ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನ ಆಚರಿಸಲಾಯಿತು.
ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರವೀಣ ಗುರುನಗೌಡರ ವಿದ್ಯಾರ್ಥಿಗಳಿಗೆ ಯೋಗದ ಮಹತ್ವ, ಇತಿಹಾಸ ತಿಳಿಸಿಕೊಡುವುದರ ಜೊತೆಗೆ ವಜ್ರಾಸನ, ಪದ್ಮಾಸನ, ಚಕ್ರಾಸನ ಮುಂತಾದ ವಿವಿಧ ಯೋಗಾಸನಗಳನ್ನು ಹೇಳಿಕೊಟ್ಟರು. ಯೋಗಮಂತ್ರ, ಓಂಕಾರ ಹಾಗೂ ಯೋಗ ಪ್ರತಿಜ್ಞೆ ಬೋಧಿಸಲಾಯಿತು. ವಿದ್ಯಾರ್ಥಿಗಳಾದ ಸೃಷ್ಠಿ ಹಿರೇಮಠ, ಭಾಗ್ಯಶ್ರೀ ಬಡಿಗೇರ, ವಿದ್ಯಾ ಕುಲಕರ್ಣಿ ಯೋಗದ ಉಪಯೋಗದ ಕುರಿತು ಭಾಷಣ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಎನ್.ಆರ್.ಠಕ್ಕಾಯಿ ಮಾತನಾಡಿ ಯೋಗ ಮಾಡುವುದರಿಂದ ಉತ್ಸಾಹ, ಚೈತನ್ಯ, ಆಸಕ್ತಿ ಹೆಚ್ಚಾಗುವುದಲ್ಲದೇ ಉತ್ತಮ ಆರೋಗ್ಯ ಹೊಂದಬಹುದು ಎಂದು ಹೇಳಿದರು. ಪ್ರತಿದಿನ ಯೋಗದಿಂದಲೇ ಆರಂಭವಾದರೆ ಜೀವನಲ್ಲಿ ನೆಮ್ಮದಿಗೆ ಕೊರತೆಯಿರುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಜಗದೀಶ ನರಿ, ಶಿವಾನಂದ ಬಳಿಗಾರ, ಹೇಮಲತಾ ಪುರಾಣಿಕ, ಮಂಜುಳಾ ಕಾಳಿ, ಸಂತೋಷ ಸಾಳುಂಕೆ, ಭೀಮಪ್ಪ ಪಾಶ್ಚಾಪೂರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಾನಿಕಾ ಕುಲಕರ್ಣಿ ನಿರೂಪಿಸಿದರು. ಚೇತನಾ ಗಡಾದ ಸ್ವಾಗತಿಸಿದರು. ಪಲ್ಲವಿ ಸೂರ್ಯವಂಶಿ ವಂದಿಸಿದರು.