ಕವಿ, ಕಲಾವಿದ, ಸಾಹಿತಿ , ವಿಮರ್ಶಕ, ನಾಟಕಕಾರ, ಪರಿಸರ ಸ್ನೇಹಿಯಾದ ಬಹುಮುಖ ಪ್ರತಿಭೆಯ ಸಹೃದಯಿ, ಸರಳ ಸಜ್ಜನಿಕೆಯ ಸಂಪನ್ನರು ಗೊರೂರು ಅನಂತರಾಜುರವರು ಕಳೆದ 25 ವರ್ಷ ಗಳಿಂದಲೂ ನನಗೆ ಆತ್ಮೀಯರು. ಇವರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ದಣಿವಿಲ್ಲದೆ ಕ್ರಿಯಾಶೀಲರಾಗಿ ಸಾಹಿತ್ಯ ಲೋಕಕ್ಕೆ ವಿಭಿನ್ನವಾದ ಆಯಾಮಗಳಲ್ಲಿ ಕೊಡುಗೆ ನೀಡಿದ ಕ್ರಿಯಾಶೀಲ ಬರಹಗಾರರಾಗಿ, ವಿಮರ್ಶಕರಾಗಿ, ಯಶಸ್ಸುಗೊಂಡಿದ್ದಾರೆಂದು ಹೇಳಬಹುದು.
ಶ್ರೀಯುತರದು ತೀರ ಸರಳ, ಸಾತ್ವಿಕ, ವ್ಯಕ್ತಿತ್ವ. ಮಾನವೀಯವೆನಿಸುವ ಸಂವೇದನೆಗಳು, ಅನುಕಂಪ ಪ್ರೇರಿತ ಜೀವನ ದೃಷ್ಟಿ, ಪರಿಸರದ ಎಲ್ಲಾ ಸಂಭವಗಳಿಗೆ ತೀಕ್ಷ್ಣವಾಗಿ ಸ್ಪಂದಿಸುವಿಕೆ, ಸಹಾನುಭೂತಿ ಮುಗ್ದತೆ , ಸ್ನೇಹಪರತೆ ಇವರ ವ್ಯಕ್ತಿತ್ವಕ್ಕೆ ಮೆರುಗು ನೀಡುವ ಮಾನವೀಯ ಮೌಲ್ಯಗಳು.
ಬರವಣಿಗೆಯಲ್ಲಿ ಸತ್ವ-ತತ್ವಗಳಿಂದ ಕಂಗೊಳಿಸುವ ಇವರ ಸಾಹಿತ್ಯ ಶ್ರೇಷ್ಠ ವೆನಿಸಿತು. ಮನುಕುಲದ ಸಹಜ ಬದುಕಿನ ಚಿತ್ರಣ, ನೀತಿ -ಕಥೆಗಳು ಓದುಗರ ಮನ ಮುಟ್ಟುತ್ತವೆ. ಸಾರಸತ್ವ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಒತ್ತಿರುವ ಇವರ ಸೃಜನಶೀಲತೆ ಕ್ರಿಯಾಶೀಲತೆಗಳು ವೈವಿಧ್ಯಮಯವಾದ ಬರವಣಿಗೆ, ಸಮಕಾಲೀನ ಸಾಹಿತ್ಯಲೋಕದ ಸವಾಲುಗಳ ಸೂಕ್ಷ್ಮತೆಯನ್ನು ಕಲೆಗಳ ಮೂಲಕ ಕೃತಿಗಳಲ್ಲಿನ ಸಂವೇದನಾಶೀಲತೆ, ಆಂತರಿಕ ತೀವ್ರತೆಯನ್ನು ಒಳಗಣ್ಣಿನಿಂದ ಗ್ರಹಿಸಿ ಅವುಗಳ ಬಗ್ಗೆ ವಿಮರ್ಶೆ ಮಾಡುವ ಪರಿ ವಿಶಿಷ್ಟವೆನಿಸುತ್ತದೆ.
ಪಾಶ್ಚಿಮಾತ್ಯರಲ್ಲಿ ಸಾಮಾನ್ಯ ಮನುಷ್ಯ ಕೂಡ ದೃಶ್ಯ ಕಲೆಯನ್ನು, ಕಲಾಕೃತಿಯನ್ನು ನೋಡುವ ಬಗೆ, ಕಲೆಯನ್ನು ಆಸ್ವಾದಿಸುವ ಬಗೆಯನ್ನು ಅರಿತಿರುತ್ತಾರೆ. ದೃಶ್ಯ ಭಾಷೆ(visual language) ಅವರಿಗೆ ಸಾಹಿತ್ಯ ಓದಿದಷ್ಟೇ ಸರಳವೆನಿಸುತ್ತದೆ. ಆದರೆ ನಮ್ಮ ದೇಶದಲ್ಲಿ ಕಲಾವಿದನನ್ನು ಬಿಟ್ಟರೆ ದೃಶ್ಯ ಭಾಷೆ ತಿಳಿದುಕೊಳ್ಳುವ ಗೋಜಿಗೆ ಜನಸಾಮಾನ್ಯರು ಹೋಗುವುದೇ ಇಲ್ಲ. ಹಾಗಾಗಿ ಕಲಾವಿದ ಹಾಗೂ ಜನಸಾಮಾನ್ಯರ ನಡುವಿನ ಸಂಬಂಧ ದೂರವಿರುತ್ತದೆ. ಆದರೆ ಈ ಇಬ್ಬರ ನಡುವಿನ ಅಂತರದ ಕೊಂಡಿಯನ್ನು ಜೋಡಿಸುವ ಮಹತ್ತರ ಕಾರ್ಯವನ್ನು ತಮ್ಮ ಲೇಖನ, ವಿಮರ್ಶೆಗಳಿಂದ ಕಲಾವಿದರನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯವನ್ನು ಶ್ರೀಯುತರು ಹಲವು ದಶಕಗಳಿಂದ ಮಾಡುತ್ತಲೇ ಬಂದಿರುವುದು ಶ್ಲಾಘನೀಯವಾಗಿದೆ.
ನಾಡಿನ ಸಾಂಸ್ಕೃತಿಕ ಲೋಕವನ್ನು ಅನನ್ಯಗೊಳಿಸುವ ನಿಟ್ಟಿನಲ್ಲಿ ಕರುನಾಡಿನ ಅನೇಕ ಸಾಹಿತಿಗಳು, ವಿಚಾರವಂತರು, ಕಲಾವಿದರು ತಮ್ಮ ಕರ್ತವ್ಯವನ್ನು ತಮ್ಮದೇ ರೀತಿಯಲ್ಲಿ ನಿರ್ವಹಿಸುವ ಪರಂಪರೆಯನ್ನು ವರ್ತಮಾನದಲ್ಲಿ ಅದರ ಶ್ರೇಷ್ಠತೆಯನ್ನು ನೆನೆಯುತ್ತ ಅದರ ಮಹತ್ವವನ್ನು ಮತ್ತಷ್ಟು ಹೇಳಲು ನಾವು ಅವಶ್ಯವಾದದ್ದನ್ನು ಪ್ರೀತಿಸಲೇ ಬೇಕು. ಹೀಗಾಗಿ ಶ್ರೀ ಗೊರೂರು ಅನಂತರಾಜುರವರು ಅವರ ಯೋಜನೆ ಅನುಸಾರ “ಲೋಕ ದೃಷ್ಟಿ ಕಲಾ ಸೃಷ್ಟಿ” ಕೃತಿಯು ಒಬ್ಬ ಚಿತ್ರ ಕಲಾವಿದನಾಗಿರುವ ನನಗೆ ಹೆಮ್ಮೆ ಅನಿಸುತ್ತದೆ. ಈ ಕೃತಿಯಲ್ಲಿ ಚಿತ್ರ ಕಲಾವಿದರನ್ನು ವಿಷಯವಾಗಿಸಿ ಅವರ ಅಭಿವ್ಯಕ್ತಿ ಭಾವನೆ , ದೃಷ್ಟಿಕೋನ, ಬದುಕು ಬರಹ ಇವುಗಳನ್ನು ಪರಿಚಯಿಸುವ ಕಾರ್ಯ ಬಹಳ ಮಹತ್ವವೆನಿಸುತ್ತದೆ. ನಾನು ಬೆಳಗಾವಿ ಜಿಲ್ಲೆಯವನಾಗಿದ್ದರೂ ಹಾಸನ ಜಿಲ್ಲೆಯ ಕಲಾವೈಭವ, ಸಂಸ್ಕೃತಿ ಅಲ್ಲಿರುವ ಚಿತ್ರ ಕಲಾವಿದರ ನೈಪುಣ್ಯತೆಯನ್ನು ಬಹಳ ಹತ್ತಿರದಿಂದ ಬಲ್ಲವನು. ಹಾಗೂ ಗೊರೂರು ಅನಂತರಾಜುರವರನ್ನು ಅವರ ಬರಹಗಳನ್ನು ಒಬ್ಬ ಸ್ನೇಹಿತನಾಗಿ ಕಂಡವನು. ಶ್ರೀಯುತರು ಅನೇಕ ಚಿತ್ರ ಕಲಾವಿದರ ಪರಿಚಯಿಸುವ ಜೊತೆಗೆ ಅವರ ಜೀವನ ಶೈಲಿ ಕಲಾವಿದರ ಬದುಕು ಅವರ ಶ್ರೇಷ್ಠತೆಯನ್ನು ನೈಜವಾಗಿ ಲೇಖನಿಯಿಂದ ಚಿತ್ರಿಸಿರುವುದು ನನಗೆ ಬಹಳ ಸಂತೋಷವೆನಿಸುತ್ತದೆ. ಚಿತ್ರ ಕಲಾವಿದರ ಬದುಕನ್ನು ಇತಿಹಾಸದ ಪುಟಗಳಿಗೆ ಗೊರೂರು ಅನಂತರಾಜುರವರು ಸೇರಿಸಿರುವುದು ಕಲಾವಿದರಿಗೆ ಕೊಟ್ಟ ಬಹುದೊಡ್ಡ ಕೊಡುಗೆ ಎಂದು ನಾನು ಭಾವಿಸಿದ್ದೇನೆ.
