ಅನಾಥರು ಅಬಲರು ಕುರುಡರು ಏನಿಲ್ಲದೆ ಬಳಲಿದ ಕಂದಮ್ಮಗಳು ಮುಂದೆ ಭಾರತದ ಸರ್ವ ಶ್ರೇಷ್ಠ ಸಂಗೀತ ಮತ್ತು ಸಾಹಿತ್ಯ ದಿಗ್ಗಜರೆನಿಸಿಕೊಳ್ಳುತ್ತಾರೆ ಎಂದು ಯಾರೂ ಅಂದು ಕೊಂಡಿರಲಿಲ್ಲ. ನನ್ನ ಲೇಖನದ ಕಥಾನಾಯಕ ಪರಮಪೂಜ್ಯ ಡಾ ಪುಟ್ಟರಾಜ ಗವಾಯಿಗಳ
ಜೀವನ ಸಂಘರ್ಷ ನಿಜಕ್ಕೂ ನಮಗೆಲ್ಲ ಅಚ್ಚರಿ ಮೂಡಿಸುತ್ತದೆ.
ಎರಡು ವರುಷದ ಕಂದಮ್ಮ ಎಲ್ಲವನ್ನೂ ಕಳೆದುಕೊಂಡು ಅನಾಥ ಸ್ಥಿತಿಯಲ್ಲಿರುವಾಗ ಅವರ ಪಾಲಿಗೆ ದೊರೆತವರೇ ಶ್ರೀ ಪಂಚಾಕ್ಷರಿ ಗವಾಯಿಗಳು ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ. ಕರ್ನಾಟಕದ ನಾಟಕ ಮತ್ತು ಸಂಗೀತಕ್ಕೆ ಹೊಸ ರೂಪವನ್ನು ಕೊಟ್ಟವರು ಡಾ ಪುಟ್ಟರಾಜ ಗವಾಯಿಗಳು
ಬಾಲ್ಯದಲ್ಲಿ ಎರಡು ವರ್ಷಕ್ಕೆ ತಂದೆ ಹಾಗು ತಾಯಿಯನ್ನು ಕಳೆದುಕೊಂಡು ಅನಾಥನಾದ ಪುಟ್ಟಯ್ಯನನ್ನು ಸೋದರಮಾವ ಚಂದ್ರಶೇಖರಯ್ಯ ಬೆಳೆಸಿದರು. ಎಂಟು ವರ್ಷದವರೆಗೆ ತನ್ನಲ್ಲಿದ್ದ ಸಂಗೀತಜ್ಞಾನವನ್ನು ಮಗುವಿಗೆ ನೀಡಿದರು. ಆ ಬಳಿಕ ನವಲಗುಂದದ ಗವಿಮಠಕ್ಕೆ ಕರೆತಂದು ಅಲ್ಲಿ ಬಂದಿದ್ದ ಪಂಚಾಕ್ಷರಿ ಗವಾಯಿಗಳ ಉಡಿಯಲ್ಲಿ ಪುಟ್ಟಯ್ಯನನ್ನು ಹಾಕಿದರು. ಈ ಅಂಧ ಗುರು ಹಾಗು ಅಂಧ ಶಿಷ್ಯ ಸಂಗೀತ ಪ್ರಪಂಚವನ್ನು ಬೆಳಗುತ್ತಾರೆಂದು ಆಗ ಯಾರು ತಿಳಿದಿರಲಿಲ್ಲ. ತಮ್ಮ ಗುರು ಕಲಿತಂತೆಯೇ ಪುಟ್ಟರಾಜರೂ ಸಹ ಸುತ್ತಲಿನ ಪಂಡಿತರಿಂದ ಸಂಗೀತವನ್ನು, ಸಂಗೀತ ವಾದ್ಯ ಗಳನ್ನು ಅಲ್ಲದೆ, ಸಂಸ್ಕೃತ ಹಾಗು ಕನ್ನಡದ ವ್ಯಾಕರಣ ಮೊದಲಾದವನ್ನು ಸಹ ಕಲಿತರು. ತಮ್ಮೊಂದಿಗೆ ಜೊತೆಯಾಗಿ ಕಲಿಯುತ್ತಿದ್ದ ಇತರ ಬಾಲಕರಿಗೆ ತಾವೇ ಪಾಠ ಹೇಳಿಕೊಡುವಷ್ಟು ಪರಿಣತರಾದರು. ಕರ್ನಾಟಕ ಹಾಗೂ ಹಿಂದುಸ್ತಾನಿ ಸಂಗೀತಗಳಲ್ಲಿ ಅಲ್ಲದೆ, ಪುಟ್ಟರಾಜರು ತಬಲಾ,ಹಾರ್ಮೋನಿಯಮ್,ಪಿಟೀಲು, ಸಾರಂಗಿ, ಶಹನಾಯಿ ಮೊದಲಾದ ವಾದ್ಯಗಳನ್ನು ನುಡಿಸುವದರಲ್ಲೂ ಸಹ ಪರಿಣತರಾದರು.
