Homeಸುದ್ದಿಗಳುರಾಯಣ್ಣನಂಥವರು ಪ್ರತಿ ಮನೆಗೂ ಹುಟ್ಟಿ ಬರಬೇಕು - ಬಾಲಚಂದ್ರ ಜಾರಕಿಹೊಳಿ

ರಾಯಣ್ಣನಂಥವರು ಪ್ರತಿ ಮನೆಗೂ ಹುಟ್ಟಿ ಬರಬೇಕು – ಬಾಲಚಂದ್ರ ಜಾರಕಿಹೊಳಿ

ಗೋಕಾಕ- ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಬ್ರಿಟೀಷ ರೊಂದಿಗೆ ಹೋರಾಡಿ ದೇಶವು ಸ್ವತಂತ್ರಗೊಳ್ಳಲು ಕಾರಣೀಕರ್ತರಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಂತವರು ಪ್ರತಿ ಮನೆ- ಮನೆಗೂ ಹುಟ್ಟಿ ಬರಬೇಕು. ರಾಯಣ್ಣನಂತಹ ದೇಶ ಪ್ರೇಮಿಗಳನ್ನು ಒಂದೇ ಜಾತಿಗೆ ಸೀಮಿತ ಮಾಡಬೇಡಿ ಎಂದು ಅರಭಾವಿ ಶಾಸಕ, ಬೆಮೂಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಸಮಾಜ ಬಾಂಧವರಿಗೆ ಕಿವಿಮಾತು ಹೇಳಿದರು.

ಶುಕ್ರವಾರದಂದು ತಾಲ್ಲೂಕಿನ ಬಳೋಬಾಳ ಗ್ರಾಮದಲ್ಲಿ ಸುಮಾರು ೪೦ ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ನಮ್ಮ ದೇಶದ ಹೆಮ್ಮೆಯ ಆಸ್ತಿ ಎಂದು ಪ್ರತಿಪಾದಿಸಿದರು.

ಕಿತ್ತೂರು ಚೆನ್ನಮ್ಮ ನ ಬಲಗೈ ಬಂಟನಾಗಿ ಆ ಸಂಸ್ಥಾನದ
ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ರಾಯಣ್ಣ ಬ್ರಿಟಿಷ್ ರಿಗೆ ಸಿಂಹಸ್ವಪ್ನರಾಗಿದ್ದರು. ಭಾರತವು ಸ್ವಾತಂತ್ರ್ಯಗೊಳ್ಳಲು ರಾಯಣ್ಣನು ತನ್ನ ಜೀವವನ್ನೇ ಪಣಕ್ಕಿಟ್ಟ ದಿಟ್ಟ ಅಪ್ರತೀಮ ಶೂರನಾಗಿದ್ದನು. ಇಂತಹ ಮಹಾನ್ ಪುರುಷರು ಇಡೀ ಮನುಕುಲದ ಆಸ್ತಿಯಾಗಿದ್ದಾರೆ. ಇಂತಹ ಮಹಾನ್ ಚೇತನನ ಸವಿ ನೆನಪಿಗಾಗಿ ಬಳೋಬಾಳ ಗ್ರಾಮದಲ್ಲಿ ಹಾಲುಮತ ಸಮಾಜ ಬಾಂಧವರು ಎಲ್ಲ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸುಮಾರು ೪೦ ಲಕ್ಷ ರೂಪಾಯಿ ಕ್ರೋಢೀಕರಿಸಿ ಸುಂದರವಾದ ಕಂಚಿನ ಮೂರ್ತಿಯನ್ನು
ಪ್ರತಿಷ್ಠಾಪಿಸಿದ್ದಾರೆ. ಸ್ವಾತಂತ್ರ್ಯ ಉತ್ಸವದಂದು ಸಂಗೊಳ್ಳಿ ರಾಯಣ್ಣನ ಪುತ್ಥಳಿಯನ್ನು ಅನಾವರಣಗೊಳಿಸುವ ಭಾಗ್ಯ ನನ್ನದಾಗಿದೆ. ಇದಕ್ಕಿಂತ ಸಂತೋಷ ಬೇರೊಂದಿಲ್ಲ. ಗ್ರಾಮಸ್ಥರು ಒಗ್ಗಟ್ಟಿನಿಂದ ಸೇರಿಕೊಂಡು ಸಮಾಜಕ್ಕೆ ಮಾದರಿಯಾಗುವ ಕೆಲಸವನ್ನು ಮಾಡುತ್ತಿರುವುದು ಖುಷಿ ನೀಡುತ್ತಿದೆ ಎಂದು ಅವರು ಹೇಳಿದರು.

