Homeಲೇಖನಮಿತ್ರನ 'ನಿರ್ಲಿಪ್ತ' ಕಾದಂಬರಿ ಇಷ್ಟವಾದದ್ದು ಬಾಲ್ಯ ಜೀವನ.

ಮಿತ್ರನ ‘ನಿರ್ಲಿಪ್ತ’ ಕಾದಂಬರಿ ಇಷ್ಟವಾದದ್ದು ಬಾಲ್ಯ ಜೀವನ.

ನನ್ನ ಮಗನ ಮದುವೆ ಸಮಾರಂಭಕ್ಕೆ ಉದಯರವಿ ಬಂದಿದ್ದರು. ಮನೆಯಲ್ಲಿ ಸತ್ಯನಾರಾಯಣಸ್ವಾಮಿ ಪೂಜೆ ಮಡದಿಯ ಇಚ್ಛಾ ಪ್ರಕಾರ ಸಾಂಗವಾಗಿ ನಡೆದಿತ್ತು. ಆಗ ಒಂದೂವರೆ ಗಂಟೆ. ಊಟದ ಸಮಯ. ಎಲ್ಲಾ ಬಂಧು ಬಳಗ ಸ್ನೇಹಿತರು ಜಮಾಯಿಸಿದ್ದರು. ಮನೆ ಒಳಗೆ ಕಾಲಿಡಲು ಜಾಗವಿಲ್ಲ. ಅರ್ಚಕರು ಸತ್ಯನಾರಾಯಣಸ್ವಾಮಿ ಕಥೆ ಹೇಳುತ್ತಿದ್ದರು. ಇವರು ನನ್ನ ಬಿ.ಕಾಂ. ಕ್ಲಾಸ್ ಮೇಟ್. ಹಾಗೆಂದು ಕಥೆ ಆರಂಭಕ್ಕೂ ಮುನ್ನ ಅರ್ಚಕರು ಪರಿಚಯ ಹೇಳಿದರು. ಯಾಕೋ ನನಗೆ ಸರಿಯಾಗಿ ನೆನಪಾಗುತ್ತಿಲ್ಲ. ಆಗೆಲ್ಲಾ ನಾನು ಸರಿಯಾಗಿ ಕ್ಲಾಸ್ ಅಟೆಂಡ್ ಮಾಡಿದ್ದರೆ ತಾನೇ ನೆನಪಾಗುವುದುi. ಇರಲಿ ಉದಯರವಿಯನ್ನು ಮೇಲಿಂದಲೇ ಗಮನಿಸಿ ಕೆಳಗಿಳಿದು ಬಂದು ಮಾತನಾಡಿಸಿದೆ. ಅವರು ನನಗೆ ತುಂಬಾ ಕೆಲಸವಿದೆ ಹೋಗಬೇಕು ಎ೦ದು ಪ್ಯಾಕ್ ಮಾಡಿದ ಪುಸ್ತಕ ನೀಡಿದರು. .ನನಗೂ ಎಷ್ಟೋ ಸಾರಿ ಅನಿಸಿದುಂಟು. ಯಾವುದಾದರೂ ಮದುವೆ ಸಮಾರಂಭ, ಆರತಕ್ಷತೆ, ಬೀಗರ ಊಟ, ಇತ್ಯಾದಿ ಶುಭ ಸಮಾರಂಭಕ್ಕೆ ಹೋದಾಗ ಪುಸ್ತಕಗಳನ್ನು ಏಕೆ ಕೊಡಬಾರದು.

ಈ ಸಂಸ್ಕೃತಿಯನ್ನು ಸಾಹಿತಿಯಾಗಿ ನಾನೇ ಏಕೆ ಅನುಸರಿಸಬಾರದು..? ಇದನ್ನು ಸ್ವತಃ ನನ್ನ ಮಡದಿಯೇ ಒಪ್ಪುವುದಿಲ್ಲ. ನಿಮಗೇನು ಮಾನ ಮರ್ಯಾದೆ ಇಲ್ವಾ. ನೀವು ಬೇಕಾದ್ರೇ ನಿಮ್ಮ ಫ್ರೆಂಡ್ಸ್ ಗಳ ಮದುವೆ ಮುಂಜಿ ಸಮಾರಂಭಕ್ಕೆ ನಿಮ್ಮ ಘನಂದಾರಿ ಪುಸ್ತಕಗಳನ್ನು ಕೊಡಿ. ನೆಂಟರಿಷ್ಟರ ಮದುವೆಗೆಲ್ಲಾ ಇದು ಬೇಡ. ಸುಮ್ಮನೆ ಕವರ್ ಗೆ ದುಡ್ದು ಇಟ್ಟು ಕೊಡಿ..ಮಡದಿ ಮಾತಿಗೆ ತಲೆಬಾಗಿ ಇಂದಿಗೂ ನಡೆದುಕೊಂಡು ಬಂದಿದ್ದೇನೆ.

