ಆಕಾಶದತ್ತ ದಿಟ್ಟಿಸುತ್ತ ಮಳೆರಾಯ ಯಾಕೋ ಈ ಸಲ ಸುರಿತಾನೇ ಇಲ್ಲ. ಮಳೆಯಿಲ್ಲದೇ ಭೂಮಿತಾಯಿ ಬೆಳೆ ಹೇಗೆ ಕೊಟ್ಟಾಳು? ಎನ್ನುತ್ತ ತಲೆ ಮೇಲೆ ಕೈ ಹೊತ್ತು ಮಾತನಾಡುವ ರೈತಾಪಿ ಜನರನ್ನು ಕಂಡರೆ ಮನಸ್ಸು ಮಮ್ಮಲ ಮರುಗುತ್ತದೆ. ಅಯ್ಯೋ ಅನ್ನುತ್ತದೆ. ಮಳೆಯ ಧ್ಯಾನದಲ್ಲಿ ಮಳೆ ಬೀಳೆ ಮಳೆ ಬೀಳೆ ಎಂದು ಕೈಮುಗಿದು ಕೇಳಿಕೊಳ್ಳುವುದು ಉಂಟು. ನೆಲವೆಲ್ಲ ಮಳೆರಾಯನ ಆಗಮನಕ್ಕೆಂದು ಹಳ್ಳಿಗಳಲ್ಲಿ ವಾರ ಬಿಡುವುದನ್ನು ಕಾಣುತ್ತೇವೆ.
ವರುಣನ ಆಗಮನಕ್ಕೆ ಕಾಯದವರು ಕಡಿಮೆಯೇ ಅನ್ನಿ. ಮಳೆ ಅನ್ನೋದು ಕೇವಲ ಮಣ್ಣಿನ ಘಮವನ್ನು ಹೆಚ್ಚಿಸಿ ಫಲವತ್ತಾದ ಫಸಲು ನೀಡುವುದಕ್ಕೆ ಸೀಮಿತವಾಗಿಲ್ಲ. ಕಿರಿಯರಿಂದ ಹಿರಿಯರವರೆಗೆ ಮನಸ್ಸನ್ನು ಆಹ್ಲಾದಕರ ಭಾವನೆಗಳ ಮಳೆಯಲ್ಲಿ ತೋಯಿಸುತ್ತದೆ. ಸಡಗರ ಸಂಭ್ರಮ ಹೊತ್ತು ತರುತ್ತದೆ.
ಬೇರೆ ಬೇರೆ ಜನರ ಮೈಮನಗಳ ಮೇಲೆ ಬೇರೆ ಬೇರೆ ಪ್ರಭಾವ ಬೀರುತ್ತದೆ. ಜೀವನೋತ್ಸಾಹಕ್ಕೆ ನಾಂದಿ ಹಾಡುತ್ತದೆ. ಅದರಲ್ಲೂ ಸೃಜನಶೀಲ ಮನಸ್ಸುಗಳ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಅಭಿವ್ಯಕ್ತಿಗೆ ಪ್ರೇರಣಾದಾಯಿಯಾಗಿ ನಿಲ್ಲುತ್ತದೆ. ಮಳೆಯ ಹನಿಗಳಿಗೆ ಧರಣಿ ಬೀರುವ ಕಂಪಿಗೆ ಮೈಮನಗಳು ಆಗಸದ ಅಂಚಿನತ್ತ ನೋಟ ಹರಿಸಿ ತುಟಿಯಂಚಿನಲ್ಲಿ ನಗೆ ಸೂಸುವವು. ದಾಹದಿ ದಣಿದ ಧರಣಿಯು ಪ್ರಫುಲ್ಲಗೊಳ್ಳುವಳು. ಸಾಲು ಸಾಲು ಮುಗಿಲುಗಳ ಕಂಡ ಕವಿ ಮನ ಹೂವಿನಂತೆ ಅರಳುವುದು. ರಾಶಿ ರಾಶಿ ಪದಗಳಲ್ಲಿ ಸೋನೆ ಮಳೆ ಕಣ್ಣಿಗೆ ಕಟ್ಟುವಂತಹ ಕವಿತೆಗಳು ಲೇಖನಿಯಿಂದ ಕಾಗದವೆಂಬ ಇಳೆಯ ಕೆನ್ನೆಯ ಗುಳಿಯ ಮೇಲೆ ಸವಿ ಸವಿ ಮುತ್ತನಿಕ್ಕುವವು.
