`ಮಾನವನ ಸುಖವು ಜೀವನದಲ್ಲಿದೆ, ಇನ್ನು ಜೀವನವು ಪರಿಶ್ರಮದಲ್ಲಿದೆ`.ಎಂಬ ಗಾದೆ ಮಾತು ಪರಿಶ್ರಮದ ಮಹತ್ವವನ್ನು ಸಾರಿ ಹೇಳುತ್ತದೆ. ಇದನ್ನೆ ಬಸವಣ್ಣನವರು `ಕಾಯಕವೇ ಕೈಲಾಸ` ವೆಂದು ಸಾರುವದರ ಜೊತೆಗೆ ಆ ಮಾತಿನಲ್ಲಿ ಸಂಪೂರ್ಣ ನಂಬಿಕೆಯಿಟ್ಟು, ಕಾಯಕದಲ್ಲಿ ಮಗ್ನರಾದ ಜನ ಜೀವನದ ಸಮಾಜವನ್ನು ಕಟ್ಟಲು ಶ್ರಮಿಸಿರುವ ಮಹಾನ್ ಕಾಯಕ ಯೋಗಿಎಂಬ ಬಿರುದು ಪಡೆದರು.
ಕೆಲಸಕ್ಕೆ ಆನಂದ ನೀಡುವ ಗುಣವಿದೆ. ಇದರಿಂದ ಸ್ವ- ಸಂತೋಷವನ್ನು ಪಡೆಯಬಹುದಲ್ಲದೇ, ಸಂತೃಪ್ತಿಯನ್ನು ಗಳಿಸಿ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬಹುದು
ನಾವು ಮಾಡುವ ಕೆಲಸದಿಂದಲೇ ಸಮಾಜದಲ್ಲಿ ನಮ್ಮ ಗೌರವ ಹಾಗೂ ಸ್ಥಾನಮಾನ ನಿರ್ಧರಿತವಾಗುವದು.
ಮಹಾನ್ ಸಾಧಕರೇನೂ ಜನ್ಮತಃ ಪ್ರತಿಭಾವಂತರಲ್ಲ ಕೆಲಸ ಮಾಡುತ್ತ ಮಾಡುತ್ತ ತಮ್ಮ ಕ್ಷೇತ್ರದಲ್ಲಿ ಪಳಗಿದವರು. ಅದೇ ಅವರನ್ನು ವಿಶೇಷ ಸಾಧಕರನ್ನಾಗಿಸಿತು. ಅಂದರೆ ಪರಿಶ್ರಮವೇ ಸಾಧನೆಗೆ ಭದ್ರ ಬುನಾದಿ ಎಂದಂತಾಯಿತು.
ಪ್ರಯತ್ನ ಮಾಡುವವರಿಗೆ, ಪರಿಶ್ರಮ ಪಡುವವರಿಗೆ ಮಾತ್ರ ಜೀವನದಲ್ಲಿ ಗೆಲುವು ಸಾಧ್ಯ. ಸೋಮಾರಿಗಳಿಗೆ ಕಷ್ಟಗಳ ಸರಮಾಲೆ ಖಚಿತ. ಪರಿಶ್ರಮ ಜೀವನವನ್ನು ಸವಾಲೆಂದು ಸ್ವೀಕರಿಸುವ ಮನೋಭಾವವನ್ನು ಬೆಳೆಸುತ್ತದೆ.ಆದರೆ,ಸೋಮಾರಿತನ ಸಮಾಜಕ್ಕೆ ಅಂಟಿಕೊಂಡ ರೋಗ .ಈ ರೋಗ ನಿವಾರಣೆಗೆ ಕಾಯಕವೇ ಮದ್ದು. ಸೋಮಾರಿತನ ಸಮಸ್ಯೆಗಳ ಸರಣಿಯನ್ನು ಆಹ್ವಾನಿಸುತ್ತದೆ. ಸಮಸ್ಯೆಗಳ ಸುಳಿಯಲ್ಲಿ ಬಿದ್ದು ಒದ್ದಾಡಿ ಜೀವನವನ್ನು ಹಾಳು ಮಾಡಿಕೊಳ್ಳುವವರನ್ನು ನೋಡಿಯೇ ಕನಕದಾಸರು `ಮಾನವ ಜೀವನ ದೊಡ್ಡದು ಇದ ಹಾಳು ಮಾಡಿಕೊಳ್ಳಲು ಬೇಡಿ ಹುಚ್ಚಪ್ಪಗಳಿರಾ!` ಎಂದು ಮಾರ್ಮಿಕವಾಗಿ ಹೇಳಿದ್ದಾರೆ..
