ಇನ್ಸಟಂಟ್ ಶಬ್ದವೇ ಹಾಗೆ ಇನ್ಸ್ಟಂಟ್ ಎಂದರೆ ಎಲ್ಲವೂ ಈಗಲೇ ಬೇಕು ಎಂಬ ಅರ್ಥ
ಅದು ಊಟವೇ ಆಗಲಿ,
ತಿಂಡಿ ಆಗಲಿ, ಬಟ್ಟೆಯಾಗಲಿ ಒಡವೆ ಆಗಲೇ, ಪ್ರಯಾಣವೇ ಆಗಲಿ, ಪ್ರೀ ತಿ ಯೇ ಆಗಲಿ ಎಲ್ಲವೂ ಈಗಲೇ ಬೇಕು ಎಲ್ಲ ಕೆಲಸ ಈಗಲೇ ಆಗಬೇಕು ಎನ್ನುವುದೇ ಇನ್ಸ್ಟಂಟ್.
ಪ್ರೀತಿ ವಿಷಯದಲ್ಲಿ ಕೂಡ ಹೀಗೆ ಆಗುತ್ತಿದೆ.
ನನಗೊಬ್ಬ ಬಾಯ್ ಫ್ರೆಂಡ್ ಬೇಕು, ನನಗೊಬ್ಬಳು ಗರ್ಲ್ ಫ್ರೆಂಡ್ ಬೇಕು … ಇದು ಇತ್ತೀಚಿನ ಯುವಕರಲ್ಲಿ ಒಂದು ಪ್ರತಿಷ್ಠೆಯ ಪ್ರಶ್ನೆಯಂತೆ..
“ಪ್ರೀತಿ ಅಂದರೆ ನಿಕಟಕ್ಕೆ ಉತ್ಸಾಹ ಮತ್ತು ಬದ್ಧತೆಯಿಂದ ಗುರುತಿಸಲ್ಪಟ್ಟ ಭಾವನೆಗಳು ಮತ್ತು ನಡವಳಿಕೆಗಳ ಮಿಶ್ರಣವಾಗಿದೆ ಇದು ಅನನ್ಯತೆ ರಕ್ಷಣೆ ಆಕರ್ಷಣೆ ವಾತ್ಸಲ್ಯ ಮತ್ತು ನಂಬಿಕೆಯನ್ನು ಒಳಗೊಂಡಿರುತ್ತದೆ ”
ನಮ್ಮ ಇತಿಹಾಸ ಸಾಹಿತ್ಯ ಸಂಗೀತ ಚಲನಚಿತ್ರಗಳು ಮತ್ತು ಧರ್ಮವು ನೈಜ ಅಥವಾ ಲಿಖಿತ ಪ್ರೇಮ ಕಥೆಗಳೊಂದಿಗೆ ಜೀವಂತವಾಗಿದೆ.
ನಿಜವಾದ ಪ್ರೀತಿ ಹೃದಯದಿಂದ ಹುಟ್ಟುತ್ತದೆ, ಭಾವನೆಗಳ ಸಮ್ಮಿಲನವಾಗಿದೆ, ಇಲ್ಲಿ ಹಣ ಅಥವಾ ದೈಹಿಕ ಸುಖಕ್ಕೆ ಯಾವುದೇ ಸ್ಥಾನ ಇರುವುದಿಲ್ಲ. ನನ್ನದು ಎಂಬ ಕಾಳಜಿ ಇರುತ್ತದೆ. ಇಂದಿನ ಯುವಕರು ನಿಜವಾದ ಪ್ರೀತಿ ಏನೆಂಬುದು ತಿಳಿದುಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ ,ಅನುಭವಿಸುವುದು ದೂರದ ಸಂಗತಿ.
ದಿನಾ ಬೆಳಗಾದರೆ ಸಾಕು ಪ್ರಿಯಕರ ಪ್ರಿಯತಮೆಯನ್ನು ಕೊಲೆ ಮಾಡಿದ, ಪ್ರಿಯತಮೆ ಪ್ರಿಯಕರನನ್ನ ಕೊಲೆ ಮಾಡಿದ್ದಾಳೆ ಎಂಬ ಸುದ್ದಿಗಳು ಕೇಳ ಬರುತ್ತವೆ.
