Homeಲೇಖನಲೇಖನ : ಅರಳಿ ಕಟ್ಟೆ ಒಂದು ಸುತ್ತು ಹಿನ್ನೋಟ

ಲೇಖನ : ಅರಳಿ ಕಟ್ಟೆ ಒಂದು ಸುತ್ತು ಹಿನ್ನೋಟ

ನಾಟಕ ಕ್ಷೇತ್ರದಲ್ಲಿ ನಾನು ವೈಫಲ್ಯ ಕಂಡಂತೆ ಇದೇ ಕ್ಷೇತ್ರದಲ್ಲಿ ಹೆಸರು ಗಳಿಸಿದ್ದು ಖರೆ. ಸಾಹಿತ್ಯ ಕ್ಷೇತ್ರದಲ್ಲಿ ಕಳೆದ ನಾಲ್ಕು ದಶಕಗಳಿಂದ ಕೃಷಿ ಮಾಡುತ್ತಿದ್ದರೂ ಜನ ನನ್ನ ನಾಟಕ ಬಿತ್ತನೆಯನ್ನೇ ಮೆಚ್ಚಿಕೊಂಡಿದ್ದಾರೆ. ನನ್ನ ನಾಟಕ ಕ್ಷೇತ್ರ ಒಂದು ರೀತಿ ಕ್ರಿಕೇಟ್ ಆಟದಂತೆ ಆಗಿದೆ.

ನಾಟಕ ತಂಡ ಕಟ್ಟಿ ಪ್ರದರ್ಶನಕ್ಕೆ ಹೊರಟಾಗ ನನ್ನ ಜೊತೆ ಇದ್ದವರು ವಿದ್ಯಾರ್ಥಿಗಳು. ಹೆಚ್ಚಿನ ಖರ್ಚು ಬಾಬ್ತು ಇಲ್ಲದೆ ಸರಳವಾದ ನಾಟಕ ಪ್ರದರ್ಶಿಸಲು ಹೊರಟು ಅಂತೆಯೇ ನಾಟಕ ಬರೆದಾಡಿಸಿದೆ. ಒಂದು ಗಂಟೆ ನಾಟಕ, ಒಂದೂವರೆ ಗಂಟೆ, ಮುಕ್ಕಾಲು ಗಂಟೆ, 10 ನಿಮಿಷದ ಕಿರು ನಾಟಕ ಕಡೆಗೆ ನಾಲ್ಕು ನಿಮಿಷದ ಸ್ಕಿಟ್ ಈಗೆಲ್ಲಾ ಸ್ಪರ್ಧೆಗಳು ನಡೆದಾಗ ಅದಕ್ಕೆ ತಕ್ಕಂತೆ ನಾಟಕ, ಸ್ಕಿಟ್ ರಚನೆಯಾದವು. ನಾಟಕ ಸ್ಪರ್ಧೆಗೆ ಹೆಚ್ಚು ಗಮನ ಹರಿಸಿ ತಂಡ ಸಿದ್ಧಪಡಿಸುತ್ತಿದ್ದೆ ಮೊದಲಿಗೆ ನಟನಾಗಿ, ಆಮೇಲೆ ನಿರ್ದೇಶಕನಾಗಿ ನಂತರ ನಾಟಕಕಾರನಾಗಿ ಹತ್ತು ಹಲವು ಪ್ರಯೋಗಗಳಲ್ಲಿ ಗಳಿಸಿಕೊಂಡ ಅನುಭವಗಳೇ ಒಂದು ರೋಚಕ ಕಥೆಯೂ ಹೌದು. ಕಾದಂಬರಿಯಾಗಿಯೂ ವಿಸ್ತರಿಸಬಹುದು. ನನ್ನ ಅರಳಿಕಟ್ಟೆ ನಾಟಕ ಸಂಕಲನದಲ್ಲಿ ಬೇತಾಳ ಹೇಳಿದ ಕತೆ ಕೂಡ ಒಂದು ನಾಟಕ.
ಮೂಲ ಕರ್ತೃ:
ಗೊರೂರು ಅನಂತರಾಜು
ಮರು ರೂಪಾಂತರ:
ಜಯಶಂಕರ ಬೆಳಗುಂಬ