ಇರಲಿ ಉದಯರವಿ ಕೊಟ್ಟ ಪುಸ್ತಕ ‘ನಿರ್ಲಿಪ್ತ’ ಕಾದಂಬರಿಯನ್ನು ಮೊನ್ನೆ ಶನಿವಾರ ಪುಟ್ಟಣ ಕಣಗಾಲ್ ಅವರ ಜನ್ಮಸ್ಥಳ ಕಣಗಾಲ್ ಮತ್ತು ಇದೇ ಗ್ರಾಮ ಪಕ್ಕದ ಹೊನ್ನಾಪುರ ಗ್ರಾಮಕ್ಕೆ ಅಲ್ಲಿನ ದೊಡ್ಡಮ್ಮ ಚಿಕ್ಕಮ್ಮ ಗ್ರಾಮದೇವತೆಗಳ ಜಾತ್ರೆಗೆಂದು ಕಾರಿನಲ್ಲಿ ಹೊರಟು ಪಯಣದ ಹಾದಿಯಲ್ಲಿ ಕಾದಂಬರಿ ಓದಿ ಮಧ್ಯೆ ಅರಕಲಗೋಡಿನಲ್ಲಿ ಕೋಟೆಯಲ್ಲಿರುವ ದೊಡ್ಡಮ್ಮ ದೇವತೆಯ ದರ್ಶನಕ್ಕೆ ಕಾರು ನಿಲ್ಲಿಸಿದಾಗ ಕಾದ೦ಬರಿಗಾರ್ತಿ ಜಯಂತಿ ಚಂದ್ರಶೇಖರ್ ಮೇಡಂಗೆ ಪೋನಾಯಿಸಿದೆ.

“ಮೇಡಂ, ಒಬ್ಬರ ವ್ಯಕ್ತಿ ಚಿತ್ರವನ್ನು ಕಾದಂಬರಿ ಸ್ವರೂಪದಲ್ಲಿ ನಿರೂಪಿಸಲು ಉತ್ತಮ ಪ್ರಯತ್ನ ನಡೆಸಿದ್ದೀರಿ. ಆ ವ್ಯಕ್ತಿ ನನಗೆ ಪರಿಚಿತರಿರುವುದರಿಂದ ಎಷ್ಟೋ ಸಂಗತಿಗಳು ನನಗೂ ತಿಳಿದವೆ ಆಗಿವೆ..ಎಂದೆನು.

“ಹೌದು ಸಾರ್, ಈ ಕಾದಂಬರಿ ಅವರ ಸ್ಥಿತ ಪ್ರಜ್ಞ ಎಂಬ ಅಭಿನಂದನಾ ಗ್ರಂಥ ಆಧರಿಸಿ ಬರೆದಿದ್ದು ಎಂದರು. ನಾನು ಕೂಡ ಈ ಅಭಿನಂದನಾ ಗ್ರಂಥಕ್ಕೆ ಒಂದು ಲೇಖನ ಬರೆದು ಕೊಟ್ಟಿದ್ದೇನೆ ಎಂದೆ. ಮೇಡಂ
ಈ ಅಭಿನಂದನಾ ಗ್ರಂಥವನ್ನು ಅಲ್ಲಲ್ಲಿ ಉಲ್ಲೇಖಿಸುತ್ತಾ ರವಿಯ ವ್ಯಕ್ತಿತ್ವದ ಒಳ ಹೊರಗನ್ನು ಅವರ ಬದುಕಿನ ದಟ್ಟ ಅನುಭವಗಳನ್ನು ಅದರ ಎಲ್ಲಾ ಸೂಕ್ಷ್ಮತೆಗಳನ್ನು ಈ ಕಾದಂಬರಿಯಲ್ಲಿ ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದೀರಿ. ವಿಷಯ ಸಂಗ್ರಹಣೆ ಅವುಗಳನ್ನು ಸೂತ್ರ ಬದ್ದವಾಗಿ ಹೆಣಿದಿರುವ ಕೌಶಲ ಜಾಣ್ಮೆ ನಿಜಕ್ಕೂ ಪ್ರಶ೦ಸನೀಯ ಎಂಬ ಸುಮಾ ರಮೇಶ್ ಅಭಿಪ್ರಾಯವನ್ನು ಉಲ್ಲೇಖಿಸಿ ನೀವು ಅವರನ್ನು ಸಂದರ್ಶಿಸಿ ಅವರ ಬಾಲ್ಯದ ನೆನಪುಗಳು ಬೆಳೆದು ಬಂದ ಕಥೆಯನ್ನು ಕೇಳಿ ನಿಮ್ಮದೇ ಶೈಲಿಯಲ್ಲಿ ಕಾದಂಬರಿಯನ್ನಾಗಿಸಿದ್ದೀರಿ. ಕಾದಂಬರಿ ಓದಿಸಿಕೊಂಡು ಹೋಗುತ್ತದೆ ಎಂದೆ. ಹೌದು ಸಾರ್ ಪೂರ್ಣ ಓದಿ ಎಂದರು.

