ಆಧುನಿಕತೆಯ ಹೆಸರಲ್ಲಿ ಯಾಂತ್ರಿಕತೆಯ ಜೀವನದ ಭರಾಟೆಯಲ್ಲಿ ಪ್ರತಿದಿನ ಪ್ರತಿಕ್ಷಣ ಎಲ್ಲರೂ ಖುಷಿ ಖುಷಿಯಾಗಿರಬೇಕು ಅಂತಾನೆ ಯೋಚಿಸುತ್ತಾರೆ. ಆದರೆ ದಿನದ ಕೆಲವು ಗಂಟೆಗಳೂ ಸಂತಸದಿಂದಿರುವದು ಸಾಧ್ಯವಾಗುವದಿಲ್ಲ. ಖುಷಿಯ ಹಿಂದೆ ಕೈ ತೊಳೆದುಕೊಂಡು ಬೆನ್ನು ಹತ್ತಿದರೂ ಅದು ಕೈಗೆ ಸಿಗ್ತಾನೆ ಇಲ್ಲ. ಕೆಲವೇ ಕೆಲವರಿಗೆ ಮಾತ್ರ ಖುಷಿ ಮನದಲ್ಲಿ ಕಾಲು ಮುರಿದುಕೊಂಡು ಬಿದ್ದಿದೆ. ಅದು ಹೇಗೆ ಅಂತ ಖುಷಿಯ ಮೂಲ ಹುಡುಕಿಕೊಂಡು ಹೊರಟರೆ ಬೆಚ್ಚಿ ಬೀಳುವ ಪ್ರಸಂಗ ನಮ್ಮದಾಗುತ್ತದೆ.
ನಿಜವಾದ ಖುಷಿ ಎಲ್ಲಿದೆ ಎನ್ನುವದು ನೂರು ಮಿಲಿಯನ್ ಡಾಲರ್ ಪ್ರಶ್ನೆಯೂ ಅಲ್ಲ. ಇದಕ್ಕೆ ಉತ್ತರಿಸುವದು ತುಂಬಾ ಕಷ್ಟ ಅನ್ನುವದು ನಿಜವೇನಲ್ಲ. ಬಲ್ಲವರು ಹೇಳಿದಂತೆ ನಾವೂ ಹೇಳುವದಾದರೆ ಖುಷಿ ಅನ್ನುವದು ನಮ್ಮ ಮನದ ಒಂದು ಸ್ಥಿತಿಯಷ್ಟೆ. ಸಂತಸದ ಮನಸ್ಥಿತಿಯಲ್ಲಿರುವಾಗಲೇ ಅದು ನೋಡ ನೋಡುತ್ತಲೇ ಮುಗಿದು ಬಿಡುತ್ತದೆ. ಎಂಬ ಆತಂಕದ ಭಾವವೂ ನಮ್ಮ ಬೆನ್ನು ಹತ್ತಿರುತ್ತದೆ. ಈ ಆತಂಕದ ಮುಖ ನೋಡಿ ನಮ್ಮೆಡೆ ಮುಖ ಮಾಡಿ ಬಂದ ಖುಷಿಯನ್ನೂ ಹೆಚ್ಚು ಸಮಯ ಅನುಭವಿಸಲಾಗುವದಿಲ್ಲ. ಸುಖ ದುಃಖ ಜೀವನ ಚಕ್ರದಲ್ಲಿ ಸಾಮಾನ್ಯ. ಅವೆರಡು ಒಂದೇ ನಾಣ್ಯದ ಎರಡು ಮುಖಗಳು. ಅಂತ ಓದಿದ್ದು ಕೇಳಿದ್ದು ಮನದಲ್ಲಿ ಬೇರೂರಿದ್ದರೂ ಅದನ್ನು ಮನಸಾರೆ ಅಪ್ಪಿಕೊಂಡು ಒಪ್ಪಿಕೊಳ್ಳಲಾಗುತ್ತಿಲ್ಲ. ಸತತ ಸಂತಸ ಮಾತ್ರ ನಮ್ಮೊಂದಿಗಿರಲಿ ಎನ್ನುವದು ನಮ್ಮ ತುಡಿತ. ಈ ತುಡಿತದ ಬೆನ್ನು ಹತ್ತಿದ್ದಕ್ಕೆ ಸಂತಸ ತನ್ನ ಬೆನ್ನು ತೋರಿಸುತ್ತಿದೆ. ಅನ್ನೋದು ನಮಗೆ ಅರ್ಥವೇ ಆಗುತ್ತಿಲ್ಲ. ಅರ್ಥವಾದರೂ ಅರ್ಥವಾಗದಂತೆ ನಟಿಸುತ್ತಿದ್ದೇವೆ.
