ರಾಯಬಾಗ: ರಾಯಬಾಗ ತಾಲೂಕಿನ ನಿಡಗುಂದಿಯ ಡಾ. ಅಂಬೇಡ್ಕರ್ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಾಹಿತಿ ವೀರಣ್ಣ ಮಡಿವಾಳರ ಅವರು ತಮ್ಮ ಶಾಲೆಯ ಮಕ್ಕಳ ಕಲಿಕೆಯ ಅಗತ್ಯಕ್ಕಾಗಿ ನಾಲ್ಕು ಕೊಠಡಿಗಳ ಮಂಜೂರಾತಿಗಾಗಿ ಆಗ್ರಹಿಸಿ ಇತ್ತೀಚೆಗೆ ಬಿಇಓ ವರಾಂಡದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡಿದ್ದ ಪರಿಣಾಮ ರಾಯಬಾಗ ಬಿಇಓ ಬಸವರಾಜಪ್ಪ ಆರ್ ಅವರು ಶಿಕ್ಷಕ ವೀರಣ್ಣ ಮಡಿವಾಳರ ಅವರನ್ನು ಅಮಾನತುಗೊಳಿಸಿದ್ದನ್ನು ಹಿಂಪಡೆದುಕೊಳ್ಳುವಂತೆ ಆಮ್ ಆದ್ಮಿ ಪಕ್ಷದ ಜಿಲ್ಲಾ ಪದಾಧಿಕಾರಿಗಳ ನಿಯೋಗ ಕಳೆದ ಶುಕ್ರವಾರ ದಿ. 30 ರಂದು ಬೆಳಗಾವಿ ಡಿ ಸಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಎಂ ಹೊನಕೇರಿ ಅವರಿಗೆ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳು ಕಾರ್ಯಬಾಹುಳ್ಯದಿಂದ ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಷನ್ ಅವರು ಬೆಂಗಳೂರಿಗೆ ಹೋಗಿದ್ದರಿಂದ ಕಚೇರಿಗೆ ಅವರು ಬಂದ ನಂತರ ತಮ್ಮ ಮನವಿಯನ್ನು ಅವರ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು.
ನಿಷ್ಠಾವಂತ ಆದರ್ಶ ಶಿಕ್ಷಕರು ಕವಿ ಸಾಹಿತಿಗಳಾದ ವೀರಣ್ಣ ಮಡಿವಾಳರ ಅವರು ಕಳೆದ 9 ವರುಷಗಳಿಂದ ಗ್ರಾಮೀಣ ಭಾಗದ ಆ ಶಾಲೆಗೆ ತನು ಮನ ಧನ ಸಮರ್ಪಿಸಿ ಶಾಲೆಯ ಉನ್ನತಿಗೆ ಶ್ರಮಿಸುತ್ತಿದ್ದಾರೆ. ಅವರ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಅನಿವಾರ್ಯವಾಗಿ ಸತ್ಯಾಗ್ರಹ ದಾರಿ ತುಳಿದದ್ದು ಮಹಾ ಪ್ರಮಾದವಾಯಿತೇ? ಮಾದರಿ ಶಾಲೆ ಮಾಡಲು ಹಗಲಿರುಳು ಪರಿಶ್ರಮಿಸಿದ ಅವರ ಶೈಕ್ಷಣಿಕ ಕಾಳಜಿಯನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡಬೇಕಾದ ಬಿಇಓ ಅವರು ಅಮಾನತು ಮಾಡಿ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಆದುದರಿಂದ ತಾವು ಈ ವಿಷಯವನ್ನು ಕೂಲಂಕುಷವಾಗಿ ಪರಿಶೀಲಿಸಿ ಅಮಾನತಿಗೆ ಒಳಗಾದ ಶಿಕ್ಷಕ ವೀರಣ್ಣ ಮಡಿವಾಳರ ಅವರನ್ನು ಪುನಃ ಸೇವೆಗೆ ಮರಳುವಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಎ ಎ ಪಿ ಪದಾಧಿಕಾರಿಗಳ ನಿಯೋಗ ಮನವಿ ಮೂಲಕ ಕೋರಿದೆ.
ಎ ಎ ಪಿ ಕಾರ್ಯಾಧ್ಯಕ್ಷ ಸೀತಾರಾಮ ಗುಂಡಪ್ಪ, ಉತ್ತರ ಕರ್ನಾಟಕ ಭಾಗದ ಪಕ್ಷದ ಸಂಘಟನಾ ಕಾರ್ಯದರ್ಶಿ ಅರ್ಜುನ ಹಲಗಿಗೌಡರ, ರಾಜ್ಯ ಮಾಧ್ಯಮ ಉಸ್ತುವಾರಿ ಜಗದೀಶ ಸದಂ, ರಾಜ್ಯ ಕಾರ್ಯದರ್ಶಿ ಶಂಕರ ಹೆಗಡೆ, ಜಿಲ್ಲಾಧ್ಯಕ್ಷ ವಿಜಯಗೌಡ ಪಾಟೀಲ, ಜಿಲ್ಲಾ ಪ್ರಧಾನ ಸಂಘಟನಾ ಕಾರ್ಯದರ್ಶಿ ಪ್ರೊ ಶ್ರೀಕಾಂತಗೌಡ ಪಾಟೀಲ, ಹಾಗೂ ಪ್ರೇಮಕುಮಾರ ಚೌಗಲಾ ಮತ್ತಿತರರು ಉಪಸ್ಥಿತರಿದ್ದರು