*ಪೀಠಾಧಿಪತಿ*
ಕೇವಲ ೮ ವರ್ಷದ ಬಾಲಕರಾಗಿದ್ದಾಗ ಸಂಗೀತ ಕಲಿಕೆಯ ವಿದ್ಯಾರ್ಥಿಯಾಗಿ ಆಶ್ರಮದ ಮಡಿಲಿಗೆ ಬಿದ್ದ ಪುಟ್ಟರಾಜ ಗವಾಯಿಗಳು ಗುರುಗಳ ಆಶೀರ್ವಾದ, ನಿಷ್ಠೆ-ವಿಶ್ವಾಸ, ಸ್ವತ್ಛಂದ ಮನಸ್ಸಿನೊಂದಿಗೆ ಆಶ್ರಮದ ಪೀಠಾಧಿಪತಿ ಸ್ಥಾನಕ್ಕೇರಿದರು. ೧೯೪೪ರಲ್ಲಿ ವೀರೇಶ್ವರ ಪುಣ್ಯಾಶ್ರಮದ ಭಾರ ಹೊತ್ತ ಪುಟ್ಟರಾಜ ಗವಾಯಿ ಅವರು ತಮ್ಮ ವೈಯಕ್ತಿಕ ಬದುಕನ್ನು ಬದಿಗಿರಿಸಿ ಆಶ್ರಮದ ಅಭಿವೃದ್ಧಿ, ಅಂಧ-ಅನಾಥರ ಕಾಳಜಿಯಲ್ಲಿಯೇ ಶಿವನನ್ನು ಕಂಡರು. ‘ಕಾಯಕವೇ ಕೈಲಾಸವಯ್ಯ’ ಎಂಬ ಶರಣರ ವಾಣಿಯನ್ನು ಅಕ್ಷರಶಃ ಅನುಷ್ಠಾನಗೊಳಿಸಿದರು. ಅರವತ್ತೆರಡು ವರ್ಷಗಳ ನಿರಂತರ ಸೇವೆ ಪರಿಶ್ರಮದಿಂದಾಗಿ ಡಾ ಪುಟ್ಟರಾಜ ಗವಾಯಿಗಳು
ಕುರುಡರ ಬಾಳಿನ ನಂದಾ ದೀಪವಾದರು.
ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ನಿತ್ಯಕರ್ಮ ಹಾಗೂ ಯೋಗದ ಅನಂತರ ಬಾವಿ ನೀರಿನ ಮಜ್ಜನದೊಂದಿಗೆ ಮಡಿಯಾಗಿ ಪೂಜಾ ಕೋಣೆ ಸೇರಿದರೆ ಸಾಕು ಹೊರಗಿನ ಜಗತ್ತನ್ನೆ ಮರೆಯುತ್ತಿದ್ದರು. ಪೂಜಾ ಕೋಣೆಯಲ್ಲಿ ತ್ರಿಕಾಲ ನಿಷ್ಠರಾಗಿ ನಾಲ್ಕೈದು ಗಂಟೆಗಳವರೆಗೆ ಆರಾಧ್ಯದೈವದಲ್ಲಿ ತನ್ಮಯರಾಗಿ ಪುಟ್ಟರಾಜರು ಕೈಗೊಳ್ಳುತ್ತಿದ್ದ ಇಷ್ಟಲಿಂಗ ಅರ್ಚನೆ. ಇಷ್ಟಲಿಂಗ ಪೂಜೆಯನ್ನು ದಿನದಲ್ಲಿ ಎರಡು ಬಾರಿ ಮಾಡುತ್ತಿದ್ದರು. ಪುಟ್ಟರಾಜರು ಇಷ್ಟಲಿಂಗ ಪೂಜೆ ವಿಷಯದಲ್ಲಿಯೂ ಅಷ್ಟೇ ಖ್ಯಾತರಾಗಿದ್ದರು. ಮಕ್ಕಳಿಗೆ ಪಾಠ , ಇತರರಿಗೆ ಹೇಳಿ ಪುರಾಣ, ಪೌರಾಣಿಕ ನಾಟಕಗಳನ್ನು ಉಕ್ತ ಲೇಖನವಾಗಿಸಲು ಮಾರ್ಗದರ್ಶನ. ಆಶ್ರಮಕ್ಕೆ ಬಂದ ಭಕ್ತಾದಿಗಳ ಕುಶಲೋಪರಿ ವಿಚಾರಣೆ. ಆಶ್ರಮದ ಮಕ್ಕಳ ಆಟ-ಊಟ-ಉಪಚಾರ ಹಾಗೂ ಅನಾರೋಗ್ಯ ಕಾಡಿದರೆ ಮಕ್ಕಳ ದೇಖ್ ರೇಖ್.