`ಪ್ರಯತ್ನಪೂರ್ವಕ ಪ್ರಯತ್ನದಿಂದ ತನ್ನನ್ನು ತಾನೇ ಉದ್ಧರಿಸಿಕೊಳ್ಳುವ ಪ್ರಶ್ನಾತೀತ ಶಕ್ತಿ ಪ್ರತಿಯೊಬ್ಬರಲ್ಲಿಯೂ ಇದೆ ಎಂಬ ಸತ್ಯಕ್ಕಿಂತ ಉತ್ಸಾಹ ನೀಡುವ ವಿಷಯ ಬೇರೆ ಇಲ್ಲ` ಎನ್ನುತ್ತಾನೆ ಹೆನ್ರಿ ಡೆವಿಡ್ ಥೋರೊ. ಆದ್ದರಿಂದ ಕಾರ್ಯದಲ್ಲಿ ಮಗ್ನರಾಗಿ ಬದುಕನ್ನು ಸಾರ್ಥಕಗೊಳ್ಳಿಸಿಕೊಳ್ಳುವದು ಒಳಿತು.
ನಮ್ಮಲ್ಲಿ ಅಡಗಿರುವ ಸುಪ್ತ ಶಕ್ತಿಯನ್ನು ಗುರುತಿಸಿಕೊಂಡು ಸೂಕ್ತ ಪರಿಶ್ರಮ ಪಟ್ಟದ್ದೇ ಆದರೆ ನಾವು ಜಯಶಾಲಿಗಳಾಗುತ್ತೇವೆ. ಜಯ ಮನುಷ್ಯನಲ್ಲಿ ಹೊಸ ಹುಮ್ಮಸ್ಸು ಮತ್ತು ಹೊಸ ವಿಚಾರ ತರುವದು ಮತ್ತೆ ಹೊಸ ಸಾಧನೆಗೆ ದಾರಿ ಮಾಡಿಕೊಡುವದು. ಹೀಗೆ ಹಲವು ಗೆಲುವುಗಳಿಗೆ ನಾಂದಿ ಹಾಡುವ ಕೆಲಸವನ್ನೇ ದೇವರೆಂದು ತಿಳಿದು ನಮ್ಮ ಸರ್ವ ಶಕ್ತಿಯನ್ನೂ ನಮಗೆ ಅನ್ನ ನೀಡುವ ವೃತ್ತಿಯಲ್ಲಿ ತೊಡಗಿಸಿ` ಕಾಯಕದಲ್ಲಿಯೇ ದೇವರನ್ನುಕಾಣುವ ತತ್ವವನ್ನು ಪಾಲಿಸಿ,ಕಾಯಕದಿಂದಲೇ ಸುಂದರ ಸದೃಡ ಸಮಾಜ ಕಟ್ಟಲು ಅಣಿಯಾಗೋಣ.
ಜಯಶ್ರೀ ಜಯಪ್ರಕಾಶ ಅಬ್ಬಿಗೇರಿ
ಸರಕಾರಿ ಪದವಿ ಪೂರ್ವ ಕಾಲೇಜು ಕಟಕೋಳ
ತಾ: ರಾಮದುರ್ಗ ಜಿ:ಬೆಳಗಾವಿ
೯೪೪೯೨೩೪೧೪೨