ಹಾಸನದ ವಿದ್ಯಾನಗರ ಡೆಂಟಲ್ ಕಾಲೇಜ್ ಹತ್ತಿರ ಇರುವ ಕಲಾಶ್ರಿ ಗ್ಯಾಲರಿಯಲ್ಲಿ ಮೈಸೂರಿನ ಶ್ರೀಮತಿ ಶೋಭ ರಾಣಿ ಜಿ. ಇವರ ಮತ್ಸ್ಯ ಹೆಜ್ಜೆ ಏಕವ್ಯಕ್ತಿ ಚಿತ್ರ ಕಲಾ ಪ್ರದರ್ಶನವು ಚಿತ್ರ ಕಲಾವಿದರು ಬಿ.ಎಸ್.ದೇಸಾಯಿ ಅವರ ಸಹಕಾರದಲ್ಲಿ ಏಪ್ರಿಲ್ 2೦ ರಿಂದ 27ರವರೆಗೆ ಏರ್ಪಡಿಸಲಾಗಿತ್ತು. ಆತ್ಮೀಯರು ದೇಸಾಯಿ ಅವರ ಕರೆಯ ಮೇರೆಗೆ ಕಲಾ ಪ್ರದರ್ಶನ ವೀಕ್ಷಿಸಿದೆ. ನಾನು ಹೋದ ಕಾಲಕ್ಕೆ ಶೋಭ ಮೇಡಂ ಇರಲಿಲ್ಲ. ಅವರು ಮೈಸೂರಿಗೆ ಹೋಗಿದ್ದರು. ಅವರ ಫೋನ್ ನಂಬರ್ ಪಡೆದು ಮಾತನಾಡಿದೆ.
ಅವರು ತಮ್ಮ ಪರಿಚಯ ಹೇಳಿಕೊಂಡರು. ಸಾರ್, ನನ್ನ ಹೆಸರು ಶೋಭರಾಣಿ. ಜಿ. ಹುಟ್ಟಿದ್ದು 03-02-1983ರಲ್ಲಿ. ನನ್ನ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾಭ್ಯಾಸವನ್ನು ಸರಸ್ವತಿಪುರಂನ ಜೆ ಎಸ್ ಎಸ್ ಶಾಲೆಯಲ್ಲಿ ನಂತರದ ವಿದ್ಯಾಭ್ಯಾಸಕ್ಕಾಗಿ ಶ್ರೀ ಕಲಾನಿಕೇತನ ಕಲಾ ಕಾಲೇಜಿಗೆ ಪ್ರವೇಶವನ್ನು ಪಡೆದು 2002-03 ನೇ ಸಾಲಿನಲ್ಲಿ ನನ್ನ ಡಿಪ್ಲೋಮೋ ಡ್ರಾಯಿಂಗ್ ಅಂಡ್ ಪೇಂಟಿಂಗ್ ಅನ್ನು ಮುಗಿಸಿರುತ್ತೇನೆ. ನಂತರ 2013-14 ನೇ ಸಾಲಿನಲ್ಲಿ ಮೈಸೂರಿನ ಕೆ.ಎಸ್.ಒ.ಯು ನಲ್ಲಿ ಎಂ.ಎ ಪದವಿಯನ್ನು ಪಡೆದಿರುತ್ತೇನೆ.. ವಿದ್ಯಾಭ್ಯಾಸದ ದಿನಗಳಲ್ಲಿ 2000ನೇ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದಂತಹ ಜಿಲ್ಲಾ ಮಟ್ಟ ವಿಭಾಗ ಮಟ್ಟ ಹಾಗೂ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿರುತ್ತೇನೆ. ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯು ಆಯೋಜಿಸಿದಂತಹ ಪೇಂಟಿಂಗ್ ಕ್ಯಾಂಪ್ ಫಾರ್ ವಿಮೆನ್ ಎಂಪವರ್ ಮೆಂಟ್ ನಲ್ಲಿ ಭಾಗವಹಿಸಿ ಬಹುಮಾನ ಪಡೆದಿರುತ್ತೇನೆ. 