ಯುವಪೀಳಿಗೆಗೆ ದಾರಿದೀಪ  ಷಡಕ್ಷರಿ ರುದ್ರಪ್ಪ ಮಹಾರಾಜಪೇಟ್ ಕೃತಿ

Must Read

ಭಾರತವು ಪುರಾತನ ಕಾಲದಿಂದಲೂ ಕಲೆ, ಸಂಸ್ಕೃತಿ, ಆಧ್ಯಾತ್ಮಿಕತೆಯ ತವರು. ಅಪಾರ ಸಂಪತ್ತಿನ ಬೀಡು. ಭಾರತದ ಸಾಂಬಾರ ಪದಾರ್ಥಗಳು, ಖನಿಜ ಸಂಪತ್ತು ರಾಜ ಮಹಾರಾಜರ ಆಳ್ವಿಕೆಯ ಕಾಲದಿಂದಲೂ ಭೂ ಮಾರ್ಗದ ಮುಲಕ ಹೊರರಾಷ್ಟ್ರಗಳಿಗೆ ಹೋಗುತಿತ್ತು. ಭಾರತದ ಸಂಪತ್ತು ವಿದೇಶಗಳ ಕ್ರೂರ ದೃಷ್ಟಿಗೆ ಸಿಲುಕಿತು. ಇದರ ಪರಿಣಾಮವಾಗಿ ಘಜನಿ ಮಹಮದ ಭಾರತದ ಮೇಲೆ ಹದಿನೆಂಟು ಬಾರಿ ಧಾಳಿ ಮಾಡಿ ನಮ್ಮ ರಾಷ್ಟ್ರದ ಸಂಪತ್ತನ್ನು ಲೂಟಿ ಮಾಡಿದ. ಜೊತೆಗೆ ಇಲ್ಲಿನ ಆಧ್ಯಾತ್ಮಿಕ ಕೇಂದ್ರಗಳ ಮೇಲೆ ಧಾಳಿ ಮಾಡಿದ.

ನಂತರದ ದಿನಗಳಲ್ಲಿ ಭಾರತಕ್ಕೆ ಸಮುದ್ರ ಮೂಲಕ ಜಲಮಾರ್ಗ ಕಂಡು ಹಿಡಿಯುವ ಹಲವು ವಿದೇಶಗಳ ಯತ್ನಗಳು ವಿಫಲವಾದವು. ಕೊನೆಗೆ ವಾಸ್ಕೋಡಿ ಗಾಮ ಸಮುದ್ರಯಾನದ ಮೂಲಕ ಭಾರತ ತಲುಪಿದ. ಇಲ್ಲಿಂದ ಭಾರತ ದೇಶ ಫ್ರೆಂಚರು,ಡಚ್ಚರು ಪೋರ್ಚುಗೀಸರು, ಇಂಗ್ಲೀಷರ ಬೊಕ್ಕಸ ತುಂಬಿಸುವ ಬೀಡಾಯ್ತು.

ಮೊದಲಿಗೆ ಬ್ರಿಟಿಷರು ವ್ಯಾಪಾರದ ಉದ್ದೇಶದಿಂದ ಭಾರತದಲ್ಲಿ ನೆಲೆಯೂರಿದರು. ಆದರೆ ಇಲ್ಲಿನ ಅಪಾರ ಸಂಪತ್ತು. ಅವರ ಮನಸೆಳೆಯಿತು. ಅಂದಿನ ಭಾರತದಲ್ಲಿ ಸಾವಿರಾರು ಪ್ರಾಂತ್ಯಗಳಿದ್ದವು. ಪ್ರತಿಯೊಂದು ಪ್ರಾಂತ್ಯಕ್ಕೂ ಒಬ್ಬೊಬ್ಬ ರಾಜ ಇದ್ದನು. ಒಂದು ರಾಜ್ಯಕ್ಕೂ ಮತ್ತೊಂದು ರಾಜ್ಯಕ್ಕೂ ಶಾಂತಿಯುತ ಸಂಪರ್ಕ ಇರಲಿಲ್ಲ. ಈ ಅನೈಕ್ಯತೆಯನ್ನು ಬ್ರಿಟಿಷರು ತಮ್ಮ ವ್ಯಾಪಾರ ವಿಸ್ತರಣೆ ಜೊತೆಗೆ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಭಾರತದ ರಾಜರು ಬ್ರಿಟನಿನ ರಾಣಿಯ ಆಳ್ವಿಕೆಗೆ ಒಳಗಾದರು. ತಮ್ಮ ರಾಷ್ಟ್ರದ ಕಾನೂನುಗಳನ್ನು ಭಾರತದ ಮೇಲೆ ಹೇರಲಾಯ್ತು. ನಮ್ಮ ರಾಜರು ಬ್ರಿಟಿಷರಿಗೆ ಕಪ್ಪ ಕಾಣಿಕೆ ನೀಡಿ ತಮ್ಮ ಅಧಿಕಾರ ಉಳಿಸಿಕೊಳ್ಳುವ ಪರಿಸ್ಥಿತಿ ರೂಪುಗೊಂಡಿತು. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯ ವಿರುದ್ಧ ಕಿತ್ತೂರು ರಾಣಿ ಚೆನ್ನಮ ಸಿಡಿದೆದ್ದಳು. ಅಲ್ಲಲ್ಲಿ ಬ್ರಿಟಿಷರ ವಿರುದ್ಧ ಹೋರಾಟದ ಮನಸುಗಳು ರೂಪುಗೊಳ್ಳಲು ಆರಂಭವಾದವು.1857 ರ ಪ್ರಥಮ ಸ್ವತಂತ್ರ ಸಂಗ್ರಾಮ ಇದಕ್ಕೆ ನಾಂದಿ ಹಾಡಿತು.

