ಪೊಲೀಸರು ನಿದ್ದೆಯಿಂದ ಎಚ್ಚತ್ತುಕೊಳ್ಳಬೇಕು: ರಮೇಶ ಬೆಳಕೂಡ
ಮೂಡಲಗಿ – ಡಿಜೆ ಸೌಂಡ್ ಎಂದರೆ ಹೃದಯರೋಗಿಗಳಿಗೆ ತೊಂದರೆ, ಮನೆಗಳ ಕಿಟಕಿ ಗಾಜುಗಳು ಒಡೆಯುತ್ತವೆ, ಗೋಡೆಗಳು ನಡುಗುತ್ತವೆ, ಕಿವಿ ಪರದೆಗಳು ಹರಿದುಹೋಗುತ್ತವೆ, ಸೌಂಡಿನ ಮತ್ತಿನಲ್ಲಿ ಅನಾಹುತಗಳು ಸಂಭವಿಸುತ್ತವೆ. ಡಿಜೆ ಸೌಂಡ್ ನಿಷೇಧ ಮಾಡಬೇಕೆಂದು ನ್ಯಾಯಾಲಯದ ಆದೇಶವಿದ್ದರೂ ಪೊಲೀಸರು ನಿಷ್ಕ್ರಿಯರಾಗಿದ್ದರಿಂದ ಸಮೀಪದ ನಾಗನೂರಿನಲ್ಲಿ ಹೊಡೆದಾಟ ಸಂಭವಿಸಿದೆ ಎಂದು ಕಲ್ಲೊಳಿಯ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಮೇಶ ಬೆಳಕೂಡ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಅವರು, ಕಬ್ಬಿನ ಗ್ಯಾಂಗಿನವರು ಕಟಾವು ಮುಗಿದಿರುವ ಸಂಭ್ರಮಾಚರಣೆಯ ನೆಪದಲ್ಲಿ ಟ್ರಾಕ್ಟರ್ ನಲ್ಲಿ ಡಿಜೆ ಸೌಂಡ್ ಹಚ್ಚಿ ರಸ್ತೆಯಲ್ಲಿ ಅಶ್ಲಿಲ ಡಾನ್ಸ್ ಮಾಡುವುದು, ಸಾರ್ವಜನಿಕರಿಗೆ ತೊಂದರೆ ಕೊಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.
ಗುರುವಾರ ನಾಗನೂರಿನಲ್ಲಿ ಕಬ್ಬಿನ ಗ್ಯಾಂಗ್ ನವರು ಸಿಕ್ಕಾಪಟ್ಟೆ ಸಾರಾಯಿ ಕುಡಿದು, ಮುಖ್ಯ ರಸ್ತೆಯನ್ನೇ ಬಂದ್ ಮಾಡಿ ಮಹಿಳೆಯರಿಂದ ನಂಗಾ ನಾಚ್ ಮಾಡಿಸಿದ್ದಲ್ಲದೆ ರಸ್ತೆ ಬ್ಲಾಕ್ ಮಾಡಿ ತೊಂದರೆ ಕೊಟ್ಟಿದ್ದು ಇದನ್ನು ಪ್ರಶ್ನಿಸಿದವರ ಮೇಲೆಯೇ ಬಡಿಗೆಗಳಿಂದ ಹಲ್ಲೆ ಮಾಡಿರುವುದು ಖಂಡನೀಯ. ರೈತ ಕಬ್ಬು ಬೆಳೆಯುತ್ತಾನೆ, ಕಾರ್ಖಾನೆಯವರು ಕಬ್ಬು ಒಯ್ಯುತ್ತಾರೆ ಈ ನಡುವೆ ಕಬ್ಬು ಕಡಿದ ಗ್ಯಾಂಗ್ ನವರು ಸಂಭ್ರಮಾಚರಣೆಯ ನೆಪದಲ್ಲಿ ನಂಗಾ ನಾಚ್ ಮಾಡುತ್ತ ಜನರಿಗೆ ತೊಂದರೆ ಕೊಡುತ್ತಿದ್ದರು. ಇದೆಲ್ಲ ಪೊಲೀಸರಿಗೆ ಗೊತ್ತಿದ್ದರೂ ಅವರು ಸುಮ್ಮನೆ ಇದ್ದರು ಇದೆಲ್ಲ ಮುಂದಿನ ಅನಾಹುತಕ್ಕೆ ಕಾರಣವಾಯಿತು. ಈ ಡಿಜೆ ಸೌಂಡ್ ನಿಷೇಧಗೊಂಡಿದ್ದರೂ ಪೊಲೀಸರು ತಮಗೆ ಬೇಕಾದವರಿಗೆ ಮಾತ್ರ ಅನುಮತಿ ನೀಡಿ ಸಾರ್ವಜನಿಕರಿಗೆ ಯಾಕೆ ತೊಂದರೆ ಕೊಡಬೇಕು ? ಎಂದು ಪ್ರಶ್ನೆ ಮಾಡಿರುವ ಬೆಳಕೂಡ ಅವರು, ಇನ್ನಾದರೂ ಪೊಲೀಸರು ನಿದ್ರೆಯಿಂದ ಎಚ್ಚತ್ತುಕೊಂಡು ಡಿಜೆಯಿಂದ ಮುಂದಾಗುವ ಅನಾಹುತಗಳನ್ನು ತಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿ ವರ್ಷ ಕಬ್ಬು ಕಟಾವು ಮುಗಿಯುವ ಸಮಯದಲ್ಲಿ ಎಸ್ಎಸ್ಎಲ್ ಸಿ ಹಾಗೂ ಪಿಯೂಸಿ ಪರೀಕ್ಷೆಗಳು ಹತ್ತಿರವೇ ಇರುತ್ತವೆ. ಇಂಥ ಸಮಯದಲ್ಲಿ ಡಾಲ್ಬಿ ಸೌಂಡ್ ಹಚ್ಚುವುದರಿಂದ ಶಾಲಾ ಮಕ್ಕಳ ಅಭ್ಯಾಸಕ್ಕೂ, ಪರೀಕ್ಷೆಗೂ ತೊಂದರೆ ಯಾಗುತ್ತದೆ. ವಯಸ್ಸಾದವರಿಗೆ ಈ ಶಬ್ದದಿಂದ ತೊಂದರೆಯಾಗುತ್ತದೆ. ಹೃದಯಾಘಾತವಾಗುವ ಅಪಾಯವೂ ಇದೆ. ಈ ಬಗ್ಗೆ ನಾನು ಹಲವು ಸಲ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದ್ದರೂ ಡಿಜೆ ಸೌಂಡ್ ಬ್ಯಾನ್ ಮಾಡುವಲ್ಲಿ ಪೊಲೀಸರು ವಿಫಲರಾಗಿದ್ದು ವಿಚಿತ್ರವಾಗಿದೆ. ಇದು ಕೋರ್ಟ್ ಆದೇಶದ ಉಲ್ಲಂಘನೆಯೂ ಆಗಿದೆ. ಆದ್ದರಿಂದ ಪೊಲೀಸರು ಇನ್ನು ಮುಂದೆ ಯಾವುದೇ ಸಂದರ್ಭದಲ್ಲಿಯೂ, ಯಾರೂ ಡಿಜೆ ಸೌಂಡ್ ಹಾಕದಂತೆ ಕಟ್ಟುನಿಟ್ಟಾಗಿ ಪ್ರತಿಬಂಧ ಹೇರಬೇಕು ಎಂದು ರಮೇಶ ಬೆಳಕೂಡ ಆಗ್ರಹಿಸಿದ್ದಾರೆ.