ಮುಂಜಾನೆ ಹುಟ್ಟಿದ ಪ್ರೀತಿ ರಾತ್ರಿವರೆಗೂ ಗಾಡವಾಗಿ ಬೆಳೆದು ಹಗಲಾಗುವುದರಲ್ಲಿಯೇ ಬ್ರೇಕ್ಅಪ್ ಆಗುವ ಇಂದಿನ ಜನತೆಯಲ್ಲಿ ಭಾವನೆಗಳೆ ಇಲ್ಲ ಕೇವಲ ಆಕರ್ಷಣೆ ಆಗಿದೆ.ಪ್ರೀತಿ ಒತ್ತಾಯದಿಂದ ಪಡೆಯುವ ಆಟಿಕೆ ಅಲ್ಲ, ಪ್ರೀತಿ ಪ್ರೀತಿಯಿಂದನೆ ಸಿಗಬೇಕು.
ಈ ದಿನ ಇಂದಿನ ಯುವಜನತೆ ಒಬ್ಬರನ್ನು ಪ್ರೀತಿಸುವುದು ಇನ್ನೊಬ್ಬರೊಡನೆ ಓಡಾಡುವುದು ಸರ್ವೇಸಾಮಾನ್ಯ ಆಗಿಬಿಟ್ಟಿದೆ…ಇತ್ತೀಚಿನ ದಿನಗಳಲ್ಲಿ ಪ್ರೀತಿ ಪ್ರೇಮದ ಹೆಸರಲ್ಲಿ ಅನೇಕ ದುರ್ಘಟನೆಗಳು ನಡೆಯುತ್ತಿವೆ.
ಕೆಲವು ದಿನಗಳ ಹಿಂದೆ ಬೆಳಗಾವಿಯಲ್ಲಿ ಆದಂತ ಒಂದು ಘಟನೆ ಇಬ್ಬರೂ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸುತ್ತಿದ್ದು ,ಒಟ್ಟಿಗೆ ಜೀವನ ಮಾಡಲು ಒಂದೇ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು, ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮಿಗಳು ಓಡಾಟ ಸುತ್ತಾಟ ಮಾಡಿದರು ಕೂಡ, ಒಂದು ದಿನ ಅವನ ಮೊಬೈಲಿಗೆ ಬೇರೆ ಹುಡುಗಿಯ ಎಸ್ಎಂಎಸ್ ಬಂದು ಬಿಡುತ್ತೆ… ಅದನ್ನು ನೋಡಿದ ಪ್ರೇಯಸಿ ಮನನೊಂದು ಆತ್ಮಹತ್ಯೆ ಮಾಡಿಕೊಡುತ್ತಾಳೆ….. ಕಾರಣ ಅವನು ಇಬ್ಬರೊಟ್ಟಿಗೂ ಪ್ರೀತಿ ಹೆಸರಲ್ಲಿ ಆಟ ಆಡಿದ.
ಇನ್ನೊಂದು ಕಡೆ ಪ್ರೀತಿಸಿ ಮದುವೆಯಾಗಿ ಮಾರನೆಯ ದಿನವೇ ಗಂಡನ ಕೊಲೆ ಮಾಡುತ್ತಾಳೆ… ಕಾರಣವೇನು ಗೊತ್ತೇ, ಕೇವಲ 20 ದಿನಗಳ ಹಿಂದೆ ಇನ್ನೊಬ್ಬ ಯುವಕನೊಂದಿಗೆ ಪ್ರೀತಿ ಹುಟ್ಟಿದೆಯಂತೆ , ಇದನ್ನರಿತ ಗಂಡ ಪ್ರಶ್ನೆ ಮಾಡಿದಾಗ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಲಾಗುತ್ತದೆ.
ಇನ್ನೊಂದೆಡೆ ಇಬ್ಬರ ಮಧ್ಯೆ ಒಂದು ಸಣ್ಣ ವ್ಯತ್ಯಾಸ ಕಂಡು ಬಂದರೆ ಕೂಡ ಮರುದಿನವೇ ಬ್ರೇಕ್ ಅಪ್… ಮಾರನೆಯ ದಿನ ಹೊಸ ಹುಡುಗ ಅಥವಾ ಹುಡುಗಿಯೊಂದಿಗೆ ಪ್ರೀತಿ ಆರಂಭ…
ಇದು ಯಾವ ರೀತಿಯ ಪ್ರೀತಿ ಕಣ್ರೀ?