ಯಾವುದಾದರೊಂದು ಅನುಭವ ಘಟನೆ ಅಥವಾ ಸುದ್ದಿಗಳನ್ನು ಕಥನವಾಗಿಸುವ ಕಲೆ ಎಲ್ಲರಿಗೂ ಬರುವುದಿಲ್ಲ. ಅಭಿನಂದನಾ ಗ್ರಂಥ ಸ್ಥಿತಪ್ರಜ್ಞ ಉದಯರವಿಯವರನ್ನು ನೋಡಿ ಅವರ ಒಡನಾಡಿಗಳು ಅರ್ಥೈಸಿಕೊಂಡ ಬರಹಗಳ ಪುಸ್ತಕವಾದರೆ, ಇವರ ಒಡಲಾಳದಿಂದ ಬಂದ ಆತ್ಮಸಾಕ್ಷಿಗೆ ಅನುಗುಣವಾಗಿ ಅವರು ಅನುಭವಿಸಿದ ಸಂತಾಪ ಸಂಕಟ ಸಂತಸಗಳ ನೆನಪಿನ ಸರಮಾಲೆಯನ್ನು ಲೇಖಕಿಗೆ ಅರುಹಿದ್ದರ ಪರಿಣಾಮ ನಿರ್ಲಿಪ್ತ ಕಾದಂಬರಿ ಮೈದಳೆದಿದೆ. ಈ ಕಾದಂಬರಿಯೊಳಗೆ ಅಲ್ಲಲ್ಲಿ ನುಸುಳುವ ಗ್ರಾಮ್ಯ ಭಾಷೆಯ ಸೊಗಡು ಕಾದಂಬರಿಗಾರ್ತಿಯ ಗ್ರಹಿಕೆ. ಮುನ್ನುಡಿಯಲ್ಲಿ ಬರೆದಂತೆ ಓದುಗರು ಇಂತಹ ಒಂದು ಕೃತಿಯನ್ನು ಓದಿದ ಮೇಲೆ ಅಯ್ಯೋ.. ಇದು ನನ್ನ ಜೀವನದಲ್ಲೂ ನಡೆದಿತ್ತು. ನಾನೂ ಬರೆಯಬೇಕಿತ್ತು ಎ೦ದು ಕೊಳ್ಳುವುದು ಸಾಮಾನ್ಯ. ಆದರೆ ಅವರಿಗೆ ಬರೆಯಲು ಆಗಿರುವುದಿಲ್ಲ.

ಇಂತಹ ಕಥನ ಕಲೆಯ ಒಡತಿಯನ್ನು ಅಭಿನಂದಿಸಿದ್ದಾರೆ ಹೊಸಹಳ್ಳಿ ದಾಳೇಗೌಡರು.. ಕಾದಂಬರಿಗಾರ್ತಿ ಜಯಂತಿ ಚಂದ್ರಶೇಖರ್ ಬರೆಯುತ್ತಾ, ಉದಯರವಿ ಅವರ ಸ್ಥಿತಪ್ರಜ್ಞ ಕೃತಿಯನ್ನು ಓದಿದ್ದ ನನಗೆ ಅದರಲ್ಲಿ ದಾಖಲಿಸಿದ್ದ ಅವರ ಬದುಕಿನಲ್ಲಿ ನಡೆದ ಒಂದೆರೆಡು ದುರಂತಗಳು, ವಿಚಿತ್ರ ಘಟನೆಗಳು ನೆನಪಲ್ಲಿ ಉಳಿದಿದ್ದವು. ಇನ್ನೊಬ್ಬರಿಗೆ ಸ್ಫೂರ್ತಿದಾಯಕ
ವಾಗಬಹುದಾದ0ತಹ ಹಾಗೂ ಪ್ರೇರಣಾತ್ಮಕ ಅಂಶಗಳಿರುವುದನ್ನು ಗಮನಿಸಿ ಬರಹಗಾರಳಾಗಿದ್ದ ನನಗೆ ಸಹಜವಾಗಿ ಕಥೆಯ ರೂಪದಲ್ಲಿ ಕಟ್ಟುವ ಇಂಗಿತವಿತ್ತು. ಅವರಿಂದ ಮಾಹಿತಿ ಪಡೆದು ಕಥೆ ಬರೆಯಲು ಶುರುವಿಟ್ಟು ಕಥೆ ಹೋಗಿ ಕಾದಂಬರಿ ರೂಪ ತಳೆಯಿತು ಎಂದಿದ್ದಾರೆ.

