ಮೂಡಲಗಿ: ರಾಜ್ಯದ ಎಲ್ಲಾ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಪ್ರಮುಖ ಬೇಡಿಕೆಗಳಾದ ಪಿಡಿಒ ಅವರ ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಬೇಕು ಸೇರಿದಂತೆ ಹಲವು ಬೇಡಿಕೆಗಳಿಗೆ ಒತ್ತಾಯಿಸಿ ಮೂಡಲಗಿ ತಾಲ್ಲೂಕು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಸಂಘದ ಪದಾಧಿಕಾರಿಗಳು ರಾಜ್ಯ ಸಂಘದ ನಿರ್ದೇಶನದಂತೆ ಬುಧವಾರ ಅಸಹಕಾರ ಚಳವಳಿಯನ್ನು ಮಾಡಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಎಸ್. ಚಿನ್ನನವರ ಅವರಿಗೆ ಮನವಿ ನೀಡಿದರು.
ರಾಜ್ಯದ ಎಲ್ಲಾ ಪಂಚಾಯ್ತಿ ಅಭಿವೃಧ್ಧಿ ಅಧಿಕಾರಿಗಳ ಹುದ್ದೆಯನ್ನು ಏಕಕಾಲದಲ್ಲಿ ‘ಬಿ’ ವೃಂದಕ್ಕೆ ಮೇಲ್ದರ್ಜೆಗೇರಿಸದೆ ಇರುವುದು ಹಾಗೂ ಅರ್ಹ ಪಿಡಿಒ ಅವರಿಗೆ ಸಹಾಯಕ ನಿರ್ದೇಶಕರ ಹುದ್ದೆಗಳಿಗೆ ಬಡ್ತಿ ನೀಡದಿರುವುದು ಬಗ್ಗೆ ಇಲಾಖೆಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರು ಇನ್ನುವರೆಗೆ ಕಾರ್ಯರೂಪಕ್ಕೆ ಬಂದಿರುವದಿಲ್ಲ. ಪಿಡಿಒಗಳ ಮೂರು ಪ್ರಮುಖ ಬೇಡಿಕೆಗಳನ್ನು ತೀವ್ರವಾಗಿ ಈಡೇರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಇಲಾಖೆಯ ತುರ್ತು ಕೆಲಸಗಳನ್ನು ಹೊರತು ಪಡಿಸಿ ಉಳಿದ ಕೆಲಸಗಳಿಗೆ ಅಸಹಕಾರ ಚಳವಳಿಯ ಮೂಲಕ ಮೊದಲ ಹಂತದ ಮುಷ್ಕರವಾಗಿದ್ದು, ಮುಂದಿನ ಹಂತವಾಗಿ ಆಯಾ ಜಿಲ್ಲಾ ಪಂಚಾಯ್ತಿ ಕಚೇರಿಗಳ ಮುಂದೆ ನಂತರ ಹಂತವಾದ ಬೆಂಗಳೂರಿನ ಪ್ರೀಡಂ ಪಾರ್ಕದಲ್ಲಿ ಬೃಹತ ಪ್ರತಿಭಟನೆ ಮಾಡಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕಾ ಪಿಡಿಒ ಸಂಘದ ಅಧ್ಯಕ್ಷ ಸತ್ಯಪ್ಪ ಬಬಲಿ, ಪ್ರಧಾನ ಕಾರ್ಯದರ್ಶಿ ಶ್ರೀಶೈಲ ತಡಸನವರ, ಗಂಗಾಧರ ಮಲ್ಹಾರಿ, ಶಿವಾನಂದ ಗುಡಸಿ, ಹಣಮಂತ ಬಸಳಿಗುಂದಿ, ಅಂಜನಾ ಗಚ್ಛಿ, ಉದಯಕುಮಾರ ಬೆಳ್ಳುಂಡಗಿ, ರವಿ ಮರೆನ್ನವರ, ಅನುರಾಧಾ ಭಜಂತ್ರಿ, ಪುಂಡಲೀಕ ಬಾರ್ಕಿ ಇದ್ದರು.