HomeUncategorizedಸರ್ವಜ್ಞ ವಚನ ಸಾರ : ಲಿಂಗದ ಮಹತ್ವ

ಸರ್ವಜ್ಞ ವಚನ ಸಾರ : ಲಿಂಗದ ಮಹತ್ವ

 

ಲಿಂಗಕ್ಕೆ ಕಡೆಯೆಲ್ಲಿ ? ಲಿಂಗಿಲ್ಲದೆಡೆಯೆಲ್ಲಿ ?
ಲಿಂಗದೊಳು ಜಗವು ಅಡಗಿಹುದು ಲಿಂಗವನು
ಹಿಂಗಿದವರುಂಟೆ ಸರ್ವಜ್ಞ

ಲಿಂಗವೆಂದರೆ ಇಡೀ ಬಹ್ಮಾಂಡ. ಅದರ ಆಕಾರ ಗೋಲಾಕಾರ.
ಎಲ್ಲ ಆಕಾಶಕಾಯಗಳ ರೂಪ ಮತ್ತು ಚಲನೆ ದುಂಡಾಕಾರವಾಗಿದೆ. ಜಗತ್ತಿನಲ್ಲಿ ಇರುವ ಎಲ್ಲ ವಸ್ತುಗಳ
ಅಣುಅಣುವು ಸಹ ದುಂಡಾಕಾರ. ಅದರಲ್ಲಿರುವ‌ ನ್ಯೂಟ್ರಾನ್ ಎಲೆಕ್ಟರಾನ್ ಗಳ ಚಲನೆ ಸಹ ಗೋಲಾಕಾರ. ಗಾಳಿ ಸುತ್ತುಕಡೆ ಬೀಸುತ್ತದೆ.ಬೆಳಕು ಸುತ್ತುಕಡೆ ಹರಿಯುತ್ತದೆ. ನೀರಿನ ಸುಳಿ ಕೂಡ ಚಕ್ರಾಕಾರ. ಲಿಂಗ ಕಪ್ಪಾಗಿದೆ. ಆಕಾಶ ಮೋಡ ಆಳವಾದ ನೀರಿನ ಬಣ್ಣ ನೀಲಿ ಅಥವಾ ಕಪ್ಪು .ಆಕಾಶಕಾಯಗಳನ್ನು ನುಂಗುವ ಕಪ್ಪುರಂಧ್ರ ಇದೆ ಎಂದು ವಿಜ್ಞಾನಿಗಳ‌ ಅಂಬೋಣ. ಅದು ಇಡೀ ಬ್ರಹ್ಮಾಂಡವನ್ನು ತನ್ನಲ್ಲಿ ಇಂಬಿಟ್ಟುಕೊಂಡಿದೆ‌. ಅದಕ್ಕೆ ಜಗದಗಲ‌ ಮುಗಿಲಗಲ‌ ಎಂದು ಬಸವಣ್ಣನವರು ಹೇಳಿದ್ದಾರೆ. ಲಿಂಗಕ್ಕೆ ಕಡೆಯಾಗಲಿ ಅಂತ್ಯವಾಗಲಿ ಇಲ್ಲ. ಅದು ಇಲ್ಲದ ಸ್ಥಳವಿಲ್ಲ ಅಂದರೆ ಎಲ್ಲಾ ಕಡೆ ತುಂಬಿಕೊಂಡಿದೆ. ಅದರಲ್ಲಿ ಜಗತ್ತು ಅಡಗಿದೆ ಅದನ್ನು ಬಿಟ್ಟು ಯಾರು ಇಲ್ಲ. ಎಲ್ಲವು ಎಲ್ಲರು ಅದರೊಳಗಿದ್ದು ಅದನ್ನು ಬಿಟ್ಟಿರಲು ಅಸಾಧ್ಯ ಎಂದು ಸರ್ವಜ್ಞ ಹೇಳುತ್ತಾನೆ.

