Homeಸುದ್ದಿಗಳುಜ್ಞಾನ ವ್ಯಸನಿ ಸತ್ಯ ಕಂಡುಕೊಳ್ಳಲಾರ

ಜ್ಞಾನ ವ್ಯಸನಿ ಸತ್ಯ ಕಂಡುಕೊಳ್ಳಲಾರ

ಜ್ಞಾನ ಸಂಗ್ರಹ ವ್ಯಸನಿಯಾದ ವ್ಯಕ್ತಿ ಸತ್ಯವನ್ನು ಕಂಡುಕೊಳ್ಳಲಾರ. ಏಕೆಂದರೆ ಆತನಿಗೆ ಜ್ಞಾನದ ಬಗ್ಗೆ ಕಳಕಳಿ ಇದೆಯೇ ಹೊರತು ಸತ್ಯದ ಬಗ್ಗೆ ಇಲ್ಲ. ಇದರರ್ಥ ತುಂಬಾ ಓದಿ ತಿಳಿದವನಲ್ಲಿ ಸತ್ಯವಿರದು ತುಂಬಾ ಅನುಭವಿಸಿ ತಿಳಿದವನಲ್ಲಿ ಸತ್ಯವಿರುವುದು. ಸತ್ಯ ಒಂದೇ ಆಗಿರುವಾಗ ಹೊರಗಿನಿಂದ ಓದಿದ್ದನ್ನು ಒಳಗೇ ಅಳವಡಿಸಿಕೊಂಡು ಅನುಭವಿಸಿದಾಗಲೇ ಸತ್ಯ ಒಂದಾಗೋದು.

ಇದರಲ್ಲಿ ಅಧ್ಯಾತ್ಮ ಸತ್ಯ ಭೌತಿಕ ಸತ್ಯ ಎರಡಿದ್ದರೂ ಅಧ್ಯಾತ್ಮ ಸತ್ಯ ಕಣ್ಣಿಗೆ ಕಾಣದಿದ್ದರೂ ಅರಿವಿಗೆ ಬರುತ್ತದೆ. ಭೌತಿಕ ಸತ್ಯ ಅರಿವಿಗೆ ಬಂದು ಕಣ್ಣಿಗೆ ಕಂಡರೂ ಪೂರ್ಣ ಸತ್ಯವಿರದು. ಹೀಗಾಗಿ ಜ್ಞಾನ ಸಂಗ್ರಹ ಒಂದು ವ್ಯಸನವಾಗದಿದ್ದರೆ ಉತ್ತಮ.

ನಾನು ಎಷ್ಟೋ ಪುಸ್ತಕಗಳನ್ನು ಓದಿ ತಿಳಿದೆ ಎನ್ನುವ ಮೊದಲು ಎಷ್ಟು ಮಸ್ತಕದೊಳಗಿನಿಂದ ಹೃದಯಾಂತರಾಳದೊಳಗೆ ಇಳಿಸಿಕೊಂಡು ಅನುಭವಿಸಿದೆ ಎನ್ನುವ ಪ್ರಶ್ನೆಗೆ ಉತ್ತರವಿದ್ದರೆ ಅದೇ ಸತ್ಯ ಜ್ಞಾನ.‌ ಕಾರಣ ಸತ್ಯ‌  ಒಳಗಿನಿಂದ ತಿಳಿಯೋದೇ ಬೇರೆ ಹೊರಗಿನಿಂದ ಕಾಣೋದೇ ಬೇರೆ. ಹಣಸಂಗ್ರಹ, ಜ್ಞಾನಸಂಗ್ರಹ ಎರಡೂ ಜೀವನಕ್ಕೆ ಅಗತ್ಯವಿದೆ. ಅತಿಯಾದರೆ ಗತಿಗೇಡು. ದೇಹವೇ ದೇಗುಲವಾದಾಗ ದೈವತ್ವದ ವಿಚಾರದಿಂದ ದೇಹದಲ್ಲಿರುವ  ದೈವ ಶಕ್ತಿ ಹೆಚ್ಚುವುದು. ಅದೇ ದೈವ ಶಕ್ತಿ ಅತಿಯಾದರೂ  ಮನಸ್ಸು  ಹಿಡಿತದಲ್ಲಿರದು. ಅದಕ್ಕಾಗಿ ಒಂದೇ ದೇವರನ್ನು ಆರಾಧಿಸುತ್ತಾ ಸತ್ಯ ಧರ್ಮದೆಡೆಗೆ ನಡೆಯುವುದೇ ಉತ್ತಮ. ಹಾಗೆಯೇ ಅಸುರಿ ಶಕ್ತಿಯೂ ಇರುತ್ತದೆ. ಅತಿಯಾಗಿ ಸ್ವಾರ್ಥ ಅಹಂಕಾರ ಬೆಳೆದರೆ ಕಷ್ಟ ನಷ್ಟ ತಪ್ಪಿದ್ದಲ್ಲ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

RELATED ARTICLES

Most Popular

error: Content is protected !!
Join WhatsApp Group