ಸಿಂದಗಿ: ತಾಲೂಕಿನ ಯರಗಲ್.ಕೆ.ಡಿ ಗ್ರಾಮಕ್ಕೆ ಕಲಬುರಗಿ ಘಟಕದ ಬಸ್ ನಿಲ್ಲಿಸದೆ ಹೋಗುತ್ತಿರುವುದನ್ನು ಖಂಡಿಸಿ ಗುರುವಾರ ಯರಗಲ್ ಕೆ.ಡಿ ಗ್ರಾಮದಲ್ಲಿ ವಿದ್ಯಾರ್ಥಿಗಳು ಹಾಗೂ ರೈತ ಸಂಘದ ಕಾರ್ಯಕರ್ತರು ಹೆದ್ದಾರಿ ಬಂದ ಮಾಡಿ ಪ್ರತಿಭಟನೆ ನಡೆಸಿ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಘಟಕ ವ್ಯವಸ್ಥಾಪಕ ರೇವಣಸಿದ್ದಪ್ಪ ಖೈನೂರ ಅವರ ಮೂಲಕ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಪೀರು ಕೆರೂರು ನೇತೃತ್ವದಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ೫೦ ರಸ್ತೆ ತಡೆ ನಡೆಸಿ ಪ್ರತಿಭಟಿಸಿ ರಸ್ತೆ ಮಧ್ಯೆ ಟಯರ್ ಗೆ ಬೆಂಕಿ ಹಚ್ಚಿ ಧಿಕ್ಕಾರ ಕೂಗಿದರು.
ಕಲಬರಗಿ ಘಟಕದ ಬಸ್ ಗಳು ಯರಗಲ್ ಕೆ.ಡಿ ಗ್ರಾಮದಲ್ಲಿ ನಿಲ್ಲಿಸಬೇಕು. ಈ ಸಂಬಂಧ ಕ್ರಮ ತೆಗೆದುಕೊಳ್ಳಬೇಕು. ಒಂದು ವಾರದೊಳಗೆ ಕ್ರಮ ತೆಗೆದುಕೊಳ್ಳದೆ ಹೋದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಪೀರು ಕೆರೂರು ಎಚ್ಚರಿಕೆ ನೀಡಿದರು.
ಯರಗಲ್ ಕೆ.ಡಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಪಿಯುಸಿ ಕಾಲೇಜು, ಖಾಸಗಿ ಶಾಲೆಗಳಿವೆ. ೨ ಸಾವಿರ ಜನಸಂಖ್ಯೆ ಇದೆ. ಸುತ್ತಲಿನ ಗ್ರಾಮಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ವಿದ್ಯಾಭ್ಯಾಸಕ್ಕೆ ಬರುತ್ತಾರೆ. ಇಲ್ಲಿನ ಜನರು ಕೂಲಿಗಾಗಿ ಸಿಂದಗಿ, ಜೇವರ್ಗಿ ಸೇರಿ ಸುತ್ತಮುತ್ತ ಗ್ರಾಮಗಳಿಗೆ ಹೋಗುತ್ತಾರೆ. ವಿಜಯಪುರ ಘಟಕದ ಬಸ್ ಗಳು ಇಲ್ಲಿ ನಿಲ್ಲಿಸುತ್ತವೆ. ಆದರೆ, ಕಲಬುರಗಿ ಘಟಕದ ಬಸ್ ಗಳು ನಿಲ್ಲಿಸುವುದಿಲ್ಲ. ಇದರಿಂದ ಸಾಕಷ್ಟು ತೊಂದರೆಯಾಗುತ್ತದೆ. ಇನ್ನು ಮುಂದೆ ಕಲಬುರಗಿ ಘಟಕದ ಬಸ್ ಗಳು ಸಹ ನಿಲ್ಲಿಸಬೇಕು ಎಂದು ಆಗ್ರಹಿಸಲಾಯಿತು.
ಈ ವೇಳೆ ಎಸ್ಡಿಎಂಸಿ ಅಧ್ಯಕ್ಷ ಪೀರು ಯಂಕಂಚಿ, ಸುಬಾಷ ಯಂಕಂಚಿ, ಸಿಪಿಐ ನಾನಾಗೌಡ ಪೊಲೀಸಪಾಟೀಲ, ಪಿಎಸ್ಐ ಆರೀಫ್ ಮುಶಾಪುರಿ ಹಾಜರಿದ್ದರು. ವಿದ್ಯಾರ್ಥಿಗಳು, ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು