ಕರ್ನಾಟಕದ ವಿಜಯಪುರದ ಪಕ್ಕದ ಪುಟ್ಟ ಗ್ರಾಮ ಅರ್ಜುಣಗಿ. ಒಬ್ಬ ನಿಷ್ಟಾವಂತ ದಿಟ್ಟ ಸ್ವಾತಂತ್ರ್ಯ ಹೋರಾಟಗಾರ ಯೋಧ ಬ್ರಿಟಿಷ್ ಸರ್ಕಾರದ ವಿರುದ್ಧ ಬಂಡೆದ್ದ ಸಿಂಹ ಚೆನ್ನಬಸಪ್ಪ ಅಂಬಲಿ ಅವರು.
ಚೆನ್ನಬಸಪ್ಪ ಅಂಬಲಿ ಅವಿಭಜಿತ ಬಿಜಾಪುರ (ಇಂದಿನ ವಿಜಯಪುರ) ಜಿಲ್ಲೆಯ ಅಗ್ರಗಣ್ಯ ಕಾಂಗ್ರೆಸ್ ನಾಯಕರಾಗಿದ್ದ ಇವರು, ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಮಹನೀಯರು.
ಅಂಬಲಿಯವರು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಅರ್ಜುಣಗಿ ಗ್ರಾಮದವರು. ಇವರ ಕಾಲ 1895-1962.
ಇವರು ಒಟ್ಟು ಬದುಕಿನ 65 ವರ್ಷ ಅದರಲ್ಲಿ ಬಲು ಪಾಲು ಹೋರಾಟ ಸಂಘರ್ಷ ಜೈಲು ವಾಸ ಚಳವಳಿ ಎಂದು ಕಾಲ ಕಳೆದವರು. ಎರಡು ಸಲ ಎಂ ಎಲ್ ಏ ಆದರೂ ಸಹಿತ
ಒಂದು ಸ್ವಂತ ಮನೆ ಗಡಿ ಕಾರು ಇಲ್ಲದೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕಿದವರು.
ಸ್ವಾತಂತ್ರ್ಯಯೋಧ ಮತ್ತು ಕರ್ನಾಟಕ ಏಕೀಕರಣದ ನೇತಾರ. ವಿಜಯಪುರ ತಾಲ್ಲೂಕಿನ ಅರ್ಜುಣಗಿ ಗ್ರಾಮದಲ್ಲಿ ಒಕ್ಕಲುತನದ ಮನೆತನದಲ್ಲಿ ಜನಿಸಿದರು. ತಂದೆ ಜಗದೇವಪ್ಪ. ಶಿಕ್ಷಣ ಕನ್ನಡ ನಾಲ್ಕನೆಯ ತರಗತಿಯವರೆಗೆ.
1914ರಲ್ಲಿ ಒಂದನೆಯ ಮಹಾಯುದ್ಧ ನಿದಿಗಾಗಿ ಗ್ರಾಮಕ್ಕೆ ಬಂದ ಮಾಮಲೆದಾರರನ್ನು ವಿರೋಧಿಸಿ ಮೂರುದಿನ ಉಪವಾಸಮಾಡಿ ಬಂಧನದ ಶಿಕ್ಷೆ ಅನುಭವಿಸುವುದರೊಂದಿಗೆ ಇವರ ಸ್ವಾತಂತ್ರ್ಯಹೋರಾಟ ಪ್ರಾರಂಭವಾಯಿತೆನ್ನಬಹುದು. ಮಹಾತ್ಮಾ ಗಾಂಧಿಯವರ ಅಪ್ಪಟ ಅನುಯಾಯಿಯಾಗಿ ಬಿಜಾಪುರದಲ್ಲಿ ಒಂದು ಸಂಘ ಕಟ್ಟಿ ಭೂಕಂದಾಯ ವಸೂಲಿಯನ್ನು ವಿರೋಧಿಸಿದರು. 1919ರ ಜಲಿಯನವಾಲಾಬಾಗ್ ಹತ್ಯಾಕಾಂಡ ಇವರನ್ನು ಸಂಪೂರ್ಣವಾಗಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಎಳೆದು ತಂದಿತು. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಮೊದಲು 1919ರಲ್ಲಿ ಕಾರಾಗೃಹ ಶಿಕ್ಷೆ ಅನುಭವಿಸಿದರು.