ಈ ಕಾದಂಬರಿಯಲ್ಲಿ ರವಿಯವರ ಬಾಲ್ಯ ಹಳ್ಳಿಯ ಬದುಕಿನೊಂದಿಗೆ ತೆರೆದುಕೊಳ್ಳುತ್ತದೆ. 1966ರ ನವಂಬರ್ 27 ರಂದು ಆಲೂರು ತಾ ಮಾವನೂರು ದಾಖಲೆ ಕುಗ್ರಾಮ ಅಗಸರ ಹಟ್ಟಿಯ ರೈತಾಪಿ ಕುಟುಂಬ
ಪಟೇಲ್ ಎ.ಎಸ್.ವೆಂಕಟೇಗೌಡ ಹಾಗೂ ಶಾರದಮ್ಮ ದಂಪತಿಗಳ 5ನೇ ಸುಪುತ್ರನಾಗಿ ಜನಿಸಿದ ಉದಯರವಿಗೆ ಮೂವರು ಅಕ್ಕಂದಿರು ಒಬ್ಬಳು ತಂಗಿ ಓರ್ವ ತಮ್ಮ. ಪ್ರಾಧಮಿಕ ಶಾಲೆಯನ್ನು ಹುಟ್ಟೂರಿನಲ್ಲಿ ಮುಗಿಸಿ ಮಾಧ್ಯಮಿಕ ಶಾಲೆ ಕಂದಲಿಗೆ ಸೇರುತ್ತಾರೆ. ಮಗನಿಗೆ 5 ನೇ ತರಗತಿಯ ಪುಸ್ತಕ ಕೊಡಿಸಲು ಕಾಸಿಲ್ಲದೆ ತಾನು ಸಾಕಿದ ಮೊಟ್ಟೆ ಕೋಳಿಯನ್ನೇ ಹಾಸನಕ್ಕೆ ಕಾಲು ನಡಿಗೆಯಲ್ಲೇ ಬಂದು ಮಾರಿ ಪುಸ್ತಕ ಕೊಡಿಸಿದ ತಾಯಿ ಶಾರದೆ.
” ಅಂತೂ ಐಸ್ಕೂಲು ಮೆಟ್ಲು ಹತ್ತಾಕೆ ರೆಡಿಯಾದ ಅನ್ನು, ನಿಮ್ಮವ್ವ ಮೊಟ್ಟೆ ಕೋಳಿ ಮಾರಿ ಪುಸ್ತಕ ಕೊಡ್ಸಿದಕ್ಕೂ ಸಾರ್ತ ಕಾತು ಬಿಡ್ಲಾ..ಸದ್ಯ ಮಾರುಕ್ಸ್ ಕಾರ್ಡಿನಾಗೆ ಬರೀ ಮೊಟ್ಟೆ ಇಡ್ಲಿಲ್ವಲ್ಲಾ ನಿಮ್ಮವ್ವನ ಮೊಟ್ಟೆ ಕೋಳಿ…ಹ್ಹ..ಹ್ಹಾ..
ಎಂದೆಲ್ಲಾ ಅಣಕಿಸಿ ನಕ್ಕಾಗ ಅವರತ್ತ ಒಂದು ಉದಾಸೀನದ ನೋಟ ಕಥೆಯ ನಿರ್ಲಿಪ್ತ ಮನಸ್ಸಿನದು.
ಪ್ರೌಢ ಶಿಕ್ಷಣಕ್ಕಾಗಿ ತಾಯಿ ತಮ್ಮ ತಾಳಿಸರದ ಕಾಸು ಗುಂಡುಗಳನ್ನು ಮಾರಿ ಮಗನನ್ನು ಹಾಸನದ ಸಿದ್ದಾರ್ಥ ವಸತಿ ಪ್ರೌಢಶಾಲೆಗೆ ಸೇರಿಸುತ್ತಾರೆ. ಶಾಲೆಯ ಬಿಡುವಿನಲ್ಲಿ ಹೊಲಗದ್ದೆಗಳಲ್ಲಿ ಕೆಲಸ. ಶಾಲೆಯ ರಜೆ ದಿನಗಳಲ್ಲಿ ಕೆರೆ ನಾಲೆ ಎಂದು ಗುಂಡಿ ತೆಗೆಯುವ ಕೂಲಿ ಕೆಲಸ ಮಾಡಿ ಅದರಿಂದ ದೊರೆತ ಪುಡಿಗಾಸನ್ನು ತಾಯಿಗೆ ಕೊಟ್ಟು ಮನೆ ಕೆಲಸಕ್ಕೆ ಹೆಗಲಾಗಿದ್ದ ರೈತ ಜೀವಿ ಈ ನಿರ್ಲಿಪ್ತ.