*ಇಷ್ಟಲಿಂಗ ಪೂಜೆ*
ವೀರೇಶ್ವರ ಪುಣ್ಯಾಶ್ರಮದಲ್ಲಿ ಪುಟ್ಟರಾಜ ಗವಾಯಿಗಳು ಪೂಜಾಕಾರ್ಯ ವಿಭೂತಿ, ಗಂಧ, ಪುಷ್ಪ, ಬಿಲ್ವಪತ್ರಿ,ಬೆಳ್ಳಿಯ ಬೋಗಾಣಿ, ಕರ್ಪೂರ, ರುದ್ರಾಕ್ಷಿ ಮಾಲೆ-ಕಿರೀಟ, ಊದುಬತ್ತಿ, ಪಂಚಾಮೃತ, ಜೋಡು ಗಂಟೆಗಳನ್ನು ಕ್ರಮಬದ್ಧವಾಗಿ ಜೋಡಿಸಿಡಲಾಗುತ್ತಿತ್ತು. ಪದ್ಮಾಸನದಲ್ಲಿನ ಗುರುಗಳ ಮಂತ್ರ ಪಠನ, ಜೋಡುಗಂಟೆಯ ಪೂಜಾಕಾರ್ಯ ನೋಡುವುದೇ ಒಂದು ಭಾಗ್ಯವಾಗಿತ್ತು. ನಿತ್ಯವೂ ಮೂರು ಸಲ ಸುಮಾರು ೪ರಿಂದ ೫ ತಾಸು ರುದ್ರಾಭಿಷೇಕ, ಜಪದೊಂದಿಗೆ ಪೂಜೆ ಮಾಡುತ್ತಿದ್ದ ಪುಟ್ಟರಾಜ ಗವಾಯಿ ಅನಂತರ ಪ್ರಸಾದ ಸೇವಿಸಿ ಹೊರಬರುತ್ತಿದ್ದರು.
*ಸಂಗೀತ ರಿಯಾಜ್ ಮತ್ತು ಪಾಠ*
ಬೆಳಿಗ್ಗೆ ೪ ಗಂಟೆಗೆ ಎದ್ದು ಪಂಚಾಕ್ಷರಿ ಗವಾಯಿಗಳನ್ನು ನೆನೆಸಿ ರಿಯಾಜ್ ಮಾಡುವದು. ಬೆಳಿಗ್ಗೆ ಹಾಗೂ ಸಂಜೆ ಸುಮಾರು ೪ ತಾಸು ಮಕ್ಕಳಿಗೆ ಸಂಗೀತದ ಪಾಠ.ನೂರಾರು ಅಂಧ ಅನಾಥ ವಿಕಲಚೇತನ ಮಕ್ಕಳಿಗೆ ಪುಟ್ಟರಾಜ ಗವಾಯಿಗಳು ಸಂಗೀತಾಭ್ಯಾಸ ನೀಡುತ್ತಿದ್ದರು. ಅಂಧತ್ವದ ಶಾಪವನ್ನು ಗ್ರಹಿಸಿದ್ದ ಗವಾಯಿಗಳು ಅವರಿಗೆ ಸ್ವತಂತ್ರವಾಗಿ ಬದುಕುಸಾಗಿಸಲು ಆತ್ಮ ವಿಶ್ವಾಸ ತುಂಬುವುದಲ್ಲದೆ ಜೀವನೋಪಾಯಕ್ಕಾಗಿ ಸಂಗೀತ ಹಾಗೂ ಪ್ರವಚನ, ಪುರಾಣ ಕಲೆಯನ್ನು ಕಲಿಸುತ್ತಿದ್ದರು. ಆಳವಾಗಿ ಅಧ್ಯಯನ ಮಾಡಿ ಸಾಧನೆಗೈದವರು ಶ್ರೇಷ್ಠ ಗಾಯಕರಾಗಿ ಹೊರಹೊಮ್ಮಿದ್ದಾರೆ, ಸಾಧಾರಣ ಪ್ರತಿಭೆ ಹೊಂದಿದವರು ಹೇಗೋ ಜೀವನ ನಡೆಸಲು ಗುರುಗಳು ಕೃಪೆ ತೋರಿದರು. ಆದರೆ ಪುಟ್ಟರಾಜರಿಗೆ ವೈಯುಕ್ತಿಕ ಕೀರ್ತಿ ಹಾಗೂ ಹಣ ಬೇಕಾಗಿರಲಿಲ್ಲ ತಮ್ಮಂತೆ ಅಸಹಾಯಕ ಸ್ಥಿತಿಯಲ್ಲಿರುವ ಲಕ್ಷಾಂತರ ವಿಕಲಚೇತನರಿಗೆ ತಾವು ಸಂಪಾದಿಸಿದ ವಿದ್ಯೆಯನ್ನು ಧಾರೆ ಎರೆಯಲಾರಂಬಿಸಿದರು. ಇಷ್ಟನ್ನೇ ಸಾಧಿಸಿದ್ದರೆ ಗವಾಯಿಗಳು ಒಬ್ಬ ಶ್ರೇಷ್ಠ ಸಂಗೀತ ಗುರುಗಳಾಗುತ್ತಿದ್ದರು. ಆದರೆ ಲಿಂಗ ಪೂಜಾ ನಿಷ್ಠೆಯಿಂದ ವಿಶೇಷ ಆಧ್ಯಾತ್ಮಿಕ ಶಕ್ತಿಯನ್ನು ಮೈಗೂಡಿಸಿಕೊಂಡರು. ಲಿಂಗಾಯತ ಧರ್ಮದ ಏಕತೆ ಸಾರುವ, ಕರಸ್ಥಲಕೆ ಬಂದು ಚುಳುಕಾದ ಇಷ್ಟಲಿಂಗದ ಶಕ್ತಿಯನ್ನು ಅರಿತುಕೊಂಡು, ಲಿಂಗಪೂಜೆ ಮಾಡುತ್ತಾ ಕಠಿಣ ವೃತ ನಿಯಮಗಳನ್ನು ಎಂತಹ ಸಂದರ್ಭದಲ್ಲಿಯೂ ಪಾಲಿಸಿಕೊಂಡು ಸ್ವತಃ ದೇವರಾದರು.
