ಊರಿನ ಸುತ್ತ ಕೋಟೆ ನಿರ್ಮಿಸಲಾಗಿತ್ತು ಎಂದು ತಿಳಿದುಬರುತ್ತದೆ. ಆದರೆ ಇಲ್ಲಿರುವ ಈ ಅದ್ಭುತ ದೇವಾಲಯವನ್ನು ಯಾರು, ಯಾವ ಕಾಲದಲ್ಲಿ ಕಟ್ಟಿದರು ಎಂಬುದಕ್ಕೆ ಸ್ಪಷ್ಟ ಆಧಾರಗಳು ದೊರೆತಿಲ್ಲ. ಮುಖ್ಯದ್ವಾರದಿಂದ ಒಳಹೊಕ್ಕೊಡನೆ ಸಾಧಾರಣ ದೇವಾಲದಂತೆ ಭಾಸವಾಗುತ್ತದೆ. ಆದರೆ ಹಿಂಬದಿಯಲ್ಲಿನ ಗೋಪುರ ಹಾಗೂ ಬಿತ್ತಿಗಳಲ್ಲಿನ ಸೂಕ್ಷ್ಮ ಕೆತ್ತನೆ ಭವ್ಯತೆಗೆ ಸಾಕ್ಷಿಯಾಗಿದೆ.

ಇಲ್ಲಿರುವ ಭವ್ಯ ಹೊಯ್ಸಳ ವಾಸ್ತುಶಿಲ್ಪ ಹಾಗೂ ಕಲಾ ಶ್ರೀಮಂತಿಕೆಯ ದೇವಾಲಯ ಊರಿನ ಪ್ರಧಾನ ಆಕರ್ಷಣೆ.

ದೇವಾಲಯದ ಸುತ್ತಲೂ ಇರುವ ಬಿತ್ತಿಗಳಲ್ಲಿ ಹಾಗೂ ಒಳ ಆವರಣದಲ್ಲಿ ಇರುವ ಕಲಾ ವೈಭವವನ್ನು ನೋಡುವುದೇ ಒಂದು ಸೊಬಗು. ಈ ದೇವಾಲಯ ಬೇಲೂರು, ಹಳೆಬೀಡು, ನುಗ್ಗೇಹಳ್ಳಿ, ಬಸರಾಳು, ಜಾವಗಲ್, ಸೋಮನಾಥಪುರ ದೇವಾಲಯ ಮಾದರಿಯಲ್ಲೇ ಇದ್ದು, ಸುಂದರ ಹಾಗೂ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದೆ.

ನಿರೂಪಣೆ : ಡಾಕ್ಟರ್ ಗುರುಮೂರ್ತಿ ಗುರೂಜಿ

RELATED ARTICLES

Most Popular

error: Content is protected !!
Join WhatsApp Group