ಈ ನಾಟಕವನ್ನು ನಾನು ಬರೆದದ್ದು ಅಂದರೆ ಅಕ್ಷರಶಃ ತಪ್ಪಾಗುತ್ತದೆ. ಈ ನಾಟಕದ ಕರ್ತೃ ಗೊರೂರು ಅನಂತರಾಜುರವರೇ, ಸುಮಾರು ವರ್ಷಗಳ ಹಿಂದೆ ಗೊರೂರು ಅನಂತರಾಜುರವರು ನನಗೆ ಅವರ ಎರಡು ನಾಟಕಗಳಾದ ವ್ಯವಸ್ಥೆ ಮತ್ತು ನಾರಿ ಹೆಜ್ಜೆ ನರಿ ಕಣ್ಣು ಕೊಟ್ಟು ನೀವು ನಿಮ್ಮ ತಂಡಕ್ಕೆ ನಿರ್ದೇಶಿಸಿ ಎಂದಿದ್ದರು. ಅವುಗಳನ್ನು ತೆಗೆದು ಓದಿದಾಗ ನನಗೆ ಈ ನಾಟಕಗಳನ್ನು ಮಾಡುವುದು ಸ್ವಲ್ಪ ಕಷ್ಟವೆನಿಸಿತು. ಯಾಕೆಂದರೆ ನಾನು ನಾಟಕಗಳನ್ನು ತೆಗೆದುಕೊಳ್ಳುವಾಗ ತುಂಬಾ ಎಚ್ಚರಿಕೆಯಿಂದ ದೊಡ್ಡ ದೊಡ್ಡ ಸಾಹಿತಿಗಳ ಹೆಸರಾಂತ ನಾಟಕಗಳನ್ನೇ ನಿರ್ದೇಶಿಸುತ್ತಿದ್ದೆ. ಹಾಗಾಗಿ ಗೊರೂರು ಅನಂತರಾಜುರವರಿಂದ ತಪ್ಪಿಸಿಕೊಳ್ಳಲು ಈ ಎರಡು ನಾಟಕಗಳನ್ನು ಸೇರಿಸಿ ಒಂದು ನಾಟಕ ಮಾಡಿದರೆ ನಿರ್ದೇಶಿಸಬಹುದು ಎಂದು ಕ್ಕೆ ತೊಳೆದುಕೊಂಡಿದ್ದೆ. ಆದರೆ ಇದ್ದಕ್ಕಿದ್ದಂತೆ ಯಾವುದೋ ಕಾರ್ಯಕ್ರಮದಲ್ಲಿ ಗೊರೂರು ಅನಂತರಾಜು ಸಿಕ್ಕಿ ಏನ್ ಮಾಡಿದ್ರಿ ನನ್ನ ನಾಟಕಗಳನ್ನ ಅಂತ ಪ್ರೀತಿಯಿಂದಲೇ ಕೇಳಿದರು. ಅಗ ನನಗೆ ಅವರ ಪ್ರೀತಿ ಕಂಗಳಿಗೆ ಪ್ರತಿ ಉತ್ತರಿಸಿ ಜಾರಿಕೊಳ್ಳಲು ಆಗಲೇ ಇಲ್ಲ. ಮಾಡೋಣ ಬಿಡಿ ಸಾರ್ ಅಂದೆ. ಆಗ ಗೊರೂರು ಅನಂತರಾಜುರವರು ಅವರ ಹೊಸ ಪುಸ್ತಕ ಮೂರು ಪ್ರಯೋಗಶೀಲ ನಾಟಕಗಳನ್ನು ಕೊಟ್ಟು ನೀವ್ ಹೇಳಿದಂಗೆ ಒಂದು ನಾಟಕ ಬರೆದು ಮಾಡ್ಸಿ ಅಂದ್ರು.