*ಆಡಳಿತದ ಮೇಲುಸ್ತುವಾರಿ*
ಆಶ್ರಮದ ದೈನಂದಿನ ಖರ್ಚು-ವೆಚ್ಚ ಸರಿದೂಗಿಸಲು ಹಾನಗಲ್ ಕುಮಾರಸ್ವಾಮಿಗಳು ತಮ್ಮ ಗುರುಗಳಿಗೆ ನೀಡಿದ್ದ ಜೋಳಿಗೆ ಹೆಗಲಿಗೇರಿಸಿ ಊರೂರು ಸಂಚಾರ, ನಿರಂತರ ಪ್ರವಾಸ ಪುಟ್ಟಯ್ಯಜ್ಜನವರ ಬದುಕಾಗಿತ್ತು. ೯೭ ವರ್ಷದ ವಯೋಸಹಜ ಕಾಯಿಲೆಗಳಿಂದ ಅವರು ಬಳಲಿದರೂ ಈ ನಡಾವಳಿಗೆ ಯಾವತ್ತೂ ಚ್ಯುತಿ ಬರಲಿಲ್ಲ. ಗುರು ಪಂಚಾಕ್ಷರಿ ನೀಡಿದ ಮಾರ್ಗ ದಂಡ ಯಾವತ್ತೂ ಕೈಯಲ್ಲಿ ಹಿಡಿದು ಪುಟ್ಟಯ್ಯಜ್ಜ ನಡೆದರೆ ‘ನಡೆದಾಡುವ ದೇವರು’ ಎಂಬುವುದರಲ್ಲಿ ಯಾವುದೇ ಅತಿಶಯೋಕ್ತಿ ಕಾಣುತ್ತಿರಲಿಲ್ಲ.
*ಸಾಧನೆ*
ಸಂಗೀತ ಸಾಹಿತ್ಯ ಹಾಗೂ ಅಧ್ಯಾತ್ಮದಲ್ಲಿ ಅವರು ತೋರಿದ ಶ್ರದ್ಧೆ ಅನನ್ಯವಾದುದು. ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಯಾವುದಾದರು ಒಂದು ಕ್ಷೇತ್ರದಲ್ಲಿ ಯಶ ಸಾಧಿಸಬಹುದು ಎಂಬ ತಾರ್ಕಿಕ ಲೆಕ್ಕಾಚಾರವನ್ನು ಅಲ್ಲಗಳೆದು ಎಲ್ಲ ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಿದರು. ಸಂಗೀತದ ಎಲ್ಲ ವಾದ್ಯಗಳನ್ನು ಏಕಕಾಲಕ್ಕೆ ನುಡಿಸಿ ಕೇಳುಗರನ್ನು ಬೆರಗುಗೊಳಿಸುತ್ತಿದ್ದರು. ನವ ರಸಗಳನ್ನು ಮೇಳೈಸಿ ಪ್ರವಚನ ನೀಡುತ್ತಾ ಸಂಗೀತ ವಾದ್ಯಗಳನ್ನು ಪ್ರಸಂಗಕ್ಕೆ ತಕ್ಕಂತೆ ಬಳಸಿ ಪ್ರವಚನದ ಮೆರುಗನ್ನು ಹೆಚ್ಚಿಸುತ್ತಿದ್ದರು. ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತದಲ್ಲಿ ಪ್ರಭುತ್ವ ಸಾಧಿಸಿದ ಏಕಮೇವ ದಿಗ್ಗಜರೆನಿಸಿಕೊಂಡರು. ತಮ್ಮ ಗುರು ಪಂಚಾಕ್ಷರಿ ಗವಾಯಿಗಳ ನಿಧನದ ನಂತರ “ಶ್ರೀ ವೀರೇಶ್ವರ ಪುಣ್ಯಾಶ್ರಮ”ವನ್ನು ಮುನ್ನಡೆಯಿಸಿಕೊಂಡು ಹೋದವರು ಪುಟ್ಟರಾಜ ಗವಾಯಿಗಳು. ಸಂಗೀತ ಸಾಧನೆಯಲ್ಲದೆ, ಪುಟ್ಟರಾಜರು ಪುರಾಣರಚನೆ ಹಾಗು ಸುಮಾರು ೩೫ ನಾಟಕಗಳನ್ನೂ ರಚಿಸಿದ್ದಾರೆ.
೧೯೬೯ ನವೆಂಬರ ೧೦ರಂದು ,“ಪಂಚಾಕ್ಷರವಾಣಿ” ಎನ್ನುವ ಮಾಸಪತ್ರಿಕೆಯನ್ನು ಪ್ರಾರಂಭಿಸಿ ಪತ್ರಿಕಾಪ್ರಪಂಚಕ್ಕೂ ಸಹ ಪುಟ್ಟರಾಜರು ಕಾಲಿಟ್ಟರು.