ಬಾಲ್ಯದ ಕಥೆಯಲ್ಲಿ ಬರುವ ತೊಗಲುಬೊಂಬೆ ರಾಮಯ್ಯನವರ ಪ್ರಸಂಗ ಸ್ವಾರಸ್ಯಕರ. ಊರ ಮುಂದಿನ ಚಾವಡಿಯಲ್ಲಿ ಬೀಡು ಬಿಡುತ್ತಿದ್ದ ಗೊಂಬೆ ಮೇಳದವರ ಆಗಮನವನ್ನು ಕಂಡು ಹಳ್ಳಿಯ ಹುಡುಗರೆಲ್ಲಾ ಗೊಂಬೆ ಆಟ ಗೊಂಬೆ ಮೇಳ ಎ೦ದು ಕೂಗುತ್ತಾ ಕುಣಿಯುತ್ತ ಮೇಳದವರು ತಂಗಿದ್ದಲ್ಲಿಗೆ ಧಾವಿಸುತ್ತಿದ್ದರು. ಈ ಹುಡುಗರ ಗುಂಪಿನಲ್ಲಿ ನಮ್ಮ ರವಿಯೂ ಇರುತ್ತಿದ್ದ. ಈ ಸನ್ನಿವೇಶ ಓದುತ್ತಲೇ ನಮ್ಮ ಹಾಸನ ಜಿಲ್ಲಾ ಮಾಜಿ ಕಸಾಪ ಅಧ್ಯಕ್ಷರಿಗೆ ಪೋನಾಯಿಸಿದೆ. ಇವರ ಅವಧಿಯಲ್ಲಿ ನಾನು ನಾಲ್ಕೈದು ತಿಂಗಳು ಗೌ. ಕಾಯ೯ದರ್ಶಿಯಾಗಿದ್ದೆ. ಪರಿಷತ್ತಿನ ಬಹುತೇಕ ಎಲ್ಲಾ ದತ್ತಿ ಉಪನ್ಯಾಸಗಳನ್ನು ನಾವು ಯಶಸ್ವಿಯಾಗಿ ಶಾಲಾ ಕಾಲೇಜಿನಲ್ಲಿ ಆಗ ಸಂಘಟಿಸಿದ್ದೆವು. ಅದಷ್ಟೇ ಒಂದು ವರ್ಷ. ಮತ್ತೇ ದತ್ತಿ ಉಪನ್ಯಾಸಗಳು ಕಸಾಪದಿಂದ ನಡೆದಿರುವುದು ವಿರಳ. ಇದು ನಡೆಯಬೇಕು, ದತ್ತಿ ಇಟ್ಟ ಕುಟುಂಬಕ್ಕೂ ಸಾರ್ಥಕ್ಯ ಭಾವ ಬರಬೇಕು. ಇದಿಷ್ಟೇ ಆಶಯ. ಇರಲಿ,

“ರವಿ, ಹೂವಿನಹಳ್ಳಿ ಕಾವಲು ಗುಂಡುರಾಜ್ ಅವರ ತಂದೆ ರಾಮಯ್ಯನವರು ನಿಮ್ಮ ತಂದೆಯವರ ಆತ್ಮೀಯತೆ ಬಗ್ಗೆ ಮೇಡಂ ಬರೆದಿದ್ದಾರೆ.
ಗುಂಡುರಾಜ್ ನಿಮಗೆ ಬಾಲ್ಯದಿಂದಲೇ ಚೆನ್ನಾಗಿ ಪರಿಚಿತರೇ? ಕಾದಂಬರಿ ಓದುತ್ತಿರುವೆ. ಕಥೆಯಲ್ಲಿ ನನಗೆ ಪ್ರಿಯವಾದದ್ದು ನಿಮ್ಮ ಬಾಲ್ಯ ಜೀವನ. ನೀವು ಎಂ.ಎ.ಪದವೀದರರು. ನಿಮ್ಮ ಆತ್ಮಕಥನವನ್ನು ನೀವೇ ಬರೆದಿದ್ದರೆ ಇನ್ನೂ ಚೆನ್ನಾಗಿರುತಿತ್ತು.. ಈ ನನ್ನ ಭಾವನೆಯನ್ನು ಹೇಳಲು ಏಕೋ ಸಂಕೋಚ. ಮೇಡಂ ಸೆಕಂಡರಿ ಅನುಭವದಲ್ಲಿ ರವಿ ಸ್ಟೇಟ್ ಮೆಂಟ್ ಆಧರಿಸಿ ಇದಕ್ಕೆ ತಮ್ಮದೇ ಶೈಲಿಯ ಗ್ರಾಮ್ಯ ಭಾಷೆ, ಸಂಭಾಷಣೆ ಹೆಣಿದು ಸೊಗಸಾಗಿ ನಿರೂಪಿಸಿದ್ದಾರೆ ನೋ ಡೌಟ್. ಆದರೂ ಗಾಂಧೀಜಿಯವರ ಆತ್ಮಕಥೆಯನ್ನು ಅವರೇ ಬರೆದಿರುವುದಕ್ಕೂ, ಅವರ ಒಡನಾಡಿಗಳು ಹತ್ತಿರದಿಂದ ಕಂಡು ಬರೆಯುವುದಕ್ಕೂ ಒಂದಷ್ಟು ವ್ಯತ್ಯಾಸ ಇರುವುದಷ್ಟೇ.

ಅನಂತರಾಜು, ನನ್ನ ಸ್ಮಿತ ಪ್ರಜ್ಞ ಕೃತಿ ಅಧರಿಸಿ ಮತ್ತೊಬ್ಬ ಲೇಖಕಿ ಕಾದಂಬರಿ ಬರೆಯುತ್ತಿದ್ದು ಪುಸ್ತಕ ಬಿಡುಗಡೆಗೆ ಸಿದ್ಧವಾಗುತ್ತಿದೆ ಎಂದರು. ಮತ್ತೆ ಗುಂಡುರಾಜ್ ಅವತ್ತಿನಿಂದಲೂ ನನಗೆ ಪರಿಚಿತರು ಎಂದರು. ಇಂದು ನೋಡಿ, ಇದೇ ಗುಂಡುರಾಜ್, ತಮ್ಮ ತಲೆ ತಲಾಂತರದ ಬಂದ ಕೈ ಬಿಡದೆ, ಆ ವೃತ್ತಿಯನ್ನು ಮೈಗೂಡಿಸಿಕೊಂಡು ತೊಗಲುಗೊಂಬೆ ಆಟವನ್ನು ಇಂದಿಗೂ ಉಳಿಸಿ ಬೆಳೆಸಿಕೊಂಡು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾಗಿದ್ದಾರೆ. ಇದು ನಮ್ಮ ಜಿಲ್ಲೆಗೆ ಹೆಮ್ಮೆಯ ಸಂಗತಿ ಹೌದಲ್ಲವೇ ಎಂದೆ.

