ಮಗುವಿನ ಶಿಕ್ಷಣ ಆರಂಭವಾಗುವುದು ಮನೆಯಲ್ಲಿ. ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು. ಪಾಠಶಾಲೆಯು ಮಗುವಿನ ಶಿಕ್ಷಣದ ಒಂದು ಅಂಗ ಮಾತ್ರ ಎಂಬುದನ್ನು ಮರೆಯಲಾಗದು. ಸಫಲ ಹಾಗೂ ಸಮಗ್ರ ಜೀವನಕ್ಕೆ ಅಗತ್ಯವಾದ ಓದು, ಬರಹ, ಲೆಕ್ಕ, ವಿವಿಧ ರೀತಿಯ ಅನುಭವ, ಅಭ್ಯಾಸ, ಕುಶಲತೆ, ಭಾವನೆ, ವರ್ತನೆ ಮೊದಲಾದ ಬಹುಮುಖ ಶಿಕ್ಷಣವು ದೊರಕಲು ಅನೇಕ ಸಂಸ್ಥೆಗಳ ಸಂಪರ್ಕ ಅವಶ್ಯಕವಾಗುತ್ತದೆ. ನದಿಯ ಅನಂತ ಪ್ರವಾಹದಂತೆ ಶಿಕ್ಷಣವೂ ಮಾನವ ಜೀವನದಲ್ಲಿ ಸಾಗುತ್ತ ಸಿದ್ಧಿಸಬೇಕಾಗಿದೆ. ತಾಯಿಯ ಗರ್ಭದಲ್ಲಿ ಮೂಡಿದಂದಿನಿಂದ ಭೂತಾಯಿ ಗರ್ಭದಲ್ಲಿ ಬೆರೆಯುವವರೆಗೆ ವ್ಯಕ್ತಿಗೆ ದೊರಕುವ ಶಿಕ್ಷಣವು ವ್ಯಾಪಕ ಹಾಗೂ ವಿಶಾಲವಾದುದು.
ಮಕ್ಕಳು ತಂದೆ-ತಾಯಿಯರ ಪ್ರತಿಬಿಂಬವಾಗಿರುತ್ತಾರೆ. ಮಕ್ಕಳು ಮೊದಲ ಆದರ್ಶ ಪುರುಷ ಅಥವಾ ಆದರ್ಶ ಮಹಿಳೆ ತಂದೆ ಅಥವಾ ತಾಯಿಯೇ ಆಗಿರುತ್ತಾರೆ. ಹೆತ್ತವರ ಪ್ರೀತಿ, ವಿಶ್ವಾಸ, ಪರಸ್ಪರ ಗೌರವ, ಪ್ರಾಮಾಣಿಕತೆ, ಕರುನೆ ಹಾಗೂ ಉದಾರತೆ ಭರಿತ ನಡೆನುಡಿಗಳು ಮಕ್ಕಳ ನಾಳೆಗಳಲ್ಲಿ ಪ್ರತಿಫಲಿತವಾಗುತ್ತದೆ. ಒದ್ದೆ ಮಣ್ಣಿನ ಮುದ್ದೆಯಂತಿರುವ ಮಕ್ಕಳನ್ನು ಸುಂದರ ಮೂರ್ತಿಯಾಗಿ ರೂಪಿಸುವುದು ಶಿಕ್ಷಕರ ಕೈಯಲ್ಲಿದೆ. ಕಲಿಕೆಯಲ್ಲಿ ಆಸಕ್ತಿ ಇರುವ ಎಲ್ಲರಿಗೂ ಗುರುವೊಬ್ಬರು ಬೇಕೇ ಬೇಕು. ಜಗತ್ತಿನಲ್ಲಿ ಅಮ್ಮನ ಹೊರತಾಗಿ ಎಲ್ಲಾ ಸಮಸ್ಯೆಗಳಿಗೂ ದಾರಿದೀಪವಾಗಿ ನಿಲ್ಲಬಲ್ಲ ಸೃಷ್ಟಿ ಎಂದರೆ ಅದು ಶಿಕ್ಷಕರು ಮಾತ್ರ. ವಿದ್ಯೆ, ಜ್ಞಾನ, ಮಾಹಿತಿ ಪಡೆಯುವುದು ಈಗ ಸುಲಭವಾದರೂ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ತಿಳಿ ಹೇಳಲು ಗುರುವೊಬ್ಬರ ಅಗತ್ಯ ಇದ್ದೇ ಇರುತ್ತದೆ. ಸರಳತೆ, ತಾಳ್ಮೆ, ಸಮಗ್ರತೆಯ ಪ್ರತಿರೂಪವಾಗಿ ಶಿಕ್ಷಕರನ್ನು ನಾವು ಕಾಣುತ್ತೇನೆ. ಶಿಕ್ಷಕರೇ ನಿಜವಾದ ಅನುಕರಣೀಯ ವ್ಯಕ್ತಿಗಳು. ನಮ್ಮ ಜೀವನದಲ್ಲಿ ಧನಾತ್ಮಕ ಚಿಂತನೆಯನ್ನು ಬೆಳೆಸಿ ಸರಿ ಮಾರ್ಗವನ್ನು ತೋರುವವರು ಶಿಕ್ಷಕರು.
