Homeಸುದ್ದಿಗಳುಬೆಳಗಾವಿಯಲ್ಲಿ ರಾಮದುರ್ಗ ತಾಲ್ಲೂಕಿನ ಪಿಕೆಪಿಎಸ್ ಸೊಸೈಟಿ ಆಡಳಿತ ಮಂಡಳಿಗಳ ಸಭೆ 

ಬೆಳಗಾವಿಯಲ್ಲಿ ರಾಮದುರ್ಗ ತಾಲ್ಲೂಕಿನ ಪಿಕೆಪಿಎಸ್ ಸೊಸೈಟಿ ಆಡಳಿತ ಮಂಡಳಿಗಳ ಸಭೆ 

ಎಸ್.ಎಸ್. ಢವಣ, ರಾಮದುರ್ಗ ಕ್ಷೇತ್ರದ ಬಿಡಿಸಿಸಿ ಬ್ಯಾಂಕ್ ಚುನಾವಣೆಯ ಅಭ್ಯರ್ಥಿ ಘೋಷಿಸಿದ ಬಾಲಚಂದ್ರ ಜಾರಕಿಹೊಳಿ

ರಾಮದುರ್ಗ ತಾಲ್ಲೂಕಿನ ೩೬ ಪಿಕೆಪಿಎಸ್ ಸಂಘಗಳ ಪೈಕಿ ೨೯ ಸೊಸೈಟಿ ಗಳಿಂದ ಢವಣ ಆಯ್ಕೆಗೆ ಸರ್ವಾನುಮತದ ಬೆಂಬಲ

 

ಬೆಳಗಾವಿ- ಅಕ್ಟೋಬರ್ ತಿಂಗಳಲ್ಲಿ ಜರುಗುವ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರಾಮದುರ್ಗ ಕ್ಷೇತ್ರದ ಅಭ್ಯರ್ಥಿಯಾಗಿ ನಮ್ಮ ಫೆನಲ್ ದಿಂದ ಹಾಲಿ ನಿರ್ದೇಶಕ ಶ್ರೀಕಾಂತ ಢವಣ ಅವರು ಸ್ಪರ್ಧೆ ಮಾಡಲಿದ್ದಾರೆ ಎಂದು ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಪ್ರಕಟಿಸಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಬುಧವಾರದಂದು ಜರುಗಿದ ರಾಮದುರ್ಗ ತಾಲ್ಲೂಕಿನ ಪಿಕೆಪಿಎಸ್ ಆಡಳಿತ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕ ಮಂಡಳಿಯವರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಢವಣ ಅವರೇ ಮತ್ತೊಂದು ಬಾರಿ ಚುನಾವಣೆಗೆ ಸ್ಪರ್ಧೆ ಮಾಡಲಿದ್ದು, ಹೆಚ್ಚಿನ ಬಹುಮತದಿಂದ ಆರಿಸಿ ತರುವಂತೆ ಮತದಾರರಿಗೆ ಅವರು ಮನವಿ ಮಾಡಿದರು.

