ಸಿಂದಗಿ: ಜಗತ್ತಿನ ಮೂಲ ಇಂಜನಿಯರ್ಸ ಸೊನ್ನಲಗಿ ಸಿದ್ದರಾಮೇಶ್ವರರ ವಂಶಸ್ಥರು ಭೋವಿ ವಡ್ಡರ ಜನಾಂಗವಾಗಿದೆ ಇವರ ಮೂಲ ಕಸಬು ಮಣ್ಣು ಹೊರುವುದು, ಕಲ್ಲು ಒಡೆಯುವುದು ಅದಕ್ಕೆ ಪ್ರಪಂಚದ ಉಗಮವಾಗುವಲ್ಲಿ ಭೋವಿಗಳ ಪಾತ್ರ ಹಿರಿದಾದದ್ದು ಅದಕ್ಕೆ ನಾವೆಲ್ಲರ ಮೂಲ ಕಾಯಕ ಭೋವಿ ಜನಾಂಗದವರ ಕಾಯಕವನ್ನು ಕೀಳರಿಮೆಯಿಂದ ನೋಡದೇ ನಾವೆಲ್ಲ ಭೋವಿಗಳು ಎಂದು ಎದೆ ತಟ್ಟಿ ಹೇಳಬೇಕಲ್ಲದೇ ಮೂಲ ಕಸಬನ್ನು ಮರೆಯಬಾರದು ಎಂದು ಸಿ.ಎಂ.ಮನಗೂಳಿ ಕಾಲೇಜಿನ ಪ್ರಾಧ್ಯಾಪಕ ಡಾ. ಅರವಿಂದ ಮನಗೂಳಿ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡ ಶಿವಯೋಗಿ ಸಿದ್ದರಾಮೇಶ್ವರ 851ನೇ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿ, ಹನ್ನೆರಡನೇ ಶತಮಾನದ ಜಗಜ್ಯೋತಿ ಬಸವೇಶ್ವರರು ಹಾಗೂ ಸಿದ್ದರಾಮೇಶ್ವರರು ಕಾಯಕಯೋಗಿ ಶ್ರೇಷ್ಠ ವಚನಕಾರರಾಗಿದ್ದರು ಅಂತೇಯೆ ಎಲ್ಲ ಶರಣರು ಅವರನ್ನು ಅಪ್ಪಿಕೊಂಡಿದ್ದರು.
ಡಾ. ಅಂಬೇಡ್ಕರರು ಬರೀ ಎಸ್ಸಿ ಎಸ್ಟಿ ಜನಾಂಗದವರಿಗಾಗಿ ಮಾತ್ರ ಮಿಸಲಾತಿ ಕಲ್ಪಿಸಿ ಸಂವಿಧಾನ ರಚಿಸದೇ ಸಮ ಸಮ ಸಮಾಜ ನಿರ್ಮಾಣಕ್ಕೆ ಎಲ್ಲ ಸಮಾಜದ ಸಮಾನತೆಗಾಗಿ ಮಿಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಸಂವಿದಾನ ರಚಿಸಿದ್ದಾರೆ ಅದಕ್ಕೆ ಅವರನ್ನು ಒಂದೇ ಸಮಾಜಕ್ಕೆ ಸಿಮೀತಗೊಳಿಸದೇ ಅವರನ್ನು ಸಮಾಜವನ್ನು ಅಪ್ಪಿಕೊಳ್ಳುವಂತಾಗಬೇಕು. ಅವರಂತೆ ಸಿದ್ದರಾಮೇಶ್ವರರು ಸಮಾಜ ಸೇವೆಯಲ್ಲಿ ತೃಪ್ತಿಪಡೆಯುತ್ತಿದ್ದರು. 12 ನೇ ಶತಮಾನದಲ್ಲಿನ ಸಾಮಾಜಿಕ ಕ್ರಾಂತಿಗೆ ಶಿವಯೋಗಿ ಸಿದ್ದರಾಮೇಶ್ವರರ ಕೊಡುಗೆ ಗಮನಾರ್ಹವಾದುದು, ಅವರು ಅಸಮಾನತೆ, ವರ್ಣ, ಜಾತಿ, ಲಿಂಗಭೇದವನ್ನು ತೊಡೆದು ಹಾಕುವ ಕೆಲಸವನ್ನು ವಚನಗಳ ಮೂಲಕ ಮಾಡಿದವರು ಅಂಥವರ ತತ್ವಾದರ್ಶಗಳನ್ನು ನಾವೆಲ್ಲರೂ ಮೈಗೂಡಿಕೊಂಡಾಗ ಮಾತ್ರ ಜಯಂತಿ ಆಚರಿಸಿದ್ದಕ್ಕೆ ಸ್ವಾರ್ಥಕವಾಗುತ್ತದೆ ಎಂದರು.