ಅಂದ್ದಾಗೆ ನಿಮ್ಮ ಕಾದಂಬರಿ ಸಿನಿಮಾ ಆಗುವುದಾಗಿ ಪುಸ್ತಕದಲ್ಲಿದೆ. ಸಿನಿಮಾ ಆದರೆ ನೋಡುವ ಸಂತೋಷ ಎಂದೆ. ಈ ಸಂತೋಷದ ಮಧ್ಯೆ ಉದಯರವಿ ಅಪಘಾತದಲ್ಲಿ ಕಾಲು ಕಳೆದುಕೊಂಡು, ರಾಡ್ ಗಳ ಬಲದಿಂದ ಮತ್ತೆ ಬದುಕಿ ಜೀವನೋತ್ಸಾಹ ಕಂಡುಕೊಂಡಿದ್ದು ನಿಜಕ್ಕೂ ಅಚ್ಚರಿಯೇ? ಇದನ್ನು ನಾನು ಕೇಳಿದ್ದೆ ಓದಿರಲಿಲ್ಲ. ನನಗೂ ಆ ಓದಿನ ಕ್ಷಣಕ್ಕೆ ಒಂದು ಘಟನೆ ನೆನಪಾಯಿತು. ನಾನು ಜಿಲ್ಲಾ ಕಸಾಪ ಗೌ.ಕಾರ್ಯದರ್ಶಿಯಾಗಿ ಅಧ್ಯಕ್ಷ ಉದಯರವಿನೊಂದಿಗೆ ಇದ್ದ ಸಂದರ್ಭ ನಾವಿಬ್ಬರು ಒಂದು ಕಾರ್ಯಕ್ರಮಕ್ಕೆ ಕಾರಿನಲ್ಲಿ ಹೊರಟಿದ್ದೆವು. ರವಿಯ ಕಾರು. ಅವರೇ ಚಾಲಕರು. ನಾನು ಅವರ ಪಕ್ಕವೇ ಮುಂದಿನ ಸೀಟಿನಲ್ಲಿ ಕುಳಿತ್ತಿದ್ದೆ. ಸಕಲೇಶಪುರ ರಸ್ತೆಯಲ್ಲಿ ಹೋಗುವಾಗ ತಿರುವಿನಲ್ಲಿ ಎದುರಿನಿಂದ ಒಂದು ಬಾರಿ ಗಾತ್ರದ ಉದ್ದನೆಯ ಗ್ಯಾಸ್ ಲಾರಿ ಅಡ್ಡ ಬಂತು. ರವಿಗೆ ಇದು ತಿಳಿಯುವಷ್ಟರಲ್ಲಿ ಅಚಾತುರ್ಯ ಘಟಿಸಿತು. ಆ ಗ್ಯಾಸ್ ಲಾರಿಯ ಹಿ೦ಬದಿಗೆ ನಮ್ಮ ಕಾರು ಬಡಿದಿತ್ತು. ಬಡಿದ ಕಡೆ ನಾನೇ ಇದ್ದೆ. ದೇವರ ದಯೆ ಬದುಕಿದ್ದೆವು. ಕಾರಿಗೆ ಬಾರಿ ಏಟು ಬಿದ್ದಿರಲಿಲ್ಲ. ದಡ್ ಎ೦ಬ ಶಬ್ದ..! ಆ ಬೃಹತ್ ಲಾರಿಗೆ ಕಾರು ಮುತ್ತಿಕ್ಕಿತಷ್ಟೇ. ಕಾರು ಹಿಂದಿನ ಚಕ್ರಕ್ಕೆ ಸಿಲುಕುವ ಅಪಾಯವೂ ಇತ್ತು. ಇಲ್ಲಾ ರವಿಗೆ ಕಾರಿನ ಕಂಟ್ರೋಲ್ ತಪ್ಪಿ ಪ್ರಪಾತಕ್ಕೆ ಬೀಳುವ ಸಾಧ್ಯತೆಯೂ ಇತ್ತು. ಪವಾಡ ಸದೃಶ್ಯ ಇಬ್ಬರೂ ಅಪಾಯದಿಂದ ಪಾರಾಗಿದ್ದೆವು. ಆಗಿನಿಂದ ಈಗಲೂ ಕಾರಿನಲ್ಲಿ ನನಗೆ ಪ್ರಯಾಣಿಸುವುದೆಂದರೇ ಭಯವೇ!