ಆಕಾರ ತಾನಲ್ಲ ಓಕಾರ ಮುಖವಲ್ಲ
ಆಕಾಶ ತಳವ ಮೀರಿಹುದು ಹರಿಯಜರು
ತಾ ಕಾಣರಯ್ಯ ಸರ್ವಜ್ಞ

ಈ ಜಗತ್ತಿನಲ್ಲಿ ತುಂಬಿಕೊಂಡಿರುವ ವಿಶ್ವಶಕ್ತಿಯೆ ಲಿಂಗ ಅಥವಾ ದೇವರು.ಈ ಶಕ್ತಿಗೆ ಮನುಷ್ಯಪ್ರಾಣಿಗಳಂತೆ ಆಕಾರವಾಗಲಿ ಇಲ್ಲ. ಅದಕ್ಕೆ ಕೈಕಾಲು ಕಣ್ಣು ಕಿವಿ ಬಾಯಿ ಮುಖ ಯಾವುದು ಇಲ್ಲ. ಬ್ರಹಾಂಡದಿತ್ತತ್ತ ಪಾತಾಳದಿಂದತ್ತ ಮೀರಿ‌ ಹಬ್ಬಿದೆ. ಅದರ ತುದಿ ಮೊದಲು ನೋಡಲು‌ ಬ್ರಹ್ಮ‌ವಿಷ್ಣು ಹೊರಟರು. ಬ್ರಹ್ಮ‌ ಹಂಸವೇರಿ ಮೇಲೆ ಹೋದರು ಕೊನೆ ಸಿಗಲಿಲ್ಲ.ವಿಷ್ಷು ಹಂದಿಯಾಗಿ ಭೂಮಿ ಅಗಿಯುತ್ತ ಹೋದರು ತಳ ಸಿಗಲಿಲ್ಲ. ಅಂದ ಮೇಲೆ ವಿಶ್ವಶಕ್ತಿ ಅಥವಾ ಲಿಂಗ‌ ನಿರಾಕಾರ ನಿರ್ಗುಣ. ಬ್ರಹ್ಮವಿಷ್ಣುವಿಗೆ ಕಾಣದ ಲಿಂಗ‌ ನಮಗೆ ಗೋಚರವಾಗುವುದಿಲ್ಲ. ಆದರೆ ಅದನ್ನು ಅನುಭಾವದಿಂದ ಅರಿಯಬಹುದು.

ಲಿಂಗದಲಿ‌ ಮನವಾಗಿ ಲಿಂಗದಲಿ ನೆನಹಾಗಿ
ಲಿಂಗದಲಿ ನೋಟ ನುಡಿಕೂಟವಾದವನು
ಲಿಂಗವೇ ಅಕ್ಕು ಸರ್ವಜ್ಞ

ಶರಣರು ಕಂಡು ಹಿಡಿದ ವೈಜ್ಞಾನಿಕ‌ ಲಿಂಗ ಬಹಳ ವಿಶಿಷ್ಟ
ಅದರಲ್ಲಿ ಆಕಳ ಬೂದಿ, ಕೇರೆಣ್ಣೆ, ತುಪ್ಪದ ಕಾಡಿಗೆ, ಚಂದ್ರಕಾಂತ ಶಿಲೆ, ಸೂರ್ಯಕಾಂತಶಿಲೆ, ಆಯಸ್ಕಾಂತ , ರಾಳ,
ಅರಗು, ಇಂಗಳೀಕ,ಶಿಲಾರಸ, ರುಮಾಮಸ್ತಕಿ ಏಳು ತರದ
ಅಂಜನಗಳನ್ನು ಸೇರಿಸಿ ಒಳಗೆ ಪಂಚಸೂತ್ರದ ಲಿಂಗ ಇಟ್ಟು
ಕಾಂತಿಲಿಂಗ ತಯಾರಿಸುತ್ತಾರೆ. ಇವೆಲ್ಲ ಇಂಗಾಲವಾದ್ದರಿಂದ
ಶಕ್ತಿಕಣಗಳನ್ನು ಹೀರಿಕೊಳ್ಳುತ್ತವೆ.

