ಮುಧೋಳ – ನಂಬಿದ ಭಕ್ತರನ್ನು ತನ್ನ ಒಡಲೊಳಿಟ್ಟು ಸಲಹುವ ಕರ್ತೃ, ಸಂಕಲ್ಪ ಮಾತ್ರದಿಂದ ಸಕಲ ಸಿದ್ಧಿಗಳನ್ನು ನೀಡುವ ಕಾರುಣ್ಯ ಮೂರ್ತಿ.ಸಮೀಪದ ಬಂಡಿಗಣಿ ಕ್ಷೇತ್ರದ ಬಸವ ಗೋಪಾಲ ಮಠದ ಅವತಾರಿಕ ಮಹಾಪುರುಷ, ತ್ರಿವಿಧ ದಾಸೋಹಿ, ಅನ್ನದಾನೇಶ್ವರ ಅಪ್ಪಾಜಿ ಅವರು ಇಂದು ಶುಕ್ರವಾರ ಬೆಳಿಗ್ಗೆ ತಮ್ಮ ಅವತಾರವನ್ನ ತ್ಯಜಿಸಿದ್ದಾರೆ ಎಂದು ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಶರಣಬಸವ ಶಾಸ್ತ್ರಿಗಳು ಈ ವಿಷಯವನ್ನು ಹಂಚಿಕೊಂಡಿದ್ದಾರೆ.
ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಅಸಂಖ್ಯಾತ ಭಕ್ತ ಬಳಗಕ್ಕೆ ಬರಸಿಡಿಲು ಬಡಿದಂತಾಗಿದೆ. ಎಲ್ಲರ ಮನೆ ಮನಗಳಲ್ಲಿ ಕತ್ತಲು ಕವಿದಿದೆ. ನಾವೆಲ್ಲಾ ಅವರನ್ನು ನಮಗೆ ದರ್ಶನ ನೀಡುವ ಪ್ರತ್ಯಕ್ಷ ಪರಮಾತ್ಮ ಎಂದು ವರ್ಣಿಸುತ್ತಿದ್ದೆವು. ನಮ್ಮ ಕಷ್ಟನಷ್ಟಗಳನ್ನ ಅವರೊಂದಿಗೆ ಹಂಚಿಕೊಳ್ಳುತ್ತಿದ್ದೆವು. ಇಂದು ಅವರಿಲ್ಲದ ದಿನಗಳು ಶೂನ್ಯವೆನಿಸುತ್ತಿವೆ. ಶನಿವಾರ ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರು ತಿಳಿಸಿದರು

