ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ
ಮೈಸೂರು – ಕರ್ನಾಟಕ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ನಡೆದಿರುವ ಫನ್ ವರ್ಲ್ಡ್ ಪ್ರದರ್ಶನದ ಆವರಣದಲ್ಲಿನ ಸ್ವಾಗತ ಫಲಕ ಹಾಗೂ ಅಂಗಡಿಗಳ ಮಳಿಗೆಗಳ ನಾಮಫಲಕ ಹಾಗೂ ಪ್ರವೇಶದ ಚೀಟಿಗಳ ಮೇಲೆ ಕನ್ನಡ ಭಾಷೆಯ ಕಡೆಗಣನೆ ಕುರಿತಂತೆ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಹಾಗೂ ನಗರಪಾಲಿಕೆ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಅರವಿಂದ ಶರ್ಮ ಅವರ ತಂಡವು ಕಳೆದ ಡಿಸೆಂಬರ್ ೨೮ ರಂದು ಕರ್ನಾಟಕ ವಸ್ತುಪ್ರದರ್ಶನ ಪಾಧಿಕಾರಕ್ಕೆ ಭೇಟಿ ಮಾಡಿ ಕನ್ನಡ ಬಳಕೆಗಾಗಿ ಹಕ್ಕೊತ್ತಾಯ ಪತ್ರ ಸಲ್ಲಿಸಿತ್ತು.
ಇದರ ಪರಿಣಾಮವಾಗಿ ಫನ್ ವರ್ಲ್ಡ್ ನ ಸ್ವಾಗತ ಫಲಕದಲ್ಲಿ ಕನ್ನಡ ಭಾಷೆ ಬಳಸಲಾಗಿದೆ. ಫನ್ ವರ್ಲ್ಡ್ ನ ಬಹುತೇಕ ಅಂಗಡಿಗಳಿಗೆ ಕನ್ನಡ ನಾಮಫಲಕ ಅಳವಡಿಸಲಾಗಿದೆ. ಇನ್ನು ಕೆಲವು ಅಂಗಡಿಗಳ ಮಾಲೀಕರಿಗೆ ನಾಮಫಲಕಗಳಲ್ಲಿ ಅಗ್ರಸ್ಥಾನದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸುವಂತೆ ಸೂಚಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಹಣಾಧಿಕಾರಿಗಳಾದ ಗಿರೀಶ್ ತಿಳಿಸಿದ್ದಾರೆ.
ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಭೇರ್ಯ ರಾಮಕುಮಾರ್ ಹಾಗೂ ಅರವಿಂದ್ ಅವರ ತಂಡವು ಇಂದು ಭೇಟಿ ಮಾಡಿ ಫನ್ ವರ್ಲ್ಡ್ ನ ಪ್ರವೇಶ ಚೀಟಿ, ಮನರಂಜನಾ ಕ್ರೀಡೆಗಳ ಪ್ರವೇಶ ಚೀಟಿ ಹಾಗೂ ವಾಹನ ನಿಲ್ದಾಣ ರಸೀದಿಗಳಲ್ಲೂ ಕೂಡ ಕನ್ನಡ ಭಾಷೆ ಬಳಕೆ ಕುರಿತಂತೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿತು.
ಫನ್ ವರ್ಲ್ಡ್ ನಲ್ಲಿ ಎಲ್ಲ ಹಂತಗಳಲ್ಲಿ ಕನ್ನಡವನ್ನು ಬಳಸಲು ಹಕ್ಕೊತ್ತಾಯ ಮಂಡಿಸಿದ್ದ ವರದಿಯನ್ನು ಟೈಮ್ಸ್ ಆಫ್ ಕರ್ನಾಟಕ ಪ್ರಕಟಿಸಿತ್ತು.