ಅಧಿಕಾರಿಗಳ ಕಣ್ಣಿಗೇಕೆ ಬೀಳುತ್ತಿಲ್ಲ ?
ಮೂಡಲಗಿ : ಶತಮಾನ ಕಂಡ ಪಟ್ಟಣದ ಸರ್ಕಾರಿ ಕೇಂದ್ರ ಶಾಲೆ, ಸಿಡಿಪಿಓ ಕಚೇರಿ ಹಾಗೂ ಸಾರ್ವಜನಿಕ ಗ್ರಂಥಾಲಯ ಸೇರಿದಂತೆ ಇನ್ನೂ ಎರಡು ಸರ್ಕಾರಿ ಶಾಲೆಗಳು ಇರುವ ಆವರಣದಲ್ಲಿ ಬಹುತೇಕ ಭಾಗ ಕಸ ಆವರಿಸಿ ದುರ್ನಾತ ಬೀರುತ್ತಿದೆ. ದಿನವೂ ಈ ವಾಸನೆ ಸಹಿಸಬೇಕಿರುವುದರಿಂದ ಮಕ್ಕಳ ಕಲಿಕೆಯ ಮೇಲೆ ನೇರ ಪರಿಣಾಮ ಬೀರಿದೆ. ಆದರೂ ಇಲ್ಲಿನ ಮುಖ್ಯೋಪಾಧ್ಯಾಯರು ಹಾಗೂ ಎಸ್ ಡಿ ಎಂಸಿ ಸದಸ್ಯರು ಶಾಲಾ ಆವರಣದ ಸ್ವಚ್ಛತೆಯ ಬಗ್ಗೆ ಗಮನಹರಿಸದೇ ಇದ್ದದ್ದು ಖಂಡನೀಯ.
ಒಂದು ಸಮಯದಲ್ಲಿ ಈ ಶಾಲೆಯಲ್ಲಿ 1,200 ರಿಂದ 1,400ರವರೆಗೆ ವಿದ್ಯಾರ್ಥಿಗಳಿಗೆ ಅಕ್ಷರ ಕಲಿಸಿ ಅವರಿಗೆ ಉನ್ನತ ಹುದ್ದೆ ಕಲ್ಪಿಸಿ ಬದುಕು ಕಟ್ಟಿಕೊಟ್ಟ ಈ ಶಾಲೆಯ ಶೋಚನೀಯ ಸ್ಥಿತಿಯನ್ನು ಈಗ ಕೇಳುವವರು ಇಲ್ಲದಂತಾಗಿದೆ.
ಮಳೆಗಾಲ ಬಂತೆಂದರೆ ಸಾಕು ಇಲ್ಲಿಯ ಮಕ್ಕಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಕಾರಣ ಪ್ರತಿ ಬಾರಿ ಜೋರು ಮಳೆಯಾದಾಗ ಆವರಣದೊಳಗೆ ನಿಂತು ಕೆರೆಯಂತೆ ಆಗುತ್ತದೆ. ಆವರಣದೊಳಗೆ ನುಗ್ಗುವ ನೀರು ಬೇರೆ ಕಡೆ ಹೋಗಲು ಅವಕಾಶ ಇಲ್ಲದಂತಾಗಿದೆ. ಹೀಗಾಗಿ ಶಾಲೆಯ ಆವರಣದಲ್ಲಿ ತಿಂಗಳುಗಟ್ಟಲೇ ನೀರು ನಿಂತು ದುರ್ನಾತ ಬೀರುತ್ತದೆ.
ಇನ್ನೂ ಇಲ್ಲಿ ನಿಂತ ನೀರು ಸೊಳ್ಳೆ ಮತ್ತು ಕಸದ ರಾಶಿಯಿಂದ ಕ್ರೀಮಿ–ಕೀಟಗಳ ಆವಾಸದ ತಾಣವಾಗಿ ಮಾರ್ಪಟ್ಟಿದೆ. ನಿತ್ಯ ಶಾಲೆಗೆ ಬರುವ ವಿದ್ಯಾರ್ಥಿಗಳು, ಶಿಕ್ಷಕರು ಆವರಣದಲ್ಲಿ ಮೂಗು ಮುಚ್ಚಿಕೊಂಡೇ ಹೆಜ್ಜೆ ಹಾಕುವಂತಾಗಿದೆ. ಪ್ರಸ್ತುತ ಈ ಶಾಲೆಯಗಳಲ್ಲಿ ನೂರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯತ್ತಿದ್ದಾರೆ. ಸರ್ಕಾರ ಅಥವಾ ಸಂಭಂಧಪಟ್ಟ ಅಧಿಕಾರಿಗಳು ಸಮಸ್ಯೆ ಸರಿಪಡಿಸುವ ಪ್ರಯತ್ನ ಮಾಡುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಸುಮಾರು ತಿಂಗಳಗಳಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ ಅಸಹಾಯಕತೆ ವ್ಯಕ್ತ ಪಡಿಸಿದರು.