ಅವರ ಪ್ರೀತಿಗೆ ಕಟ್ಟು ಬಿದ್ದು ನಾನು ಒಪ್ಪಿಕೊಂಡು ಅವರ ನಾಟಕಗಳ ಸಂಭಾಷಣೆಗಳನ್ನೇ ಯಥಾವತ್ತಾಗಿ ಇಳಿಸಿ ಅಲ್ಲಿಂದ ತೆಗೆದು ಇಲ್ಲಿಗೆ ಇಲ್ಲಿಂದ ತೆಗೆದು ಅಲ್ಲಿಗೆ ಜೋಡಿಸಿದ್ದೇನೆ. ಜೋಡಿಸುವಿಕೆಗೆ ತೊಂದರೆ ಬಾರದಿರಲಿ ಅಂತ ಗೊರೂರು ಅನಂತರಾಜುರವರ
ಒಪ್ಪಿಗೆ ಪಡೆದು ನನ್ನ ಸ್ವಂತ ಮಾತುಗಳನ್ನು ಸೇರಿಸಿದ್ದೇನೆ.
ವಿಕ್ರಮಾದಿತ್ಯ ಮತ್ತು ಬೇತಾಳನ ಕಲ್ಪನೆ ನನ್ನದೇ. ನಿರೂಪಣೆ ಭಿನ್ನವಾಗಿರಲೆಂದು ತಂದಿದ್ದೇನೆ. ವಯಸ್ಸಿನಲ್ಲಿ ವಿದ್ವತ್ತಿನಲ್ಲಿ ನನಗಿಂತ ಹಿರಿಯವರಾದರು ನನ್ನಂತ ಸಣ್ಣವನಿಗೆ ಅವರು ಕೊಡುವ ಪ್ರೋತ್ಸಾಹ ಎಲ್ಲದಕ್ಕಿಂತ ಹೆಚ್ಚು ಎಂದು ಭಾವಿಸಿ ಈ ಕೃತಿಯನ್ನು ಅವರಿಗೆ ಅರ್ಪಿಸುತ್ತಿದ್ದೇನೆ.
ಜಯಶಂಕರ ಬೆಳಗುಂಬ
ರಂಗ ನಿರ್ದೇಶಕ,
ಕಲಾಸಿರಿ ನಾಟಕ ಶಾಲೆ. ಹಾಸನ
(ಅರಳಿಕಟ್ಟೆ ಕೃತಿಯಿಂದ)

ಜಯಶಂಕರ ಬೆಳಗುಂಬ ಓರ್ವ ಸೃಜನಶೀಲ ನಟ. ನಿರ್ದೇಶಕ. ನಾಟಕ ಸ್ಪರ್ಧೆಗಳಲ್ಲಿ ನನಗೆ ಪ್ರಬಲ ಎದುರಾಳಿ. ನಾನು ಈ ಹಿಂದೆ ಕುಡುಕ ಕರಿಯಪ್ಪನ ಕಥೆಗಳು ಎಂಬ ಹೆಸರಿನಲ್ಲಿ ಅಂದಿನ ದಿನಮಾನಗಳಲ್ಲಿ ಪತ್ರಿಕೆಗಳಲ್ಲಿ ಬರುತ್ತಿದ್ದ ಸಿನಿಮಾ ಸುದ್ಧಿ, ರಾಜಕೀಯ ಇತ್ಯಾದಿ ವಿಷಯಗಳನ್ನು ಆಧರಿಸಿ ವಿಡಂಬನಾ ಬರಹವನ್ನು ಮೈಸೂರಿನಿಂದ ಪ್ರಕಟವಾಗುತ್ತಿದ್ದ
ಮಹಾನಂದಿ ದಿನಪತ್ರಿಕೆಯಲ್ಲಿ ಪ್ರತಿ ಭಾನುವಾರದ ಸಂಚಿಕೆಯಲ್ಲಿ ಇಪ್ಪತ್ತು ವಾರ ಬರೆದೆ. ನಾಲ್ಕು ಪುಟ ಬರೆದರೂ ಜನ ಖುಷಿಯಿಂದ ಓದಿದರು. ಬಾಲ್ಯದಲ್ಲಿ ಓದಿದ ಚಂದಮಾಮದಲ್ಲಿ ಬರುತ್ತಿದ್ದ ವಿಕ್ರಮಾದಿತ್ಯ, ಬೇತಾಳ ಕಥೆಗಳ ಪ್ರೇರಣೆಯಲ್ಲಿ ಯಾವುದೋ ಒಂದು ಸಣ್ಣ ಜೋಕಿನ ಸಸ್ಪೆನ್ಸ್ ಎಳೆಯನ್ನು ಹಿಡಿದು ಅಂದಿನ ರಾಜಕೀಯ ವಿದ್ಯಮಾನಗಳನ್ನು ಸಿನಿಮಾ ಹಾಡುಗಳನ್ನು ಮೇಳೈಸಿ ರಾಜನ್ ಎಂಬ ನನ್ನ ಪಾತ್ರವನ್ನು ವಿಕ್ರಮಾದಿತ್ಯನಾಗಿಯೂ, ಬಾರ್ ನಲ್ಲಿ ಕುಳಿತ ಕುಡುಕ ಕರಿಯಪ್ಪನನ್ನು ಮನೆಗೆ ಹೊತ್ತುಕೊಂಡು ಹೋಗುತ್ತಾ ಹೇಳುವ ಕಥೆಯೂ, ಬಾರ್ ನಲ್ಲಿ ಕುಳಿತು ನಡೆಸುವ ಸಂಭಾಷಣೆಯೂ ನಾಲ್ಕಾರು ಪುಟಗಳಷ್ಟು ಧೀರ್ಘ ಲಂಬಿಸಿದರೂ ಪತ್ರಿಕೆ ಪೂರ್ಣ ಪ್ರಮಾಣದಲ್ಲಿ ಪ್ರಕಟಿಸುತ್ತಿತ್ತು ಮತ್ತು ಓದುಗರೂ ಕೂಡ ಮೆಚ್ಚಿಕೊಂಡಿದ್ದರು. ಇದಕ್ಕೂ ಮೊದಲು ನಾನು ಮತ್ತು ಹಾಸ್ಯ ಸಾಹಿತಿ ಕೋ.ಲ. ರಂಗನಾಥರಾವ್ ಶಾಲಾ ಕಾಲೇಜು, ರೋಟರಿ ಲಯನ್ಸ್, ಸಂಸ್ಥೆಗಳಲ್ಲಿ ಒಂದು ಗಂಟೆ ಕಾಲಾವಧಿಯ ಹಾಸ್ಯ ಕಾರ್ಯಕ್ರಮ ನಡೆಸಿಕೊಡುತ್ತಿದ್ದವು. ಅವರು ಚಿಕ್ಕ ಚಿಕ್ಕ ನಗೆ ಹನಿಗಳನ್ನು ತಮ್ಮ ಸ್ಥೂಲ ಶರೀರವನ್ನೇ ಉದಾಹರಿಸಿ ಅರ್ಧ ಗಂಟೆ ಕಾರ್ಯಕ್ರಮ ನೀಡಿದರೆ ಉಳಿದರ್ಧ ಗಂಟೆಯಲ್ಲಿ ನಾನು ಜೋಕ್ಸ್ ಗಳನ್ನು ಅಭಿನಯಿಸಿ ವಿದ್ಯಾರ್ಥಿಗಳನ್ನು ನಗಿಸಲು ಪ್ರಯತ್ನಿಸಿ ಯಶಸ್ವಿಯಾಗಿದ್ದೆನು. ಆ ಒಂದು ಜೋಕ್ಸ್ ನ್ನೇ ಬೇಸ್ ಆಗಿ ಇರಿಸಿಕೊಂಡು ಬರೆದ ಹಾಸ್ಯ ಲೇಖನಗಳು ರಾಜ್ಯ ಮಟ್ಟದ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಇಂದಿಗೂ ಪ್ರಕಟಗೊಳ್ಳುತ್ತಿವೆ. ಟ್ಟೆಂಟಿ ಟ್ಟೆಂಟಿ ಮ್ಯಾಚ್ ತರಹ ಚಿಕ್ಕ ಚಿಕ್ಕ ಜೋಕ್ಸ್ ಗಳನ್ನು ಸಂಭಾಷಣೆಯಾಗಿ ನನ್ನದೇ ಶೈಲಿಯಲ್ಲಿ ಕ್ರೂಡೀಕರಿಸಿ ಗಂಡ ಹೆಂಡತಿ, ಹುಡುಗ ಹುಡುಗಿ, ರೋಗಿ ವೈದ್ಯ, ಮೇಷ್ಟು ವಿದ್ಯಾರ್ಥಿ, ಕಳ್ಳ ಪೋಲೀಸ್… ಹೀಗೆ ಪಾತ್ರಗಳನ್ನಾಗಿ ಐದಾರು ನಿಮಿಷಗಳ ಸ್ಕಿಟ್ ಗಳನ್ನು ರೂಪಿಸಿ ಪತ್ರಿಕೆಗಳಲ್ಲಿ ಪ್ರಕಟವಾಗಿ ಓದುಗರನ್ನು ರಂಜಿಸಿದವು. ಇಂತಹ ಇಪ್ಪತ್ತು ಹಾಸ್ಯ ಕಿರು ಪ್ರಹಸನಗಳ ಕೃತಿಯೂ ಪ್ರಕಟವಾಗಿದೆ. ಇದೇ ಪ್ರಕಾರದಲ್ಲಿ ಆನಂತರದಲ್ಲಿ ಬರೆದ ಕೆಲವು ಸ್ಕಿಟ್ ಗಳು ಇಲ್ಲಿವೆ. ಗೊರೂರು ಹೇಮಾವತಿ ಸ್ಕಿಟ್ ಹಾಸನ ಎಫ್ ಎಂ.ರೇಡಿಯೋದಲ್ಲಿ ಪ್ರಸಾರವಾಗಿದೆ. ಕೆರೆಯೊಂದಿಗಿನ ಸಂಭಾಷಣೆ ಹೊಸತನದಿಂದ ಕೂಡಿ ಪರಿಸರ ಪ್ರೇಮಿಗಳು ಲೈಕ್ ಮಾಡಿದ್ದಾರೆ.