ಮುನ್ನುಡಿಯಲ್ಲಿ ಹೊಸಹಳ್ಳಿ ದಾಳೇಗೌಡರು ಬರೆದಂತೆ ಬದುಕುವುದೇ ಇಲ್ಲ ಎಂಬುವಷ್ಟರ ಮಟ್ವಿಗಿದ್ದ ಉದಯರವಿ ಉಳಿದು ಬೆಳೆದು ವಿವಿಧ ರೀತಿಯಲ್ಲಿ ಜೀವನವನ್ನು ಎದುರಿಸುತ್ತಾ ಇತರರಿಗೂ ಸಹಾಯ, ಸಹಕಾರ ನೀಡುವ ಮನಸ್ಥಿತಿಯಲ್ಲಿ ಬದುಕುತ್ತಾ, ಸಮಾಜಮುಖಿಯಾಗಿ, ರೈತಾಪಿಯಾಗಿ, ವ್ಯಾಪಾರಿಯಾಗಿ, ಪತ್ರಕರ್ತನಾಗಿ, ಪತ್ರಿಕಾ ಸಂಪಾದಕನಾಗಿ, ಉದ್ಯೋಗಿಯಾಗಿ, ಉದ್ಯಮಿಯಾಗಿ, ಮಾನವ ಸಹಜ ಪ್ರೀತಿ ಪ್ರೇಮಗಳ ಸೆಳೆತಕ್ಕೂ ಸಿಕ್ಕು ಅವುಗಳಿಂದ ಬಿಡುಗಡೆಗೊಂಡು ನ೦ತರ ಸುಖ ಸಂಸಾರದ ಹಾದಿ ತುಳಿದು, ಅಪಘಾತದಿಂದ ಅರೆಬರೆ ಜೀವನನಾಗಿ ಬದುಕುಳಿದು, ಸಾಹಿತ್ಯ ಸಂಸ್ಕೃತಿ ನಾಡು ನುಡಿಯ ಸಂರಕ್ಷಣೆಗೆ ಬದ್ದರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಕೆಲಸಗಳಲ್ಲೂ ತಮ್ಮ ಛಾಪು ಮೂಡಿಸಿ, ದುಬೈನ ಬುರ್ಜಾ ಖಲೀಫದಂತಹ ಅತ್ಯಂತ ಎತ್ತರದ ಕಟ್ಟಡದ ತುತ್ತ ತುದಿಯಲ್ಲಿ ನಿಂತು, ಕನ್ನಡ ಬಾವುಟ ಬೀಸಿ ಸಂತಸಪಡುವರೆಗೆ ಬೆಳೆದ ನಿಂತ ಸ್ಥಿತಪ್ರಜ್ಞನ ಕುರಿತು ಜಯಂತಿ ಮೇಡಂ ಅತ್ಯಂತ ಸಮಂಜಸವಾಗಿ ಈ ಕಾದಂಬರಿಯಲ್ಲಿ ಚಿತ್ರಿಸಿರುವುದು ಶ್ಲಾಘನೀಯ.
ಅಂದ್ದಾಗೆ ಈ ಉದಯರವಿ ನನಗೆ ಪರಿಚಿತರಾದದ್ದು ನಿವೃತ್ತ ಪ್ರಾಂಶುಪಾಲರು ಬಿ.ಎನ್.ರಾಮಸ್ವಾಮಿಯವರಿಂದ.

ಇವರು ಹಾಸನ ಜಿಲ್ಲಾ ಕಸಾಪ ಅಧ್ಯಕ್ಷರಾದಾಗ ನನಗೆ ಗೌ. ಕಾರ್ಯದರ್ಶಿಯಾಗಲು ಹೇಳಿದ್ದರು. ಆಗ ನಾನು ಗೊರೂರಿನಲ್ಲಿದ್ದ ಕಾರಣ ಬೇಡ ಎಂದಿದ್ದೆ. ನಂತರ ಅವರು ವಯಸ್ಕರ ಶಿಕ್ಷಣಾಧಿಕಾರಿಯಾಗಿ ನಾನು ಜಿಲ್ಲಾ ಸಾಕ್ಷರತಾ ಆಂದೋಲನ ಪಠ್ಯ ಪುಸ್ತಕ ರಚನಾ ಸಮಿತಿ ಕಾರ್ಯದರ್ಶಿಯಾಗಿ ಕೆಲಸ ಮಾಡಲು ಕಾರಣರಾದರು. ಅಂತೆಯೇ ಸಾಹಿತಿ ಜ.ಹೊ.ನಾ. ಅವರನ್ನು ಮರೆಯುವಂತಿಲ್ಲ. ಬಿಜೆ ವಿಎಸ್ ನ ತರಭೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲು ಅವಕಾಶ ಒದಗಿಸಿದ್ದರು ಜಹೊನಾ.
