ಮೈಸೂರಿನ ಕೆ.ಜಿ.ಕೊಪ್ಪಲಿನ ಕನ್ನಡ ಗೆಳೆಯರ ಬಳಗದ ವತಿಯಿಂದ ದಿ.೦೩ ರಂದು ದೇಶದ ಮೊದಲ ಶಿಕ್ಷಕಿಯೆಂದು ಹೆಸರುವಾಸಿಯಾದ ಸಾವಿತ್ರಿ ಜ್ಯೋತಿ ಬಾಪುಲೆ ರವರ ಜನ್ಮದಿನವನ್ನು ಸಂಘದ ಕಛೇರಿಯಲ್ಲಿ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರಿನ ವಕೀಲರಾದ ಶರತ್ ರವರು ಮಾತೆ ಸಾವಿತ್ರಿ ಬಾಪುಲೆಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ ಮಹಿಳೆಯರ ಸಬಲೀಕರಣಕ್ಕೆ ಹಾಗೂ ಜಾತಿ ವ್ಯವಸ್ಥೆಯ ಬಗ್ಗೆ ಹೋರಾಡಿದ ಮಹಿಳಾ ಸಾಧಕಿ ಹಾಗೂ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಸಾವಿತ್ರಿ ಜ್ಯೋತಿ ಬಾಪುಲೆ ಎಂದು ತಿಳಿಸಿದರು.
ಅಸ್ಪೃಶ್ಯರು ಮತ್ತು ದೀನದಲಿತರಿಗಾಗಿ ಧ್ವನಿ ಎತ್ತಿ ಜಾತಿ ತಾರತ್ಯಮದ ವಿರುದ್ಧ ಹೋರಾಡಿ ಸಮಾನತೆಯನ್ನು ತರುವಲ್ಲಿ ಶ್ರಮಿಸಿದವರು ಎಂದ ಅವರು, ಶಿಕ್ಷಣದ ಮೂಲಕ ಸಮಾಜದ ಬದಲಾವಣೆ ಸಾಧ್ಯ ಎಂಬುದನ್ನು ಸಾಬೀತುಪಡಿಸಿದ ಮೊದಲ ಶಿಕ್ಷಕಿ ಸಾವಿತ್ರಿ ಬಾಪುಲೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮತೊರ್ವ ವಿಶೇಷ ಆಹ್ವಾನಿತರಾದ ಶಾರದಾವಿಲಾಸ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಡಿ.ಸಿ.ಉಮೇಶ್ ರವರು ಮಾತನಾಡಿ ಸಾವಿತ್ರಿ ಬಾಪುಲೆ ರವರು ೧೮೪೮ ರಲ್ಲಿಯೇ ಪುಣೆಯಲ್ಲಿ ಭಾರತದ ಮೊದಲ ಬಾಲಕಿಯರ ಶಾಲೆ ತೆರೆದು, ಶೂದ್ರರು ಮತ್ತು ಮಹಿಳೆಯರು ಶಿಕ್ಷಣದಲ್ಲಿ ತರಭೇತಿಯನ್ನು ಹೊಂದಬೇಕೆಂದು ಗುರಿಯನ್ನು ಇಟ್ಟುಕೊಂಡು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿದ ಮೊದಲಿಗರು, ಸಂವಿಧಾನ ಶಿಲ್ಪಿ ಡಾ.ಬಿ.ಬಿ.ಆರ್.ಅಂಬೇಡ್ಕರ್ ಹೇಳುವಂತೆ ಭಾರತೀಯ ಸಮಾಜದ ಪರಿವರ್ತನೆಯ ಪಿತಾಮಹಾನೆಂದು ಗೌರವಪೂರ್ವಕವಾಗಿ ಶಿಕ್ಷಕಿ ಸಾವಿತ್ರಿ ಬಾಪುಲೆ ರವರನ್ನು ಕರೆದಿದ್ದಾರೆಂದು ತಿಳಿಸಿದರು.
ಜಾತಿ ಮತ್ತು ಲಿಂಗತಾರತಮ್ಯವನ್ನು ವಿರೋಧಿಸಿ ಬರಗಾಲದಲ್ಲಿ ನಿರಾಶ್ರಿತರಿಗೆ ಹಾಗೂ ವಿಧವೆಯರ ರಕ್ಷಣೆಗಾಗಿ ಕಾರ್ಯನಿರ್ವಹಿಸಿದ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಗೌರವ ಕಾರ್ಯದರ್ಶಿ ಇಂಜಿನಿಯರ್ ಕಾರ್ತಿಕ್ ನಾಯಕ್ ರವರು ವಹಿಸಿ ಮಾತನಾಡಿ ಶಿಕ್ಷಣ, ಸಮಾನತೆ, ಮಾನವ ಸಂಘಟನೆಗಾಗಿ ಹೋರಾಡಿದ ಭಾರತದ ಹೆಮ್ಮೆಯ ಪುತ್ರಿ ಸಾವಿತ್ರಿ ಬಾಪುಲೆ, ಹೆಣ್ಣು ಮಕ್ಕಳಿಗೆ ವಿದ್ಯೆಯನ್ನು ನಿರಾಕರಿಸಿದ ಸಮಾಜಕ್ಕೆ ಎದುರಾಗಿ ನೋವು ಅವಮಾನಗಳನ್ನು ಮೆಟ್ಟಿನಿಂತು ಹೆಣ್ಣು ಮಕ್ಕಳಿಗಾಗಿ ಶಾಲೆ ಆರಂಭಿಸಿ ಅಕ್ಷರಗಳನ್ನು ಕಲಿಸಿದ ದಿಟ್ಟ ಮಹಿಳೆ ಸಾವಿತ್ರಿ ಬಾಪುಲೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳಕೂಟ ಆಸ್ಪತ್ರೆಯ ಪ್ರಥಮ ದರ್ಜೆ ಸಹಾಯಕರಾದ ಬಿ.ತನುಜಾ ದೇವರಾಜ್, ಉಪನ್ಯಾಸಕ ರಾಜೇಂದ್ರ ಪ್ರಸಾದ್ ಹೊನ್ನಲಗೆರೆ, ಸಮಾಜ ಸೇವಕರಾದ ನಂಜುಂಡ, ಮಾದೇವ ರವರು ಉಪಸ್ಥಿತರಿದ್ದರು.