ಚಿಕ್ಕವರು ದೊಡ್ಡವರು ಎನ್ನದೆ ಯಾರ್ಯಾರೋ ಯಾರ್ಯಾರಿಗೂ ಪ್ರಪೋಸ ಮಾಡುತ್ತಿದ್ದಾರೆ.ಎರಡು ದಿನ ಓಡಾಟ ಸುತ್ತಾಟ ಮೋಜು ಮಸ್ತಿ ಮಾಡಿ , ಚಿಕ್ಕ ಚಿಕ್ಕ ವಿಷಯಗಳಿಗೆ ಜಗಳವಾಡಿ ಬ್ರೇಕಪ್ ಮಾಡಿಕೊಳ್ಳುವುದು ಹಾಗೂ ಇನ್ನೊಂದೆಡೆ ಭಾವನೆಗಳಿಗೆ ಬೆಲೆ ಇಲ್ಲದಂತಾಗಿದೆ.
ಇನ್ನೊಂದೆಡೆ ಒತ್ತಾಯದ ಪ್ರೀತಿ, ಇಷ್ಟವಿಲ್ಲದಿದ್ದರೂ ಪ್ರೀತಿ ಮಾಡಲು ಒತ್ತಾಯ ಮಾಡುತ್ತಾರೆ ಚಿತ್ರಹಿಂಸೆ ಕೊಡುತ್ತಾರೆ, ಕೊನೆಗೆ ಅವರ ಮೇಲೆ ಆಸಿಡ್ ಸುರಿಸುವುದು ಅಥವಾ ಅವರ ಕೊಲೆ ಮಾಡಿಯೇ ಬಿಡುತ್ತಾರೆ.
ಇನ್ನು ಅತಿಯಾದ ಪ್ರೀತಿಗೆ ಶರಣಾಗಿ , ಯಾವುದೋ ಒಂದು ಅನಿವಾರ್ಯತೆಯಿಂದ ದೂರವಾದ ಪ್ರೇಮಿ ಅಥವಾ ಪ್ರೇಯಸಿಯನ್ನು ಕಳೆದು ಕೊಂಡಾಗ ತಾಳ್ಮೆ ಕಳೆದುಕೊಂಡು ತಂದೆ ತಾಯಿಯ ಕುಟುಂಬ ವರ್ಗದವರ ಬಗ್ಗೆ ಯೋಚಿಸದೆ, ತನ್ನ ಭವಿಷ್ಯದ ಬಗ್ಗೆ ಕೂಡ ಯೋಚಿಸದೆ ಆತ್ಮಹತ್ಯೆಗೆ ಶರಣಾಗುವರು.
ನಿಜವಾದ ಪ್ರೀತಿಯ ಅರ್ಥವೇ ಮಾಯವಾಗಿದೆ.ಪ್ರೀತಿಯ ನಿಜವಾದ ಅರ್ಥವೇ ಅರಿಯದ ಇವರು ಪ್ರೀತಿ ಮಾಡಲು ಹೊರಟಿದ್ದಾರೆ….ಈ ಪರಿಸ್ಥಿತಿಗೆ ಕಾರಣ ಎಲ್ಲೋ ಒಂದು ಕಡೆ ಇತ್ತೀಚಿನ ಜೀವನಶೈಲಿ ಕಾರಣವಾಗಿರಬಹುದು.ತಂದೆ ತಾಯಿ ಗಳಿಸಿದ ಹಣದಿಂದ ಯಾವುದೇ ಶ್ರಮವಿಲ್ಲದೆ ಮಕ್ಕಳಿಗೆ ಎಲ್ಲ ಅನುಕೂಲತೆಗಳನ್ನು ಮಾಡಿಕೊಡುತ್ತಿದ್ದಾರೆ. ಇದು ಮಕ್ಕಳಿಗೆ ನಿರಾಯಾಸವಾಗಿ ಸಿಗುವ ಅನುಕೂಲತೆಗಳಾಗಿವೆ.