ಇನ್ನೂ ನಾಟಕ ವಿಭಾಗದಲ್ಲಿನ ವ್ಯವಸ್ಥೆ ನಾಟಕ ಇಂದಿಗೂ ಪ್ರಯೋಗ ಕಾಣುತ್ತಾ ಕಾಲೇಜು ವಿದ್ಯಾರ್ಥಿಗಳ ತಂಡಕ್ಕೆ ಇಂದಿಗೂ ಬಹುಮಾನ ತಂದುಕೊಡುತ್ತಿದ್ದು ಎಲ್ಲಾ ಕಾಲಕ್ಕೂ ಸಲ್ಲುವ ನಾಟಕ. ಈ ನಾಟಕವನ್ನು ಎಂ.ಎಸ್. ವೆಂಕಟರಾಮಯ್ಯರವರು ಬ್ಲಡಿ ಸಿಸ್ಟಂ ಎ೦ದು ಆಂಗ್ಲಭಾಷೆಗೆ ಅನುವಾದಿಸಿದ್ದು, ಹಲವಾರು ಕಾಲೇಜು ತಂಡಗಳಿಗೆ ಬಹುಮಾನ ತಂದುಕೊಟ್ಟಿದೆ. ವ್ಯವಸ್ಥೆ ನಾಟಕ 1991ರಲ್ಲಿ ಮತ್ತು ವೀರಪ್ಪನ್ ಭೂತ 1992 ರಲ್ಲಿ ಪ್ರಕಟವಾದವು. ಮೊದಲು ಕುಂಟುನಾಯಿ ಎ೦ದು ನಾಟಕ ಬರೆದು ಕೆಲವು ಸ್ಫರ್ಧೆಗಳಲ್ಲಿ ಪ್ರಯೋಗಿಸಿದೆ. ಮತ್ತೇ ಇದನ್ನೇ ಆಧರಿಸಿ ತೋಳ ಬಂತು ತೋಳ, ವ್ಯವಸ್ಥೆ ಎಂಬ ಎರಡು ನಾಟಕಗಳನ್ನು ಬರೆದಾಡಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಾಟಕ ಸ್ಪರ್ಧೆಗಳಿಗೆ ನಾನು ಕಾಲೇಜು ವಿದ್ಯಾರ್ಥಿ ತಂಡಗಳಿಂದ ಒಂದೂವರೆ ಗಂಟೆಗೆ ಸಿದ್ಧಪಡಿಸಿದ ನಾರಿ ಹೆಜ್ಜೆ ಮತ್ತು ನರಿ ಕಣ್ಣು ಮತ್ತು ವ್ಯವಸ್ಥೆ ನಾಟಕಗಳನ್ನು ಕಲಿಸಿ ರಂಗದ ಮೇಲೆ ತರುವಾಗ ನನಗೆ ಜಿಲ್ಲೆಯಲ್ಲಿ ನೇರ ಸ್ಪರ್ಧೆ ಒಡ್ದಿದವರು ಜೈಶಂಕರ್ ಬೆಳಗುಂಬ. ನಂತರದಲ್ಲಿ ಅವರೇ ಈ ಎರಡು ನಾಟಕಗಳನ್ನು ಕ್ರೂಡೀಕರಿಸಿ ತಮ್ಮದೇ ಶೈಲಿಯಲ್ಲಿ ರೂಪಾಂತರಿಸಿದ್ದು ಅದುನೇ ಬೇತಾಳ ಹೇಳಿದ ಕಥೆ.

