ಹುನಗುಂದ: ಎಲ್ಲ ಜಾತಿ, ಧರ್ಮದವರು ಸಹೋದರತೆಯಿಂದ ನಾಗಲಿಂಗ ನಗರದಲ್ಲಿ ಬದುಕು ಸಾಗಿಸುವುದು ಜಾತ್ಯತೀತ ರಾಷ್ಟ್ರದ ಸಂಕೇತವನ್ನು ಸೂಚಿಸುತ್ತದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಇಲ್ಲಿನ ನಾಗಲಿಂಗನಗರದ ಅಮನ್ ಹಾಗೂ ನೂರಾನಿ ಮಜೀದ್ ಇಸ್ಲಾಂ ಕಮಿಟಿ ಸಹಯೋಗದಲ್ಲಿ ಸೋಮವಾರ ನಡೆದ ಪ್ರವಾದಿ ಮಹಮ್ಮದ್ ಪೈಗಂಬರ್ -ಅವರ ಜನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ವರನ್ನು ಸಮನಾಗಿ ಕಾಣುವ, ತಪ್ಪುಗಳನ್ನು ತಿದ್ದಿಕೊಂಡು ಮುನ್ನೆಡೆಯುವ ವ್ಯಕ್ತಿ ನಿಜವಾದ ಮನುಷ್ಯ, ಮುಂದಿನ -ಎರಡೂವರೆ ವರ್ಷದಲ್ಲಿ ನಾಗಲಿಂಗ ನಗರವನ್ನು ಮಾದರಿ ನಗರವನ್ನಾಗಿ ಮಾಡಲಾಗುವುದು. ಈಗಾಗಲೇ ರೂ. ೨೫ ಲಕ್ಷ ವೆಚ್ಚದಲ್ಲಿ ರಸ್ತೆ, ಚರಂಡಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಜನರ ಬೇಡಿಕೆಯಂತೆ ಬಸ್ ನಿಲ್ದಾಣ ಹಾಗೂ ಸುಗಮ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ಮೇಲ್ಬಾಗದಲ್ಲಿ ಸೇತುವೆ ನಿರ್ಮಿಸಲಾಗುವುದು ಎಂದು ಶಿರೂರು ಮಹಾಂತ ತೀರ್ಥದ ಸ್ವಾಮೀಜಿ, ಪಟ್ಟಣದ ಅಮರೇಶ್ವರ ದೇವರು, ಮೌಲಾನ ಶಫಿ ಜಬ್ಬಾರ ಕಲ್ಲುರ್ಗಿ, ಬಸವಲಿಂಗ ಗಚ್ಚಿನಮಠದ ಧರ್ಮಗುರು ಮುಖಂಡರಾದ ರಜಾಕ್ ತಟಗಾರ್ ಮಾತನಾಡಿದರು.
ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಮಹಬೂಬ್ ಸರಕಾವಸ್, ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ, ಉಪಾಧ್ಯಕ್ಷೆ ರಾಜಮ್ಮ ಬದಾಮಿ ಯಲ್ಲಪ್ಪ ನಡುವಿನಮನಿ, ಶಿವಾನಂದ ಕಂಠಿ, ಸಂಗಣ್ಣ ಗಂಜಿಹಾಳ, ಪರವೇಜ್ ಖಾಜಿ, ಬಾಬು ವಾಲಿಕಾರ, ಮಹಾಂತೇಶ ಅವಾರಿ, ಕೃಷ್ಣ ಜಾಲಿಹಾಳ ಇದ್ದರು.
ಯತ್ನಾಳ ವಿರುದ್ಧ ವಾಗ್ದಾಳಿ: ಪಟ್ಟಣದ ನಾಗಲಿಂಗ ನಗರದ ಅಮನ್ ಹಾಗೂ ನೂರಾನಿ ಮಜೀದ್ ಇಸ್ಲಾಂ ಕಮಿಟಿ ಸಹಯೋಗದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನೋತ್ಸವದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಕೆಲವರು ಮನುಷ್ಯತ್ವ ಮರೆತು ಧರ್ಮಗಳ ನಡುವೆ ಬೆಂಕಿ ಹಚ್ಚುವ ಕಾರ್ಯ ಮಾಡುತ್ತಿದ್ದು, ಅಂತಹ ಮಾರ್ಗದರ್ಶನದ ವ್ಯಕ್ತಿಗಳಿಗೆ ಅವಶ್ಯಕತೆಯಿದೆ. ಆದರೆ ಹಜರತ್ ಪೈಗಂಬರ್ ವಿರುದ್ಧ ಮಾತನಾಡಿದ ಪರಿಣಾಮ ವಿಧಾನಸಭೆ ಅಧಿವೇಶನ ನಡೆಯುವ ಸಂದರ್ಭದಲ್ಲಿ ಮುಂಭಾಗದ ಸಾಲಿನ (೬ ನಂಬರ್) ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದ ವ್ಯಕ್ತಿ ಈಗ ಕೊನೆಯ ಸಾಲಿನಲ್ಲಿ ಕುಳಿತು ಕೊಳ್ಳುವಂತಾಗಿದೆ. ಮುಂದಿನ ದಿನಗಳಲ್ಲಿ ಅದು ಸಹ ಖಾಲಿ ಆಗುತ್ತದೆ ಎಂದು ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ವಾಗ್ದಾಳಿ ನಡೆಸಿದರು.