ಇಂದಿನ ಮಕ್ಕಳಿಗೆ ಕಷ್ಟದ ಅರಿವೇ ಇಲ್ಲ, ಎಲ್ಲವೂ ಸಿಗುತ್ತದೆ ಎನ್ನುವ ಸ್ಥಿತಿಯಲ್ಲಿದ್ದಾರೆ. ಆದರೆ ಎಲ್ಲವೂ ಇನ್ಸ್ಟಂಟ್ ಆಗಿ ಸಿಗಲು ಸಾಧ್ಯವಿಲ್ಲ. ಇದಕ್ಕೆ ಕಾರಣ ಎಲ್ಲೋ ಒಂದು ಕಡೆ ತಂದೆ ತಾಯಿಗಳು ಇರಬಹುದು.
ವಾಸ್ತವದ ಪರಿಸ್ಥಿತಿ ಕೂಡ ಇದಕ್ಕೆ ಕಾರಣವಾಗಿದೆ. ನಾಗಾಲೋಟದಂತೆ ಓಡುತ್ತಿರುವ ಜೀವನಶೈಲಿ ಯಾರಿಗೂ ಸಮಯ ಇಲ್ಲದಂತಾಗಿದೆ, ಹಣ ಒಂದಿದ್ದರೆ ಸಾಕು ಎಲ್ಲವೂ ಸಾಧ್ಯ ಎನ್ನುವ ಮನಸ್ಥಿತಿ ನಮ್ಮಲ್ಲಿದೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳ ಬೇಡಿಕೆಗಳು ಹೆಚ್ಚಿದಂತೆ ಅನುಕೂಲತೆಗಳು ಕೂಡ ಹೆಚ್ಚಾಗಿವೆ.ಯಾವುದಕ್ಕೂ ಕಾಯುವ ಅಗತ್ಯತೆ ಇಲ್ಲದಂತಾಗಿದೆ.ಮನುಷ್ಯ ತನಗೇನು ಬೇಕೋ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಿಕೊಂಡಿದ್ದಾನೆ, ಆದರೆ ಕೆಲವು ವಿಷಯಗಳಲ್ಲಿ ಎಡವಿದ್ದಾನೆ ಹಾಗೂ ಎಡವುತ್ತಿದ್ದಾನೆ. ಬಟ್ಟೆ ಒಡವೆ ವಸ್ತ್ರ ಆಟಕ್ಕೆ ತಿಂಡಿ ತಿನಿಸುಗಳು ಓಕೆ, ಆದರೆ ಭಾವನೆಗಳು ಸಂಬಂಧಗಳು ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳೆ?
ಸಂಬಂಧಗಳ ಮಹತ್ವವನ್ನು ಅರಿಯದೆ ನಮ್ಮ ಬೇಕು ಬೇಡಿಕೆಗಳ ಆಧಾರದ ಮೇಲೆ ಅಳತೆ ಮಾಡಲು ಹೊರಟಿದ್ದಾರೆ.ಭೌತಿಕ ಬೇಡಿಕೆಗಳಿಗೂ ಆತ್ಮೀಯ ಸಂಬಂಧಗಳಿಗೂ ತುಂಬಾ ವ್ಯತ್ಯಾಸವಿದೆ ಎಂಬುದರ ತಿಳಿದುಕೊಳ್ಳಲು ಕೂಡ ಹೋಗುತ್ತಿಲ್ಲ.ಸಂಬಂಧಗಳು ಕೂಡ ಇನ್ಸ್ಟೆಂಟ್ ಆಗಿ ದೊರೆಯುತ್ತವೆ ಎನ್ನುವ ಭಾವನೆಯನ್ನು ಹೊಂದಿದ್ದಾರೆ.