‘ಉಭಯ ಗಾಯನ ವಿಶಾರದ’ (ಹಿಂದೂಸ್ತಾನಿ, ಕರ್ನಾಟಕ ಸಂಗೀತ), ‘ಸಕಲ ವಾದ್ಯ ಕಂಠೀರವ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗವಾಯಿಯವರು ಸಾರಂಗಿ, ಪಿಟೀಲು, ವೀಣೆ, ಮೆಂಡೋಲಿಯನ್, ಸರೋದ್, ತಬಲಾ, ಹಾರ್ಮೋನಿಯಂ, ಸಂತೂರ್, ಸಿತಾರ್ ಮತ್ತಿತರ ವಾದ್ಯಗಳನ್ನು ಅತ್ಯಂತ ಸುಶ್ರಾವ್ಯವಾಗಿ, ಲೀಲಾಜಾಲವಾಗಿ ನುಡಿಸುವುದರಲ್ಲಿ ನಿಪುಣರಾಗಿದ್ದರು.
ಪುಟ್ಟರಾಜ ಗವಾಯಿಗಳ ಸಾಧನೆ ಹಾಗು ಸಲ್ಲಿಸಿದ ಸೇವೆಗಾಗಿ ಅವರಿಗೆ ಸಂದಿರುವ ಪುರಸ್ಕಾರಗಳು ಅನೇಕ. • ೧೯೫೯ರಲ್ಲಿ ಸುತ್ತೂರು ಮಠದಿಂದ “ಸಾಹಿತ್ಯ ಸಂಗೀತ ಕಲಾಪ್ರವೀಣ” ಪ್ರಶಸ್ತಿ • ೧೯೬೫ರಲ್ಲಿ ಬನವಾಸಿ ವಿರಕ್ತ ಮಠದಿಂದ “ಸಮಾಜ ಸೇವಾ ಧುರೀಣ” ಪ್ರಶಸ್ತಿ • ೧೯೭೦ರಲ್ಲಿ ಶ್ರೀ ಮ.ನಿ.ಪ್ರ. ನೀಲಲೋಚನ ಸ್ವಾಮಿಗಳಿಂದ “ತ್ರಿಭಾಷಾ ಕವಿರತ್ನ ಪ್ರಶಸ್ತಿ” • ೧೯೭೫ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರದಾನ • ೧೯೭೬ರಲ್ಲಿ ಮೂರುಸಾವಿರ ಮಠ, ಹುಬ್ಬಳ್ಳಿ ಇವರಿಂದ “ಸಾಹಿತ್ಯ ಸಂಗೀತ ಕಲಾಚಕ್ರವರ್ತಿ” ಪ್ರಶಸ್ತಿ • ೧೯೮೧ರಲ್ಲಿ ಮುರುಘಾಮಠ,ಧಾರವಾಡ ಇವರಿಂದ “ಧರ್ಮಭೂಷಣ” ಪ್ರಶಸ್ತಿ • ೧೯೮೯ರಲ್ಲಿ ಶ್ರೀ ಶಾಂತಲಿಂಗೇಶ್ವರ ಸಂಸ್ಥಾನಮಠ, ಆಷ್ಟಗಿ ಇವರಿಂದ “ಕಲಾಜನಕ” ಪ್ರಶಸ್ತಿ
*ಸಂದ ಪ್ರಶಸ್ತಿ, ಪುರಸ್ಕಾರಗಳು*
೧೯೭೦ರಲ್ಲಿ ರಾಜ್ಯೋತ್ಸವ ಪ್ರಶಸ್ತಿ-
೧೯೭೫ರಲ್ಲಿಕರ್ನಾಟಕ ವಿವಿ ಗೌರವ ಡಾಕ್ಟರೇಟ್
೧೯೯೮ರಲ್ಲಿರಾಜ್ಯ ಸರ್ಕಾರದ ಕನಕ ಪುರಂದರ ಪ್ರಶಸ್ತಿ
೧೯೯೮ರಲ್ಲಿಕನ್ನಡ ವಿವಿಯಿಂದ ‘ನಾಡೋಜ’
೧೯೯೯ರಲ್ಲಿಕೇಂದ್ರ ಸಾಹಿತ್ಯ ನಾಟಕ ಅಕಾಡೆಮಿ ಪ್ರಶಸ್ತಿ
೨೦೦೨ರಲ್ಲಿ‘ಬಸವಶ್ರೀ’ ಪ್ರಶಸ್ತಿ
೨೦೦೦ರಲ್ಲಿಕೇಂದ್ರ ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ಇಲಾಖೆ ಪ್ರಶಸ್ತಿ
೧೯೯೩ರಲ್ಲಿದಸರಾ ಸಂಗೀತ ವಿದ್ವಾನ್ ಪ್ರಶಸ್ತಿ
೧೯೯೧ರಲ್ಲಿಶಿಕ್ಷಣ ಇಲಾಖೆಯ ಪ್ರಶಸ್ತಿ
೧೯೬೧ರಲ್ಲಿ ಹಿಂದಿಯಲ್ಲಿ ‘ಬಸವಪುರಾಣ’ ರಚಿಸಿದ ಪುಟ್ಟರಾಜರಿಗೆ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರಿಂದ ಸತ್ಕಾರ
೨೦೦೭ರಲ್ಲಿ ಮಧ್ಯಪ್ರದೇಶ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ಕಾಳಿದಾಸ ಸಮ್ಮಾನ್
[೨೦೧೦] ರಲ್ಲಿ ಪದ್ಮಭೂಷಣ ಪ್ರಶಸ್ತಿ
ತುಲಾಭಾರ
ಪುಟ್ಟರಾಜರು ತುಲಾಭಾರಗಳ ಚಕ್ರವರ್ತಿಗಳು. ರಾಜ್ಯ ಹಾಗು ಹೊರ ರಾಜ್ಯ ಮತ್ತು ಉತ್ತದ ಕರ್ನಾಟಕದ ಬಹುತೇಕ ಗ್ರಾಮಗಳ ಎಲ್ಲಾ ವರ್ಗದ ಭಕ್ತಸಮೂಹ ಒಟ್ಟು ೨೨೮೦ಕ್ಕೂ ಅಧಿಕ ತುಲಾಭಾರಗಳು ನಡೆದಿದ್ದು, ಆ ಮೂಲಕ ಬಂದ ಹಣವೆಲ್ಲ ಅಂಧ, ಅನಾಥ, ಅಂಗವಿಕಲ ವಿದ್ಯಾರ್ಥಿಗಳ ವಸತಿ, ಊಟ ಮತ್ತಿತರ ಸೌಲಭ್ಯಕ್ಕಾಗಿ ವ್ಯಯಿಸಿರುವುದು ವಿಶೇಷ. ಪುಟ್ಟರಾಜರಿಗೆ ಸಂದ ತುಲಾಭಾರ ಗಿನ್ನೆಸ್ ದಾಖಲೆಗಳ ಪುಸ್ತಕ ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ.