ಬಿಡಿಸಿಸಿ ಬ್ಯಾಂಕಿನ ಚುನಾವಣಾ ಪ್ರಚಾರಕ್ಕೂ ಮುನ್ನ ಅಂದರೆ ಎರಡು ತಿಂಗಳ ಹಿಂದೆಯೇ ರಾಮದುರ್ಗ ತಾಲ್ಲೂಕಿನ ಅಭ್ಯರ್ಥಿ ಆಯ್ಕೆ ಮಾಡುವುದರ ಸಂಬಂಧ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಸೇರಿದಂತೆ ಅನೇಕ ಗಣ್ಯರ ಅಭಿಪ್ರಾಯ ಕೇಳಲಾಗಿತ್ತು. ಸುಮಾರು ಮೂರು ಬಾರಿ ನಿಯೋಜಿತ ಸಭೆಯನ್ನು ಮುಂದೂಡಲಾಗಿತ್ತು. ಪ್ರತಿ ಸಂದರ್ಭದಲ್ಲೂ ಯಾದವಾಡ ಸಹೋದರರು ಬ್ಯಾಂಕಿನ ಚುನಾವಣೆ ಸಂಬಂಧ ತಮ್ಮ ಗುಟ್ಟನ್ನು ಬಿಟ್ಟುಕೊಡಲಿಲ್ಲ. ಅನೇಕ ಬಾರಿ ಮಹಾದೇವಪ್ಪ ಯಾದವಾಡ ಮತ್ತು ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಅವರನ್ನು ಸಂಪರ್ಕಿಸಿದರೂ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಸ್ಪಷ್ಟ ನಿರ್ಧಾರ ಹೇಳಲಿಲ್ಲ. ನೀವು ತೆಗೆದುಕೊಂಡ ನಿರ್ಧಾರಕ್ಕೆ ನಾವುಗಳ ಬದ್ಧವೆಂದು ನಂತರ ನಡೆದ ಸಭೆಯಲ್ಲಿ ಹೇಳಿದರು.

ಈ ಸಂಬಂಧ ಬೆಳಗಾವಿ, ರಾಮದುರ್ಗ ಮತ್ತು ಮೂಡಲಗಿ ಭೇಟಿಯ ಸಂದರ್ಭದಲ್ಲಿ ಮಲ್ಲಣ್ಣ ಯಾದವಾಡ ಅವರು ಅಭ್ಯರ್ಥಿ ಆಯ್ಕೆ ಬಗ್ಗೆ ಯಾವುದನ್ನು ಹೇಳಲಿಲ್ಲ. ಬದಲಿಗೆ ಬೆಳಗಾವಿಯಲ್ಲಿ ಬಿಡಿಸಿಸಿ ಬ್ಯಾಂಕಿಗೆ ನಾನು ಸಹ ಆಕಾಂಕ್ಷಿಯಾಗಿದ್ದೇನೆ ಎಂದು ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿದರು. ಎಲ್ಲರೂ ಸೇರಿಕೊಂಡು ಚುನಾವಣೆಯನ್ನು ಮಾಡೋಣ. ಒಗ್ಗಟ್ಟಿನಿಂದ ಅಭ್ಯರ್ಥಿಯನ್ನು ಹಾಕೋಣವೆಂದರೂ ಇದಕ್ಕೆ ಅವರುಗಳು ಸೊಪ್ಪು ಹಾಕಲಿಲ್ಲ. ಈಗಾಗಲೇ ಪ್ರಚಾರವನ್ನು ಆರಂಭಿಸಿರುವ ಮಲ್ಲಣ್ಣ ಯಾದವಾಡ ಅವರ ನಿರ್ಧಾರದಿಂದ ನಮ್ಮ ಕಾರ್ಯಕರ್ತರಲ್ಲಿ ಗೊಂದಲವುಂಟಾಗಿದೆ. ಹೀಗಾಗಿ ರಾಮದುರ್ಗ ತಾಲ್ಲೂಕಿನ ಎಲ್ಲ ಪಿಕೆಪಿಎಸ್ ಆಡಳಿತ ಮಂಡಳಿಯ ಸದಸ್ಯರನ್ನು ಕರೆದು ಒಟ್ಟಾರೆ ಅಭಿಪ್ರಾಯಗಳನ್ನು ಸಂಗ್ರಹಿಸಲು ಸಭೆಯನ್ನು ಕರೆದಿರುವುದಾಗಿ ಹೇಳಿದ ಅವರು, ಇಂದಿನ ಸಭೆಯಲ್ಲಿ ರಾಮದುರ್ಗ ತಾಲ್ಲೂಕಿನ 36 ಪಿಕೆಪಿಎಸ್ ಗಳ ಪೈಕಿ ಸುಮಾರು 29 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಸದಸ್ಯರು ಕೂಡಿಕೊಂಡು ಶ್ರೀಕಾಂತ ಢವಣ ಅವರನ್ನು ಅಭ್ಯರ್ಥಿಯನ್ನಾಗಿ ಒಕ್ಕೂರಿಲಿನಿಂದ ಹೇಳಿದ್ದರಿಂದ ಢವಣ ಅವರ ಹೆಸರನ್ನು ಅಂತಿಮ ಮಾಡಲಾಗಿದೆ. ಹೀಗಾಗಿ ಢವಣ ಅವರೇ ನಮ್ಮ ಅಭ್ಯರ್ಥಿಯಾಗಿದ್ದು, ಯಾವುದೇ ಗೊಂದಲಕ್ಕೆ ಆಸ್ಪದ ಮಾಡಿಕೊಡದೇ ಢವಣ ಅವರನ್ನು ಬೆಂಬಲಿಸಿ ಆಶೀರ್ವಾದ ಮಾಡುವಂತೆ ಅವರು ಕೋರಿದರು.
ಈಗಲೂ ಕಾಲ ಮಿಂಚಿಲ್ಲ. ನಾವುಗಳು ಮಲ್ಲಣ್ಣ ಯಾದವಾಡ ಅವರೊಂದಿಗೆ ಚರ್ಚಿಸಲು ತಯಾರಿದ್ದೇವೆ. ಢವಣ ಅವರದ್ದು ಈ ಚುನಾವಣೆಯು ಕಡೆಯದ್ದಾಗಿದೆ. ಇದೊಂದು ಬಾರಿ ಢವಣ ಅವರಿಗೆ ಅವಕಾಶ ಮಾಡಿಕೊಡೋಣ.‌ಮುಂದಿನ ಸಲ ಮಲ್ಲಣ್ಣ ಅವರು ಸ್ಪರ್ಧೆ ಮಾಡಲಿ ಎಂದು ಅವರು ತಿಳಿಸಿದರು.

