ಬೆಳಗಾವಿ: ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕಿಂತ ಕಾಲು ಶತಮಾನಗಳ ಮುನ್ನವೇ ಕಿತ್ತೂರು ಸಂಸ್ಥಾನ ಸ್ವತಂತ್ರ ಭಾರತದ ಕನಸುಕಟ್ಟಿಕೊಂಡು ಬ್ರಿಟಿಷರ ವಿರುದ್ಧ ಹೋರಾಡಿತು. ಅದೊಂದು ರೋಮಾಂಚನ್ನುಂಟು ಮಾಡುವ ಚಾರಿತ್ರಿಕ ಸಂಗತಿ. ಅದನ್ನು ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಸ್ನಾತಕೋತ್ತರ ವಿದ್ಯಾರ್ಥಿಗಳು ಬೀದಿ ನಾಟಕದ ರೂಪದಲ್ಲಿ ಪ್ರದರ್ಶನಗೊಳಿಸಿರುವುದು ಆಜಾದಿ ಕಾ ಅಮೃತ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಔಚಿತ್ಯಪೂರ್ಣವೆಂದು ಪ್ರೊ. ಎಂ. ರಾಮಚಂದ್ರಗೌಡ ಅವರು ಅಭಿಪ್ರಾಯಪಟ್ಟರು.
ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಬೀದಿ ನಾಟಕದ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಾ,, ರಾಷ್ಟ್ರೀಯತೆ ಎನ್ನುವ ಪರಿಕಲ್ಪನೆಯು ಇಂದು ಹೊಸ ವ್ಯಾಖ್ಯಾನವನ್ನು ಪಡೆದುಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಕಿತ್ತೂರು ಸಂಸ್ಥಾನದ ಸ್ವಾತಂತ್ರ್ಯ ಹೋರಾಟದ ಮೂಲಕ ರಾಷ್ಟ್ರಪ್ರಜ್ಞೆಯನ್ನು ಜಾಗೃತಗೊಳಿಸಲು ನೆರವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಹಾಜರಿದ್ದ ಪ್ರೊ. ಆರ್. ಎಂ. ಷಡಕ್ಷರಯ್ಯ ಅವರು ಕಿತ್ತೂರು ಚರಿತ್ರೆಯ ಎಲ್ಲ ಘಟನಾವಳಿಗಳನ್ನು ನಾಟಕವು ಒಳಗೊಂಡಿದೆ ಎಂದರು. ಅತಿಥಿಗಳಾಗಿ ಆಗಮಿಸಿದ್ದ ಯ. ರು. ಪಾಟೀಲ ಅವರು ಪ್ರದರ್ಶನಗೊಂಡ ‘ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕಿ ಕಿತ್ತೂರು ರಾಣಿ ಚನ್ನಮ್ಮ’ ನಾಟಕವನ್ನು ಬೆಳಗಾವಿ ನಗರದ ಮತ್ತು ಬೆಳಗಾವಿ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಲ್ಲಿ ಪ್ರದರ್ಶನ ಮಾಡುವ ವ್ಯವಸ್ಥೆಯನ್ನು ಜಿಲ್ಲಾಡಳಿತವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಮಾಡಿಸಬೇಕೆಂದರು.
ಪ್ರೊ. ಎಸ್. ಎಂ. ಗಂಗಾಧರಯ್ಯ ಅವರ ರಚನೆ ಮತ್ತು ಪರಿಕಲ್ಪನೆಯನ್ನು ಆಧರಿಸಿದ ನಾಟಕವನ್ನು ಮೈಸೂರು ರಂಗಾಯಣದ ಕಿರಿಯ ರೆಫಟರಿ ಷರೀಫ್ ಅಂದಪ್ಪನವರ ನಿರ್ದೇಶಿಸಿದ್ದರು. ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಗಳ ತಂಡ ನಾಟಕವನ್ನು ಪ್ರದರ್ಶಿಸಿತು. ಡಾ. ಗಜಾನನ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಮಹೇಶ ಗಾಜಪ್ಪನವರ ಅವರು ವಂದಿಸಿದರು, ಕುಮಾರಿ. ರಾಜಶ್ರೀ ಕಾಂಬಳೆ ಪ್ರಾರ್ಥಿಸಿದರು. ಸಂಶೋಧನಾರ್ಥಿಗಳು ಹಾಗೂ ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿವರ್ಗದವರು ಹಾಜರಿದ್ದರು.