ಭಾವನೆಗಳಿಗೆ ಬೆಲೆ ಕಟ್ಟಲಾಗುತ್ತದೆಯೇ? ಕೆಲವು ಮಕ್ಕಳು ತಮ್ಮ ಬೇಡಿಕೆಗಳನ್ನು ಈಡೇರಿಸದ ತಂದೆ ತಾಯಿಗಳಿಗೆ ಬೆಲೆ ಕೊಡುವುದಿಲ್ಲ, ಇದು ತುಂಬಾ ದುಃಖಕರ ಸಂಗತಿಯೂ ಕೂಡ ಹೌದು, ಅನೇಕ ಬಾರಿ ತಂದೆ ತಾಯಿಗಳು ತನ್ನ ಎಲ್ಲೇ ಮೀರಿ ಮಕ್ಕಳ ಆಸೆಗಳನ್ನು ನೆರವೇರಿಸಲು ಪ್ರಯತ್ನಿಸುತ್ತಾರೆ, ಆದರೂ ಮಕ್ಕಳು ತಂದೆ ತಾಯಿಯ ಭಾವನೆಯನ್ನು ಮಾಡಿಕೊಳ್ಳುವುದಿಲ್ಲ. ಮೊದಲಿನಿಂದಲೇ ನಾವು ಅವರನ್ನು ಒಂದು ನಿಯಂತ್ರಣದಲ್ಲಿಟ್ಟು ಅವರಿಗೆ ಅಗತ್ಯವಿರುವ ಬೇಡಿಕೆಗಳನ್ನು ಮಾತ್ರ ಮಾಡಿಕೊಡಬೇಕು. ಮಕ್ಕಳ ಮೇಲಿನ ಅತಿ ವ್ಯಾಮೋಹ ಹಾಗೂ ನಮಗೇನು ಕಮ್ಮಿ ಇಲ್ಲ ನಮ್ಮಲ್ಲಿ ಎಲ್ಲಾ ರೀತಿ ಅನುಕೂಲತೆಗಳಿವೆ ನಮ್ಮ ಮಕ್ಕಳಿಗೆ ಐಷಾರಾಮಿ ಜೀವನ ನೀಡೋಣ ಎನ್ನುವ ಭರದಲ್ಲಿ ಎಲ್ಲವೂ ದೊರಕಿಸಿ ಕೊಡುತ್ತಿದ್ದೇವೆ.
ನಾವು ನಮಗೆ ಗೊತ್ತಿಲ್ಲದೆ ನಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿದ್ದೇವೆ ಇದನ್ನು ನಾವು ಸ್ವೀಕರಿಸಲೇಬೇಕು…..
ಹೆಚ್ಚಿನ ಅನುಕೂಲತೆಗಳು ಬದಲಾದ ಜೀವನ ಶೈಲಿ, ನಾವು ಯಾರಿಗೂ ಕಮ್ಮಿ ಇಲ್ಲ ಹೀಗೆಲ್ಲಾ ಭಾವನೆಗಳ ನೆಟ್ಟುಕೊಂಡು ಜೀವನ ಸಾಗಿಸುತ್ತಿದ್ದೇವೆ.
ಸಂಬಂಧಗಳನ್ನು ಕೂಡ ಮಕ್ಕಳು ಇದೇ ರೀತಿಯಾಗಿ ನೋಡುತ್ತಿದ್ದಾರೆ.ಆಡಂಬರ ಶೋಕಿ ಹಾಗೂ ವಿಲಾಸ ಜೀವನಕ್ಕೆ ಮಾರುಹೋಗುತ್ತಿದ್ದಾರೆ.ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯನ್ನು ನೋಡಿದಾಗ ತಮ್ಮ ತಂದೆ ತಾಯಿಯನ್ನು ಮಾತ್ರ ಗೌರವಿಸುತ್ತಾರೆ ಪ್ರೀತಿಸುತ್ತಾರೆ.ಇತರೆ ಸಂಬಂಧಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.ಅದರಲ್ಲೂ ಚಿಕ್ಕ ಚಿಕ್ಕ ವಿಷಯಕ್ಕೆ ಜಗಳ ಆಡುವುದು ಪ್ರತಿ ಪತ್ನಿ ದೊರ ಆಗುವುದು , ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಪಡೆಯುವುದು ಸರ್ವೆಸಾಮಾನ್ಯವಾಗಿದೆ.