ಮಲ್ಲಣ್ಣ ಅವರು ಸ್ಪರ್ಧೆ ಮಾಡುವ ವಿಚಾರವನ್ನು ನನಗಾಗಲಿ, ಸತೀಶ್ ಜಾರಕಿಹೊಳಿಗಾಗಲಿ, ಡಾ. ಪ್ರಭಾಕರ ಕೋರೆಯವರಗಾಗಲಿ, ರಮೇಶ ಜಾರಕಿಹೊಳಿಯವರಗಾಗಲಿ, ಅಣ್ಣಾ ಸಾಹೇಬ ಜೊಲ್ಲೆಯವರಗಾಗಲಿ ತಿಳಿಸದೇ ಏಕ ಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ. ನಮ್ಮ ಅಭ್ಯರ್ಥಿ ಆಯ್ಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಢವಣ ಅವರೇ ಅಧಿಕೃತ ಅಭ್ಯರ್ಥಿಯಾಗಿದ್ದು, ಈ ಸಂಬಂಧ ಯಾದವಾಡ ಸಹೋದರರೊಂದಿಗೆ ಮಾತುಕತೆಗೆ ಸಿದ್ಧರಿರುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸ್ಪಷ್ಟಪಡಿಸಿದರು.

ವೇದಿಕೆಯಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗೋಡೆ, ಮಾಜಿ ಶಾಸಕ ಅರವಿಂದ ಪಾಟೀಲ, ರಾಜೇಂದ್ರ ಅಂಕಲಗಿ, ಬಿ.ಎಸ್. ಬೆಳವಣಕಿ, ಸಿ.ಬಿ.ಪಾಟೀಲ, ಡಾ. ಕೆ.ವಿ.ಪಾಟೀಲ, ರಾಮದುರ್ಗ ಕ್ಷೇತ್ರದ ಅಭ್ಯರ್ಥಿ ಶ್ರೀಕಾಂತ ಢವಣ ಅವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group