30 ವರ್ಷಗಳಿಂದಲೂ ಅನೇಕ ನಾಟಕಗಳನ್ನು, ವಿಷಯಗಳನ್ನು ಅಭಿನಯ ಅಭಿವ್ಯಕ್ತಿ ಎಂಬ ಕೃತಿಯಲ್ಲಿ ಸುಮಾರು 150ಕ್ಕೂ ಹೆಚ್ಚು ನಟನೆಯ ಗಣ್ಯರನ್ನು ಗುರುತಿಸಿ ಅವರನ್ನು ಲೇಖನದಲ್ಲಿ ಪರಿಚಯಿಸಿರುವ ಕೀರ್ತಿ ಅವರ ಬರಹ ಲೋಕಕ್ಕೆ ಮತ್ತೊಂದು ಸ್ಪೂರ್ತಿ ಅನಿಸುತ್ತದೆ. ಇವರು ಒಂದು ರೀತಿಯ “ಆಡು ಮುಟ್ಟದ ಸೊಪ್ಪಿಲ್ಲ” ಎಂಬ ನಾಣ್ನುಡಿ ಅಂಟಿ ಕೊಂಡವರಂತೆ ಕಾಣುತ್ತಾರೆ. ಅನೇಕ ಕಲಾಕೃತಿಗಳನ್ನು ವಿಮರ್ಶೆ ಮಾಡುತ್ತಾ ಅನೇಕ ವ್ಯಕ್ತಿಗಳ ಜೀವನ ಚರಿತ್ರೆಯನ್ನು ರಚಿಸುತ್ತಾ, ನಾಟಕಗಳನ್ನು ಬರೆಯುತ್ತ, ನಿರ್ದೇಶಕ, ಒಬ್ಬ ನಾಟಕಕಾರನಾಗಿ ನಾಟಕ ರಚಿಸುತ್ತ, ನಟನಾಗಿ ಅಭಿನಯಿಸುತ್ತ ಒಬ್ಬ ವ್ಯಕ್ತಿ ಹೇಗೆ ತನ್ನ ಬದುಕನ್ನು ಎಲ್ಲಾ ಆಯಾಮಗಳಲ್ಲೂ ಅಭಿವ್ಯಕ್ತಗೊಳಿಸಬಹುದು ಎಂಬುದಕ್ಕೆ ಗೊರೂರು ಅನಂತರಾಜುರವರರ ಅಪೂರ್ವ ಬದುಕು ಮತ್ತು ಬರಹಗಳೆ ಇದಕ್ಕೆ ಸಾಕ್ಷಿ. ಇವರು ನಾಡಿನ ಹೆಸರಾಂತ ಸಾಹಿತಿಗಳಾದ ಡಾ. ಎಸ್. ಕೆ. ಕರೀಂ ಖಾನ್, ಡಾ. ಎಚ್.ಕೆ. ಲಕ್ಕಪ್ಪ ಗೌಡ, ಬೇಲೂರು ಕೃಷ್ಣಮೂರ್ತಿ, ಡಾ. ಮಳಲಿ ವಸಂತ್ ಕುಮಾರ್, ಸಾಹಿತಿಗಳು ರಂಗಕರ್ಮಿಗಳು, ವಿಚಾರವಂತರನ್ನು ಕೂಡ ತಮ್ಮ ಬರವಣಿಗೆ ಮೂಲಕ ಅವರ ಬದುಕಿಗೊಂದು ಗಟ್ಟಿ ನೆಲೆಯನ್ನು ತುಂಬಿ ಕೊಟ್ಟಂತಹ ಈ ನಾಡಿನ ಒಬ್ಬ ಶ್ರೇಷ್ಠ ಲೇಖಕ ಎನ್ನಲು ಹರ್ಷವೆನಿಸುತ್ತದೆ.