ಇವೆಲ್ಲವುಗಳನ್ನು ನೋಡುತ್ತಿರುವ ಯುವ ಪೀಳಿಗೆ ಸಂಬಂಧಗಳೇ ಹೀಗೆ ಎನ್ನುವ ಮನೋಭಾವನೆ ಹೊಂದಿದ್ದಾರೆ. ಮದುವೆ ಎಂಬುದು ಗಂಡು ಹೆಣ್ಣು ಎಂಬ ಎರಡು ಜೀವಗಳು ಕಷ್ಟ ಸುಖ ದುಃಖಗಳಲ್ಲಿ ಶ್ರೀಮಂತಿಕೆ ಬಡತನಗಳಲ್ಲಿ ಉಸಿರಿರುವವರೆಗೂ ತನ್ನದೇ ಕುಟುಂಬವನ್ನು ಮಾಡಿಕೊಂಡು ನೆಮ್ಮದಿಯ ಜೀವನ ಸಾಗಿಸಲು ಮಾಡಿರುವ ವ್ಯವಸ್ಥೆಯಾಗಿದೆ.
ನನ್ನ ಗಂಡನ ಮೇಲೆ ಗಂಡನ ಮೇಲೆ ಹಾಗೂ ಮಕ್ಕಳು ಕುಟುಂಬ ವರ್ಗದವರ ಮೇಲೆ ಅವಲಂಬಿತರಾಗಿರುತ್ತಾರೆ.
ಇತ್ತೀಚಿನ ದಿನಗಳಲ್ಲಿ ಗಂಡು ಇಬ್ಬರಲ್ಲಿಯೂ ತಾಳ್ಮೆ ಇಲ್ಲದಂತಾಗಿ, ನಾನು ಶ್ರೇಷ್ಠ ನೀನು ಶ್ರೇಷ್ಠ ನನ್ನದು ಸರಿ ನಿನ್ನದು ತಪ್ಪು ಎನ್ನುವ ಆತರದಲ್ಲಿ ಚಿಕ್ಕ ಪುಟ್ಟ ವಿಷಯಗಳಿಗೆ ಜಗಳವಾಡಿ, ನನ್ನ ಗಂಡ ನನ್ನ ಹೆಂಡತಿ ನನ್ನ ಮಕ್ಕಳು ಎನ್ನುವ ಆತ್ಮೀಯತೆಯನ್ನು ಕಳೆದುಕೊಂಡು ವಿಚ್ಛೇದನ ಪಡೆಯುತ್ತಿದ್ದಾರೆ.ವಿಚ್ಛೇದನ ಪಡೆದ ಗಂಡಿನ ಗತಿ, ಹೆಣ್ಣಿನ ಗತಿಯೇನು ಆ ಮಕ್ಕಳ ಭವಿಷ್ಯ ಹೇಗೆ ಎಂಬುದಕ್ಕೆಲ್ಲ ಉತ್ತರವೇ ಇಲ್ಲದಂತಾಗಿದೆ.
ನನ್ನ ಗಂಡ ನನ್ನ ಹೆಂಡತಿ ನನ್ನ ಮಕ್ಕಳು ಎನ್ನುವ ಭಾವನೆ ಇಲ್ಲದಂತಾಗಿದೆ.ಇಲ್ಲಿ ಸ್ವಾರ್ಥತೆ ಬಂದಾಗ ಯಾವುದಕ್ಕೂ ಬೆಲೆ ಇಲ್ಲದಂತಾಗುತ್ತದೆ.
ಮುಂದೇನು?….
ಇಂತಹ ಕುಟುಂಬದಲಿ ಬೆಳೆದ ಯುವ ಪೀಳಿಗೆಗೆ ಸಂಬಂಧಗಳು ಇಷ್ಟೇನೆ ಯಾವುದು ಶಾಶ್ವತವಲ್ಲ ಎನ್ನುವ ಭರದಲ್ಲಿ ತಮ್ಮ ಸುಂದರ ಭವಿಷ್ಯ ಕಟ್ಟಿಕೊಳ್ಳುವುದರಲ್ಲಿ ಎಡವುತ್ತಿರುವುದು ದುಃಖಕರ ಸಂಗತಿ….
ಪ್ರೀತಿ ಅರಿತು ಪ್ರೀತಿಸಿ ಅನುಭವಿಸಿ…
ನಂದಿನಿ ಸುರೇಂದ್ರ ಸನಬಾಳ ಕಲಬುರಗಿ