ಸಾವಿರಾರು ವಿದ್ಯಾರ್ಥಿಗಳು, ರೈತರು, ಶಿಕ್ಷಕರು, ಪತ್ರಕರ್ತರು, ಕಾರ್ಮಿಕರು ರಾಷ್ಟ್ರದ ಸ್ವತಂತ್ರ ಕ್ಕಾಗಿ ಜಾಗೃತರಾದರು. ಸ್ವತಂತ್ರ ಹೋರಾಟಕ್ಕೆ ಜಾಗೃತಿ ನೀಡುವ ಲಾವಣಿಗಳು, ಬೀದಿನಾಟಕಗಳು, ಪತ್ರಿಕಾ ಲೇಖನಗಳು ಗುಪ್ತವಾಗಿ ಹಂಚಲ್ಪಟ್ಟವು.ಇದರಿಂದಾಗಿ ಸ್ವತಂತ್ರ ಹೋರಾಟಕ್ಕೆ ಬಲ ಬಂದಿತು.

ಭಾರತದ ಸ್ವತಂತ್ರ ಹೋರಾಟದಲ್ಲಿ ಕರ್ನಾಟಕದ ಪಾತ್ರ ಅಪಾರ. ಅದರಲ್ಲೂ ಉತ್ತರ ಕರ್ನಾಟಕ ಸ್ವತಂತ್ರ ಹೋರಾಟಗಾರರ ತವರಾಗಿತ್ತು. ಸ್ವತಂತ್ರ ಹೋರಾಟಕ್ಕೆ ರಾಷ್ಟ್ರಪಿತ ಮಹಾತ್ಮಾ ಗಾಂದೀಜಿ ಅವರ ನೇತೃತ್ವದ ಸೌಮ್ಯವಾದಿಗಳು, ಸುಭಾಷ್ ಚಂದ್ರ ಬೋಸ್ ನೇತೃತ್ವದ ತೀವ್ರವಾದಿಗಳು ನಡೆಸಿದ ಹೋರಾಟ ಅತ್ಯಮೂಲ್ಯ. ಬಡತನದಲ್ಲಿ ಕುಟುಂಬದಲ್ಲಿ ಜನಿಸಿ ಪತ್ರಕರ್ತರಾಗಿ ಸರಳ ಬದುಕಿನ ಜೊತೆಗೆ ರಾಷ್ಟ್ರದ ಸ್ವತಂತ್ರ ಹೋರಾಟಕ್ಕೆ ಪತ್ರಿಕೆಯ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಜನಜಾಗೃತಿ ಮುಡಿಸಿದ ಸಾಧನೆ ಬ್ಯಾಡಗಿಯ ಷಡಕ್ಷರಪ್ಪ ರುದ್ರಪ್ಪ ಮಹಾರಾಜಪೇಟ್ ಅವರದು. ಅವರ ಹೋರಾಟದ ಜೀವನವನ್ನು ಕೃತಿಯಾಗಿಸುವ ಮೂಲಕ ಹಾವೇರಿ ಜಿಲ್ಲೆಯ ಹಿರಿಯ ಲೇಖಕಿ ಶ್ರೀಮತಿ ಸಂದ್ಯಾರಾಣಿ ದೇಶಪಾಂಡೆ ಅವರು ಬಹಳ ಶ್ಲಾಘನೀಯ ಕಾರ್ಯ ಮಾಡಿದ್ದಾರೆ.