“ಯಾವುದೇ ಒಂದು ಕಪ್ಪು ವಸ್ತುವಿಗೆ ನಾವು ಉಷ್ಣತೆಯನ್ನು ಕೊಟ್ಟಾಗ ಅದು ತನ್ನ ಮೇಲ್ಮೈ ಮೇಲೆ ಬಿದ್ದ ಶಕ್ತಿ ಕಣಗಳನ್ನು ಹೀರಿಕೊಳ್ಳುತ್ತದೆ. ಹಾಗೆಯೇ ಹೊರಹಾಕುತ್ತದೆ” .ನಮ್ಮ ಶರೀರದ ಉಷ್ಣತೆಯು ಅಂಗೈ ಮಧ್ಯಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುತ್ತದೆ. ಕಾರಣ ಅಲ್ಲಿ ನಾವು ಲಿಂಗವನ್ನು ಇಟ್ಟಾಗ, ನಮ್ಮ ದೇಹದ ಬಿಸಿ ಲಿಂಗಕ್ಕೆ ಬರುತ್ತದೆ. ಕಾರಣ ಅದು ಬಾಹ್ಯದಿಂದ ಬರುವ ಶಕ್ತಿಕಣಗಳನ್ನು ಹೀರಿಕೊಂಡು ತನ್ನಲ್ಲಿ ಸಂಗ್ರಹ ಮಾಡಿಕೊಳ್ಳುತ್ತದೆ ಮತ್ತು ಹೊರಹಾಕುತ್ತದೆ‌ ನಾವು ಅಂಗೈಯನ್ನು ಅರ್ಧ ಅಡಿ ಕಣ್ಣಿಗೆ ಸಮಾನವಾಗಿ ಹಿಡಿದರೆ ಕಣ್ಣು ಆ ಶಕ್ತಿಕಣಗಳನ್ನು ಹೀರಿಕೊಂಡು ಪೀನಿಯಲ್ ಗ್ರಂಥಿಗೆ ಕಳಿಸುತ್ತದೆ. ಮತ್ತೆ ಅಲ್ಲಿಂದ ಪಿಟ್ಯೂಟರಿ ಗ್ರಂಥಿಗೆ ಹೋಗಿಮೆಲೊಟಿನ್ ಎಂಬ ರಸ ಉತ್ಪತ್ತಿಯಾಗಿ ರಕ್ತದಲ್ಲಿ ಸೇರಿ ಆರೋಗ್ಯ ಮತ್ತು ಆನಂದ‌ಕೊಡುತ್ತದೆ. ಅದನ್ನೆ ಶರಣರು ಪಾದೋದಕವೆಂದರು. ಅದಕ್ಕೆ ಸರ್ವಜ್ಞ ಲಿಂಗದ‌ ಮಂತ್ರ ಓಂ ನಮಃ ಶಿವಾಯ ಜಪಿಸುತ್ತ ನೋಡುತ್ತ ನೋಟ ಲಿಂಗದಲ್ಲಿ ಲೀನವಾದರೆ ಆಲಿ ನಿಂತರೆ ಉಸಿರಾಡುವ ಗಾಳಿ ನಿಧಾನವಾಗಿ ಮನಸ್ಸು ನಿಲ್ಲುತ್ತದೆ .ಆ ಮನಸ್ಸು ನಿಂತರೆ ಶಕ್ತಿಕಣಗಳ ಪ್ರವೇಶವಾಗಿ ಅದ್ಭುತ ಅನುಭವವಾಗುತ್ತದೆ. ವೈಜ್ಞಾನಿಕ ಲಿಂಗ‌ ನಿರೀಕ್ಷಣೆಯಿಂದ ಮನಸ್ಸು ಬೇಗ ಏಕಾಗ್ರ ಆಗುತ್ತದೆ. ಆಗ ಆತ್ಮ ಸಾಕ್ಷಾತ್ಕಾರವಾಗಿ ಆ‌ ಪರಮಾತ್ಮನ
ಅಂಶವಾದ ಮನುಷ್ಯ ಪರಮಾತ್ಮನ ಆ ಶಕ್ತಿ ಪಡೆದು
ಪರಮಾತ್ಮನೇ ಆಗುತ್ತಾನೆಂದು ಸರ್ವಜ್ಞ ಮೂರು ಸಾಲಿನಲ್ಲಿ
ಬ್ಯಹ್ಮಾಂಡ ಅರ್ಥವನ್ನು ತುಂಬಿದ್ದಾನೆ. ನಿಜವಾಗಿ
ಸರ್ವಜ್ಞ ಕವಿಗೆ ಸಮನಾದ ಬೇರೊಬ್ಬರಿಲ್ಲ.ಆತನಿಗೆ ಆತನೆ
ಸಾಟಿ.

ಎನ್.ಶರಣಪ್ಪ‌ ಮೆಟ್ರಿ ಗಂಗಾವತಿ _ 9449030990

RELATED ARTICLES

Most Popular

error: Content is protected !!
Join WhatsApp Group