ಶಿಷ್ಯವೃಂದ : ಪಂಡಿತ್ ಬಸವರಾಜ್ ರಾಜಗುರು, ಪಂಡಿತ್ ಫಕ್ಕಿರೇಶ ಅಗಡಿ, ಪಂಡಿತ್ ಪಂಚಾಕ್ಷರಿ ಸ್ವಾಮಿ ಮತ್ತಿಕಟ್ಟಿ, ಎಂ.ವೆಂಕಟೇಶ ಕುಮಾರ್, ಬಸವರಾಜ್ ಗೋನಾಳ, ಡಿ.ಕುಮಾರದಾಸ್, ಫಕೀರೇಶ ಕಣವಿ, ಶಿವರಾಜ್ ಗವಾಯಿ, ಸಿದ್ಧರಾಮ ಗವಾಯಿ ಕೋರವಾರ್, ಶ್ರೀ ಮತ್ತು ಶ್ರೀಮತಿ ಬಿ.ಎಸ್. ಮಠ ದಂಪತಿ,ಶಿವಬಸಯ್ಯ ಚರಂತಿಮಠ ಕಾಡಶೆಟ್ಟಿಹಳ್ಳಿ ಮತ್ತಿತರರು ಪುಣ್ಯಾಶ್ರಮದಲ್ಲಿಯೇ ಅಭ್ಯಾಸ ಮಾಡಿ ಖ್ಯಾತಿಗೆ ಒಳಗಾದವರಲ್ಲಿ ಪ್ರಮುಖರು.
*ವರನಟನಿಗೆ ಪುಟ್ಟರಾಜ ಗವಾಯಿಗಳ ಪಾಠ*
ಕನ್ನಡದ ಮೇರು ನಟ, ನಟ ಸಾರ್ವಭೌಮ ಡಾ.ರಾಜಕುಮಾರ ಅವರಿಗೆ ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಮೂರು ತಿಂಗಳು ಇದ್ದು ಸಂಗೀತ ಅಭ್ಯಾಸ ಮಾಡಿದ್ದಾರೆ.ಅಂಧ ಅನಾಥ ಮಕ್ಕಳ ಪಾಲಿಗೆ ಬೆಳಕಾಗಿ ಅವರ ಬದುಕಿನಲ್ಲಿ ಹೊಸ ಬಾಷ್ಯ ಬರೆದ ಪುಟ್ಟರಾಜ ಗವಾಯಿಗಳ ಬಗ್ಗೆ ರಾಜ್ರಿಗೆ ವಿಶೇಷ ಭಕ್ತಿ ಇತ್ತು. ನಾಡಿನಲ್ಲಿ ಸ್ಮರಣೀಯ ಸೇವೆಯಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ವೀರೇಶ್ವರ ಪುಣ್ಯಾಶ್ರಮದ ಅಂಧ ಮಕ್ಕಳ ನೆರವಿಗೆಗಾಗಿ ವರನಟ ೧೯೮೨ರಲ್ಲಿ ಗದುಗಿನಲ್ಲಿ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಪವಿತ್ರ ಸ್ಥಳವಾದ ಪುಣ್ಯಾಶ್ರದಲ್ಲಿ ಅಂಧರಿಂದ ಪ್ರತಿಧ್ವನಿಸುತ್ತಿದ್ದ ಸಂಗೀತದ ಸ್ವರಗಳು ಕಂಡು ಆಶ್ಚರ್ಯಚಕಿತರಾದ ಡಾ.ರಾಜ್ ಅವರು ವೀರೇಶ್ವರ ಪುಣ್ಯಾಶ್ರಮದಲ್ಲಿ ೩ ತಿಂಗಳುಕಾಲ ಉಳಿದುಕೊಂಡು ಪೂಜ್ಯರಿಂದ ಸಂಗೀತ ಅಭ್ಯಾಸ ಮಾಡಿದ್ದನ್ನು ಪುಣ್ಯಾಶ್ರಮದ ಭಕ್ತರು ಇಂದಿಗೂ ಮೆಲುಕು ಹಾಕುತ್ತಾರೆ. ಶ್ರೀಮಠದ ಬಗ್ಗೆ ರಾಜ್ಗೆ ಇದ್ದ ಅಭಿಮಾನದ ಕಾರಣದಿಂದ ಮುಂದೆ ‘ಗಾನಯೋಗಿ ಪಂಡಿತ ಪಂಚಾಕ್ಷರ ಗವಾಯಿ’ ಹೆಸರಿನಲ್ಲಿ ನಿರ್ಮಾಣವಾದ ಕನ್ನಡ ಚಲನಚಿತ್ರದಲ್ಲಿ ಗಾಯಕರಾಗಿ ‘ಗಾನಯೋಗಿ ಗುರುವೇ’ ಎನ್ನುವ ಗೀತೆಯನ್ನು ಹಾಡುವ ಮೂಲಕ ‘ಸಾವಿರದ ಶರಣು…’ ಗವಾಯಿಗಳಿಗೆ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ರಾಜ್ ತಮ್ಮ ಸುಮಧುರ ಕಂಠದಿಂದ ಸುಶ್ರಾವ್ಯವಾಗಿ ಹಾಡಿದ ‘ಗಾನಯೋಗಿ ಗುರುವೇ’ ಗೀತೆ ಇವತ್ತಿಗೂ ಜನಮಾನಸದಲ್ಲಿ ಉಳಿದಿದ್ದು, ಗದುಗಿನ ತುಂಬಾ ಯಾವುದೇ ಸ್ಥಳದಲ್ಲೂ ಶುಕ್ರವಾರ ಈ ಹಾಡು ಮಾರ್ಧನಿಸುತ್ತಿತ್ತು.
೧೭-೦೯-೨೦೧೦ ರಂದು ಮದ್ಯಾಹ್ನಪುಟ್ಟರಾಜ ಗವಾಯಿಯವರು ಲಿಂಗೈಕ್ಯರಾದರು.
*ರಚನೆಗಳು*
ಪುಟ್ಟರಾಜ ಗವಾಯಿಗಳು. ಸಂಗೀತ ಸಾಧನೆಯಲ್ಲದೆ, ಪುಟ್ಟರಾಜರು ಪುರಾಣರಚನೆ ಹಾಗು ಸುಮಾರು ೩೫ ನಾಟಕಗಳನ್ನೂ ರಚಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ಇಂತಿವೆ:
ಸೊಲ್ಲಾಪುರದ ಸಿದ್ದರಾಮೇಶ
ಸತಿ ಸುಕನ್ಯಾ
ರಾಜಶೇಖರ ವಿಳಾಸ
ಶ್ರೀಕೃಷ್ಣ ಗಾರುಡಿಗ
ನವಯುಗದೆಡೆಗೆ
ರತ್ನಹಾರ
ಘೂಷ್ಮಾ
ಸವತಿ ಮತ್ಸರ
ನಲ್ಲೂರು ನಂಬೆಕ್ಕ
ಅಸ್ಪ್ರಷ್ಯೋದ್ಧಾರ
ದೇವರ ದುಡ್ಡು
*ಕನ್ನಡದಲ್ಲಿ ರಚಿಸಿದ ಪ್ರಮುಖ ಪುರಾಣಗಳು*
ಕಲಬುರ್ಗಿ ಶರಣಬಸವೇಶ್ವರ ಪುರಾಣ
ಶಿವಲಿಂಗೇಶ್ವರ ಪುರಾಣ
ಅಂಕಲಗಿ ಅಡವಿ ಸಿದ್ಧೇಶ್ವರ ಪುರಾಣ
ಚೆನ್ನಬಸವ ಸ್ವಾಮೀಜಿ ಪುರಾಣ
ಹಾವೇರಿ ಶಿವಬಸವ ಸ್ವಾಮಿ ಪುರಾಣ
ಅಕ್ಕಮಹಾದೇವಿ ಪುರಾಣ
ಗಂಜೀಗಟ್ಟಿ ಚರಮೂರ್ತೇಶ್ವರ ಪುರಾಣ
ಯೋಗಿರಾಜ ಪುರಾಣ
ತ್ರಿಷಷ್ಠಿ ಪುರಾತನರ ಪುರಾಣ
ಗುಳೇದ ಗಾದಿಲಿಂಗೇಶ್ವರ ಪುರಾಣ
ಗುರುಸಿದ್ದೇಶ್ವರ ಪುರಾಣ
ವೀರಭದ್ರೇಶ್ವರ ಪುರಾಣ
ಮುಂಡರಗಿ ಅನ್ನದಾನೇಶ್ವರ ಪುರಾಣ
ಹೇಮರೆಡ್ಡಿ ಮಲ್ಲಮ್ಮ ಪುರಾಣ
ಗುಡ್ಡಾಪೂರ ದಾನಮ್ಮದೇವಿ ಪುರಾಣ
ಚಿಕೇನಕೊಪ್ಪದ ಚೆನ್ನವೀರ ಶರಣರ ಪುರಾಣ
ನಾಲ್ವತವಾಡ ವೀರೇಶ್ವರ ಶರಣರ ಪುರಾಣ
*ಹಿಂದಿಯಲ್ಲಿ ರಚಿಸಿದ ಕೃತಿಗಳು*
ಬಸವೇಶ್ವರ ಪುರಾಣ