ಸರಳ ಬದುಕಿನ, ಅಪಾರ ವೈಚಾರಿಕ ಚಿಂತನೆಯ ಷಡಕ್ಷರಪ್ಪ ರುದ್ರಪ್ಪ ಮಹಾರಾಜಪೇಟ್ ಅವರು ಮೋಟೆಬೆನ್ನೂರಿನ ಮೈಲಾರ ಮಹಾದೇವರು ಬ್ರಿಟಿಷರ ವಿರುದ್ಧ ವಿರುದ್ಧ ಉಗ್ರ ಹೋರಾಟ ನಡೆಸಿ ತಿರುಕ್ಕಪ್ಪ ಮಡಿವಾಳರು ಹಾಗೂ ವೀರಯ್ಯ ಹಿರೇಮಠರೊಂದಿಗೆ ರಾಷ್ಟ್ರಕ್ಕಾಗಿ ಬ್ರಿಟಿಷರ ಗುಂಡಿಗೆ ಬಲಿಯಾದರು. ಇದು ಉತ್ತರ ಕರ್ನಾಟಕದಲ್ಲಿ ಸ್ವತಂತ್ರ ಹೋರಾಟಕ್ಕೆ ಕಿಚ್ಚು ತಂದಿತು. ಇಂತಹ ಸಂದರ್ಭದಲ್ಲಿ ಪತ್ರಿಕೆಗಳಿಗೆ ಸ್ವತಂತ್ರ ಹೋರಾಟ ಸುದ್ದಿಗಳನ್ನು ಬರೆಯುವುದರ ಜೊತೆಗೆ ಆ ಪತ್ರಿಕೆಗಳನ್ನು ಬ್ಯಾಡಗಿ ತಾಲೂಕಿನ ಹಳ್ಳಿಹಳ್ಳಿಗಳಿಗೆ ತಲುಪಿಸಿ ಗ್ರಾಮೀಣ ಜನರಲ್ಲಿ ಷಡಕ್ಷರಪ್ಪ ರುದ್ರಪ್ಪ ಮಹಾರಾಜಪೇಟ್ ಅವರು ಜನರಲ್ಲಿ ಸ್ವತಂತ್ರ ಜಾಗೃತಿ ಮೂಡಿಸಿದರು. ಜೊತೆಗೆ ತಾವು ಬ್ಯಾಡಗಿಯ ಶ್ರೀ ವೀರಭದ್ರೇಶ್ವರ ದೇವಾಲಯದ ಮುಂದೆ ಸ್ವತಂತ್ರ ಧ್ವಜವನ್ನು ಹಾರಿಸಿಬಿಟ್ಟರು. ಜೊತೆಗೆ ಹಾವೇರಿ, ರಾಣಿಬೆನ್ನೂರು, ಹಿರೇಕೆರೂರು ಭಾಗದಲ್ಲಿನ ಸ್ವತಂತ್ರ ಹೋರಾಟಗಳಿಗೆ ಸಂದೇಶವಾಹಕರಾಗಿ ಸಹ ಕಾರ್ಯ ಮಾಡುತ್ತಿದ್ದರು. ಸ್ವತಂತ್ರ ಹೋರಾಟಕ್ಕೆ ಅಗತ್ಯ ಸಂಪನ್ಮೂಲ ಸಂಗ್ರಹಿಸಿ ನೀಡುವ ಕಾರ್ಯ ನಡೆಸಿದ್ದರು. ಈ ಎಲ್ಲವನ್ನು ಬ್ರಿಟಿಷ ಸರ್ಕಾರ ಗಮನಿಸಿ ಅಪರಾಧಿ ಎಂದು ಪರಿಗಣಿಸಿತು.

