ಅರಸೀಕೆರೆ ರೋಟರಿ ಭವನದಲ್ಲಿ ನಿನ್ನೆ ಶನಿವಾರ ‘ಸುಂದರ ನವಿಲಿಗೆ ಚಂದದ ಗರಿ’ ಪುಸ್ತಕ ಲೋಕಾರ್ಪಣೆ ಸಮಾರಂಭವು ನೆರವೇರಿತು.
ಪರಮೇಶ್ ಅರಸೀಕೆರೆ ಉದ್ಘಾಟನಾ ನುಡಿಯಲ್ಲಿ, ಸಾಹಿತ್ಯವು ವಿಶಾಲವಾದ ಪ್ರಕ್ರಿಯೆಯಾಗಿದೆ. ಇರುವ ಸ್ಥಿತಿಯನ್ನ ವೈಭವೀಕರಿಸಿ ಕಥೆ, ಕವನ ,ನಾಟಕ ಹೀಗೆ ವಿವಿಧ ಪ್ರಕಾರವು ರಚಿಸುವುದಾಗಿದೆ ಎಂದು ತಾವು ನಾಟಕದಲ್ಲಿ ನಟಿಸುವಾಗ ಆದ ಕೆಲವು ಅನುಭವಗಳನ್ನು ಹಂಚಿಕೊಂಡರು.
ಪ್ರಾಸ್ತಾವಿಕ ನುಡಿಯಲ್ಲಿ ಅರಸೀಕೆರೆ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಪದ್ಮಮೂರ್ತಿ ಯವರು ಲೇಖಕಿ ಸಾವಿತ್ರಮ್ಮ ಓಂಕಾರ್ ಅವರು ಸಾಹಿತ್ಯದಲ್ಲಿ ನಡೆದುಬಂದ ಹೆಜ್ಜೆಗಳನ್ನ ಹೇಳಿದರು.
ಹಾಸನದ ಸಾಹಿತಿ ಗೊರೂರು ಅನಂತರಾಜುರವರು ಕೃತಿ ಪರಿಚಯವನ್ನು ಸುದೀರ್ಘವಾಗಿ ಮಾಡಿಕೊಡುತ್ತಾ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು ನಿವೃತ್ತಿ ಹೊಂದಿ ಪ್ರವೃತಿಯಲ್ಲಿ ಹವ್ಯಾಸಿ ಲೇಖಕಿಯಾಗಿ ಹಾಸನದ ಸಾಹಿತ್ಯ ಲೋಕದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಣಬರುತ್ತಿರುವ ಸಾವಿತ್ರಮ್ಮ ಓಂಕಾರ್ ಶಿಶುಗೀತೆ, ಕಥೆ, ಕವನ, ಗಜಲ್, ವ್ಯಕ್ತಿ ಚಿತ್ರಗಳ ಬರವಣಿಗೆಯ ಜೊತೆಗೆ ರೇಖಾಚಿತ್ರಗಳ ರಚನೆಯಲ್ಲಿ ತೊಡಗಿಸಿಕೊಂಡವರು. ಪ್ರಸ್ತುತ ಇವರ ಸುಂದರ ನವಿಲಿಗೆ ಚೆಂದದ ಗರಿ ವ್ಯಕ್ತಿ ಚಿತ್ರಣಗಳ ಕೃತಿ. ಸಾಹಿತ್ಯ, ರಂಗಭೂಮಿ, ಜನಪದ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ, ಮಾಡುತ್ತಿರುವ, ಎಲೆಮರೆ ಕಾಯಿಗಳಂತೆ ಪ್ರಚಾರ ಪ್ರಸಿದ್ಧಿಗೆ ಹಾತೊರೆಯದ ಸಾಧಕರನ್ನು ಗುರುತಿಸಿ ಅವರ ಜೀವನ ಅನುಭವಗಳನ್ನು ನವಿಲಿನ ಚೆಂದದ ಗರಿಗಳಾಗಿ ತೆರೆದಿಟ್ಟಿದ್ದಾರೆ. ಕೃತಿಯ ಲೇಖಕಿ ಸಾವಿತ್ರಮ್ಮ ಓಂಕಾರ್ ತಮ್ಮ ಮನದ ಮಾತಿನಲ್ಲಿ ಸಾಧಕರನ್ನು ದೇವರಿಗೆ ಅರ್ಪಿಸುವ ಹೂವುಗಳಾಗಿ ಭಾವುಕತೆಯಲ್ಲಿ ವರ್ಣಿಸಿದ್ದಾರೆ. ಎಲ್ಲಾ ೭೪ ಜನ ಸಾಧಕರನ್ನು ಸಂದರ್ಶಿಸಿ ಅವರು ಕಾರ್ಯ ಪ್ರಗತಿಯನ್ನು ವೈಯುಕ್ತಿಕ ಪುಸ್ತಕ ರಚನೆಯ ಸಾಧನೆಯ ಹಾದಿಯನ್ನು ಗುರುತಿಸಿದ್ದಾರೆ ಎಂದರು.
