Homeಲೇಖನನಮ್ಮ ಅಂತರಾತ್ಮದ ಕಡೆಗೆ ನಡೆಯುವ ಮೊದಲ ಪ್ರಯತ್ನವೇ ಯೋಗ

ನಮ್ಮ ಅಂತರಾತ್ಮದ ಕಡೆಗೆ ನಡೆಯುವ ಮೊದಲ ಪ್ರಯತ್ನವೇ ಯೋಗ

ನಾಳೆ ವಿಶ್ವ ಯೋಗ ದಿನಾಚರಣೆ. ವಿಶ್ವಕ್ಕೆ ಯೋಗ‌ ಪರಿಚಯ ಮಾಡಿಸಿದ ನಮ್ಮ ಯೋಗಿಗಳನ್ನು ನೆನಪಿಸಿಕೊಂಡು ಆಚರಣೆ ಮಾಡಿದರೆ ಸಾಕಷ್ಟು ‌ಬದಲಾವಣೆ ಸಾಧ್ಯವಿದೆ. ಇಷ್ಟಕ್ಕೂ ಯೋಗ ಎಂದರೆ ಏನು? ಆಸನಗಳೆ? ಪ್ರಾಣಾಯಾಮವೆ?..

ಯೋಗ ಎಂದರೆ ಸೇರೋದು ಯಾರನ್ನು ಯಾರು ಸೇರಬೇಕು ಎಂದರೆ ಒಳಗಿರುವ‌ ಜೀವಾತ್ಮ‌ ಪರಮಾತ್ಮನ ಸೇರೋದೇ‌.ಮಹಾಯೋಗ..
ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ನೀನು ಯೋಗಿ ಆಗು ಯೋಗಿಗಳು ನನ್ನ ಸೇರುವರು ಎಂದಿರೋದು ತಿಳಿದಿದೆ.ಇದಕ್ಕೆ ‌ನಾಲ್ಕು ಮಾರ್ಗ ವನ್ನು ತಿಳಿಸಿ‌ ಜ್ಞಾನ ಯೋಗ, ರಾಜಯೋಗ,ಭಕ್ತಿಯೋಗ,ಕರ್ಮ ಯೋಗವನ್ನು ವಿವರವಾಗಿ ಅರ್ಥ ಮಾಡಿಸುವುದರ‌ ಮೂಲಕ ಅರ್ಜುನನ ವಿಷಾದ ಯೋಗವನ್ನು ದೂರ ಮಾಡಿ‌ ಧರ್ಮ ಯುದ್ದ ನಡೆಸಿರೋದನ್ನು ನಾವು ಎಷ್ಟರಮಟ್ಟಿಗೆ ಅರ್ಥ ಮಾಡಿಕೊಳ್ಳಬಹುದು?

ಮಾನವನು ಯೋಗಿಯಾಗಬೇಕಾದರೆ ಅಧ್ಯಾತ್ಮ ದೆಡೆಗೆ ನಡೆಯಬೇಕು.ಅದರಿಂದ ಜ್ಞಾನಗಳಿಸಿ ತನ್ನ ತಾನರಿತು,ಭಕ್ತಿಯಿಂದ ಭಗವಂತನೆಡೆಗೆ ನಡೆಯುತ್ತಾ ಕಾಯಕಯೋಗಿ‌ ಆಗೋದು ನಿಜವಾದ ಯೋಗಿಗಳ ಲಕ್ಷಣ. ಇಂದಿನ ಶಿಕ್ಷಣವೇ ಯೋಗದಿಂದ ದೂರವಾಗಿ ಭೋಗದೆಡೆಗೆ ಸಾಗುತ್ತಾ ರೋಗ ಬಂದಾಗ ಯೋಗಾಭ್ಯಾಸ ಮಾಡುವ ಸ್ಥಿತಿಗೆ ತಲುಪಿದೆ.ದೈಹಿಕ ಆರೋಗ್ಯವಿಲ್ಲದೆ ಮಾನಸಿಕ ರೋಗ ಹೋಗದು. ಮಾನಸಿಕ ಆರೋಗ್ಯವಿಲ್ಲದೆ ಯೋಗಿಯಾಗಲಾರದು.

ಧ್ಯಾನದಿಂದ ಜ್ಞಾನ ಎಂದರೆ ಧ್ಯಾನ ಮಾಡಲು ಒಳಗೆ ಶಾಂತಿ ಇರಬೇಕು.ಶಾಂತಿ ಇರಬೇಕೆಂದರೆ ಸಾತ್ವಿಕ ಆಹಾರ ವಿಹಾರ ಶಿಕ್ಷಣವಿರಬೇಕು.ಈ ಮೂರೂ ಒಳಗೆ‌ಹಾಕದೆ ಇದ್ದರೆ ಒಳಗಿರುವ ನಕಾರಾತ್ಮಕ ಗುಣಗಳು ಮಹಾತ್ಮರನ್ನು ಅರಿಯದಂತೆ ಮಾಡುವವು.ಹೀಗಾಗಿ ಸ್ವಚ್ಚ ಭಾರತಕ್ಕೆ ‌ಬೇಕಾಗಿರುವ ಸ್ವಚ್ಚ ಶಿಕ್ಷಣದ ಜೊತೆಗೆ ಸ್ವಚ್ಚ ಆಹಾರದ ಅಗತ್ಯವಿದೆ.