1946 ರಲ್ಲಿ ಷಡಕ್ಷರಪ್ಪ ರುದ್ರಪ್ಪ ಮಹಾರಾಜಪೇಟ್ ಅವರ ವಿವಾಹ ಪಾರ್ವತಿ ಅವರೊಂದಿಗೆ ಜರುಗಿತು. ವಿವಾಹದ ದಿನವೇ ಬ್ರಿಟಿಶ್ ಸರ್ಕಾರ ಅವರನ್ನು ಬಂಧಿಸಿತು. ಇಂತಹ ಪರಿಸ್ಥಿಯಲ್ಲೂ ದೃತಿಗೆಡದೆ ನವವಧು ಪಾರ್ವತಿ ದೈರ್ಯದಿಂದ ಪರಿಸ್ಥಿತಿ ಎದುರಿಸಿದರು. ಇಂತಹ ಮಹತ್ವದ ಮಹಾರಾಜಪೇಟ್ ಅವರ ಜೀವನ ಚರಿತ್ರೆ ಬರೆದಿರುವ ಸಂಧ್ಯಾರಾಣಿ ದೇಶಪಾಂಡೆ ಅವರ ಕಾರ್ಯ ಶ್ಲಾಘನೀಯವಾದುದು.

ನಂತರದ ದಿನಗಳಲ್ಲಿ ಸೆರೆ ಮನೆಯಿಂದ ಹೊರಬಂದು ಸುಂದರ ಸಂಸಾರ ನಡೆಸಿ ಏಳು ಮಕ್ಕಳ ತಂದೆಯಾಗಿ ಎಲ್ಲರನ್ನು ಸುಸಂಸ್ಕೃತರಾಗಿ ಬೆಳೆಸಿದ ಸಾಧನೆ ಮಹಾರಾಜಪೇಟ್ ಅವರದು. ಇವರ ಕಿರಿಯ ಮಗ ಜಗದೀಶ ಮಹಾರಾಜಪೇಟ್ ಅವರು ತಮ್ಮ ತಂದೆಯವರ ನೆನಪಿನಲ್ಲಿ ಟ್ರಸ್ಟ್ ಒಂದನ್ನು ಆರಂಭಿಸಿ ಆ ಮೂಲಕ ಗ್ರಾಮೀಣಸೇವಾ ಕಾರ್ಯಗಳನ್ನು ಮುಂದುವರೆಸಿದ್ದಾರೆ. ಇವರೊಬ್ಬ ಅಪ್ಪಟ ಪರಿಸರ ಪ್ರೇಮಿ. ಗ್ರಾಮೀಣ ಪ್ರದೇಶಗಳಲ್ಲಿನ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡುವ ಮೂಲಕ ತಮ್ಮ ತಂದೆಯವರ ಸೇವೆಯ ಕನಸನ್ನು ನನಸು ಮಾಡಿದ್ದಾರೆ. ಇಂತಹ ಹಿರಿಯ ಸಾಧಕರ ಬಗ್ಗೆ ಕೃತಿ ಪ್ರಕಟಿಸುವ ಮೂಲಕ ಮುಂದಿನ ಭವಿಷ್ಯದ ಯುವ ಜನತೆಗೆ ಹಿರಿಯ ಸ್ವತಂತ್ರ ಹೋರಾಟಗಾರರ ಆದರ್ಶಗಳನ್ನು ಪರಿಚಯಿಸುವ ಲೇಖಕಿ ಸಂಧ್ಯಾರಾಣಿ ದೇಶಪಾಂಡೆ ಅವರ ಕಾರ್ಯ ಅನುಕರಣೀಯವಾದುದು. ಇಂತಹ ಗ್ರಾಮೀಣ ಹೋರಾಟಗಾರರ ಬಗ್ಗೆ ಕೃತಿ ಪ್ರಕಟಿಸಬೇಕಾದ ಅವಶ್ಯಕತೆ ಇಂದಿನ ದಿನಮಾನಗಳಲ್ಲಿ ಅತ್ಯವಶ್ಯಕವಾಗಿದೆ.

