ಗೋಕಾಕ- ವಿದ್ಯುತ್ ಅಪಘಾತದಲ್ಲಿ ಮೃತಪಟ್ಟ ರೈತ ಕುಟುಂಬಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ತಲಾ 5 ಲಕ್ಷ ರೂಪಾಯಿ ವೆಚ್ಚದ ಒಟ್ಟು 10 ಲಕ್ಷ ರೂಪಾಯಿ ಪರಿಹಾರ ಧನದ ಚೆಕ್ ಗಳನ್ನು ಮೃತರ ಕುಟುಂಬದ ವಾರಸುದಾರರಿಗೆ ವಿತರಿಸಿದರು.
ಗೋಕಾಕ ತಾಲೂಕಿನ ಗೋಸಬಾಳ ಗ್ರಾಮದ ರೈತ ರಾಮಪ್ಪ ಅಪ್ಪಯ್ಯ ಪೂಜೇರಿ ಅವರು ವಿದ್ಯುತ್ ಅಪಘಾತದಲ್ಲಿ ಕಳೆದ ಡಿ. 6 ಮತ್ತು ನಲ್ಲಾನಟ್ಟಿ ಗ್ರಾಮದ ರೈತ ಲಕ್ಷ್ಮಣ ಹಣಮಂತ ಹರಿಜನ ಅವರು ಕಳೆದ ಸೆಪ್ಟೆಂಬರ್ ತಿಂಗಳ 22 ರಂದು ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಅವರುಗಳ ಕುಟುಂಬಗಳಿಗೆ ಸರ್ಕಾರದ ಪರಿಹಾರ ಧನವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಜಾಗೃತಿಯಿಂದ ಕೆಲಸ ಮಾಡಬೇಕು. ವಿದ್ಯುತ್ ಅಪಘಾತವು ಆಕಸ್ಮಿಕ ಘಟನೆಯಾಗಿದೆ. ಮೃತಪಟ್ಟವರು ಮರಳಿ ಬರುವುದಿಲ್ಲ. ಇದು ವಿಧಿಲಿಖಿತ. ಕುಟುಂಬದಲ್ಲಾದ ನೋವಿನಲ್ಲಿ ನಾವಿದ್ದೇವೆ. ಯಾವುದಕ್ಕೂ ಹೆದರಬೇಡಿ. ಮೃತಪಟ್ಟ ಕುಟುಂಬಗಳಿಗೆ ಸರ್ಕಾರವು ಐದು ಲಕ್ಷ ರೂಪಾಯಿ ಪರಿಹಾರಧನವನ್ನು ನೀಡಿದೆ. ಈ ಹಣವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಮೃತಪಟ್ಟ ಕುಟುಂಬದ ವಾರಸುದಾರರಿಗೆ ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಮುತ್ತೆಪ್ಪ ಕುಳ್ಳೂರ, ಪರಸಪ್ಪ ಮೆಲ್ಮಟ್ಟಿ, ಬಸವರಾಜ ಕಸ್ತೂರಿ, ಅಶೋಕ ಪೂಜೇರಿ, ಅಡಿವೆಪ್ಪ ಕಂಕಾಳಿ(ಗೌಳಿ), ಬಸು ಗಲಗಲಿ, ಬಸು ಇಳಿಗೇರಿ, ಹೆಸ್ಕಾಂ ಅಧಿಕಾರಿಗಳಾದ ವಿ.ಬಿ.ಹಿರಡ್ಡಿ, ಕೆ.ಸಿ.ಧರ್ಮಾ, ಬಿ.ಜಿ.ಬಡಿಗೇರ ಮುಂತಾದವರು ಉಪಸ್ಥಿತರಿದ್ದರು.

