Homeಸುದ್ದಿಗಳುಸಮೃದ್ಧ ಸಮಾಜ ನಿರ್ಮಾಣಕ್ಕೆ ಮೌಲ್ಯಾಧಾರಿತ ಶಿಕ್ಷಣ ಅಗತ್ಯ: ಮೌಲಾಲಿ ಆಲಗೂರ

ಸಮೃದ್ಧ ಸಮಾಜ ನಿರ್ಮಾಣಕ್ಕೆ ಮೌಲ್ಯಾಧಾರಿತ ಶಿಕ್ಷಣ ಅಗತ್ಯ: ಮೌಲಾಲಿ ಆಲಗೂರ

ಸಿಂದಗಿ: ನಾಗಾಲೋಟದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನ ಯುಗದಲ್ಲಿ ಸ್ವಸ್ಥ, ಸಮೃದ್ಧ ಸಮಾಜ ನಿರ್ಮಾಣವಾಗಬೇಕಾದರೆ ಮಕ್ಕಳಿಗೆ ಮೌಲ್ಯಾಧಾರಿತ ಮತ್ತು ಗುಣಮಟ್ಟದ ಶಿಕ್ಷಣ ಅತ್ಯಗತ್ಯವಿದೆ ಎಂದು ಆರಕ್ಷಕ ಮೌಲಾಲಿ ಆಲಗೂರ ಹೇಳಿದರು.

ತಾಲೂಕಿನ ಬ್ಯಾಕೋಡ ಗ್ರಾಮದ ಸರ್ವಜ್ಞ ಪ್ರಾಥಮಿಕ ಶಾಲೆ ವತಿಯಿಂದ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ಮಕ್ಕಳು ಮುಂದಿನ ನವ ಭಾರತದ ನಿರ್ಮಾತೃಗಳಾಗಬೇಕಾದರೆ ಮೊಬೈಲ್ ಸಂಸ್ಕೃತಿಯಿಂದ ಹೊರ ಬಂದು, ಕೇವಲ ಅಂಕಗಳ ಓದಿಗಾಗಿ ಸೀಮಿತರಾಗದೆ ಕನ್ನಡ ನಾಡು, ನುಡಿ, ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರಗಳ ಕುರಿತು ಅಧ್ಯಯನಶೀಲರಾಗಬೇಕು. ಸಮಾಜದಲ್ಲಿ ನಾವು ಬರಿ ಶಿಕ್ಷಣವಂತರಾದರೆ ಸಾಲದು ನಮ್ಮ ಗುರು ಹಿರಿಯರನ್ನು ಗೌರವಿಸುವ ಅನ್ಯಧರ್ಮಿಯರನ್ನು ಪ್ರೀತಿಸುವ ಮೇಲು ಗುಣ ಮೈಗೂಡಿಸಿಕೊಳ್ಳಬೇಕು. ಜ್ಞಾನಕ್ಕೆ ಮಾತ್ರ ಜಗತ್ತು ಆಳುವ ಶಕ್ತಿ ಇದೆ. ಹೀಗಾಗಿ ಪ್ರತಿಯೊಬ್ಬ ಭಾರತೀಯನು ಶಿಕ್ಷಣ ಪಡೆದುಕೊಳ್ಳಬೇಕು ಎಂದರು.

ನಿವೃತ್ತ ಶಿಕ್ಷಕ ಎಸ್.ಎಸ್ ಮಾಣಸುಣಗಿ ಮಾತನಾಡಿ ವಿದ್ಯಾರ್ಥಿಗಳು ಪಾಶ್ಚಿಮಾತ್ಯರ ಸಂಸ್ಕೃತಿಗೆ ಒಳಗಾಗುತ್ತಿದ್ದಾರೆ ಇದರಿಂದ ಹೊರ ಬರಬೇಕಾದರೆ ಪಾಲಕರು ಮತ್ತು ಶಿಕ್ಷಕರು ನಮ್ಮ ಶರಣರ, ದಾಸರ, ಸ್ವಾತಂತ್ರ್ಯ ಹೋರಾಟಗಾರ ಜೀವನ ಚರಿತ್ರೆಯನ್ನು ಓದಿಸುವ ಜೊತೆಗೆ ಅಧ್ಯಾತ್ಮದ ಅರಿವು ಮೂಡಿಸಬೇಕು ಎಂದರು.     

ಈ ಸಂದರ್ಭದಲ್ಲಿ ಸರ್ವಜ್ಞ ಪ್ರಾಥಮಿಕ ಶಾಲೆ ವತಿಯಿಂದ ವಿವಿಧ ಸರ್ಕಾರಿ ವಸತಿ ಶಾಲೆಗಳಿಗೆ ಆಯ್ಕೆಯಾದ ಮಕ್ಕಳಿಗೆ ವಿಶೇಷ ಸನ್ಮಾನದೊಂದಿಗೆ ಗೌರವಿಸಲಾಯಿತು. 

ವೇದಿಕೆಯ ಮೇಲೆ ಸರ್ವಜ್ಞ ಶಾಲೆಯ ಮುಖ್ಯಸ್ಥರಾದ ಶಾರದಾ ಮಂಗಳೂರು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಾನಂದ ಬಡಾನೂರ, ಬ್ಯಾಕೋಡ ಗ್ರಾಮ ಪಂಚಾಯತ ಅಧ್ಯಕ್ಷೆ ಸುನೀತಾ ಬಿರಾದಾರ, ಉಪಾಧ್ಯಕ್ಷೆ ಶೋಭಾ ದೊಡಮನಿ, ಊರಿನ ಮುಖಂಡರಾದ ಭೀಮನಗೌಡ ಬಿರಾದಾರ, ಶ್ರೀಶೈಲ ನಾಯ್ಕೋಡಿ, ಬೆಳ್ಳಪ್ಪ ಕಲಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು. 

ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.

RELATED ARTICLES

Most Popular

error: Content is protected !!
Join WhatsApp Group