ಗಾಂಧಿ ಚಿಂತಕ ಎಲ್. ನರಸಿಂಹಯ್ಯ ಅಭಿಮತ
‘ಗಾಂಧಿ ಯುಗವೆಂದರೆ ಭಾರತದ ಸ್ವಾತಂತ್ರ್ಯಾಂದೋಲನದ ಕಾಲಘಟ್ಟ ಎಂದೇ ಅರ್ಥ. ಗಾಂಧೀಜಿಯವರ ಧ್ಯೇಯ-ಉದ್ದೇಶಗಳು ಹಾಗೂ ಬೋಧನೆಗಳು ಭಾರತೀಯರನ್ನು ಪ್ರಭಾವಿಸಿವೆ. ಭಾರತದಲ್ಲಿ ಜೀವನದ ಮೂಲಭೂತ ಮೌಲ್ಯಗಳು ಶ್ರೀ ಸಾಮಾನ್ಯರಿಂದ ಅಂಗೀಕೃತವಾಗಿ ಅನುಷ್ಠಾನದಲ್ಲಿವೆ; ಗಾಂಧಿಗ್ರಾಮ ಭಾರತದಲ್ಲಿನ್ನೂ ಉಳಿದಿದೆ, ಗಾಂಧೀ ಚಿಂತನೆಗಳು, ಗ್ರಾಮೀಣರ ಶಕ್ತಿ, ಅಭ್ಯುದಯ ಹಾಗೂ ಸುಖಗಳನ್ನು ಬೆಳೆಸುತ್ತಲಿವೆ’ ಎಂದು ತುಮಕೂರಿನ ಹಿರಿಯ ಶಿಕ್ಷಣ ತಜ್ಞ- ಗಾಂಧಿ ಚಿಂತಕ ಎಲ್. ನರಸಿಂಹಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ಸರ್ವೋದಯ ಮಂಡಲ, ಬೆಂಗಳೂರು ನಗರ ಜಿಲ್ಲಾ ಘಟಕ ಮತ್ತು ಭಾರತ ಸೇವಾದಳ, ಸಂಯುಕ್ತಾಶ್ರಯದಲ್ಲಿ ಕುಮಾರ ಪಾರ್ಕ್ ಪೂರ್ವದ ನಾ.ಸು.ಹರ್ಡಿಕರ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸ್ವಾತಂತ್ರ್ಯ ಅಮೃತ ಮಹೋತ್ಸವ – ಪೂರ್ವೋತ್ತರಗಳು ಮತ್ತು ನಾವು ಕುರಿತು ವಿಶೇಷ ಉಪನ್ಯಾಸ ಹಾಗೂ ಗುರುವಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು.
ಕರ್ನಾಟಕ ಸರ್ವೋದಯ ಮಂಡಲ ಅಧ್ಯಕ್ಷ ಡಾ.ಎಚ್. ಎಸ್.ಸುರೇಶ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಗೌರವ ಕಾರ್ಯದರ್ಶಿ ಡಾ. ಯ. ಚಿ. ದೊಡ್ಡಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೋಶಾಧಿಕಾರಿ ವಿರೂಪಾಕ್ಷ ಟಿ.ಹುಡೇದ್, ಬೆಂ.ನ.ಜಿ. , ಕ .ಸ ಮಂ.ಅಧ್ಯಕ್ಷ ಡಾ. ಗುರುರಾಜ ಪೆÇೀಶೆಟ್ಟಿಹಳ್ಳಿ ಹಾಗೂ ಭಾರತ ಸೇವಾ ದಳದ ದಳಪತಿ ಕಾಶೀನಾಥ ಹಂದ್ರಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಧುನಿಕ ಕಾಲದಲ್ಲಿ ಸರ್ವೋದಯ ಪರಿಕಲ್ಪನೆಯನ್ನು ಮೊಟ್ಟಮೊದಲ ಬಾರಿಗೆ ಬಳಸಿದವರು ಮಹಾತ್ಮ ಗಾಂಧೀಜಿ. ಸರ್ವೋದಯ ಎಂದರೆ ‘ಸರ್ವರ ಏಳಿಗೆ’ ಎಂದರ್ಥ. ಅಂದರೆ ಸರ್ವಜನರ ಏಳ್ಗೆ ಅಥವಾ ಸುಖ ಸಂತೋಷವೆಂದರ್ಥ. ಇದು ಗಾಂಧೀಜಿಯವರ ಕಲ್ಯಾಣ ರಾಷ್ಟ್ರದ ಪರಿಭಾವನೆಯ ಆಶಯವಾಗಿದೆ. ಮಾನವ ಕುಲಕ್ಕೆ ಗಾಂಧೀಜಿಯವರು ಕೊಟ್ಟ ಅತ್ಯಮೂಲ್ಯ ಕೊಡುಗೆ ಸರ್ವೋದಯವಾಗಿದ್ದು, ಸಕಲ ವ್ಯಕ್ತಿಗಳ ಆಧ್ಯಾತ್ಮಿಕ, ಆರ್ಥಿಕ, ಸಾಮಾಜಿಕ ಹಾಗೂ ಸಂಸ್ಕøತಿಯ ಮುನ್ನಡೆಯೇ ಸರ್ವೋದಯದ ಗುರಿಯಾಗಿದೆ. ಸಮಾಜದಲ್ಲಿ ಕಟ್ಟ ಕಡೆಯಲ್ಲಿರುವವರಿಗೆ ಪ್ರಪ್ರಥಮ ಆದ್ಯತೆ ಕೊಟ್ಟು, ಅವರಿಂದ ಮೊದಲುಗೊಂಡು ಎಲ್ಲರ ಸರ್ವಾಂಗೀಣ ಏಳಿಗೆ ಸಾಧಿಸುವುದು ಸರ್ವೋದಯದ ಮೂಲ ಆಶಯವಾಗಿದೆ.