ಸರ್ಕಾರಿ ಶಾಲೆಗೆ ಹೋಗುವ ಮಕ್ಕಳಿಗೆ ಸರ್ಕಾರ ಮೂಲಭೂತ ಸೌಲಭ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ. ಉದಾಹರಣೆ ಆವರಣದಲ್ಲಿ ಇರುವ ಶೌಚಾಲಯದ ಮಹಿಳಾ ಕೊಠಡಿಯ ಬಾಗಿಲು ಹಾಕಿದ್ದಾರೆ. ಹೀಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದಲೇ ಮಕ್ಕಳ ಹಕ್ಕುಗಳ ಉಲ್ಲಘನೆಯಾಗುತ್ತಿದ್ದರೂ ಯಾರು ಮಾತನಾಡುತ್ತಿಲ್ಲ. ಇನ್ನು ಶಾಲೆಯ ಆವರಣದಲ್ಲಿ ಮಳೆಗಾಲದಲ್ಲಿ ನೀರು ನುಗ್ಗುತ್ತಲಿದ್ದು ಮತ್ತು ಕಸದ ರಾಶಿಯಿಂದ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆಯಿಂದ ಶಿಕ್ಷಣ ಇಲಾಖೆ ಮುಕ್ತಿ ನೀಡಬೇಕೆಂದು ಪಾಲಕರು ಆಗ್ರಹಿಸಿದ್ದಾರೆ.
* ಪಟ್ಟಣದ ಕೇಂದ್ರ ಶಾಲೆಯಲ್ಲಿ ಸಾಕಷ್ಟು ಸಸಿಗಳನ್ನು ನೆಟ್ಟು ಉತ್ತಮ ಪರಿಸರ ಮಾಡಲು ಪ್ರಯತ್ನ ಮಾಡುತ್ತಿದ್ದೇನೆ ಆದರೆ ಮಳೆಗಾಲದಲ್ಲಿ ಮಳೆ ನೀರು ನಿಲ್ಲುತ್ತದೆ. ಹಾಗೆ ಆವರಣದಲ್ಲಿ ಪುರಸಭೆಯ ಕಸ ಘಟಕ ಸ್ಥಾಪನೆ ಮಾಡಿದ ಹಾಗೆ ಕಸ ಇರುವುದರಿಂದ ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ?
ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ
ಕಸದ ಬಗ್ಗೆ ನಮ್ಮ ಗಮನಕ್ಕೆ ತಂದಾಗ ಕೇವಲ ಹತ್ತು ನಿಮಿಷದಲ್ಲಿ ಗಾಡಿ ಕಳಿಸಿ ಸ್ವಚ್ಛ ಮಾಡಿಸಿದ್ದೇನೆ. ಕಸವನ್ನು ಗುಡಿಸಿ ಒಂದೆಡೆ ಹಾಕುವುದು ಶಾಲೆಯ ಆಡಳಿತದವರ ಜವಾಬ್ದಾರಿ ನಮಗೆ ಹೇಳಿದರೆ ನಾವು ತರುತ್ತೇವೆ ಸುಮ್ಮನೆ ನಮ್ಮ ಮೇಲೆ ಆರೋಪ ಮಾಡುವುದರಲ್ಲಿ ಯಾವುದೇ ಹುರುಳಿಲ್ಲ. ಏನಾದರೂ ಕೆಲಸವಾಗಬೇಕಾದಲ್ಲಿ ಮೊದಲು ನಮಗೆ ಹೇಳಿ
ತುಕಾರಾಮ ಮಾದರ, ಪುರಸಭೆ ಮುಖ್ಯಾಧಿಕಾರಿ, ಮೂಡಲಗಿ