‘ಗುರು’ ಅದಕ್ಕೆ ಭಾರ ದೊಡ್ಡದು, ಅತಿಶಯವಾದುದು ಎಂಬುದು ವಾಚ್ಯಾರ್ಥ. ಅದಕ್ಕೆ ಭಾರತೀಯ ಸಂಪ್ರದಾಯದಲ್ಲಿ ಅತ್ಯಂತ ಶ್ರೇಷ್ಠ, ಪೂಜನೀಯ ಎಂಬ ಭಾವನಾತ್ಮಕ ಅರ್ಥಸಂಪತ್ತಿದೆ. ‘ವರ್ಣ ಮಾತ್ರಂ ಕಲಿಸಿದಾತಂ ಗುರು’ ಒಂದು ಅಕ್ಷರವನ್ನು (ಬರಹವನ್ನು) ಕಲಿಸಿದವನೂ ಗುರು; ನೀತಿ ಬೋಧನೆ ಮಾಡುವವನೂ ಗುರುವೇ, ಪುರಂದರದಾಸರ ‘ಗುರುವಿನ ಗುಲಾಮನಾಗದ ತನಕ, ದೊರೆಯದಣ್ಣ ಮುಕುತಿ’ ಎಂಬುದನ್ನು ಗಮನಿಸಿ, ಗುರುವಿನ ಮಾತಿನಂತೆ ನಡೆದರೆ ದೈವ ಸಾನ್ನಿಧ್ಯ ದೊರಕುತ್ತದೆ. ಭಗವಂತನ ಸಾಕ್ಷಾತ್ಕಾರಕ್ಕೆ ಅವನು ಮಾರ್ಗದರ್ಶಿಯೆಂಬುದನ್ನು ಸೂಚಿಸುತ್ತದೆ.
‘ಗುರು’ದಿನ ಪರಿಕಲ್ಪನೆ ಉದಾತ್ತರಾದುದೂ, ಭಾವನಾತ್ಮಕವಾದುದು. ‘ಓಂ ಅಸತೋಮಾ ಸದ್ಗಮಯ! ತಮಸೋ ಮಾ ಜ್ಯೋತಿರ್ಗಮಯ. ಮೃತ್ಯೋರ್ಮಾ ಅಮೃತಂಗಮಯ! ಓಂ ಶಾಂತಿಃ ಶಾಂತಿಃ ಶಾಂತಿಃ’ ಇರುವುದರಿಂದ ಇಲ್ಲದರ ಕಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ ಮೃತ್ಯುವಿನಿಂದ ಅಮರತ್ವಕ್ಕೆ ಕೊಂಡೊಯ್ಯುವವನು ಭಗವಂತ. ಅವನೇ ಗುರು. ಪ್ರಾಚೀನ ಕಾಲದಲ್ಲಿ ಮಾತ್ರವಲ್ಲ ಆಧುನಿಕ ಕಾಲದಲ್ಲೂ ಗುರುವು ಬೋಧನೆಯ ಮೂಲಕ ಅಜ್ಞಾನದಿಂದ ಜ್ಞಾನದ ಕಡೆ ಕೊಂಡೊಯ್ಯುತ್ತಾನೆ. ‘ಗುರುಬ್ರ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರ! ಗುರುಸ್ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ!’ ಅಜ್ಞಾನ ತಿಮಿರಾಂಧಸ್ಯ ಜ್ಞಾನಂಜನ ಶಲಾಕಯಾ! ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ|| ಗುರುದೇವ ಪರೋ ಬಂಧುಃ ಗುರುರ್ಮಾತಾ ಗುರುರ್ಪಿತಾ| ಗುರುದೇವ ಪರಂ ನಾಸ್ತಿ ತಸ್ಮೈ ಶ್ರೀ ಗುರವೇ ನಮಃ|| ಗುರುವು ಎಲ್ಲ ದೈವಗಳಿಗೂ ಸಮಾನ ಮಾತ್ರವಲ್ಲ. ಅವನೇ ಪರಬ್ರಹ್ಮ; ಅವನು ಅಜ್ಞಾನವೆಂಬ ಅಂಧಕಾರವನ್ನು ಹೋಗಲಾಡಿಸಿ ಜ್ಞಾನವೆಂಬ ಬೆಳಕಿನಿಂದ ಒಳಗಣ್ಣನ್ನು ತೆರೆಯಿಸುತ್ತಾನೆ; ಅವನೇ ಬಂಧು, ಅವನೇ ಮಾತೆ, ಅವನೇ ಪಿತ, ಅವನನ್ನು ಹೋಲುವ ಇನ್ನೊಬ್ಬನಿಲ್ಲ.
