Homeಸುದ್ದಿಗಳುಅಧ್ಯಾತ್ಮ ಚೇತನದ ಜ್ಯೋತಿ ಅಲ್ಲಮಪ್ರಭುದೇವರು: ಗುರುಮಹಾಂತ ಶ್ರೀಗಳು

ಅಧ್ಯಾತ್ಮ ಚೇತನದ ಜ್ಯೋತಿ ಅಲ್ಲಮಪ್ರಭುದೇವರು: ಗುರುಮಹಾಂತ ಶ್ರೀಗಳು

ಹುನಗುಂದ :12 ನೇ ಶತಮಾನ ಭಾರತದ
ಸುವರ್ಣ ಕಾಲ ಕನ್ನಡ ನಾಡಿನ ವಚನ ಸಾಹಿತ್ಯದ ಭವ್ಯ ಪರಂಪರೆಯನ್ನು , ಶೂನ್ಯ ಸಿಂಹಾಸನ ಪೀಠದ ಅಧ್ಯಕ್ಷತೆಯನ್ನು ಹೊಂದಿ ನಾಡಿಗೆ ತಮ್ಮ ಬೆಡಗಿನ ವಚನಗಳ ಮೂಲಕ ಆಧ್ಯಾತ್ಮಿಕ ಚೇತನದ
ಜ್ಯೋತಿಯನ್ನು ಪ್ರಕಾಶನಗೊಳಿಸಿದವರು ಅಲ್ಲಮಪ್ರಭುಗಳಾಗಿದ್ದಾರೆ ಎಂದು ಚಿತ್ತರಗಿ ಸಂಸ್ಥಾನಮಠದ ಮ.ನಿ.ಪ್ರ. ಗುರು ಮಹಾಂತ ಸ್ವಾಮಿಗಳು ಹೇಳಿದರು.

ಹುನಗುಂದ ನಗರದಲ್ಲಿ ಶುಕ್ರವಾರ ನಡೆದ ತಾಲೂಕಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ
ಹಾಗೂ ಶರಣ ದಂಪತಿಗಳಾದ ಶಕುಂತಲಾ, ಸಂಗಣ್ಣ ಗಂಜೀಹಾಳ ಅವರ ಮನೆಯ ಆವರಣದಲ್ಲಿ
ಹಮ್ಮಿಕೊಂಡಿದ್ದ ಬಸವ ಜಯಂತ್ಯುತ್ಸವ, 32 ನೇ ಮನೆ ಮನಗಳಿಗೆ ವಚನ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಲ್ಲಮಪ್ರಭು ತಮ್ಮ ವಚನಗಳಲ್ಲಿ ಹಲವು ಬಾರಿ ಬಯಲು ಶಬ್ದ ಬಳಕೆ ಮಾಡಿ ಆತ್ಮ ದೇಹದಲ್ಲಿದ್ದರೂ ಅದಕ್ಕೆ ಅಂಟಿಕೊಳ್ಳದಿರುವದೇ ಶಿವಯೋಗ. ಬಯಲಿನಲ್ಲಿ ಬಯಲಾಗುವದನ್ನು ಸಾಧಿಸಿದ
ಅಲ್ಲಮಪ್ರಭು ಬಯಲುದೇಹಿಯಾದ ಎಂದರು.