ಶ್ರೀಯುತರು ಜಾನಪದ ಲೋಕವನ್ನು ತಮ್ಮ ಬರವಣಿಗೆಯಲ್ಲಿ ಸುಂದರಗೊಳಿಸಿದ್ದಾರೆ. ಕನ್ನಡ ನಾಡಿನಲ್ಲಿರುವ ಅನೇಕ ಹಬ್ಬಗಳನ್ನು ಮತ್ತು ನಂಬಿಕೆಗಳನ್ನು ತಮ್ಮ ಬರಹಗಳ ಮೂಲಕ ವೈಚಾರಿಕತೆಯನ್ನು ಹಾಗೆ ಲೀನವಾಗಿಸಿರುವುದು ಮಹತ್ವವೆನಿಸುತ್ತದೆ. ಇವರು ಸುಮಾರು 6 ನಾಟಕಗಳನ್ನು 20 ಕಿರು ನಾಟಕಗಳನ್ನು, ವಿಜ್ಞಾನ ಮೌಲ್ಯ ಶಿಕ್ಷಣ ಇತಿಹಾಸ, ಪುರಾಣ ವಾಸ್ತವಿಕತೆ, ಧಾರ್ಮಿಕತೆ ಎಲ್ಲವನ್ನು ಚಿತ್ರಿಸುವ ಸಾಹಿತಿ ಅದುವೇ ಗೊರೂರು ಅಂತರಾಜುರವರು. ಪ್ರಸ್ತುತ ಈ ದಿನಮಾನಗಳಲ್ಲಿ ಚಿತ್ರ ಕಲಾವಿದರನ್ನು ಅವರ ಶ್ರೇಷ್ಠ ಸಾಧನೆಗಳನ್ನು ತಮ್ಮಷ್ಟಕ್ಕೆ ತಾವೇ ಈ ಪ್ರಪಂಚವನ್ನು ವರ್ಣಮಯವಾಗಿಸಿ ಸೃಷ್ಟಿಗೆ ಮತ್ತಷ್ಟು ಚೈತನ್ಯವನ್ನು ತುಂಬುವ ಚಿತ್ರಕಲಾವಿದರ ಬಗ್ಗೆ ಬರೆಯುವುದು ಒಬ್ಬ ಬರಹಗಾರನಿಗೆ ಇರುವ ಅತಿ ಸೂಕ್ಷ್ಮತೆ ಎಂದು ನಾನು ಭಾವಿಸಿದ್ದೇನೆ. ಗೊರೂರು ಅನಂತರಾಜುರವರು ಕಾಲದ ಪ್ರವಾಹದಲ್ಲಿ ಕಳೆದುಹೋಗುತ್ತಿರುವ ಚಿತ್ರ ಕಲಾವಿದರ ಹತ್ತಾರು ಸಂಗತಿಗಳನ್ನು ಹಲವಾರು ಚಿತ್ರ ಕಲಾವಿದರ ರೇಖೆಗಳನ್ನು ಅವರ ವರ್ಣ ಶೈಲಿಯನ್ನು ಅವರ ಮನಸ್ಥಿತಿಯ ಓರೆ ಕೋರೆಗಳನ್ನು ಅವರ ಬದುಕಿದ ವಿಚಾರವಂತಿಕೆಯನ್ನು ಈ ಕೃತಿಯಲ್ಲಿ ಹೇಳಿರುವುದು ನನಗೆ ಬಹಳ ಅಪರೂಪವೆನಿಸುತ್ತದೆ.
ನಾನು ಸದಾ ಕ್ಯಾನ್ವಾಸ್ ಮತ್ತು ಬಣ್ಣಗಳ ಜೊತೆ ಬದುಕು ಕಳೆಯುವವನು ಬಿಳಿ ಕ್ಯಾನ್ವಾಸಿಗೆ ನಾನು ಹಚ್ಚಿದ ಬಣ್ಣಗಳಿಂದ ಕ್ಯಾನ್ವಾಸಿನ ಶ್ರೇಷ್ಠತೆಯನ್ನು ಪ್ರಪಂಚಕ್ಕೆ ಅರ್ಪಿಸಿದವನು, ಆದರೆ ಬರವಣಿಗೆ ನನ್ನದಲ್ಲದು. ಆದರೂ ಸಹ ಅವರ ಪ್ರೀತಿ ಮನಸ್ಸಿಗೆ ಸೋತು ನನ್ನ ಬರಹ ಅಧ್ಯಾಯಕ್ಕೆ ಗೊರೂರು ಅನಂತರಾಜುರವರು ಈ ಮೂಲಕ ಸಾಕ್ಷಿಯಾಗಿದ್ದಾರೆ.
ಡಾ. ಬಾಬುರಾವ್ ನಡೋಣಿ
ಚಿತ್ರ ಕಲಾವಿದರು
ರಾಯಬಾಗ.
ಮೊಬೈಲ್ : 9448237722