69ನೇ ಕನ್ನಡ ಸಾಹಿತ್ಯ ಸಮ್ಮೇಳನ ತುಮಕೂರು ಹೀಗೆ ಇನ್ನು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿರುತ್ತೇನೆ. ಹಾಗೆಯೇ ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ಸಹಕಾರ ಪಡೆದು ಚಿಕ್ಕಮಗಳೂರಿನಲ್ಲಿ ಕಲಾಪ್ರದರ್ಶನವನ್ನು ಮತ್ತು ಹಲವಾರು ಪೇಂಟಿಂಗ್, ಲ್ಯಾಂಡ್ಸ್ಕೇಪ್, ಎಚಿಂಗ್ ಕ್ಯಾಂಪುಗಳಲ್ಲೂ ಭಾಗವಹಿಸಿರುತ್ತೇನೆ. ಮೈಸೂರು ದಸರಾ ಕಲಾ ಪ್ರದರ್ಶನದಲ್ಲೂ ನನ್ನ ಕಲಾ ಕೃತಿಯು ಆಯ್ಕೆಯಾಗಿ ಪ್ರದರ್ಶನ ಗೊಂಡಿರುತ್ತದೆ…
2001ನೇ ಸಾಲಿನಲ್ಲಿ ಕಿಶೋರ ಪ್ರತಿಭೆ ಎಂಬ ರಾಜ್ಯಮಟ್ಟದ ಪ್ರಶಸ್ತಿ ದೊರಕಿರುತ್ತದೆ. 2001ರಲ್ಲಿ ಒಡನಾಡಿ ಸಂಸ್ಥೆಯ ಪ್ರಶಸ್ತಿ, ಯುವ ಸಂಭ್ರಮ ಪ್ರಶಸ್ತಿ, ಪ್ರತಿಭಾ ಚೇತನ ಪ್ರಶಸ್ತಿ, 2013 ರಲ್ಲಿ ಆದರ್ಶ ಶಿಕ್ಷಕಿ ಪ್ರಶಸ್ತಿ ದೊರೆತಿರುತ್ತದೆ…
ನಾನು ಮಾತಿನ ಮಧ್ಯ ಪ್ರವೇಶಿಸಿ ನೀವು ಎಲ್ಲಿ ಕೆಲಸ ಮಾಡುತ್ತಿರುವಿರಿ.. ಕೇಳಿದೆ.
ನಾನು ಕಳೆದ 17 ವರ್ಷಗಳಿಂದ ಚಿತ್ರಕಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು ಪ್ರಸ್ತುತ ಮೈಸೂರು ಜಿಲ್ಲೆಯ ತಿ. ನರಸೀಪುರ ತಾಲೂಕಿನ ಮಾದಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ… ನನ್ನ ಹಲವಾರು ಕಲಾ ಕೃತಿಗಳು ಶಾಲಾ ಶಿಕ್ಷಣ ಇಲಾಖೆ ಮೈಸೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಮೈಸೂರಿನ ಒಡನಾಡಿ ಸಂಸ್ಥೆ ಹಾಗೂ ಹಲವಾರು ಕಡೆಗಳಲ್ಲಿ ಸಂಗ್ರಹವಾಗಿರುತ್ತದೆ.
ನಿಮ್ಮ ಮತ್ಸ್ಯಲೋಕದ ಬಗ್ಗೆ ಒಂದಿಷ್ಟು ತಿಳಿಸಲು ಸಾಧ್ಯವೇ ಮಧ್ಯೆ ಬಾಯಿ ಹಾಕಿದೆ. ಹೋ ಶ್ಯೂರ್ ಎಂದರು.