ಸಂತೋಷ ದೊಡ್ಡ ದೊಡ್ಡ ಸಂಗತಿಗಳಲ್ಲಿ ಅಡಗಿದೆಯೆಂದು ತಲೆಯಲ್ಲಿ ತುಂಬಿಕೊಂಡು ಹೋಗಿ ಬರುವ ಜಾಗಗಳಲ್ಲೆಲ್ಲ ದೊಡ್ಡ ದೊಡ್ಡದರಲ್ಲೇ ಖುಷಿ ಹುಡುಕುತ್ತ ಸಣ್ಣ ಪುಟ್ಟದವುಗಳನ್ನು ನಿರ್ಲಕ್ಷಿಸುತ್ತ ಜೀವನದ ನಿಜವಾದ ಖುಷಿ ನಮ್ಮೆದುರಿಗೆ ನಿಂತಾಗಲೂ ಕಣ್ಣು ತೆರದಿದ್ದರೂ ಗುರುತಿಸಲಾಗದೇ ಹೋಗುತ್ತೇವೆ. ಸಣ್ಣ ಸಂಗತಿಗಳಲ್ಲಿ ಸಂತಸ ಕಾಣುವವನೇ ಪರಮ ಸುಖಿ. ಮತ್ತೊಬ್ಬರ ಖುಷಿ ಅನೇಕ ಬಾರಿ ನಮಗೆ ಹೊಟ್ಟೆ ಉರಿ ತರಿಸುತ್ತೆ. ನಿಜ ಹೇಳಬೇಕೆಂದರೆ ಪರರ ಸಂತೋಷದಲ್ಲಿ ಭಾಗಿಯಾಗುವದರಲ್ಲಿನ ಸಂತೋಷ ಯಾವುದರಲ್ಲೂ ಇಲ್ಲ. ಆದರೆ ಅದನ್ನು ದಿನನಿತ್ಯ ಕಡೆಗಣಿಸುತ್ತಲೇ ಇರುತ್ತೇವೆ. ಬರೀ ಬೇರೆಯವರ ಖುಷಿಯನ್ನು ನೋಡಿದರೆ ನಾವು ಯಾವಾಗ ಖುಷಿ ಪಡೋದು? ಅನ್ನೋ ಹುಚ್ಚು ಭ್ರಮೆಯಲ್ಲಿ ಹಣದ ಹೊಳೆ ಹರಿಸಿ ಸಂತಸ ಹುಡುಕುತ್ತೇವೆ. ಹಣದ ಕನ್ನಡಿಯಲ್ಲಿ ಖುಷಿ ತನ್ನ ಮುಖವನ್ನು ಒಂದೇ ಒಂದು ಕ್ಷಣ ಮಿಂಚಿನ ಝಲಕ್ನಂತೆ ತೋರಿಸಿ ಮಾಯವಾಗಿಬಿಡುತ್ತದೆ. ಹಣದಿಂದ ಸಂತಸವನ್ನು ಖರೀದಿಸುತ್ತೇವೆ ಎಂದು ಹಗಲು ರಾತ್ರಿ ನಿದ್ದೆ ನೀರಡಿಕೆ ಬಿಟ್ಟು ಅದರ ಹಿಂದೆ ಓಡುವವರ ಕಂಡು ನಗಬೇಕೋ ಅಳಬೇಕೋ ಗೊತ್ತಾಗುವದಿಲ್ಲ.
