ವಾರಾಣಸಿ : ಮನುಷ್ಯ ಸಂಬಂಧಗಳನ್ನು ಹೊಸಕಿ ಹಾಕಿ ಕೂಡಿಬಾಳುವ ಸ್ನೇಹ ಸಹೋದರತ್ವದ ಪ್ರೀತಿಯ ನೆಲೆಗಳನ್ನು ಛಿದ್ರಗೊಳಿಸುವ ರಾಗ ದ್ವೇಷಗಳ ವೈರುಧ್ಯ ಮರೆತರೆ ಸರ್ವರಿಗೂ ಶಾಂತಿ ನೆಮ್ಮದಿ ಸಾಧ್ಯವಾಗುತ್ತದೆ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಅವರು ಉತ್ತರಪ್ರದೇಶದ ವಾರಾಣಾಸಿ ನಗರದ ತಮ್ಮ ಧರ್ಮಪೀಠದಲ್ಲಿ ಜರುಗಿದ 10 ದಿನಗಳ ಶರನ್ನವರಾತ್ರಿ ಆಚರಣೆಯ ಕೊನೆಯ ದಿನ ಗುರುವಾರ ಆದಿ ಜಗದ್ಗುರು ಶ್ರೀವಿಶ್ವಾರಾಧ್ಯರ ಹಾಗೂ ಶ್ರೀಚಕ್ರಸಹಿತ ಆದಿಶಕ್ತಿ ಮಾತೆಯ ಸಾನ್ನಿಧ್ಯದಲ್ಲಿ ವಿಶೇಷ ಶಮೀಪೂಜೆ ನೆರವೇರಿಸಿ ವಿಜಯದಶಮಿಯ ಶಾಂತಿ ಸಂದೇಶ ನೀಡಿದರು. ಎಲ್ಲ ಪೈಶಾಚಿಕ ಕೃತ್ಯಗಳಿಂದ ಹೊರಬಂದು ಮನುಕುಲದ ಜೀವನ ವಿಧಾನಕ್ಕೆ ಹೃದ್ಯವಾಗುವ ಸಜ್ಜನಿಕೆಯ ಒಲವನ್ನು ರೂಢಿಸಿಕೊಳ್ಳಬೇಕು ಎಂದರು.
ವಿಶ್ವಶಾಂತಿ ಸ್ಥಾಪನೆ : ಯಾವುದೋ ಕರಾಳ ಕ್ಷಣದ ಒಂದು ಮಾತು ಅಶಾಂತಿ, ದೊಂಬಿ, ಹಿಂಸಾಕೃತ್ಯಗಳಿಗೆ ಕಾರಣವಾಗಿ ಜನಮನಗಳು ತಲ್ಲಣಗೊಳ್ಳುತ್ತವೆ. ಮಾನವನ ಬದುಕನ್ನು ಸುತ್ತುವರೆಯುವ ವ್ಯಷ್ಟಿಯ ಕುಬ್ಜ ವಿಚಾರಗಳಿಂದ ಹೊರಬಂದು ಶಾಂತಿಮಂತ್ರದ ನೀತಿಪಾಠಗಳ ಮೌಲ್ಯಗಳನ್ನು ಮೆಲಕು ಹಾಕಿ ಸತ್ಯಾನ್ವೇಷಣೆಯ ಸಮಷ್ಟಿ ಸಂಕಲ್ಪಗಳಿಗೆ ತೆರೆದುಕೊಂಡಾಗ ನಮ್ಮ ಹಬ್ಬದಾಚರಣೆಗಳಿಗೆ ಅರ್ಥಬರುತ್ತದೆ. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ಭಾರತವು ವಿಶ್ವಶಾಂತಿ ಸ್ಥಾಪನೆಯ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮುವಂತೆ ಪ್ರತಿಯೊಬ್ಬ ಭಾರತೀಯರೂ ವಿಜಯದಶಮಿಯ ಪರ್ವಕಾಲದಲ್ಲಿ ಪ್ರತಿಜ್ಞೆಗೈದು ಕೈಜೋಡಿಸಬೇಕೆಂದು ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಕರೆ ನೀಡಿದರು. ಶಿವಾನಂದ ಹಿರೇಮಠ, ಶಿವಮೂರ್ತಿ ಹಿರೇಮಠ ಇತರರು ಇದ್ದರು.