ಎಷ್ಟೋ ಕಲಬೆರಕೆಯ ಅಸತ್ಯದ ಅಧರ್ಮದ‌ ವಿಷಯಗಳು ಆಹಾರಗಳು ಆಚಾರ ವಿಚಾರ ಪ್ರಚಾರಗಳು ಮಾನವನ‌ ಮನಸ್ಸನ್ನು ವಿಷಪೂರಿತವಾಗಿಸಿ ದ್ವೇಷದಿಂದ ಅಂತರ ಸೃಷ್ಟಿ ಮಾಡಿರುವ ಈ ಸಮಯದಲ್ಲಿ ಯೋಗದ ಮೂಲಕ ಒಂದು ಮೆಟ್ಟಿಲು ಮೇಲಕ್ಕೆ ಏರಿ ತಮ್ಮೊಳಗಿನ ಸಕಾರಾತ್ಮಕ ಉತ್ತಮ ಗುಣಗಳನ್ನು ಬೆಳೆಸಿಕೊಂಡು ಮಕ್ಕಳು ಮಹಿಳೆಯರಿಗೆ ದಾರಿದೀಪವಾಗೋದು ಯೋಗಿಗಳ ಲಕ್ಷಣ.
ಇದರಲ್ಲಿ ರಾಜಕೀಯವಾಗಲಿ ವ್ಯವಹಾರವಾಗಲಿ ಆಡಂಬರವಾಗಲಿ ಬೆರಸದೆ ಇದ್ದರೆ ಪ್ರತಿಯೊಬ್ಬರಲ್ಲಿಯೂ ಅಡಗಿರುವ ಯೋಗ್ಯ ಗುಣಲಕ್ಷಣ ಜ್ಞಾನ ಬೆಳೆಯಬಹುದು.

ಇದು ಮುಖ್ಯವಾಗಿ ಪ್ರತಿಯೊಂದು ಶಾಲಾಕಾಲೇಜ್ಗಳಲ್ಲಿ ಮಕ್ಕಳಿಗೆ ಕಲಿಸುವುದೇ‌ ನಿಜವಾದ ಯೋಗ್ಯ ಶಿಕ್ಷಣವಾಗಿದೆ. ಈಗ ಎಲ್ಲಿದೆ?
ಒಂದು ತಾಸು ಯೋಗ ಕಲಿಸಿ ಉಳಿದೆಲ್ಲ ತಾಸು ಅನಾವಶ್ಯಕ ವಿಷಯಗಳನ್ನು ತಲೆಗೆ ತುಂಬಿದರೆ ಯೋಗಿಯಾಗುವರೆ?
ಎಲ್ಲಿ ರಾಜಕೀಯ ದುರುದ್ದೇಶವಿರುವುದೋ ಅಲ್ಲಿ ಭೋಗವೇ ಪ್ರಧಾನವಾಗಿರುತ್ತದೆ. ಇದನ್ನು ಯಾರೂ ಸರಿಪಡಿಸಲಾಗದು.

ನಮ್ಮ ಅಂತರಾತ್ಮದ ಕಡೆಗೆ ನಡೆಯಲು ನಮ್ಮ ಪ್ರಯತ್ನವೇ ಮೊದಲ ಮೆಟ್ಟಿಲು.ಇದೇ ಯೋಗಾಭ್ಯಾಸ.
ಪೋಷಕರು ಮಕ್ಕಳನ್ನು ಯೋಗಿಯಾಗಿಸುವರೋ ಭೋಗಕ್ಕೆ ಎಳೆದು ರೋಗಿಯಾಗಿಸುವರೋ ಅದು ಪೋಷಕರಿಗೇ‌ಬಿಟ್ಟ ವಿಚಾರ. ಅಧ್ಯಾತ್ಮ ತನ್ನ ತಾನರಿಯುವತ್ತ ನಡೆಸುತ್ತದೆ.