ಕಸಾಪ ನಿಕಟ ಪೂರ್ವ ಅಧ್ಯಕ್ಷ ರಾಜಶೇಖರ ಕೂಚಬಾಳ ಮಾತನಾಡಿ, ಬಸವಣ್ಣನವರ ಅನುಭವ ಮಂಟಪದಲ್ಲಿ ಮೂರನೇ ಪೀಠಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಮನುಜ ಮನುಕುಲಕ್ಕೆ ಉದ್ದಾರ ಮಾಡದೇ ಪ್ರಾಣ , ಪಶು ಪಕ್ಷಿಗಳಿಗಾಗಿ ಅರವಟ್ಟಿಗಳನ್ನು ನಿರ್ಮಿಸಿ ಚೆನ್ನಬಸವಣ್ಣನವರ ಪರಮ ಶಿಷ್ಯರಾಗಿ ಸಾಮಾಜಿಕವಾಗಿ ವಚನಗಳ ಮೂಲಕ ಉದ್ಧಾರ ಮಾಡಿದ್ದಾರೆ. ಸಿದ್ದರಾಮೇಶ್ವರರು ಕಾಯಕಯೋಗಿಗಳು, ಕರ್ಮಯೋಗಿಗಳು ಅವರಂತೆ ಅವರ ಸಮುದಾಯದ ಯುವಪಿಳಿಗೆ ಇತಿಹಾಸವನ್ನು ಅರಿತು ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಮಾತನಾಡಿ, ಇಂದಿನ ಯುವಜನತೆ ಧಾರ್ಮಿಕತೆಯೆಡೆಗೆ ಹೋಗದೇ ಆಧುನಿಕ ಜಗತ್ತಿನೆಡೆಗೆ ಹೋಗಿ ದಾರಿ ತಪ್ಪುತ್ತಿದ್ದಾರೆ. ಕಾರಣ ಶರಣರ ಚರಿತ್ರೆಗಳನ್ನು ಹಿಂದಿರುಗಿ ನೋಡಲು ನೈತಿಕ ಶಿಕ್ಷಣ ಅತ್ಯಗತ್ಯ ಎಂದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ.ಎಂ.ಹಂಗರಗಿ, ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ, ಕೃಷಿ ಅಧಿಕಾರಿ ಡಾ. ಎಚ್.ವೈ.ಸಿಂಗೆಗೋಳ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಭೋವಿ ಸಮಾಜದ ತಾಲೂಕು ಅಧ್ಯಕ್ಷ ಪಂಡಿತ ಯಂಪೂರೆ ವೇದಿಕೆ ಮೇಲಿದ್ದರು.
ಕಂದಾಯ ಇಲಾಖೆಯ ಜಿ.ಎಸ್.ರೋಡಗಿ, ಶಿರಸ್ತೆದಾರ ಇಂದ್ರಾಬಾಯಿ ಬಳಗಾನೂರ, ಎಸ್.ಎಂ.ತಾರನಾಳ, ಕಾನಿಪ ಅಧ್ಯಕ್ಷ ಆನಂದ ಶಾಬಾದಿ, ಸೈನಾಬಿ ಮಸಳಿ, ವರ್ಷಾ ಪಾಟೀಲ, ಶ್ರೀನಿವಾಸ ಓಲೆಕಾರ, ಸಾಯಬಣ್ಣ ದೇವರಮನಿ, ಭೋವಿ ಸಮಾಜದ ಮುಖಂಡರಾದ, ಕೊಳ್ಳಪ್ಪ ಚಾಕರೆ, ಭೀಮಾಶಂಕರ ಯಂಪೂರೆ, ದಿಲೀಪ ಆಲಕುಂಟೆ, ಭೀಮಣ್ಣ ಬಂಡಿವಡ್ಡರ, ರವಿ ಚಾಕರೆ, ತಿರುಪತಿ ಬಂಡಿವಡ್ಡರ, ರವಿ ವಡ್ಡರ, ಮುತ್ತು ಆಲಕುಂಟೆ, ಪ್ರವೀಣ ಯಂಪೂರೆ, ಪರಶುರಾಮ ಯಂಪೂರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜ್ಞಾನ ಭಾರತಿ ವಿದ್ಯಾ ಮಂದಿರ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪಂಡಿತ ಯಂಪೂರೆ ಸ್ವಾಗತಿಸಿದರು. ಪ್ರಾಧ್ಯಾಪಕ ಮಹಾಂತೇಶ ನೂಲಾನವರ ನಿರೂಪಿಸಿದರು. ಸುನಂದಾ ಯಂಪೂರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಮುತ್ತಪ್ಪ ಪಾತ್ರೋಟಿ ವಂದಿಸಿದರು.