ಅನಂತರ ಕಾಯದೆಭಂಗ ಚಳವಳಿಯಲ್ಲಿ ಜೈಲು (1931) ಸೇರಿ ವಿಜಯಪುರ ಹಾಗೂ ವಿಸಾಪುರಗಳಲ್ಲಿ ಬಂಧನದಲ್ಲಿದ್ದರು. ಸರ್ಕಾರದ ಕಿರುಕುಳ ಹೆಚ್ಚಾದಾಗ ಇವರು ವಿಜಯಪುರ ಬಿಟ್ಟು ಸಂಸಾರಸಮೇತ ಸೊಲ್ಲಾಪುರಕ್ಕೆ ಹೋಗಬೇಕಾಯಿತು. ಅಲ್ಲಿ ಜೀವನವನ್ನು ಸಾಗಿಸಲು ನೌಕರಿ ಹಿಡಿದರೂ ಕಾಯದೆಭಂಗ ಚಳವಳಿಯಲ್ಲಿ ಮತ್ತೆ ಸೇರಿ ಲಷ್ಕರಿ ಕಾನೂನಿನ ಕಾಲದಲ್ಲಿ ಸರ್ಕಾರದ ಕಣ್ಣುತಪ್ಪಿಸಿ ಸೊಲ್ಲಾಪುರದಿಂದ ಮತ್ತೆ ವಿಜಯಪುರಕ್ಕೆ ಬಂದರು. 1930-33ರ ಸಾರ್ವತ್ರಿಕ ಕಾಯದೆಭಂಗ ಚಳವಳಿಯಲ್ಲಿ ಮುಖ್ಯಪಾತ್ರ ವಹಿಸಿದ್ದಕ್ಕಾಗಿ ಸರ್ಕಾರ ಇವರಿಗೆ ಕಠಿಣಶಿಕ್ಷೆ ವಿಧಿಸಿತು. ಜೈಲುವಾಸದ ಕಾಲದಲ್ಲಿ ಇವರು ಕನ್ನಡ, ಹಿಂದಿ ಮತ್ತು ಮರಾಠಿ ಭಾಷೆಗಳನ್ನು ಕಲಿತರು.
1940ರಲ್ಲಿ ಇವರು ಕೆ.ಪಿ.ಸಿ.ಸಿ. ಕಾರ್ಯದರ್ಶಿಯಾಗಿ ಹುಬ್ಬಳ್ಳಿ-ಧಾರವಾಡಗಳಲ್ಲಿ ವಾಸಮಾಡತೊಡಗಿದರು. 1942ರಲ್ಲಿ ಕಾರ್ಯಕರ್ತರಾಗಿ, ಚಲೇಜಾವ್ ಸಮಿತಿಯ ಅಧ್ಯಕ್ಷರಾಗಿ ದುಡಿದರು. ಟಪಾಲು ಲೂಟಿ ಮಾಡುವುದು, ಸರ್ಕಾರಿ ಮಹತ್ವದ ಕಾಗದಪತ್ರಗಳನ್ನು ಸುಡುವುದು ಮುಂತಾದ ವಿಧ್ವಂಸಕ ಕೃತ್ಯಗಳನ್ನು ಕೈಗೊಂಡರು. ಇವರ ನೇತೃತ್ವದಲ್ಲಿ ಮಿಂಚನಾಳ ಮತ್ತು ಜುಮನಾಳ ರೈಲು ನಿಲ್ದಾಣಗಳು ಅಗ್ನಿಗೆ ಆಹುತಿಯಾದವು. ಮುಂಬಯಿಯಿಂದ ಇಂಗ್ಲೆಂಡಿಗೆ ಬಂಗಾರ, ಸಾಮಾನು ಸರಂಜಾಮು ತುಂಬಿಕೊಂಡು ಹೊರಟ ಹಡಗೊಂದರ ಜಲಸಮಾಧಿ ಮಾಡಿದ ಕೀರ್ತಿ ಇವರಿಗೆ ಸಲ್ಲಬೇಕು.ಇಂತಹ ಕಾರಣಕ್ಕಾಗಿ ಆ ಕಾಲದಲ್ಲಿ ಇವರನ್ನು ಹಿಡಿದುಕೊಟ್ಟರೆ ರೂ.5,000 ಬಹುಮಾನ ಕೊಡುವುದಾಗಿ ಬ್ರಿಟಿಷ್ ಸರ್ಕಾರ ಸಾರಿತ್ತು.