ಹಾವೇರಿ ಜಿಲ್ಲೆಯ ಹಿರಿಯ ಲೇಖಕಿ, ನಿವೃತ ಶಿಕ್ಷಣಾಧಿಕಾರಿ ಸಂಧ್ಯಾರಾಣಿ ದೇಶಪಾಂಡೆ ಸ್ವತಂತ್ರ ಹೋರಾಟಗಾರ, ಸಮಾಜಪರ ಚಿಂತಕ ಷಡಕ್ಷರಪ್ಪ ರುದ್ರಪ್ಪ ಮಹಾರಾಜಪೇಟ್ ಅವರ ಸರಳ ಜೀವನ, ಪತ್ರಕರ್ತರಾಗಿ ಅಮೂಲ್ಯಸೇವೆ, ಜೊತೆ ಜೊತೆಯಲ್ಲೇ ಸ್ವತಂತ್ರ ಹೋರಾಟದ ಮಜಲುಗಳನ್ನು ಈ ಕೃತಿಯಲ್ಲಿ ಬಹಳ ಸುಂದರವಾಗಿ ಚಿತ್ರೀಸಿದ್ದಾರೆ. ಮದುವೆಯ ಮರುಕ್ಷಣವೇ ರಾಷ್ಟ್ರದ್ರೋಹದ ಆಪಾದನೆ ಮೇಲೆ ಸೆರೆಮನೆಗೆ ಹೋಗುವ ದ್ರಶ್ಯ ಓದುಗರ ಹೃದಯ ಹಿಂಡುತ್ತದೆ. ಜೀವನ ಚರಿತ್ರೆಯ ಜೊತೆಜೊತೆಗೆ ಸಮಾಜಕ್ಕೆ ದಾರಿದೀಪವಾಗುವ ತಮ್ಮ ಸ್ವರಚಿತ ಸೂಕ್ತಿಗಳನ್ನು ಲೇಖಕಿ ಸಂಧ್ಯಾರಾಣಿ ದೇಶಪಾಂಡೆ ಸಮಯೋಚಿತವಾಗಿ ಅಳವಡಿಸಿದ್ದಾರೆ. ಆ ಮುಲಕ ಓದುಗರಿಗೆ ಚಿಂತನೆಯ ರಸದೌತನ ನೀಡಿದ್ದಾರೆ. ಈ ಸೂಕ್ತಿಗಳು ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ

