ಬೆಂಗಳೂರು: ನೂರು ದಿನಗಳ ಹಿಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನಿಲುವು ತಾಳುವ ಮೂಲಕ ಶ್ರೀನಿವಾಸಪುರ ತಾಲೂಕಿನ ನಾರಮಾಕಲಹಳ್ಳಿ ಗ್ರಾಮದ ರೈತರ ಮೇಲೆ ದೌರ್ಜನ್ಯವೆಸಗಿ ಅವರ ಮೇಲೆ ಮೊಕದ್ದಮೆ ಹೂಡಿರುವುದು ಇದು ರೈತ ವಿರೋಧಿ ಸರ್ಕಾರ ಎಂಬುವುದು ಸಾಬೀತಾಗಿದೆ. ರೈತರ ಮೇಲೆ ಹೂಡಿರುವ ಮೊಕದ್ದಮೆಯನ್ನು ಹಿಂಪಡೆದು ಬೆಳೆ ಹಾನಿಗೊಳಾಗದ ರೈತರಿಗೆ ಬೆಳೆ ಹಾನಿ ಪರಿಹಾರ ಒದಗಿಸದಿದ್ದಲ್ಲಿ ಸರ್ಕಾರದ ವಿರುದ್ದ ಬಾರಕೋಲ ಚಳವಳಿ ಮಾಡಲಾಗುವುದೆಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಹಾಗೂ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.
ಸುಮಾರು 150 ಜನ ರೈತರ ಮೇಲೆ ಅರಣ್ಯ ಇಲಾಖೆ ಮೊಕದ್ದಮೆ ದಾಖಲಿಸಿದೆ ಅದರಲ್ಲಿ 15 ಜನ ರೈತರನ್ನು ಬಂಧಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ತಳ್ಳಿದೆ. ಆ ರೈತರನ್ನು ಭೇಟಿಯಾಗಿ ಅವರಿಗೆಲ್ಲಾ ಸಾಂತ್ವನ ಹೇಳಿ ಧೈರ್ಯ ತುಂಬಿ ಬಂದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಕಳೆದ 30 ವರ್ಷಗಳಿಂದ 3850 ಎಕರೆ ಜಮೀನಿನಲ್ಲಿ ತೋಟಗಾರಿಕೆ ಬೆಳೆಗಳಾದ ಮಾವು, ಟೋಮೆಟೋ, ಕ್ಯಾರೆಟ್, ಕ್ಯಾಪ್ಸಿಕಾಮ್, ಬದನೆ, ಹೂಕೂಸು ಇಂಥ ಹಲವಾರು ಕೋಟ್ಯಂತರ ರೂಪಾಯಿಗಳ ಬೆಲೆಬಾಳುವ ತೋಟಗಾರಿಕೆಯ ಎಲ್ಲಾ ಬೆಳೆಗಳನ್ನು ಹಾಳು ಮಾಡಿದ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ನ್ಯಾಯ ಕೊಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು ಮತ್ತು ರಾಜ್ಯದ ಸಂಬಂಧಪಟ್ಟ ಸಚಿವರು ಆ ಜಿಲ್ಲೆಗೆ ಭೇಟಿ ಕೊಡುವ ಮೂಲಕ ಅಧಿಕಾರಿಗಳ ದೌರ್ಜನ್ಯಕ್ಕೆ ತುತ್ತಾಗಿರುವ ರೈತರಿಗೆ ಧೈರ್ಯ ತುಂಬಿ, ಸಾಂತ್ವನ ಹೇಳಬೇಕು. ಒಂದು ವೇಳೆ ಇದೇ ರೀತಿ ರೈತರ ಮೇಲೆ ದೌರ್ಜನ್ಯಗಳು ಮುಂದುವರೆದರೆ ಬಿಜೆಪಿ ರೈತ ಮೋರ್ಚಾ ರೈತರೊಂದಿಗೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಸರ್ಕಾರವನ್ನು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ, ರಾಜ್ಯ ಉಪಾಧ್ಯಕ್ಷ ಲೋಕೇಶಗೌಡ, ಬೆಂಗಳೂರು ಉತ್ತರ ಜಿಲ್ಲೆ ರೈತ ಮೋರ್ಚಾ ಜಿಲ್ಲಾಧ್ಯಕ ಕೆ. ಆರ್. ಸತೀಶ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಅಶೋಕ ಮುತ್ಸಂದ್ರ, ರಾಜ್ಯ ಕಾರ್ಯಕಾರಿಣಿ ಸದಸ್ಯ ನಂಜೇಶ ರೆಡ್ಡಿ, ರಾಜ್ಯ ಖಂಜಾಚಿಗಳಾದ ವೇಣುಗೋಪಾಲ ರೆಡ್ಡಿ ಹಾಗೂ ಇತರ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.