ಬೀದರ – ಗಂಡ ಸತ್ತ ಆರು ತಿಂಗಳಲ್ಲೆ ಗಂಡನ ಗೆಳೆಯನೊಂದಿಗೆ ಇಟ್ಟಕೊಂಡಿದ್ದ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಮೈದುನನನ್ನೆ ಕೊಲೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಜಿಲ್ಲೆಯ ಭಾಲ್ಕಿ ತಾಲೂಕಿನ ಚಂದಾಪೂರ್ ಗ್ರಾಮದ ಸುನೀಲ್(26) ಕಳೆದ ವಾರ ಔರಾದ್ ತಾಲೂಕಿನ ಕೌಠಾ ಗ್ರಾಮದ ಬಳಿಯ ಮಾಂಜ್ರಾ ನದಿಯ ಸೇತುವೆ ಕೆಳಗೆ ಮೃತವಾಗಿ ಪತ್ತೆಯಾಗಿದ್ದಾನೆ.
ವಿಷಯ ತಿಳಿದ ಸಂತಪೂರ್ ಪೊಲೀಸರ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಚಂದಾಪೂರ್ ಗ್ರಾಮದ ಅರ್ಚನಾ ಎಂಬಾತಳು ತನ್ನ ಪ್ರಿಯಕರ ಅವಿನಾಶ ಜತೆ ಸೇರಿ ಈ ಕಾಂಡ ಮಾಡಿದ್ದು ಬಹಿರಂಗವಾಗಿದೆ.
ಅರ್ಚನಾಳ ಗಂಡ ಪ್ರೇಮಕುಮಾರ್ ಆರು ತಿಂಗಳ ಹಿಂದೆ ಕೊರೊನಾ ಗೆ ಬಲಿಯಾಗಿದ್ದ. ಗಂಡ ಸತ್ತ ಮೇಲೆ ಅರ್ಚನಾ ತವರು ಮನೆ ಮೈಲೂರು ದಲ್ಲೆ ತನ್ನ ಮಗುವಿನೊಂದಿಗೆ ವಾಸವಾಗಿದ್ದಳು. ಈ ವೇಳೆಯಲ್ಲಿ ಅವಿನಾಶ ನೊಂದಿಗೆ ಸರಸ ಆರಂಭಿಸಿರುವ ವಿಷಯ ಮೈದುನ ಸುನೀಲನಿಗೆ ಗೊತ್ತಾಗಿದೆ. ಅತ್ತಿಗೆಯ ಅನೈತಿಕ ಸಂಬಂಧಕ್ಕೆ ಸುನೀಲ ವಿರೋಧ ವ್ಯಕ್ತಪಡಿಸಿದ್ದನೆನ್ನಲಾಗಿದೆ. ಈ ವಿಷಯ ಬಯಲಾಗಬಾರದು ಎಂಬ ಉದ್ದೇಶಕ್ಕೆ ಅರ್ಚನಾ ಹಾಗೂ ಅವಿನಾಶ ಸೇರಿಕೊಂಡು ಸುನೀಲನನ್ನು ಕೊಲೆ ಮಾಡಿ ಮಾಂಜ್ರಾ ನದಿಯ ಸೇತುವೆ ಕೆಳಗೆ ಬಿಸಾಡಿದ್ದರು ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಸಿನಿಮಾ ಮಾದರಿಯಲ್ಲಿ ಕೊಲೆ ಮಾಡಲಾಗಿದ್ದು ದೂರು ದಾಖಲಾದ ಕೇವಲ ನಾಲ್ಕೇ ದಿನಗಳಲ್ಲಿ ಪೊಲೀಸರು ಪ್ರಕರಣದ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಿದ್ದಾರೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