ಉತ್ತಮ ಬೋಧಕರೂ, ತತ್ವಜ್ಞಾನಿಯೂ, ರಾಜನೀತಿತಜ್ಞರೂ ಆಗಿದ್ದ ಅಪೂರ್ವ ಗಂಭೀರ ವ್ಯಕ್ತಿತ್ವದ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ರವರು 1888 ರ ಸೆಪ್ಟೆಂಬರ್ 5ರಂದು ತಮಿಳುನಾಡಿನ ಚಿತ್ತೂರು ಜಿಲ್ಲೆಯ ತಿರುತ್ತಣಿಯಲ್ಲಿ ಜನಿಸಿದರು. ತಂದೆ ತಹಸೀಲ್ದಾರರಾಗಿದ್ದ ವೀರಸಾಮಯ್ಯನವರು. ಮಧ್ಯಮ ವರ್ಗದ ಧಾರ್ಮಿಕ ಮನೋಭಾವದ, ತೆಲುಗು ಹಿಂದೂ ಕುಟುಂಬ ಅವರು. ಸ್ವತಂತ್ರ ಭಾರತದ ದ್ವಿತೀಯ ರಾಷ್ಟ್ರಪತಿ, ಅತ್ಯಂತ ಪ್ರತಿಭಾನ್ವಿತ ತತ್ವಶಾಸ್ತ್ರಜ್ಞ, ಅಸಾಧಾರಣ ವಾಗ್ಮಿಯಾಗಿ ಭಾರತೀಯ ಸಂಸ್ಕೃತಿಯ ಪಡಿಯಚ್ಚಾಗಿ ಬಾಳಿ ಬದುಕಿ ವಿಭೂತಿ ಪುರುಷರಾಗಿ ವಿಜೃಂಭಿಸಿದ ಭಾರತರತ್ನ ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನವನ್ನು ಶಿಕ್ಷಕರ ದಿನ ಎಂದು ಆಚರಿಸಲಾಗುತ್ತದೆ.
ಮಾತಾಪಿತೃಗಳ ದೇಹದಿಂದ ಮನುಷ್ಯ ಜನಿಸಿದರೆ ಗುರುವಿನ ‘ಕರ’ ಅರ್ಥಾತ್ ಬೋಧನೆಯಿಂದ ಶಿಷ್ಯನು ಜನಿಸುತ್ತಾನೆ. ಗುರುವಿನ ಬೋಧನೆಯಿಂದ ವ್ಯಕ್ತಿ ಎರಡನೆಯ ಜನ್ಮ ಪಡೆಯುತ್ತಾನೆ. ಬಂಧನ ಅಥವಾ ಅಜ್ಞಾನದಿಂದ ಹೊರಬರುತ್ತಾನೆ. ಗುರುವು ಶಿಷ್ಯನಿಗೆ ಎರಡನೆಯ ತಾಯಿ. ಹಿಂದೆ ಕಾಡಿನ ಮಧ್ಯದ ಗುರುಕುಲಗಳ ಆಶ್ರಮದಲ್ಲಿದ್ದು ಜ್ಞಾನ ಸಂಪಾದನೆ ಮಾಡಿ, ಶಿಷ್ಯನು ಅಲ್ಲಿಂದ ಹೊರಟು ತನ್ನ ಹುಟ್ಟೂರಿಗೆ ಬರುತ್ತಿದ್ದನು.
ಗುರುವು ಶಿಷ್ಯನಿಗೆ ಬಡಿದು, ಬೈದು, ಜಂಕಿಸಿ(ಬಿರುಸು ಮಾತು ಬಳಸಿ) ಬುದ್ಧಿಯನ್ನು ಕಲಿಸಿದವನು ಒಳಗಿನ ಜ್ಞಾನದ ದೃಷ್ಠಿಯಿಂದ ಶಿಷ್ಯನು ತನಗೆ ಸಮಾನನಾದಾಗ ಅಥವಾ ತನ್ನನ್ನು ಮೀರಿಸಿದಾಗ ಗುರುವೇ ಶಿಷ್ಯನಿಗೆ ನಮಸ್ಕರಿಸುತ್ತಾನೆ. ಅವನು ನಮಸ್ಕರಿಸುವುದು ಶಿಷ್ಯನ ದೇಹಕ್ಕೆ ಅಲ್ಲ, ಶಿಷ್ಯನ ಒಳಗಿನ ಜ್ಞಾನಕ್ಕೆ. ಪ್ರತಿ ಗುರುವೂ ಶಿಷ್ಯನು ಜ್ಞಾನದಲ್ಲಿ ತನಗೆ ಸಮಾನವಾಗಬೇಕು, ತನ್ನನ್ನು ಮೀರಿಸಬೇಕು ಎಂದು ಬಯಸುತ್ತಾನೆ. ‘ಶಿಷ್ಯಾದಿಚ್ಛೇತ್ ಪರಾಜಯಂ’ ಗುರುವು ಶಿಷ್ಯ ತನ್ನನ್ನು ಸೋಲಿಸಬೇಕು ಎಂದು ಬಯಸುತ್ತಾನೆ.