ವಿಶ್ವಕ್ಕೆ ವಿಶ್ವಗುರು ಎನ್ನಿಸಿದ ಭಾರತ‌ ಯೋಗಿಗಳ ದೇಶ.
ವಿಶ್ವದ ಎಲ್ಲಾ ಶಿಕ್ಷಣ ಭಾರತದಲ್ಲಿದೆ.ಆದರೆ ಭಾರತೀಯರ ಯೋಗಶಿಕ್ಷಣ ಮೂಲೆ ಸೇರುತ್ತಿದೆ ಎಂದರೆ ತಪ್ಪು ಯಾರದ್ದು? ಯೋಗಕೇಂದ್ರ ಸಾಕಷ್ಟಿದೆ.ಆದರೆ ಪ್ರತಿಯೊಂದು ಶಾಲೆಯಲ್ಲಿ ಯೋಗವಿಲ್ಲ. ಇದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪರಿಸ್ಥಿತಿಯಲ್ಲಿ ಮಕ್ಕಳು ರೋಗಕ್ಕೆ ಗುರಿಯಾಗುತ್ತಿರೋದು ದುರಂತ ವಷ್ಟೆ.
ಸರ್ಕಾರಗಳೇನೂ ಯೋಗಕ್ಕೆ ದಾರಿತೋರಿಸಬಹುದು. ತಾವೇ ಭೋಗದಲ್ಲಿದ್ದರೆ ಯಥಾ ರಾಜ ತಥಾ ಪ್ರಜಾ.ಹಾಗೆ ಪೋಷಕರೂ ಮಕ್ಕಳಿಗೆ ಯೋಗ ಕಲಿಸಬಹುದು ಯೋಗಿಯಂತೆ ಜೀವಿಸಲು ಬಿಡಲು ಸಾಧ್ಯವೆ? ಕಾರಣ
ಪ್ರಜೆಗಳಿಗೆ ಯೋಗ ಪದಕ್ಕೆ ಸರಿಯಾದ ಅರ್ಥ ತಿಳಿಸುವ ಶಿಕ್ಷಣ ಕೊಡೋದು ಯಾರು?

ಶಿಕ್ಷಕರೆ ಭೋಗಕ್ಕೆ ಬಲಿಯಾದರೆ ಮಕ್ಕಳ ಪಾಡೇನು? ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರು ಯಾರು? ಕಲಿಕೆಯ ಪ್ರಭಾವ ಕಲಿಗಾಲವಾಗುತ್ತಿದೆ. ಯೋಗ ಮಾಡೋರೆಲ್ಲ ಯೋಗಿಗಳಲ್ಲ ಮಾಡದವರೆಲ್ಲ ರೋಗಿಗಳೂ ಆಗಿಲ್ಲ. ಅಧ್ಯಾತ್ಮದ ಯೋಗವೇ ಬೇರೆ ಮಾರ್ಗ ದಲ್ಲಿದೆ. ಜ್ಞಾನಯೋಗ,ರಾಜಯೋಗ ಭಕ್ತಿಯೋಗ ಕರ್ಮ ಯೋಗ. ಇವರೆಲ್ಲರೂ ಪರಮಸತ್ಯ ಧರ್ಮ ದಿಂದ ಯೋಗಿಗಳಾದರು. ಈಗ ಸತ್ಯ ಧರ್ಮ ಎತ್ತ ಸಾಗಿದೆ? ಒಳಗೋ ಹೊರಗೋ? ಒಟ್ಟಿನಲ್ಲಿ ಪ್ರತಿಯೊಂದು ಪದವೂ ಎರಡು ಅರ್ಥ ತಿಳಿಸುತ್ತದೆ.

ಎರಡರ ಸಮಾನತೆ‌ಗೆ,ಐಕ್ಯವಾಗೋದಕ್ಕೆ ಮಧ್ಯವರ್ತಿ ಬಿಡೋದಿಲ್ಲ ಅದಕ್ಕೆ ಸಮಸ್ಯೆ ಅಂತರ ಹೆಚ್ಚಿಸುತ್ತಾ ಜೀವ ಹೋಗುತ್ತದೆ. ಒಂದು ದಿನದ ಯೋಗದಿಂದ ಬದಲಾವಣೆ ಕಷ್ಟ ಬದಲಾವಣೆಯ ಸಣ್ಣ ಗಾಳಿ ಬೀಸಿದರೂ ಸರಿ.

ದೇಶದ ಪ್ರಜೆಯಾಗಿ ದೇಶಕ್ಕಾಗಿ ನಾನೇನು ಮಾಡಬಹುದು ಎನ್ನುವ ಚಿಂತನೆ ಬರೋದು ಯೋಗಿಗಷ್ಟೆ. ವಿದೇಶ ಸುತ್ತಿದರೆ ಯೋಗಿಯಾಗಲಾರ.ದೇಶಕ್ಕಾಗಿ ನಿಸ್ವಾರ್ಥ ಸೇವೆ ಮಾಡದಿದ್ದರೆ ಕರ್ಮ ಯೋಗಿ ಆಗಲಾರ. ದೇಶದೊಳಗೆ ಇದ್ದು ದೇಶಭಕ್ತಿ ಇಲ್ಲದಿದ್ದರೆ ಯೋಗವಾಗದು ದೇಶದ ಧರ್ಮ ಸಂಸ್ಕೃತಿ ಭಾಷೆಯ ಜ್ಞಾನವಿಲ್ಲದಿದ್ದರೆ ಜ್ಞಾನಯೋಗವಾಗದು.

ಶ್ರೀಮತಿ ಅರುಣ ಉದಯಭಾಸ್ಕರ್
ಬೆಂಗಳೂರು

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group