ರಾಷ್ಟ್ರದ ಸ್ವತಂತ್ರ ಚಳವಳಿಯಲ್ಲಿ ಗುಪ್ತ ಹೋರಾಟ ಮಾಡಿದವರಿದ್ದಾರೆ. ಹಾಸನ ಜಿಲ್ಲೆಯ ರಾಮಸ್ವಾಮಿ ಎಂಬ ವಿದ್ಯಾರ್ಥಿ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಆತ ಸ್ವತಂತ್ರ ಹೋರಾಟದ ಮೆರವಣಿಗೆಯಲ್ಲಿ ಸಾಗುತ್ತಿದ್ದ. ಬ್ರಿಟಿಷರ ಗುಂಡಿಗೆ ಬಲಿಯಾದ. ಆತನ ಹೆಸರನ್ನು ಮೈಸೂರಿನ ಪ್ರಮುಖ ವೃತ್ತಕ್ಕೆ ನೀಡಲಾಗಿದೆ. ನಗರದ ಹೃದಯ ಭಾಗದಲ್ಲಿ ಇರುವ ರಾಮಸ್ವಾಮಿ ವೃತ್ತ ಆತನ ಹೋರಾಟವನ್ನು ನೆನಪು ಮಾಡುತ್ತದೆ. ಅದೆ ರೀತಿ ಮೈಸೂರಿನ ಸಾಧ್ವಿ ಪತ್ರಿಕೆಯ ಸಂಪಾದಕರಾದ ಆಗರಂ ರಂಗಯ್ಯ ಅವರು ಸ್ವತಂತ್ರ ಹೋರಾಟದ ಸಂದೇಶಗಳನ್ನು ಮುದ್ರಿಸಿ ಭೂಗತರಾಗಿ ಪತ್ರಿಕೆ ವಿತರಿಸುತ್ತಿದ್ಸರು. ನಮ್ಮ ತಾತ ಬಿ. ಎಚ್. ಹನುಮಂತಮೂರ್ತಿ ಅವರು ಬಾಲ್ಯದಲ್ಲಿ ನನಗೆ ತಿಳಿಸಿದಂತೆ ಅಂದು ಎಲ್ಲೆಲ್ಲೂ ರಾಷ್ಟ್ರಕ್ಕೆ ಸ್ವಾತಂತ್ರ್ಯ ಬೇಕೆಂಬ ಹಂಬಲ. ಆದರೆ ಬ್ರಿಟಿಷರು ತಮ್ಮ ಕೈಕೆಳಗೆ ಕೆಲಸ ಮಾಡುತ್ತಿದ್ದ ಭಾರತೀಯರಾದ ಅಮುಲ್ದಾರ, ಪೊಲೀಸ್ ರಿಂದಲೇ ಹೋರಾಟಗಾರರಿಗೆ ಶಿಕ್ಷೆ ಕೊಡಿಸುತ್ತಿದ್ದರು. ಹೀಗಾಗಿ ನೌಕರಿಯಲ್ಲಿದ್ದ ಭಾರತೀಯರೇ ಸ್ವತಂತ್ರ ಹೋರಾಟಗಾರರ ಬಗ್ಗೆ ಮಾಹಿತಿ ನೀಡುತ್ತಿದ್ದರು. ಹೋರಾಟ ಹತ್ತಿಕ್ಕುತ್ತಿದ್ದರು. ಬಡತನದ ಕುಟುಂಬದ ನನ್ನ ಅಜ್ಜ ಮನಸ್ಸಿನಲ್ಲಿ ಬ್ರಿಟಿಷರ ವಿರುದ್ಧ ಅಗ್ನಿಜ್ವಾಲೆ ಏಳುತ್ತಿದ್ದರೂ ಸುಮ್ಮನಿರಬೇಕಾಯ್ತು. ಆದ್ರೂ ಗಾಂದೀಜಿ ಅವರು ಮೈಸೂರಿಗೆ, ಹುಣಸೂರಿಗೆ ಬಂದಾಗ ಭೇರ್ಯದ ಜನರನ್ನು ಹುರಿದುಂಬಿಸಿ ಹೊರಡಿಸಿದರು. ಅವರಲ್ಲಿ ರಾಷ್ಟ್ರ ಭಕ್ತಿ ತುಂಬಿದರು. ಅವರೂ ಗಾಂಧಿ ಅವರ ದರ್ಶನ ಮಾಡಿದರು. ಪೋಸ್ಟ್ ಮಾಸ್ಟರ್ ಕೆಲಸ ಹಾಗೂ ತುಂಬಿದ ಸಂಸಾರ ಅವರನ್ನು ಸ್ವತಂತ್ರ ಹೋರಾಟಕ್ಕೆ ಹೋಗದಂತೆ ಕಟ್ಟಿ ಹಾಕಿಬಿಟ್ಟವು. ಆದ್ರೂ ಅವರು ಸಂಪಕದಲ್ಲಿ ಇದ್ದ ಎಲ್ಲರಲ್ಲೂ ಜಮೀನಿನ ಬಳಿ, ದೇವಾಲಯ ಬಳಿ, ಊರ ಕೆರೆಯ ಬಳಿ ಕುಳಿತಾಗ ಸ್ವತಂತ್ರ ಜಾಗೃತಿ ಮೂಡಿಸುತ್ತಿದ್ದರು. ಅದೊಂದು ಅವರಿಗೆ ಆತ್ಮ ತೃಪ್ತಿ ನೀಡಿತ್ತು ಎಂದು ಹೇಳುತ್ತಿದ್ದರು.

ಮನೆಯ ಜವಾಬ್ದಾರಿಯಿಂದಾಗಿ ಹೋರಾಟಕ್ಕೆ ನೇರವಾಗಿ ಧುಮುಖಲಾಗದಿದ್ದರೂ ಜನಜಾಗೃತಿ ಮೂಡಿಸುತ್ತಿದ್ದವರ ಸಂಖ್ಯೆಯೂ ಅಪಾರ ಇದೆ.ಅವರ ಬಗ್ಗೆ ಆಯಾ ಪ್ರಾದೇಶಿಕವಾಗಿ ಪರಿಚಯ ಗ್ರಂಥ ತರುವ ಯತ್ನ ನಡೆಯಬೇಕು. ಈ ದಿಸೆಯಲ್ಲಿ ಸಾಹಿತಿ, ಸಹೋದರಿ ಶ್ರೀಮತಿ ಸಂಧ್ಯಾರಾಣಿ ದೇಶಪಾಂಡೆ ಅವರ ಈ ಕೃತಿ ಅತ್ಯಂತ ಮೌಲಿಕವಾದುದು.

ಡಾ. ಭೇರ್ಯ ರಾಮಕುಮಾರ್
ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಪುರಸ್ಕೃತರು
ಸಾಹಿತಿಗಳು, ಪತ್ರಕರ್ತರು
ಮೈಸೂರು
ಮೊಬೈಲ್ :9449680583
63631 72368

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group