ನನ್ನ ಕಲಾಕೃತಿಯಲ್ಲಿರುವ ಮತ್ಸ್ಯ ಗಳು ಹೇಗೆ ಜನ್ಮ ತಾಳಿದವು ಎಂದರೆ ನಾವು ನಮ್ಮ ಮನೆಯಲ್ಲಿ ಅಕ್ವೇರಿಯಂನಲ್ಲಿ ಫೈಟರ್ ಫಿಶ್ ಗಳನ್ನು ಸಾಕಿದ್ದೆವು. ಅದನ್ನು ನಿತ್ಯ ನೋಡುತ್ತಾ ನನಗೆ ಅದು ಕಾಡಲಾರಂಭಿಸಿತು. ಅದರ ಚಲನೆ, ವಿನ್ಯಾಸ,ರೆಕ್ಕೆಗಳು ಅದರ ಸೌಮ್ಯತೆ, ಆಕಾರ ಇವೆಲ್ಲವೂ ಸಹ ಮನಸೂರೆಗೊಂಡು ನನ್ನನ್ನು ಕಾಡುತ್ತಿದ್ದವು. ನನ್ನ ಒತ್ತಡದ ಸಮಯದಲ್ಲಿ ನಾನು ಈ ಮೀನುಗಳನ್ನು ನೋಡುತ್ತಿದ್ದರೆ ನನ್ನೆಲ್ಲಾ ಒತ್ತಡಗಳು ನಿರಾಳ ಭಾವವನ್ನು ನೀಡುತ್ತಿದ್ದವು. ಹಾಗಾಗಿ ಇವುಗಳನ್ನೇ ಯಾಕೆ ನಾನು ನನ್ನ ಕಲಾಕೃತಿಗಳಲ್ಲಿ ಬಳಸಿಕೊಳ್ಳಬಾರದು ಎಂದು ತೀರ್ಮಾನಿಸಿದೆ. ನಂತರ ಸಾಕಷ್ಟು ಪ್ರಯೋಗಗಳನ್ನು ನಡೆಸಿ ಮೀನುಗಳ ರಚನೆಯಲ್ಲಿ ತೊಡಗಿಸಿಕೊಂಡೆ. ಪ್ರಾರಂಭದ ದಿನಗಳಲ್ಲಿ ಅದರ ರಚನೆಯಾಗಲಿ ಭಾವವಾಗಲಿ ನನಗೆ ಅಷ್ಟು ಒಪ್ಪಿಗೆ ಯಾಗುತ್ತಿರಲಿಲ್ಲ. ಹಾಗಾಗಿ ಪ್ರತಿದಿನವೂ ಸಾಕಷ್ಟು ಪ್ರಯೋಗಗಳನ್ನು ಮಾಡುತ್ತಾ ಬಂದೆ. ಕಲರ್ ಪೆನ್ಸಿಲ್ ಗಳಿಂದ, ಜಲವರ್ಣದಿಂದ, ಅಕ್ರಲಿಕ್ ಬಣ್ಣದಿಂದ ಅದರಲ್ಲಿ ಪಾರದರ್ಶಕ ಬಣ್ಣವಾಗಿ ಹಾಗೂ ಗಾಢ ಬಣ್ಣದಲ್ಲಿಯೂ ಪ್ರಯೋಗಗಳನ್ನು ನಡೆಸಿದೆ.ಆದರೂ ನಾನು ಜೀವಂತ ಮೀನುಗಳನ್ನು ನೋಡಿ ಖುಷಿ ಪಟ್ಟಂತಹ ಭಾವನೆಗಳು ನನ್ನ ಚಿತ್ರದಲ್ಲಿ ಕಾಣುತ್ತಿರಲಿಲ್ಲ.