ಸಿದ್ಧಲಿಂಗ ವಿಜಯ ಪುರಾಣ
ಸಿದ್ಧಾಂತ ಶಿಖಾಮಣಿ
ಕುಮಾರ ಮಹಾ ಶಿವಯೋಗಿ
ಗುರು ಪಂಚಾಕ್ಷರ ಶಿವಯೋಗಿ ಚರಿತ್ರೆ
ಸಂಸ್ಕೃತದಲ್ಲಿ ರಚಿಸಿದ ಕೃತಿಗಳು
ಶ್ರೀಮದ್ ಕುಮಾರಗೀತ
ಲಿಂಗಾಷ್ಟಕಂ
ಪಂಚಾಕ್ಷರ ಸುಪ್ರಭಾತಂ
ಶ್ರೀರುದ್ರ ತಾತ್ಪರ್ಯ
ಕುಮಾರ ವಿಲಾಸ ಕಾವ್ಯಂ
ಲಿಂಗ ಸೂಕ್ತಂ
ಸಂಗೀತ ಕೃತಿಗಳು
ಸಂಗೀತ ಶಾಸ್ತ್ರಜ್ಞಾನ
ಗಾನ ಸುಧಾ’ ಭಾಗ-೧, ೨
ತಾಲ ಪಂಚಾಕ್ಷರಿ
*ಪ್ರಮುಖ ನಾಟಕಗಳು*
ನೆಲ್ಲೂರು ನಿಂಬೆಕ್ಕ
ಶಿವಶರಣ ಚೆನ್ನಯ್ಯ
ಶ್ರೀ ಭಗವಾನ್ ಬಸವೇಶ್ವರ
ಶ್ರೀ ಗುರು ದರ್ಶನ
ಹಾನಗಲ್ಲ ಕುಮಾರೇಶ್ವರ ಮಹಾತ್ಮೆ
ಶಿವಯೋಗಿ ಸಿದ್ಧರಾಮೇಶ್ವರ
ಶಿವಶರಣ ಮೋಳಗಿ ಮಾರಯ್ಯ
ಶಿರಹಟ್ಟಿ ಶ್ರೀ ಫಕೀರೇಶ್ವರ ಮಹಾತ್ಮೆ
ಶಿವಶರಣೆ ಉಡತಡಿ ಅಕ್ಕಮಹಾದೇವಿ
ದೇವರದುಡ್ಡು
ಸತಿ ಸುಕನ್ಯ
ದಾನವೀರ ಶಿರಸಂಗಿ
ಲಿಂಗರಾಜರು
ಮಿಂಚು
ಸವತಿ ಮಾತ್ಸರ್ಯ
ಶ್ರೀ ರಾಜಶೇಖರ ವಿಲಾಸ
ಮಹಾರತಿ ಭೀಷ್ಮ
ಕೊಟ್ಟೂರು ಬಸವೇಶ್ವರ
ಸ್ತ್ರೀ ಪ್ರೇಮ
ಮಗನ ಪ್ರೇಮ
ಶ್ರೀ ಕೃಷ್ಣ ಗಾರುಡಿ
ಅಪ್ರಕಟಿತ ನಾಟಕ
ಗೂಷ್ಮಾದೇವಿ
*ಬ್ರೇಲ್ ಲಿಪಿಯ ಕೃತಿ*
ಭಗವದ್ಗೀತೆ
ಹಿಂದಿ ಕೃತಿಗಳು
ಹಿಂದಿ ಚೀಸ್ಗಳು
*ಇತರ ಕೃತಿಗಳು*
ಚಂಪೂ ಕಾವ್ಯ
ಅಷ್ಟಾವರಣ ಕಥಾ ಕೀರ್ತನ ಮಾಲಿಕೆ
ಹಾನಗಲ್ಲ ಶ್ರೀ ಕುಮಾರ ಶಿವಯೋಗಿ
ತತ್ವ ಬೋಧಾಮೃತ
ಕದರಿ ರೇಮಯ್ಯ
ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ನಾಮಾವಳಿ
ಶ್ರೀ ಪಂಚಾಕ್ಷರಿ ಗವಾಯಿ
ಪ್ರಸಾದ ಮಹಿಮೆ
ಶ್ರೀ ಗುರುವಚನ ಪ್ರಭ
ಭಾವ ಮಂದಾಕಿನಿ
ವ್ಯಾಖ್ಯಾನ ರತ್ನ ಮಾಲಿಕೆ
ಗುರು ವಚನ ಪ್ರಭ
ಇಂತಹ ಕ್ಷೇತ್ರಗಳಿಗೆ ಸಾಕಷ್ಟು ಪರಿಶ್ರಮದಿಂದ ದುಡಿದು ಕಾಯಕವೇ ತಮಗೆ ಕೈಲಾಸವೆಂದು ನಂಬಿದ ಡಾ ಪುಟ್ಟರಾಜ ಗವಾಯಿಗಳು ಬಯಲಲ್ಲಿ ಬಯಲಾದರು.
_________________________
ಡಾ.ಶಶಿಕಾಂತ ಪಟ್ಟಣ ರಾಮದುರ್ಗ