ಕಲಾಕಾರರ ಕೈಚಳಕದಲ್ಲಿ ಕುಂಚದ ತುದಿಯಲ್ಲಿ ಜಲಲ ಜಲಧಾರೆ ಗಿರಿಶಿಖರದಿಂದ ಕೆಳಕ್ಕೆ ನುಗ್ಗುವ ದೃಶ್ಯ ಕಣ್ಣಿಗೆ ತಂಪು ನೀಡುವುದು. ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದ ಚಿತ್ರಗಳು ಮನಸ್ಸುಗಳನ್ನು ಸೆಳೆಯದೇ ಇರವು. ವರುಣನ ಆರ್ಭಟದ ರಂಗು ರಂಗಿನ ಚಿತ್ರ ಬರೆದು ಕಟ್ಟು ಹಾಕಿಸಿ ಗೋಡೆಗೆ ತೂಗುಬಿಟ್ಟು ನೋಡಿ ನೋಡಿ ಸಡಗರ ಪಡುವುದು ಉಂಟು. ಭೂತಾಯಿಯ ಮಡಿಯಲ್ಲಿ ಹೊಂಬಳ್ಳಿಯೊಂದು ಹೊಮ್ಮಿದಾಗ ಕಣ್-ಕಣ್ಬಿಟ್ಟು ನೋಡುವ ಕಣ್ಣುಗಳೆನು ಕಡಿಮೆ ಇಲ್ಲ.
ಬೀಳುವ ಮಳೆ ಅಂದ ಚೆಂದ ಕಂಡು ಮನ ಮೂಕವಿಸ್ಮಿತ. ಹದಿ ಹರೆಯದ ಎದೆ ಮುಗಿಲಲ್ಲಿ ಹೊಳೆಯುವುದು ಪ್ರೀತಿಯ ಮಿಂಚು ಹಿತವಾದ ಅನುಭವ ನೀಡಲು ಸಜ್ಜಾಗುವುದು. ಉದಯೋನ್ಮುಖ ಜೋಡಿ ಹಕ್ಕಿಗಳ ಹೃದಯದಲ್ಲಿ ಪ್ರೀತಿಯ ಉಸಿರು ಹಸಿರಾಗುವುದು. ಹೆಸರಿನ ಪಕ್ಕ ಹೆಸರು ಬರೆಯಲು ತಯಾರಾಗುವುದು. ಪ್ರೀತಿಯ ಹೂವು ಉಸಿರಾಡುವುದು. ತುಂಟ ಪ್ರೇಮಿಗಳಿಗಂತೂ ಮಳೆ ಒಂದು ತರಹದ ಸುಗ್ಗಿ ಸಂಭ್ರಮವೇ ಸರಿ. ‘ಮಳೆಯಲಿ ಜೊತೆಯಲಿ ಎಂದು ಹಾಡುತ ಒಂದೇ ಕೊಡೆ ಕೆಳಗೆ ಕೈ ಕೈ ಹಿಡಿದು ನಡೆವ ದೃಶ್ಯ ಎಂಥ ಅರಸಿಕರನ್ನು ರಸಿಕರನ್ನಾಗಿಸುತ್ತದೆ. ಪ್ರಣಯದ ಮೆರವಣಿಗೆಯೂ ಆಗಲೇ ಶುರುವಾಗುತ್ತದೆ. ಪ್ರೇಯಸಿಗೆ ಪ್ರೇಮ ಸಂದೇಶವನ್ನು ಕಳಿಸಲು ಮೋಡಗಳ ಸಮಾಗಮ ಒಂದು ಅದ್ಭುತ ಸನ್ನಿವೇಶವೇ ಅನಿಸುತ್ತದೆ. ಬಹಳ ದಿನ ಕಾಡಿದ ಮಳೆ ಇಳೆಗೆ ಇಳಿದಾಗ ಮಾಯದಂತಾ ಮಳೆ ಬಂತಣ್ಣ ಎಂದು ಹಾಡಿ ಕುಣಿವ ಮಣ್ಣಿನ ಮಕ್ಕಳ ಹಿಗ್ಗಿಗೆ ಪಾರವೇ ಇಲ್ಲ.
ಆರಿದ ಅಂಗಳಕ್ಕೆ ಸದ್ದಿಲ್ಲದೇ ಸುರಿವ ಮಳೆ ಒಂದೆಡೆಯಾದರೆ ಆಕಾಶ ಚೆಲುವಗೊಳಿಸುವ ಮಿಂಚಿನ ಆಗಮನ, ಕತ್ತಲಲ್ಲಿ ಬೆಳಕಾದ ಹಾಗೆ. ಗುಡುಗು ಸಿಡಿಲಿನಿಂದ ಆರ್ಭಟವಾಗಿ ಸುರಿವ ಮಳೆ ಇನ್ನೊಂದೆಡೆ. ಆಕಾಶಕ್ಕೆ ತೂತು ಬಿದ್ದಿರುವ ಹಾಗೆ ಧೋ ಎಂದು ಎಲ್ಲೆಲ್ಲೂ ಕದಲಲು ಬಿಡದೆ ಸುರಿವ ಮಳೆ ಕಂಡು ಹಲವರಿಗೆ ಹರುಷವಾದರೆ ಕೆಲವರಿಗೆ ಕಿರಿಕಿರಿ.