ನಂತರ ಪ್ರಯತ್ನ ಬಿಡದೆ ಹೊಸ ಹೊಸ ಆಯಾಮಗಳಲ್ಲಿ ರಚಿಸಲು ಪ್ರಯತ್ನಿಸಿದೆ. ಹಲವು ಬಗೆಯ ಪೆನ್ನುಗಳನ್ನು ಸಹ ಬಳಸಿ ಚಿತ್ರಿಸಿದೆ… ಪೆನ್ನುಗಳಿಂದ ಮೂಡಿದಂತಹ ರೇಖೆಗಳಲ್ಲಿ ಒಂದು ಹಿಡಿತ ಸಿಗಲು ಪ್ರಾರಂಭಿಸಿತು.ನಂತರ ಅದನ್ನೇ ಹಿಂಬಾಲಿಸಿ ಬಗೆ ಬಗೆಯ ರೇಖೆಯ ಗಾತ್ರಗಳು ಬದಲಾಗುವಂತಹ ಪೆನ್ನುಗಳನ್ನು ಆಯ್ಕೆ ಮಾಡಿ ಚಿತ್ರಿಸಲು ಪ್ರಾರಂಭಿಸಿದೆ. ಆಗ ರೇಖೆಗಳ ಗಾತ್ರ ಬದಲಾದಂತೆ ಚಿತ್ರದಲ್ಲಿ ನಾಜೂಕಾದ, ನವಿರಾದ ರೆಕ್ಕೆಗಳು, ದೇಹದ ವಿನ್ಯಾಸಗಳು, ನನ್ನ ಹಿಡಿತಕ್ಕೆ ಸಿಕ್ಕವು. ನಂತರ ಹಲವಾರು ಕಪ್ಪು ಬಿಳುಪು ಚಿತ್ರಗಳನ್ನು ಚಿತ್ರಿಸಿದೆ. ಒಂದಷ್ಟು ವಿವಿಧ ಬಣ್ಣಗಳನ್ನು ಬಳಸಿ ರಚಿಸಿದೆ. ಹೀಗೆ ನನ್ನ ಪ್ರಯತ್ನದಿಂದ ನೂರಕ್ಕೂ ಹೆಚ್ಚು ಕಲಾಕೃತಿಗಳು ರಚಿತವಾದವು. ಚಿತ್ರದಲ್ಲಿ ಮೀನುಗಳ ಗುಂಪುಗಳು, ವಿವಿಧ ಬಗೆಯ ಆಯಾಮಗಳು, ಅವುಗಳ ಕಾತುರತೆ, ಪ್ರೀತಿ, ಹೊಂದಾಣಿಕೆ, ಸಾಮರಸ್ಯ ಇವುಗಳ ಸಂಯೋಜನೆ ಕಡೆಗೂ ಸಹ ಸಾಕಷ್ಟು ಪ್ರಯತ್ನ ನಡೆಸಿರುತ್ತೇನೆ. ದೇಹದ ವಿನ್ಯಾಸಗಳು, ರೆಕ್ಕೆ ಹಾಗೂ ಬಾಲಗಳಲ್ಲಿ ಇರುವ ಗೊಂಚಲಿನಂತಹ ಆಕಾರಗಳನ್ನು ಶಕ್ತಿಯುತವಾಗಿ ಚಿತ್ರಿಸಲು ಸಾಕಷ್ಟು ಪ್ರಯೋಗ ನಡೆಸಿರುತ್ತೇನೆ. ಹೀಗೆ ಚಿತ್ರಿಸಿದಂತಹ ಹಲವಾರು ಕೃತಿಗಳಲ್ಲಿ ಐವತ್ತು ಕಲಾ ಕೃತಿಗಳನ್ನು ಆಯ್ಕೆ ಮಾಡಿ ‘ಮತ್ಸ್ಯ ಹೆಜ್ಜೆ’ ಎಂಬ ಶೀರ್ಷಿಕೆಯಡಿ ಕಲಾಪ್ರದರ್ಶನವನ್ನು ನಡೆಸಿರುತ್ತೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಲಾಕೃತಿಗಳನ್ನು ರಚಿಸಬೇಕೆಂಬ ಬೇಕೆಂಬ ಬಯಕೆ ಇದ್ದು ತಯಾರಿ ನಡೆಸುತ್ತಿದ್ದೇನೆ…ಎಂದರು.
ಗುಡ್ ಲಕ್ ಹೇಳಿದೆ.
ಗೊರೂರು ಅನಂತರಾಜು
ಹಾಸನ
9449462879