ಮಹಾಲಿಂಗಪೂರ – ಕಬ್ಬಿಗೆ ರೂ. ೩೫೦೦ ದರ ಕೊಡಬೇಕು ಎಂಬ ರೈತರ ಆಗ್ರಹ ಕೆಲವು ದಿನಗಳ ಹಿಂದೆ ಸೌಹಾರ್ದಯುತವಾಗಿ ರೂ. ೩೩೦೦ ಕ್ಕೆ ಮುಗಿದಿದ್ದರೂ ಮುಧೋಳ ತಾಲೂಕಿನ ರೈತರು ಇದನ್ನು ಒಪ್ಪದೆ ಪ್ರತಿಭಟನೆ ಮುಂದುವರೆಸಿದ್ದು ಆ ಪ್ರತಿಭಟನೆ ಹಿಂಸಾ ರೂಪಕ್ಕೆ ತಿರುಗಿ ರೈತರೇ ರೈತರ ಕಬ್ಬಿನ ಟ್ರಾಕ್ಟರ್ ಗಳಿಗೆ ಬೆಂಕಿ ಹಚ್ಚಿ ಹಚ್ಚಿರುವ ಘಟನೆ ನಡೆದಿದೆ.
ಸರ್ಕಾರ ನಿಗದಿ ಮಾಡಿದ್ದ ದರವನ್ನು ಒಪ್ಪದ ಮುಧೋಳ ತಾಲೂಕಿನ ರೈತರು ಕೆಲವು ದಿನಗಳಿಂದ ಮುಷ್ಕರ ಮುಂದುವರೆಸಿದ್ದರು.
ಆದರೆ ಕೆಲವು ದಿನಗಳ ಹಿಂದೆ ಮೂಡಲಗಿ ತಾಲೂಕಿನ ಗುರ್ಲಾಪೂರ ಕ್ರಾಸ್ ನಲ್ಲಿ ನಡೆದ ರೈತರ ಬೃಹತ್ ಪ್ರತಿಭಟನೆಯ ಸಂದರ್ಭದಲ್ಲಿ ಸರ್ಕಾರ ಹಾಗೂ ರೈತರ ಸಂಘಗಳ ಮಾತುಕತೆಯಲ್ಲಿ ರೂ. ೩೩೦೦ ದರ ನಿಗದಿಯಾಗಿತ್ತು. ಅದನ್ನು ರೈತರು ಒಪ್ಪಿಕೊಂಡಿದ್ದು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಣೆ ಮಾಡುತ್ತಿದ್ದರು. ತಾವು ಒಪ್ಪದ ದರ ಇದ್ದರೂ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಕೆಲವು ರೈತರ ಧೋರಣೆಯನ್ನು ಖಂಡಿಸಿದ ಪ್ರತಿಭಟನಾ ನಿರತರು ರೈತರ ಕಬ್ಬು ಹೇರಿಕೊಂಡು ಹೊರಟಿದ್ದ ರೈತರ ಟ್ರಾಕ್ಟರ್ ಗಳನ್ನು ಕೆಡವಿದರು, ಟ್ರಾಕ್ಟರ್ ಗಳಿಗೆ ಬೆಂಕಿ ಹಚ್ಚಿದರು. ಅಲ್ಲದೆ ಅಲ್ಲೇ ನಿಂತಿದ್ದ ಬೈಕ್ ಗಳಿಗೆ ಕೂಡ ಬೆಂಕಿ ಹಚ್ಚಿದರು. ಸುಮಾರು ೧೭-೨೦ ಟ್ರಾಕ್ಟರ್ ಗಳು ಭಸ್ಮವಾಗಿವೆ.
ರೈತರ ಈ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು ಈ ದುಷ್ಕೃತ್ಯ ನಿಜವಾಗಿ ರೈತರು ಮಾಡಿದ್ದಲ್ಲ ಯಾರೊ ಸಮಾಜ ಘಾತುಕ ಶಕ್ತಿಗಳು ಮಾಡಿದ್ದು ಎಂಬ ಅಭಿಪ್ರಾಯ ಜನರಿಂದ ವ್ಯಕ್ತವಾಗುತ್ತಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಘಟನೆಯ ಬಗ್ಗೆ ಸೂಕ್ತ ತನಿಖೆಗೆ ಆದೇಶ ನೀಡಿದ್ದು ಮಹಾಲಿಂಗಪೂರ ಪೊಲೀಸರು ತನಿಖೆ ನಡೆಸಿದ್ದಾರೆ.