ಕೆಲವೊಬ್ಬರಿಗೆ ಕೆಲವೊಂದರಲ್ಲಿ ಸಿಗುವ ಸಂತೋಷ ಇನ್ನೂ ಕೆಲವರಿಗೆ ಅದೇ ವಿಷಯಗಳಲ್ಲಿ ಸಿಗುವದಿಲ್ಲ. ಅಂದರೆ ಸಂತೋಷ ಎಲ್ಲರಿಗೂ ಒಂದೇ ವಿಷಯದಲ್ಲಿ ಸಿಗುವದಿಲ್ಲ ಅಂತಾಯ್ತು.. ಈ ಸಂತಸ ಮನಸ್ಸಿನ ಭಾವನೆಯ ಮೇಲೆ ಅವಲಂಬಿತ. ಕೆಲವರಿಗೆ ರಸ್ತೆ ಬದಿಯಲ್ಲಿರುವ ಟೀ ಸ್ಟಾಲ್ ಗಳಲ್ಲಿ ನಿಂತು ಪಕೋಡಾ ಸಮೊಸಾ ಮೆಲ್ಲ ಮೆಲ್ಲನೆ ಮೆಲ್ಲುತ್ತ ಹಬೆಯಾಡುವ ಟೀ ಹೀರೋದರಲ್ಲಿ ಇರೋ ಖುಷಿನೇ ಪರಮ ಖುಷಿ ಅಂತಾರೆ. ಇದೇ ವಿಷಯ ಕೆಲವರಿಗೆ ಅಸಹ್ಯವನ್ನು ಹುಟ್ಟಿಸುತ್ತದೆ. ಛೇ! ಏನ ಜನನಪ್ಪ ತಿಂಡಿ ತಿನಿಸು ಕಾಣದವರ ತರ ರಸ್ತೆ ಬದಿಯಲ್ಲಿ ನಿಂತು ತಿಂತಾರೆ ಅಂತ ಮೂಗು ಮುರಿದು ಪಂಚ ತಾರಾ ಹೊಟೆಲ್ನಲ್ಲಿ ಒಂದು ಬೈಟು ಕಾಫಿಗೆ ಒಂದು ತಾಸು ಕಾದು, ಕುಡಿಯುವದರಲ್ಲಿ ಖುಷಿಯಿದೆ.
ಮತ್ತೊಂದಿಷ್ಟು ಜನರಿಗೆ ತಿನ್ನೋ ಕುಡಿಯೋ ವಿಷಯದಲ್ಲಿ ಖುಷಿ ಇಲ್ಲ. ಅವರು ಬದುಕಿಗಾಗಿ ತಿನ್ನೋದು. ತಿನ್ನೋದಕ್ಕಾಗಿ ಬದುಕೋದು ಅಲ್ಲ ಅನ್ನೋ ತತ್ವ ಪಾಲಿಸುತ್ತಾರೆ. ನೇಚರ್ನಲ್ಲಿ ಖುಷಿ ಕಾಣೋದು ಅವರ ನೇಚರ್. ನೇಚರ್ ನಮ್ ಟೀಚರ್ ಅನ್ನೋ ಜನ ಇವರು. ಹಸಿರು ಹೊದ್ದ ನಿಂತ ಬೆಟ್ಟ ಗುಡ್ಡ ಸಣ್ಣದಾದ ತೊರೆ ಪುಟ್ಟದಾದ ಗುಡಿಸಲು ದೊಡ್ಡದಾದ ಮರವನ್ನು ನಿಂತ ಚಿಕ್ಕ ಬಳ್ಳಿ, ಬಳ್ಳಿಯಲ್ಲಿ ನಗೆ ಚೆಲ್ಲುತ್ತ ನಿಂತ ಪುಟ್ಟ ಪುಟ್ಟದಾದ ಹೂವು ಹಣ್ಣುಗಳನ್ನು ಕಂಡು ಕಲಾವಿದನ ಕುಂಚದ ಬಾಯಿಂದ ಹೊರ ಬಂದ ಸುಂದರವಾದ ಕಲಾಕೃತಿಯನ್ನು ಕಂಡು ಇವರ ಕಾಲುಗಳು ಮುಂದೆ ಚಲಿಸಲು ಒಲ್ಲೆ ಎನ್ನುತ್ತ ಅಲ್ಲಿಯೇ ಗಕ್ಕನೇ ನಿಂತು ಬಿಡುತ್ತವೆ. ಭುವಿಯಲ್ಲಿಯೇ ಸುಂದರ ಸ್ವರ್ಗವಿದೆ ಎಂದು ಅನುಭವಿಸುತ್ತ ಕಣ್ಣರಳಿಸಿಕೊಂಡು ನಿಂತು ಖುಷಿಯಲ್ಲಿ ಮುಳುಗಿಬಿಡುತ್ತಾರೆ.