ನಾಗರತ್ನ ರಾಜಶೇಖರ್ ರವರು ಕಾರ್ಯಕ್ರಮದ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿ ಸ್ವರಚಿತ ಚುಟುಕು ವಾಚನ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಾಸನದ ಪತ್ರಕರ್ತರು,ಕಸಾಪ ಮಾಜಿ ಅಧ್ಯಕ್ಷರು ಉದಯರವಿ ಮಾತನಾಡಿ, ಸಾಹಿತಿಗಳಿಗಾಗೇ ಒಂದು ಪುಟವನ್ನು ಮೀಸಲಿಟ್ಟ ಪ್ರತಿನಿಧಿ ಪತ್ರಿಕೆಯ ಬಗ್ಗೆ ತಿಳಿಸಿದರು. ಕೃತಿಯ ಬಗ್ಗೆ ಪ್ರಶಂಸನೀಯ ನುಡಿಗಳನ್ನು ಆಡಿ ಪ್ರತಿಯೊಬ್ಬ ಸಾಹಿತಿಗಳನ್ನು ಉತ್ತೇಜಿಸಿ ಮಾತನಾಡಿದರು.
ಮಧುಮಾಲತಿ ರುದ್ರೇಶ್, ಮಾಲಾ ಚಲುವನಹಳ್ಳಿ, ಸುಭದ್ರಾ, ಶಫೀತಾ ಬೇಗಂ, ಪ್ರೇಮಲತಾ ಸೋಮಶೇಖರ್, ಸುಧಾ ಬಾಣಾವರ. ವಿಶ್ವಾಸ ಗೌಡ. ಮಲ್ಲೇಶ, ಉಮೇಶ ಹೊಸಹಳ್ಳಿ, ರುದ್ರೇಶ, ಚಂದ್ರು ಬಾಣಾವರ, ಡಾ. ಹರೀಶ ಉಪಾನ್ಯಾಸಕರು ಮುಂತಾದವರು ಕವಿತೆ ಚುಟುಕು ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಪುಸ್ತಕದಲ್ಲಿನ ಸಾಧಕರನ್ನು ಪುಸ್ತಕದ ಜೊತೆ ಸನ್ಮಾನಿಸಲಾಯಿತು. . ಕಾತ್ಯಾಯಿನಿ ತೇವರಿಮಠ ನಿರೂಪಣೆ, ಶಫೀತಾಬೇಗಂರಿಂದ ಪ್ರಾರ್ಥನೆ , ಬೇಲೂರು ಮಧುಮಾಲತಿ ರುದ್ರೇಶರಿಂದ ಸ್ವಾಗತ ಕಡೆಯಲ್ಲಿ ಸಾವಿತ್ರಮ್ಮ ಓಂಕಾರ್ ವಂದಿಸಿದರು.