ಸಭೆಯಲ್ಲಿ ಅನುಭಾವ ನುಡಿಗಳನ್ನಾಡಿದ ಬಾದಾಮಿ
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ. ಚಂದ್ರಶೇಖರ
ಹೆಗಡೆ ಅಲ್ಲಮಪ್ರಭುವಿನ ವಚನಗಳಲ್ಲಿ ಬಯಲು ಎಂಬ ವಿಷಯ ಕುರಿತು ಮಾತನಾಡಿ ಕನ್ನಡ ನೆಲದ ಕಲ್ಯಾಣದಲ್ಲಿ
ಅನುಭವ ಮಂಟಪದ ಅಧ್ಯಕ್ಷರಾಗಿ ಅವರ ಆಧ್ಯಾತ್ಮಿಕ ಅರಿವು ಅಗಾಧವಾದದ್ದು ಸಾಮಾನ್ಯ ಜನರಿಗೆ ಸುಲಭವಾಗಿ ನಿಲುಕದ್ದು. ಅಲ್ಲಮಪ್ರಭುವಿನ ಪ್ರಕಾರ ಬಯಲು ಬಚ್ಚ ಬರಿಯ ಬಯಲು ಏನೂ ಇಲ್ಲದ್ದು ಹೌದು
ಎಲ್ಲವೂ ಇರುವದೂ ಹೌದು. ಅದು ಅಗೋಚರ, ನಿರಾಕಾರ, ನಿರ್ವಿಕಾರ ಭೇದವಿಲ್ಲದ ಆ ಬಯಲನ್ನು ಕಂಡು ಬೆರಗಾದೆ ಎಂದು ಹೇಳಿ ಇನ್ನೊಂದೆಡೆ ನೀನು
ಬಯಲಾದೆ ನನ್ನನ್ನು ಬಯಲುಮಾಡು ಎಂದು ತಮ್ಮ
ಬೆಡಗಿನ ವಚನಗಳಲ್ಲಿ ಗುಹೇಶ್ವರನಲ್ಲಿ ಭಿನ್ನವಿಸಿಕೊಂಡಿದ್ದಾರೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಹುನಗುಂದ ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರೊ.ಎಸ್.ಎನ್.ಹಾದಿಮನಿ ವಹಿಸಿ ಮಾತನಾಡಿ, ಬಸವ
ಜಯಂತ್ಯುತ್ಸವವನ್ನು ಬಸವಣ್ಣನವರ ವಚನಗಳನ್ನು
ಅರ್ಥೈಸಿಕೊಂಡು ನಮ್ಮ ನಮ್ಮ ಕಾಯಕದಲ್ಲಿ ಅನುಸರಿಸಿಕೊಂಡಾಗ ಮಾತ್ರ ಬಸವ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಎಂದರು.

ಭಕ್ತಿಸೇವೆ ಮಾಡಿದ ಶರಣ ಹುನಗುಂದದ ಸಂಗಣ್ಣ ಗಂಜೀಹಾಳ ದಂಪತಿಗಳನ್ನು ಪೂಜ್ಯರು ಗೌರವಿಸಿದರು. ಸಭೆಯಲ್ಲಿ ಹುನಗುಂದದ ಹಿರಿಯರಾದ ಶೇಖರಪ್ಪ ಬಾದವಾಡಗಿ, ಹಿರಿಯ ಲೇಖಕಿ ಡಾ. ಲಲಿತಾ ಹೊಸಪ್ಯಾಟಿ, ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರಭು ಮಾಲಗಿತ್ತಿಮಠ ಉಪಸ್ಥಿತರಿದ್ದರು.

ಸಭೆಯ ಪ್ರಾರಂಭದಲ್ಲಿ ಶಿಕ್ಷಕಿ ಗೀತಾ ತಾರಿವಾಳ ಕುಮಾರಿ ಬಸವಸಿರಿ ವಚನ ಪ್ರಾರ್ಥನೆ ಮಾಡಿದರು. ಪ್ರೊ.ಸಿಧ್ದಲಿಂಗಪ್ಪ ಬೀಳಗಿ ಸ್ವಾಗತಿಸಿದರು.

ಇದೇ ಸಂದರ್ಭದಲ್ಲಿ ಬಸವಣ್ಣನವರ ಕುರಿತು ಸ್ವ ರಚಿತ
ಕವನ ರಚಿಸಿದ ಗಿರಿಜಾ ಗಂಜೀಹಾಳ, ವಿಜಯ ದಳವಾಯಿ ಇವರು ಕವನ ವಾಚಿಸಿದರು. ಸಭೆಯ ಕೊನೆಯಲ್ಲಿ ಪರಿಷತ್ತಿನ ಕಾರ್ಯದರ್ಶಿಯಾದ ಸಂಗಮೇಶ ಹೊದ್ಲೂರ ಶರಣು ಸಮರ್ಪಣೆ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group