ಅರಳಿಕಟ್ಟೆ ನಾಟಕ ತೋಳ ಬಂತು ತೋಳ ನಾಟಕವನ್ನು ಆಧರಿಸಿ ಹೊಸ ಪರಿಕಲ್ಪನೆಯಲ್ಲಿ ರೂಪು ತೆಳೆದಿದೆ. ಇನ್ನೂ ವ್ಯವಸ್ಥೆ ಮತ್ತು ವೀರಪ್ಪನ್ ಭೂತ ನಾಟಕಗಳನ್ನು ಸ್ತ್ರೀ ಪಾತ್ರವಿಲ್ಲದೇ ಪ್ರದರ್ಶಿಸಬಹುದಾಗಿತ್ತು. ಇದು ನನಗೆ ಅನುಕೂಲವಾಗಿತ್ತು. ಸಖೇದಾಶ್ಚರ್ಯ ನಂತರದ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿ ವಿದ್ಯಾರ್ಧಿನಿಯರು ಮತ್ತು ಮಹಿಳಾ ತಂಡಗಳೇ ಪೂರ್ತಿ ಈ ನಾಟಕಗಳನ್ನು ಕಲಿತು ಪ್ರದರ್ಶಿಸಿದ್ದಾರೆ. ಗಂಭೀರ ನಾಟಕವಾಗಿ ವ್ಯವಸ್ಥೆ ರಚನೆಗೊಂಡು ಪ್ರಯೋಗಿಸಲ್ಪಟ್ಟ ಯುವಜನ ಮೇಳಗಳಲ್ಲಿ ಇತರೆ ಸ್ಪರ್ಧೆಗಳಲ್ಲಿ ಮನರಂಜನಾ ದೃಷ್ಟಿಯಲ್ಲಿ 45 ನಿಮಿಷ ಒಂದು ಗಂಟ ಪ್ರದರ್ಶನಕ್ಕೆ ತಕ್ಕನಾಗಿದೆ. ಬೀದಿ ನಾಟಕವಾಗಿಯೂ ಅಭಿನಯಿಸಬಹುರಾಗಿದೆ. ಹಾಗೂ ನಾವು ಒಮ್ಮೆ ಕೊಣನೂರಿನಲ್ಲಿ ಅಂದಿನ ಅರಕಲಗೂಡು ತಾ. ಶಾಸಕರು ಎ.ಟಿ.ರಾಮಸ್ವಾಮಿಯವರ ಹಾಜರಿಯಲ್ಲಿ ಪುರಸಭೆ ಮುಂದೆ ಹಗಲು ಪ್ರದರ್ಶಿಸಿದ್ದೇವೆ.

ಇಲ್ಲಿನ ಒಂಬತ್ತು ಸ್ಕಿಟ್ ಗಳನ್ನು ಮತ್ತು ನಾಲ್ಕು ನಾಟಕಗಳನ್ನು ಅಚ್ಚುಕಟ್ಟಾಗಿ ಓದಿ ಅಷ್ಟೇ. ಅಚ್ಚುಕಟ್ಟಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡುವಂತೆ ನೋಟ್ ಮಾಡಿ ಮುನ್ನುಡಿ ಬರೆದಿದ್ದಾರೆ ಪ್ರೊ, ಹೊನ್ನಶೆಟ್ಟಿಹಳ್ಳಿ ಗಿರಿರಾಜ್. ಇವರ ವಿಸ್ತಾರವಾದ ಬರವಣಿಗೆ ನನಗೆ ಇದಿಷ್ಟು ಇಲ್ಲಿನ ನಾಟಕಗಳು ರೂಪು ತೆಳೆದ ಕೆಲ ಅಂಶಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಪ್ರೇರಣೆಯಾಗಿದೆ. ಇಲ್ಲಿನ ಸ್ಕಿಟ್ ಗಳು ಶಾಲಾ ಕಾಲೇಜುಗಳಲ್ಲಿ ಐದಾರು ನಿಮಿಷಗಳ . ಪ್ರದರ್ಶನಗಳಿಗೆ ಸೂಕ್ತವಾಗಿವೆ.


ಗೊರೂರು ಅನಂತರಾಜು
ಹಾಸನ
9449462879

ವಿಳಾಸ:
ಹುಣಸಿನಕೆರೆ ಬಡಾವಣಿ,
29ನೇ ವಾರ್ಡ್
3 ನೇ ಕ್ರಾಸ್, ಶ್ರೀ ಶನೈಶ್ಚರ ದೇವಸ್ಥಾನ ರಸ್ತೆ,
ಹಾಸನ – 573201

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group