ಸಿಂದಗಿ : ಆಯುರ್ವೇದ ಜೊತೆ ಜೊತೆಗೆ ಪೂರ್ವಜರ ಆಹಾರ ಪದ್ಧತಿಯ ಶೈಲಿಗಳು ಆರೋಗ್ಯ ಸುಧಾರಣೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದು ಬಿ.ಎಲ್.ಡಿ.ಇ ಆಯುರ್ವೇದಿಕ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ಡಾ. ಖಾಜಿ. ರಹೀಂ.ಬೀ ಹೇಳಿದರು.
ಪಟ್ಟಣದ ಶ್ರೀ ಪ.ವಿ.ವ.ಸಂಸ್ಥೆಯ ಜಿ.ಪಿ.ಪೋರವಾಲ ಕಲಾ, ವಾಣಿಜ್ಯ ಹಾಗೂ ವ್ಹಿ.ವ್ಹಿ.ಸಾಲಿಮಠ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಯೂಥ್ ರೆಡಕ್ರಾಸ್ ಘಟಕದ ಸಹಯೋಗದಲ್ಲಿ ಅಂತಾರಾಷ್ಟ್ರೀಯ ರೆಡ್ಕ್ರಾಸ್ ದಿನಾಚರಣೆ ಪ್ರಯುಕ್ತ ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಧುನಿಕ ಜೀವನ ಶೈಲಿಯಲ್ಲಿ ಬದಲಾಗಿರುವ ಆಹಾರ ಪದ್ಧತಿಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳಾಗುತ್ತಿವೆ. ಇವೆಲ್ಲವುಗಳಿಗೆ ಉತ್ತರವೆಂದರೆ ಆಹಾರ ಪದ್ಧತಿಯಲ್ಲಿ ಆಯುರ್ವೇದದ ಬಳಕೆ ಅತ್ಯಂತ ಅವಶ್ಯಕವಾಗಿದೆ ಎಂದರಲ್ಲದೇ ಆಹಾರ ಪದ್ಧತಿ ಮತ್ತು ಆಯುರ್ವೇದದ ಮಹತ್ವದ ಕುರಿತು ಸವಿಸ್ತಾರವಾಗಿ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಿ.ಎಂ.ಪಾಟೀಲ ವಹಿಸಿದ್ದರು. ಐಕ್ಯೂಎಸಿ ಸಂಚಾಲಕ ಬಿ.ಆರ್.ಮಹಾಜನಶೆಟ್ಟಿ, ಸಹ ಸಂಚಾಲಕ ಭೀಮಾಶಂಕರ ಅರಳಗುಂಡಗಿ, ಡಾ. ಶ್ರೀದೇವಿ ಸಿಂದಗಿ, ಡಾ. ನಾಗರಾಜ ಮುರಗೋಡ, ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಇದ್ದರು.