ಇನ್ನೊಂದಿಷ್ಟು ಜನರಿಗೆ ಜನರು ಸಿಕ್ಕರೆ ಸಾಕು ಸ್ವರ್ಗ ಸಿಕ್ಕ ಹಾಗೆ ನಗು ನಗುತಾ ಮಾತಾಡ್ತಾರೆ ಅವರ ನೋವುಗಳಿಗೆ ತಮ್ಮ ಕಣ್ಣಲ್ಲಿ ನೀರು ಜಿನುಗಿಸಿ ತಕ್ಷಣವೇ ಸಹಾಯ ಹಸ್ತ ಚಾಚಿ ನೋವುಂಡವರ ತುಟಿಯಂಚಿನಲ್ಲಿ ನಗು ಕಂಡು ಖುಷಿ ಪಡುತ್ತಾರೆ. ಜನಸ್ಪಂದನೆಯೇ ಇವರ ಸಂತೊಷದ ಬೇರು. ಯಾರೇ ಏನೇ ಚಿಕ್ಕ ಸಹಾಯ ಮಾಡಿದರೂ ಪ್ರೀತಿಯಿಂದ ಕಿರುನಗೆ ಚೆಲ್ಲಿ ಮನಸಾರೆ ಥ್ಯಾಂಕ್ಸ್ ಹೇಳೋದರಲ್ಲಿ ಮನಸ್ಸು ಅರಳುತ್ತೆ. ಮೈ ಮುರಿದು ದುಡಿಯುವ ಶ್ರಮಜೀವಿಗಳಾದ ಹಾಲು ಮಾರುವವರು ಪತ್ರಿಕೆ ಮಾರುವವರು ಕಾವಲುಗಾರರು ಅಟೋ ಡ್ರೈವರ್ ಹೀಗೆ ದಿನನಿತ್ಯದ ಜೀವನದಲ್ಲಿ ನಮ್ಮ ಬದುಕಿಗೆ ನೆರವಾಗುವ ವ್ಯಕ್ತಿಗಳ ಎದೆಯಲ್ಲಿ ಪ್ರೀತಿಯ ಕುಸುಮ ಅರಳಿಸಿದರೆ ಬದುಕು ಸಾರ್ಥಕವೆನ್ನುವ ಭಾವ ಹೊತ್ತು ಶ್ರಮಿಕರ ಖುಷಿಯಲ್ಲಿ ಖುಷಿ ಕಾಣುವ ಹೃದಯವಂತರೂ ಇದ್ದಾರೆ.
ರಸ್ತೆಯಲ್ಲಿ ಅನಾಥರಂತೆ ನಿಂತಿರುವ ಮಕ್ಕಳಿಗೆ ಇಷ್ಟವಾಗುವ ಚಾಕೋಲೇಟ್ ಐಸ್ ಕ್ರೀಮ್ ಕೊಡಿಸಿ ಅವರ ಮೊಗದಲ್ಲಿ ಸಂತೋಷ ಕಂಡು ಮನಸ್ಸಿನ ಗಾತ್ರ ಹಿರಿದಾಗಿಸಿ ಜೋಳಿಗೆಯನ್ನು ಖುಷಿಯಿಂದ ತುಂಬಿಸಿಕೊಳ್ಳುವವರೂ ಇದ್ದಾರೆ. ಮಗುವಿನ ಮುಗ್ದ ನಗುವಲ್ಲಿ ನಗು ಕಾಣುವ ಸಂಗೀತ ಸಾಹಿತ್ಯದಲ್ಲಿ ಮೈ ಮರೆತು ಖುಷಿಯ ಮೇರೆಯನ್ನು ಮುಟ್ಟಿದವರಂತೆ ನಲಿಯುವವರು ಪಶು ಪಕ್ಷಿ ಪ್ರಾಣಿಗಳ ಕಂಡರೆ ಪ್ರಾಣ ಅವುಗಳಿಗೆ ನೀರು ಹಾಲು ಬಿಸ್ಕತ್ ಬ್ರೆಡ್ ತಿನಿಸಿ ತಾವೇ ತಿಂದಷ್ಟು ಖುಷಿ ಅನುಭವಿಸುವವರೂ ಇದ್ದಾರೆ.