ಸುಡುಬಿಸಿಲಿನ ಬೇಗೆಯಲ್ಲಿ ಬೇಯುವಾಗ ಮಳೆರಾಯ ಮುನಿಸಿಕೊಂಡರೆ ಜನ-ದನದ ಪರಿಸ್ಥಿತಿ ಯಾರಿಗೂ ಬೇಡ. ನಮ್ಮ ಬಳಿ ಏನೆಲ್ಲ ಇದೆ ಎಂದು ಎದೆ ಉಬ್ಬಿಸಿ ನಡೆವವರ ಬರ ಬಿದ್ದರೆ ಎದೆಯು ನಡುಗುತ್ತದೆ ಜಂಘಾಬಲವೇ ಉಡುಗುತ್ತದೆ. ಬರ ಬಿದ್ದಿರುವಾಗಲಂತೂ ನಾಡಿಗೆ ನಾಡೇ ಮಳೆಗೆ ಹಂಬಲಿಸುತ್ತದೆ. ಎಲ್ಲೋ ಮಳೆ ಬಿದ್ದ ಸುದ್ದಿ ಕಿವಿಗೆ ಬಿದ್ದರೆ “ತಡದ ಮಳಿ ಜಡದ ರ್ತದ.’ ಅನ್ನೋ ಮಾತು ನೆನಸಿಕೊಂಡು ನಮ್ಮ ಮನಸ್ಸಿಗೆ ನಾವೇ ಸಂತೈಸಿಕೊಳ್ಳುತ್ತೇವೆ. ಮಳೆ ಜೀವಗಳಿಗೆ ಜೀವ ನೀಡುವ ಸಂಕೇತವಾಗಿದ್ದರೂ ಕೆಲವೊಮ್ಮೆ ಕಠೋರವಾಗಿ ಇರುವಂತಹದು ಅನ್ನುವುದನ್ನು ಮರೆಯಬಾರದು. ಒಂದAತೂ ಸತ್ಯ ಇಳೆಗೆ ಮಳೆ ಬಿದ್ದಾಗ ಇಳೆ ಹಚ್ಚಹಸಿರು ಸೀರೆಯುಟ್ಟ ರಮೆ.
ಏನೇ ಹೇಳಿ ಮಳೆಯ ಅನುಭೂತಿಯನ್ನು ಪದಗಳಲ್ಲಿ ಹಿಡಿದಿಡುವುದು ತುಸು ಏನು ತುಂಬಾನೇ ಕಷ್ಟವೇ ಸರಿ. ಪದಕೆಟುಕದ ಮಳೆ. ಬಾಳಿನ ನೌಕೆಯ ಸಂತಸದಿ ಸಾಗಿಸುವ ಹನಿಯೊಂದರ ಜೊತೆ ಇನ್ನೊಂದು ಹನಿ ಮತ್ತೊಂದು ಹನಿ ದನಿಗೂಡಿಸಿದರೆ ಬಾಳಿಗೊಂದು ಬೆಳಕಿನ ಭರವಸೆ ಖಚಿತ. ಬಾಳ ಮುಗಿಲಲ್ಲಿ ಮಳೆಬಿಲ್ಲು ಮೂಡುವುದು ಖಂಡಿತ.
ಸದಾಶಯ
ಮಳೆಯ ಮಳೆಯೆ ಇಳೆಗೆ ಇಳಿಯೆ ಎಂದು ಮನವಿ ಮಾಡುತ್ತ ಇದೊಂದು ಸದಾಶಯ: ಬದುಕಿನ ಊರು ಕೇರಿಯ ಬೇರಗಳಲಿ ಜಾತಿಭೇದ ಮರೆವ ನೀರಿಳಿದು ಒಲುಮೆ ಚಿಲುಮೆ ಎಲ್ಲೆಲ್ಲೂ ಚಿಮ್ಮಲಿ. ಸೆರೆಯೊಳಗಿನ ಮಸುಕಿನ ನೋವುಗಳು ಶಮನಗೊಳ್ಳಲಿ. ಸೌಹಾರ್ದತೆಯ ಹೊಳೆ ಹರಿಯಲಿ. ಹೊಮ್ಮಲಿ ಮೆಲ್ಲುಸಿರು ಮನುಜನೆದೆಯಲಿ. ಬುಸುಗುಟ್ಟುವ ದ್ವೇಷ ಅಸೂಯೆಗಳು ನಂದಿ ಹೋಗಲಿ. ಮೂಡಲಿ ಹೊಸ ಚರಿತೆ ಜಗದೆದೆಯಲಿ.
ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ ೯೪೪೯೨೩೪೧೪೨