*ರಾಜಕೀಯ ಜೀವನ*
1955ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ, ತಿಕೋಟಾ ವಿಧಾನಸಭಾ ಕ್ಷೇತ್ರ(ಈಗಿನ ಬಬಲೇಶ್ವರ ವಿಧಾನಸಭಾ ಕ್ಷೇತ್ರ)ದಿಂದ 1952 ಮತ್ತು 1957ರಲ್ಲಿ ವಿಧಾನ ಸಭಾ ಸದಸ್ಯರಾಗಿ ಇವರು ಆಯ್ಕೆಹೊಂದಿದರು. ಕರ್ನಾಟಕ ಏಕೀಕರಣಕ್ಕಾಗಿ ದಣಿವರಿಯದೆ ದುಡಿದರು ಮತ್ತು ಜಾತಿ ವಿಮೋಚನೆ ಮತ್ತು ಅಸ್ಪೃಶ್ಯ ನಿವಾರಣೆಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿ ನಿರಂತರವಾಗಿ ದುಡಿದರು. ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಬೇಕೆಂಬುದು ಇವರ ಹಟವಾಗಿತ್ತು.
ಅಂಬಲಿ ಚೆನ್ನಬಸಪ್ಪನವರು ತಿಕೋಟಾ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿ ರಾಜಕೀಯ ಜೀವನ ಆರಂಭಿಸಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾಗಿ 1957ರ ರಾಜ್ಯ ಚುನಾವಣೆಯಲ್ಲಿ ಬಸವರಾಜ ನಾದೂರರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಎಸ್ ನಿಜಲಿಂಗಪ್ಪನವರ ಕ್ಯಾಬಿನೆಟ್ ಮಂತ್ರಿ ಪದವಿ ಕೊಡುವುದಾಗಿ ಹೇಳಿದರೂ ಒಪ್ಪದ ಚೆನ್ನಬಸಪ್ಪ ಅಂಬಲಿ ಅವರು ತಮ್ಮ ನಿರಪೇಕ್ಷೆಯನ್ನು ಮೆರೆದು ಅಧಿಕಾರ ವ್ಯಾಮೋಹವನ್ನು ತ್ಯಜಿಸಿದರು.
ಮರಾಠಿ ಮತ್ತು ಉರ್ದು ಭಾಷೆಯ ಮಧ್ಯೆ ಮರೆಯಾಗಿದ್ದ ಕನ್ನಡ ಮತ್ತು ಕನ್ನಡ ನಾಡನ್ನು ಒಂದಾಗಿಸಲು ಶ್ರಮವಹಿಸಿದ ಚೆನ್ನಬಸಪ್ಪನವರು ವಿಜಯಪುರದಲ್ಲಿ ಎಲ್ಲಾ ಹಂತದಲ್ಲಿ ಕನ್ನಡಕ್ಕೆ ಅಗ್ರ ಸ್ಥಾನವನ್ನು ಕೊಡಿಸಲು ಹೋರಾಡಿದರು.
*ಕರ್ನಾಟಕದ ಸರ್ದಾರ್*
ಕರ್ನಾಟಕದ ಸರ್ದಾರ್ ಪಟೇಲರೆಂದೇ ಬಿಜಾಪುರದಲ್ಲಿ ಖ್ಯಾತರಾದರು. ಎಸ್ ಆರ್ ಕಂಠಿ, ಮುರಿಗೆಪ್ಪ ಸುಗಂಧಿ, ಬಸಪ್ಪ ದಾನಪ್ಪ ಜತ್ತಿ ಮುಂತಾದ ನಾಯಕರ ಒಡನಾಡಿಯಾಗಿದ್ದರು. ಯುವ ನೇತಾರರನ್ನು ಬೆಳೆಸುವಲ್ಲಿ ಆಸಕ್ತಿ ವಹಿಸಿದ್ದ ಚೆನ್ನಬಸಪ್ಪನವರು,1962ರ ಚುನಾವಣೆಯಲ್ಲಿ ತಾವು ಚುನಾವಣೆಗೆ ಸ್ಪರ್ಧಿಸದೆ ಯುವ ಧುರೀಣರಿಗೆ ಬಿ ಎಂ ಪಾಟೀಲರಿಗೆ ತಮ್ಮ ಶಾಸಕ ಸ್ಥಾನವನ್ನು ಬಿಟ್ಟುಕೊಟ್ಟರು.