ಸಂಗೊಳ್ಳಿ ರಾಯಣ್ಣನ ಪುತ್ಥಳಿ ನಿರ್ಮಾಣಕ್ಕಾಗಿ ಕೆ.ಆರ್.ಪುರಂ ಬಿಜೆಪಿ ಶಾಸಕ, ಮಾಜಿ ಸಚಿವ ಬೈರತಿ ಬಸವರಾಜು ಅವರು ಸಹ ನನ್ನ ಕೋರಿಕೆಯ ಮೇರೆಗೆ ೫ ಲಕ್ಷ ರೂಪಾಯಿ ಧನ ಸಹಾಯ ಮಾಡಿದ್ದಾರೆ. ಜತೆಗೆ ಹಲವರು ತಮ್ಮ ಕಾಣಿಕೆಯನ್ನು ಅರ್ಪಿಸಿ ರಾಯಣ್ಣನಿಗೆ ಗೌರವ ಸೂಚಿಸಿದ್ದಾರೆ. ಹಾಲಿನಂತಿರುವ ಹಾಲು ಮತ ಸಮಾಜವು ವಿಶ್ವಾಸಕ್ಕೆ ಹೆಸರುವಾಸಿಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಅರಭಾವಿ ದುರದುಂಡೀಶ್ವರ ಮಠದ ಗುರು ಬಸವಲಿಂಗ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
ಸಾನ್ನಿಧ್ಯವನ್ನು ಹುಲಜಂತಿಯ ಮಾಳಿಂಗರಾಯ ಮಹಾರಾಜರು, ಹಡಗಿನಾಳದ ಮುತ್ತೇಶ್ವರ ಸ್ವಾಮಿಗಳು, ಜೋಕಾನಟ್ಟಿಯ ಬಿಳಿಯಾನ ಸಿದ್ಧ ಸ್ವಾಮಿಗಳು, ಯಾದವಾಡದ ಸಿದ್ಧೇಶ್ವರ ಸ್ವಾಮಿಗಳು, ಸ್ಥಳೀಯ ವೇ.ಮೂ. ಸದಾಶಿವ ಹಿರೇಮಠ ವಹಿಸಿದ್ದರು.

ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಸಂಗೊಳ್ಳಿ ರಾಯಣ್ಣನ ಕಂಚಿನ ಮೂರ್ತಿಯನ್ನು ಅನಾವರಣಗೊಳಿಸಿ ನಮನ ಸಲ್ಲಿಸಿದರು.
ಸಂಗೊಳ್ಳಿ ರಾಯಣ್ಣನ ಪುತ್ಥಳಿ ನಿರ್ಮಾಣಕ್ಕೆ ೪ ಲಕ್ಷ ರೂಪಾಯಿ ದೇಣಿಗೆ ನೀಡಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಮಾಜಮುಖಿ ಕಾರ್ಯಕ್ಕೆ ವಿವಿಧ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿ, ಸಮಾಜ ಬಾಂಧವರಿಂದ ಗೌರವ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ವಿನೋದ ಪೂಜೇರಿ, ಭೀಮಪ್ಪ ಕಲ್ಲೊಳ್ಳಿ, ಮುತ್ತೆಪ್ಪ ಕುಳ್ಳೂರ, ಪ್ರಧಾನಿ ಕಳಸಣ್ಣವರ, ಸಿದ್ದಲಿಂಗಪ್ಪ ಕಂಬಳಿ, ಲಕ್ಷ್ಮಣ ಗಣಪ್ಪಗೋಳ, ಲಕ್ಷ್ಮಣ ಮಸಗುಪ್ಪಿ,ಗುರುಸಿದ್ಧ ಪೂಜೇರಿ, ಗುರುಸಿದ್ಧ ವಡೇರ, ಬಸಲಿಂಗ ತೆಳಗಡೆ,ಲಗಮಣ್ಣ ಕಳಸಣ್ಣವರ, ಬಸು ಪೋಟಿ, ರಾಮಪ್ಪ ದುರ್ಗಿ, ಲಕ್ಷ್ಮಣ ದುರ್ಗಿ, ವಿಠ್ಠಲ ಸುಣಧೋಳಿ, ಮಾರುತಿ ಕಾಡಗಿ, ವಿಠ್ಠಲ ಕಾಡಗಿ, ಮಾರುತಿ ಪೂಜೇರಿ, ಸೋಮನಿಂಗ ಕಾಡಗಿ, ಸುನೀಲ ಈರೇಶನವರ, ಗುರುಸಿದ್ದಪ್ಪ ದುರ್ಗಿ, ದೇವಪ್ಪ ಕರಿಗಾರ, ಶ್ರೀಕಾಂತ ಕಾಡಗಿ, ಹಾಲಪ್ಪ ರಾಮಗಾನಟ್ಟಿ, ಬಸಪ್ಪ ತಪಸಿ, ಸಿದ್ದಪ್ಪ ಆಡಿನ, ಸಿದ್ದಪ್ಪ ಘೋಡಗೇರಿ, ರಾಮಲಿಂಗ ಸನದಿ, ಶ್ರೀಶೈಲ ಬೆಳವಿ, ಗ್ರಾಮ ಪಂಚಾಯತಿ ಸದಸ್ಯರು, ವಿವಿಧ ಸಮಾಜಗಳ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group