ಎಳ್ಳು ಬೆಲ್ಲ ಸ್ವಾದದ ಹನಿಗವನಗಳು

Must Read

ಲ್ಲಿವೆ ಎಳ್ಳು-ಬೆಲ್ಲದ ಸ್ವಾದ-ಮೋದ ಅನಾವರಣದ ಸಪ್ತ ಹನಿಗವಿತೆಗಳು. ಸಂಕ್ರಾಂತಿಯ ನಾದ-ನಿನಾದ ರಿಂಗಣಿಸುವ ಗುಪ್ತ ಭಾವಪ್ರಣತೆಗಳು. ಇಲ್ಲಿ ಒಲವಿನ ಲಾಸ್ಯವಿದೆ. ತಿಳಿನಗೆಯ ಹಾಸ್ಯವಿದೆ. ಹಬ್ಬದ ಸವಿ ಸಂವೇದನೆಗಳ ಹೃದ್ಯ ಭಾಷ್ಯವಿದೆ. ಒಲುಮೆಯ ಅಕ್ಷರಬಂಧುಗಳಿಗೆ ವರ್ಷದ ಮೊದಲ ಹಬ್ಬಕ್ಕೆ ಮುಂಗಡವಾಗಿ Honey ಹನಿ ಕಾವ್ಯದ ಉಡುಗೊರೆಯಿದು…

ಎಳ್ಳು-ಬೆಲ್ಲದ ಹನಿಗಳು..

 ರಂಗೀಲ..!

ನನ್ನ ಕೈಗಿಡುವಾಗ ಎಳ್ಳುಬೆಲ್ಲ
ಅದೇಕೋ ಮೆಲ್ಲ.. ಮೆಲ್ಲ..
ಕೆಂಪಾಯಿತು ಅವಳ ಗಲ್ಲ.!

*******************

ಸಂಕ್ರಾಂತಿ ಸ್ಮರಣೆ.!

ಬಿಳಿ ಎಳ್ಳಿನ ಬಣ್ಣದ ಬೆಡಗಿ
ಸಿಹಿ ಬೆಲ್ಲದ ಮಾತಿನ ಹುಡುಗಿ
ಕಾಡುವಳು ಪ್ರತಿ ಸಂಕ್ರಾಂತಿಗು
ಪದೇ ಪದೇ ಚಿರ ನೆನಪಾಗಿ.!

**********************

ನಿತ್ಯ ಸಂಕ್ರಾಂತಿ.!

ಅವಳದು ಬೆಲ್ಲದ ನಿತ್ಯ ನಾವೀನ್ಯ
ನನ್ನದು ಎಳ್ಳಿನ ಚಿರ ಚೈತನ್ಯ
ಹಾಗಾಗಿ ಅನುದಿನವು ನಮಗೆ..
ಎಳ್ಳುಬೆಲ್ಲದ ಮಧುರ ಮಾಧುರ್ಯ
ಸಂಕ್ರಾಂತಿಯ ಅಮರ ಸೌಂದರ್ಯ.!

**********************

ಅಭಿಲಾಷೆ.!

ಅಕ್ಕಪಕ್ಕದೆಲ್ಲರಿಗು ಎಳ್ಳುಬೆಲ್ಲ ಕೊಟ್ಟು
“ಒಳ್ಳೆಯ ಮಾತಾಡೋಣ” ಎಂದಳು
ಅದೇಕೋ ನನಗೆ ಮಾತ್ರವೇ ಬೆಲ್ಲವಿಟ್ಟು
“ಒಲವಿನ ಮಾತಾಡೋಣ” ಅಂದಳು.!

**********************

ಸಂಕ್ರಾಂತಿ ಸ್ಪೆಶಲ್ಲು.!

ಸಂಕ್ರಾಂತಿಯಂದು ನನ್ನವಳ ಮಾತು
ಅಕ್ಷರಶಃ ಬೆಲ್ಲದಚ್ಚು..!
ಮತ್ತೆ ಇನ್ನುಳಿದ ದಿನ.. ಊಹೂಂ..
ಕೇಳಬೇಡಿ ಕಲಗಚ್ಚು..!

********************

ಸಮಾಗಮ.!

ಆದಾಗ ಬಿಳಿಬೆಲ್ಲಕೆ ಬಿಳಿಯೆಳ್ಳಿನ ಸಂಗಮ
ನೋಡಲು ಕಂಗಳಿಗೂ ಸವಿ ಸಂಭ್ರಮ..
ಬಹಳಷ್ಟು ಬಾರಿ ಬಿಳಿಬೆಲ್ಲ ಕರಿಎಳ್ಳು ಬೆರೆಸಿ
ಭಗವಂತ ಮಾಡಿಬಿಡುತ್ತಾನೆ ಸಂಗ್ರಾಮ.!

********************

ಹುಚ್ಚುಕವಿ.!

ಸಂಕ್ರಾಂತಿದಿನ ಯುವಕವಿಯೆಂದ..
“ಅವಳ ನಸುನಗು ಬೆಲ್ಲದಚ್ಚು
ನುಡಿ ಎಳ್ಳಿಗಿಂತ ಅಚ್ಚುಮೆಚ್ಚು”
ಅರ್ಧಕ್ಕೆ ನಿಲ್ಲಿಸುತ ಕೇಳುಗರೆಂದರು..
“ಸಾಕು ತಮ್ಮಾ ಬಾಯಿಮುಚ್ಚು
ಇದು ಪಡ್ಡೆವಯಸಿನ ಹುಚ್ಚು.”!

ಎ.ಎನ್.ರಮೇಶ್. ಗುಬ್ಬಿ.

Latest News

ಶ್ರೀ ಕೃಷ್ಣ ಸಮೂಹ ವಿದ್ಯಾಸಂಸ್ಥೆಯಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆ ಸಂಭ್ರಮ

ಶ್ರೀ ಕೃಷ್ಣ ಸಮೂಹ ವಿದ್ಯಾಸಂಸ್ಥೆಯ ಆವರಣದಲ್ಲಿ 77ನೇ ಗಣರಾಜ್ಯೋತ್ಸವವನ್ನು ಭವ್ಯವಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಮೇಲ್ಮನವಿ ನ್ಯಾಯಪೀಠದ ಸದಸ್ಯರು ಹಾಗೂ ಗೌರವಾನ್ವಿತ ಜಿಲ್ಲಾ...

More Articles Like This

error: Content is protected !!
Join WhatsApp Group