ಸ್ವಾತಂತ್ರ್ಯ ಹೋರಾಟದಲ್ಲಿ ಕರಪತ್ರ ಹಂಚಲು ಹಣ ಸಾಲದಾದಾಗ, ಹೊಸದಾಗಿ ಮದುವೆಯಾಗಿ ಮನೆಗೆ ಬಂದ ಅತ್ತಿಗೆಯ 10 ತೊಲೆ ಚಿನ್ನದ ಒಡವೆಯನ್ನು ಕೇಳಿ ಪಡೆದರು. ಶುದ್ಧ ಮನಸ್ಸಿನ ಸಾಧ್ವಿಯಾದ ಚೆನ್ನಬಸಪ್ಪನವವರ ಅತ್ತಿಗೆ ಮರುಯೋಚಿಸದೆಯೇ ನೀಡಿದ್ದರು.
ಚೆನ್ನಬಸಪ್ಪನವರು 1962 ಹೃದಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು. ಐದು ಲಕ್ಷ ರೂಪಾಯಿಯನ್ನು ದೇಣಿಗೆ ನೀಡಿ, ಶ್ರೀ ಜಯದೇವ ಹೃದ್ರೋಗ ಸಂಸ್ಥೆಯನ್ನು ಸ್ಥಾಪಿಸಲು ಕಾರಣರಾದರು. ಮುಂದೆ ಈ ಆಸ್ಪತ್ರೆಯು
ಜಯದೇವ ಸಂಸ್ಥೆ, 1984ರ ಏಪ್ರಿಲ್ 9 ರಂದು ಅಂದಿನ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್ ರಿಂದ ವಿದ್ಯುಕ್ತವಾಗಿ ಉಧ್ಘಾಟನೆಯಾಯಿತು.
*ನಿಧನ*
ಅವಿಶ್ರಾಂತ ದುಡಿಮೆ ರಾಷ್ಟ್ರ ಪ್ರೇಮ ಮತ್ತು ನಿರಂತರ ಪ್ರವಾಸದಿಂದ ಇವರ ಆರೋಗ್ಯ ಹದಗೆಟ್ಟಿತು.
ಪಾರ್ಶ್ವವಾಯುಪೀಡಿತರಾಗಿ 1962 ಮಾರ್ಚ್ 1ರಂದು ನಿಧನರಾದರು. ಸ್ವಂತ ಊರಾದ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಅರ್ಜುಣಗಿ ಗ್ರಾಮದಲ್ಲಿ ಇವರ ಸಮಾಧಿ ಇದೆ.
ಇಂತಹ ಅಪ್ಪಟ ಗಾಂಧಿವಾದಿ ರಾಷ್ಟ್ರ ಭಕ್ತ ಪ್ರಾಮಾಣಿಕ ದಕ್ಷ ರಾಜಕೀಯ ಮುತ್ಸದ್ಧಿ ಕರ್ನಾಟಕದ ಏಕೀಕರಣಕ್ಕೆ ದುಡಿದ ಅಪ್ರತಿಮ ಕೆಚ್ಚೆದೆಯ ಹೋರಾಟಗಾರರ ಪರಂಪರೆಯಲ್ಲಿ ಅಂಬಲಿ ಚೆನ್ನಬಸಪ್ಪನವರು ಪ್ರಮುಖರು ಮತ್ತು ಶಾಶ್ವತವಾಗಿ ಜನರ ಹೃದಯದಲ್ಲಿ ನೆಲೆಗೊಂಡ
ಜನಪ್ರಿಯ ನಾಯಕರು.
ಇವರಿಗೆ ಶತ ಕೋಟಿ ನಮನಗಳು.
__________________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

