ಸಿಂದಗಿ; ರಾಜ್ಯದಲ್ಲಿ ಅತಿವೃಷ್ಟಿಯಿಂದ ವಿವಿಧ ಬೆಳೆಗಳು ಹಾನಿಯಾಗಿವೆ. ಮನೆಗಳು ಬಿದ್ದಿವೆ, ನೆರೆಹಾವಳಿಯಿಂದ ಮನೆಗಳಿಗೆ ನೀರು ನುಗ್ಗಿವೆ. ಇಂತಹ ಸಂದರ್ಭದಲ್ಲಿ ಜನರ ಕಷ್ಠ ಕೇಳಲು ಸಿಎಂ ಬರದೆ ಜಾತಿ ಜನಗಣತಿ ನಡೆಸಲು ಹೆಚ್ಚು ಒತ್ತು ನೀಡುತ್ತಿದ್ದಾರೆ. ನನ್ನ ೪೦ ವರ್ಷದ ರಾಜಕೀಯ ಅನುಭವದಲ್ಲಿ ಇಂತಹ ನಾಚಿಕೆಗೆಟ್ಟ ಸರಕಾರ ಎಂದು ನೋಡಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಹರಿಹಾಯ್ದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ಬಿಜೆಪಿ ರೈತ ಮೋರ್ಚಾದವತಿಯಿಂದ ಅಹೋರಾತ್ರಿ ಧರಣಿ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿದರು
ತೊಗರಿ, ಹತ್ತಿ, ಕಬ್ಬು ಸೇರಿದಂತೆ ವಿವಿಧ ಬೆಳೆಗಳು ಪ್ರತಿಶತ ೮೦ ರಷ್ಟು ಹಾಳಾಗಿದ್ದರೂ ಸಮೀಕ್ಷೆ ಮಾತ್ರ ಶೇ. ೨೦ ರಷ್ಟು ಮಾಡಿ ವರದಿ ಮಾಡುತ್ತಿದ್ದಾರೆ. ಇದರಿಂದ ರೈತರು ಬಿತ್ತನೆ ಮಾಡಿದ ಖರ್ಚು ಸಹ ಬರದ ಹಾಗೆ ನೋಡಿಕೊಳ್ಳುತ್ತ ರೈತರನ್ನು ಮೂಲೆಗುಂಪು ಮಾಡಲು ಹೊರಟಿದ್ದಾರೆ. ಸರಿಯಾಗಿ ಸಮೀಕ್ಷೆ ಮಾಡಿ ವರದಿ ಕೇಂದ್ರ ಸರಕಾರಕ್ಕೆ ಸಲ್ಲಿಸಿದರೆ ಮಾತ್ರ ಪರಿಹಾರಕ್ಕೆ ಸಂಸದನಾಗಿ ಕೇಂದ್ರ ಸರಕಾರದ ಸಚಿವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಇದನ್ನು ಬಿಟ್ಟು ಕಾಟಾಚಾರಕ್ಕೆ ಒಬ್ಬ ತಲಾಟಿಯಿಂದ ಸಮೀಕ್ಷೆ ನಡೆಸಿ ಕೈತೊಳೆದುಕೊಳ್ಳುತ್ತಿದ್ದಾರೆ ಇದರಿಂದ ರೈತರ ಕಣ್ಣೀರು ಒರೆಸಿದಂತಾಗುವುದಿಲ್ಲ. ಇನ್ನು ಈ ಕ್ಷೇತ್ರದ ರಸ್ತೆಗಳೆಲ್ಲ ಗುಂಡಿಮಯವಾಗಿದೆ ಇವೆಲ್ಲವನ್ನು ನೋಡಿದರೆ ಸರಕಾರದ ಬೊಕ್ಕಸ ಖಾಲಿಯಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ದೂರಿದರು.
ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಇಡೀ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಹದಿಗೆಟ್ಟಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರದ ೬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸರಕಾರದ ದೋರಣೆಯನ್ನು ಖಂಡಿಸಿ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದೇವೆ ಆಡಳಿತಾರೂಢ ಸರಕಾರದ ಕಿವಿ, ಕಣ್ಣು ತೆರೆಸಲು ವಿರೋಧ ಪಕ್ಷದ ಕಾರ್ಯ ನಡೆಸುವುದಷ್ಟೆ ವಿರೋಧ ಪಕ್ಷದ ಕೆಲಸ ಅನುದಾನ ಹಾಕುವುದು ಸರಕಾರದ ಕೆಲಸ. ಈ ಕ್ಷೇತ್ರದಲ್ಲಿ ಅತೀವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ಪ್ರತಿ ಎಕರೆಗೆ ರೂ ೨೫ ಸಾವಿರ ಪರಿಹಾರ ನೀಡಬೇಕು, ಮಳೆಯಿಂದ ಬಿದ್ದ ಮನೆಗಳಿಗೆ ಈ ಸರಕಾರದಲ್ಲಿ ಪೂರ್ಣ ಬಿದ್ದ ಮನೆಗಳಿಗೆ ಬರೀ ರೂ ೧.೨೫ ಲಕ್ಷ, ಅರ್ಧ ಬಿದ್ದ ಮನೆಗಳಿಗೆ ರೂ ೫೦ ಸಾವಿರ ಅಲ್ಲದೆ ಜಲಾವೃತಗೊಂಡ ಮನೆಗಳಿಗೆ ರೂ ೫ ಸಾವಿರ ನೀಡಲಾಗುತ್ತಿದ್ದು ನಿಮ್ಮ ಸರಕಾರ ಸುಭದ್ರವಿದೆ ಎಂದು ಹೇಳುತ್ತ ಬೊಗಳೆ ಬಿಡುತ್ತಿದ್ದಾರೆ. ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ರೂ ೫ ಲಕ್ಷ, ನೆರೆ ಹಾವಳಿಯಿಂದ ಜಲಾವೃತಗೊಂಡ ಮನೆಗಳಿಗೆ ೧೦ ಸಾವಿರ ನೀಡಲಾಗಿತ್ತು ನಿಮಗೆ ಧಮ್ಮು ತಾಕತ್ತಿದ್ದರೆ ಇನ್ನೂ ಹೆಚ್ಚಿನ ಪರಿಹಾರ ಕೊಡುವ ಕಾರ್ಯ ಆಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲನಗೌಡ ಬಿರಾದಾರ, ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಪ್ರಧಾನ ಕಾರ್ಯದರ್ಶಿ ಗುರು ತಳವಾರ, ರೈತಮೋರ್ಚಾ ತಾಲೂಕಾದ್ಯಕ್ಷ ಬಸವರಾಜ ಐರೋಡಗಿ ಸೇರಿದಂತೆ ಅನೇಕರು ಮಾತನಾಡಿದರು.
ಶಿಲ್ಪಾ ಕುದರಗೊಂಡ, ರೈತ ಮೋರ್ಚಾ ಕಾರ್ಯದರ್ಶಿ ಪೀರು ಕೆರೂರ, ಸಿದ್ದರಾಮ ಆನಗೊಂಡ, ರಾಜು ಪೂಜಾರಿ, ಮಲ್ಲು ಬಗಲಿ, ಈರಣ್ಣ ರಾವೂರ, ಅಶೋಕ ನಾರಾಯಣಪುರ, ಬಂಗಾರೆಪ್ಪ ಬಿರಾದಾರ, ಮಲ್ಲು ಸಾವಳಸಂಗ ಮಾಧ್ಯಮ ಪ್ರತಿನಿದಿ ಸಿದ್ದಲಿಂಗಯ್ಯ ಹಿರೇಮಠ ಸೇರಿದಂತೆ ಅನೇಕರಿದ್ದರು.