ನಾವು ಜೀವನದಲ್ಲಿ ಒಂದಲ್ಲಾ ಒಂದು ವಿಷಯವನ್ನು ಕಲಿಯುತ್ತಲೇ ಇದ್ದು ವಿದ್ಯಾರ್ಥಿಯಾಗಿಯೇ ಇರುತ್ತೇವೆ. ನಾವು ಗುರುಗಳಿಂದ ಕಾಲು ಭಾಗದಷ್ಟು ಮಾತ್ರ ವಿದ್ಯೆಯನ್ನು ಕಲಿಯುತ್ತೇವೆ. ನಮ್ಮ ಸ್ವಂತ ಅಧ್ಯಯನದಿಂದ ಕಾಲು ಭಾಗದಷ್ಟು ವಿದ್ಯೆಯನ್ನು ಕಲಿಯುತ್ತೇವೆ. ಕಾಲು ಭಾಗವಿದ್ಯೆಯನ್ನು ಸ್ವಂತ ಅನುಭವದಿಂದ ಕಲಿಯುತ್ತೇವೆ.
ಉಳಿದ ಕಾಲು ಭಾಗ ವಿದ್ಯೆಯನ್ನು ಇತರರ ಅನುಭವವನ್ನು (ಇತರರಿಂದ) ಅರಿತುಕೊಳ್ಳುವುದರ ಮೂಲಕ ಜೀವನ ಪರ್ಯಂತ ಕಲಿಯುತ್ತಲೇ ಇರುತ್ತೇವೆ. ಹಾಗಾಗಿ ನಾವು ನಮ್ಮ ಜೀವನದುದ್ದಕ್ಕೂ ಕಲಿಯುತ್ತಲೇ ಇರುತ್ತೇವೆ. ಆದ್ದರಿಂದ ನಾವು ಬೇರೆಯವರರೊಡನೆ, ಗುರುಹಿರಿಯರೊಡನೆ ಹೇಗೆ ವರ್ತಿಸಬೇಕು ಮತ್ತು ಸಾರ್ಥಕ ಜೀವನವನ್ನು ಧೈರ್ಯವಾಗಿ ಹೇಗೆ ಎದುರಿಸಿ ಒಳ್ಳೆಯ ಜ್ಞಾನವಂತರಾಗಬೇಕು ಎಂಬುದನ್ನು ಶಿಕ್ಷಕರು ಬೋಧನೆ ಮಾಡುತ್ತಾರೆ.
ಉಪನ್ಯಾಸಕರು
ಉ – ಉಜ್ವಲ ಭವಿಷ್ಯ ರೂಪಕ, ಪ – ಪಕ್ಷಪಾತ ರಹಿತ, ನ್ಯಾಸ – ಸನ್ಮಾರ್ಗದತ್ತ ಸಾಗಿಸುವ, ಕ – ಕಲ್ಮಷ ದೂರವಿರಿಸುವ
ಮಾನವನ ಜೀವನದಲ್ಲಿ ಗುರುವಿನ ಸ್ಥಾನ ಮತ್ತು ಪ್ರಭಾವ ಬಹಳ ಮಹತ್ವವಾದದ್ದು, ವಿದ್ಯಾರ್ಥಿಗಳ ವ್ಯಕ್ತಿತ್ವದ ವಿಕಾಸ, ಸುಪ್ತ ಪ್ರತಿಭೆ ಹೊರಹೊಮ್ಮುವಿಕೆಯ ಕ್ರಿಯೆ ಸಮರ್ಪಕವಾಗಿ ಆಗುವುದರಲ್ಲಿ ಶಿಕ್ಷಕರ ಪಾತ್ರ ಗಮನಾರ್ಹವಾದದ್ದು.
(ವಿವಿಧ ಮೂಲಗಳಿಂದ)
ಸುಮ ಚಂದ್ರಶೇಖರ್
ನಂ.29/1, 5ನೇಕ್ರಾಸ್,
ಈಜುಕೊಳ ಬಡಾವಣೆ
ಮಲ್ಲೇಶ್ವರಂ ಬೆಂಗಳೂರು-03
ಮೊ.9880060354