ಹೊಟ್ಟೆಯನ್ನು ಬೆನ್ನಿಗಂಟಿಸಿಕೊಂಡು ದುಡಿದು ತನ್ನ ಹೊಟ್ಟೆ ಖಾಲಿ ಇಟ್ಟುಕೊಂಡು ಇತರರ ಹೊಟ್ಟೆ ತುಂಬಿಸುವದರಲ್ಲಿ ಖುಷಿ ಕಾಣುವವರ ಸಂಖ್ಯೆಗೇನು ಕಮ್ಮಿಯಿಲ್ಲ. ತನ್ನಲ್ಲಿರುವದನ್ನು ತನಗಿಲ್ಲದಂತೆ ಮಾಡಿಕೊಂಡು ಬೇರೆಯವರಿಗೆ ಮೊಗೆದು ಮೊಗೆದು ಕೊಡುವದರಲ್ಲಿಯೇ ಧನ್ಯತಾ ಭಾವ ಹೊಂದುವವರೂ ಜಗದ ಮೇಲಿದ್ದಾರೆ. ಸಂಕಷ್ಟಗಳ ಕುಲುಮೆಯಲ್ಲಿ ಬೇಯುತ್ತ ಗುರಿಯ ದಾರಿ ಸವೆಸಿ ಗುರಿ ಮುಟ್ಟಿದಾಗ ಮುಗಿಲು ಮುಟ್ಟಿದ ಸಂತಸ ಕಣ್ಣಲ್ಲಿ.
ಹೀಗೆ ಸಂತಸ ಸರ್ವರಿಗೂ ಸರ್ವ ಸಂಗತಿಗಳಲ್ಲಿ ಸಿಗಲ್ಲ. ನಮ್ಮ ಸಂತಸ ಎಲ್ಲಿದೆ ಎಂದು ಗುರುತಿಸಿಕೊಂಡು ಅದರತ್ತ ವಾಲುವದು ಒಳಿತು. ನಮ್ಮ ಖುಷಿ ಬೇರೆಯವರಿಗೆ ನೋವು ತರದಿರಲಿ.ಖುಷಿಯ ಸುಗಂಧ ಎಲ್ಲೆಡೆ ಹಬ್ಬುವಂತಿರಲಿ. ನಗೆಯಂತೆ ಸಾಂಕ್ರಾಮಿಕವಾಗಿರಲಿ. ಸಂತಸ ಮನಶ್ಯಾಂತಿಯನ್ನು ತನ್ನ ಬೆನ್ನ ಮೇಲೆ ಮೂಟೆ ಮೂಟೆಯಲ್ಲಿ ಹೊತ್ತು ತರುತ್ತದೆ. ಖುಷಿಗಾಗಿ ಹುಡುಕುವದು ಬೇಡ. ಸಣ್ಣ ಪುಟ್ಟ ಸಂಗತಿಗಳಲ್ಲಿ ಸಿಗುವ ಖುಷಿಯನ್ನು ಕಳೆದುಕೊಳ್ಳುವದು ಬೇಡ. ಸಂತಸ ಅರಳುವ ಸಮಯ ಮರೆಯೋಣ ಚಿಂತೆಯ. ಸ್ನೇಹಿತರೆ, ದೊಡ್ಡದಾದ ಖುಷಿಗಾಗಿ ಕಾಯದೆ ಸಣ್ಣ ವಿಷಯಗಳಲ್ಲಿ ಸಿಗುವ ದೊಡ್ಡ ಖುಷಿಯನ್ನು ಕಳೆದುಕೊಳ್ಳದಿರೋಣ ಏನಂತಿರಿ.
ಜಯಶ್ರೀ,ಜೆ, ಅಬ್ಬಿಗೇರಿ ಬೆಳಗಾವಿ
ಆಂಗ್ಲ ಭಾಷಾ ಉಪನ್ಯಾಸಕರು
೯೪೪೯೨೩೪೧೪೨