ಕಸಾಪ ಚುನಾವಣೆಯಲ್ಲಿ ಉದಯರವಿ ಪರ ನಿಂತು ಅವರು ಮೊದಲ ಬಾರಿ ಸೋತಾಗ ಸತ್ಯವಾಗಿಯೂ ನಾನು ಅತ್ತಿದ್ದೆ. 2ನೇ ಗೆದ್ದಾಗ ಸಂತೋಷಪಟ್ಟರೂ ಯಾವ ಅಧಿಕಾರವನ್ನು ಬಯಸಲಿಲ್ಲ. ಅವರೇ ಆಗ ಗೌ.ಕಾರ್ಯದರ್ಶಿಯಾಗಿದ್ದ
ಬಿ.ಡಿ.ಶಂಕರೇಗೌಡರು ಮನೆ ಕಟ್ಟುತ್ತಿರುವ ಕಾರಣಕ್ಕೆ ಅವರು ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ನನ್ನನ್ನು ಗೌ.ಕಾರ್ಯದರ್ಶಿಯಾಗಿ ತೆಗೆದುಕೊಂಡಿದ್ದರು. ನಮ್ಮ ಅವಧಿಯಲ್ಲಿ 11 ನೇ ಹಾಸನ ಜಿಲ್ಲಾ ಸಾಹಿತ್ಯ ಸಮ್ಮೇಳನ ಬೇಲೂರಿನಲ್ಲಿ ನಡೆಯಿತು. ಈ ಸಮ್ಮೇಳನಾಧ್ಯಕ್ಷರು ನೂರು ನಾಟಕಗಳ ಸರದಾರ ಬೇಲೂರು ಕೃಷ್ಣಮೂರ್ತಿ. ಇವರೇ ಅಕ್ಷರ ಅಭಿಷೇಕ ಪ್ರಾಜೆಕ್ಟಿನ ಪಠ್ಯ ಪುಸ್ತಕ ರಚನಾ ಸಮಿತಿಯ ಅಧ್ಯಕ್ಷರು. ಅಂದು ನಾನು ಕಾರ್ಯದರ್ಶಿ.
ಉದಯರವಿ ಮತ್ತು ನನ್ನ ಅವಧಿಯಲ್ಲಿ ಕಸಾಪ ಅವರಣದಲ್ಲಿ ಕುವೆಂಪು ಪ್ರತಿಮೆ ಪ್ರತಿಷ್ಠಾಪಿಸಲು ಪ್ರತಿಮೆ ಕಿತ್ತನೆ.ಕೆಲಸ ನಡೆದಿತ್ತು. ಆದರೆ ಉದ್ಘಾಟನೆ ವೇಳೆಗೆ ನಾನು ರಾಜೀನಾಮೆ ನೀಡಿ ಹೊರಬಂದಿದ್ದೆ. ನಾನಾ ಕಾರಣಗಳಿಂದ ಜಿಲ್ಲಾಧ್ಯಕ್ಷರು ತಾ. ಅಧ್ಯಕ್ಷರನ್ನು ಬದಲಾಯಿಸಿದ್ದರು. ಇದರಲ್ಲಿ ನನ್ನ ಪಾತ್ರವೇನು ಇಲ್ಲದಿದ್ದರೂ ಆಗಿನ ಹಾಸನ ತಾ ಅಧ್ಯಕ್ಷರ ಗುಮಾನಿ. ಇದರಲ್ಲಿ ನನ್ನ ಕೈವಾಡ ಇದೆ ಎಂಬ ಟೀಕೆಯ ಕಟು ಮಾತಿಗೆ ನೊಂದು ರಾಜೀನಾಮೆ ನೀಡಿ ಹೊರಬಂದಿದ್ದೆ. ಉದಯರವಿ ನನ್ನ ರಾಜೀನಾಮೆ ಬಡಪೆಟ್ಟಿಗೆ ಅಂಗೀಕರಿಸಿರಲಿಲ್ಲ. ಕಡೆಗೆ ನಾನು ಮಂಗಳ ವೆಂಕಟೇಶ್ ಮೇಡ೦ರನ್ನು ಒಪ್ಪಿಸಿ ಅವರ ಹೆಸರು ಇಂದು ಕಸಾಪ ಭವನದ ಗೋಡೆಯ ಕಲ್ಲಿನಲ್ಲಿ ಕೆತ್ತಿದೆ.
ಉದಯರವಿ ತಮ್ಮ ಅವಧಿಯಲ್ಲಿ ಈಗಿನಂತೆ ಸರ್ಕಾರದ ಅನುದಾನ ಇಲ್ಲದ ದಿನಗಳಲ್ಲಿ ಸಂಪನ್ಮೂಲ ಕ್ರೂಢೀಕರಿಸಿ ಕೆಲಸ ಮಾಡಿದ್ದಾರೆ. ಆ ವೇಳೆ ನನಗೂ ಕನ್ನಡ ಸೇವೆ ಸಾಹಿತ್ಯ ಸೇವೆ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ಆ ವೇಳೆ ಇವರು ಪ್ರಕಟಿಸಿದ ಹಾಸನ ಜಿಲ್ಲೆಯ ಮೂವರು ಸಾಹಿತ್ಯ ದಿಗ್ಗಜರು ಕೃತಿಗೆ ನನಗೆ ಡಾ. ಗೊರೂರು ರಾನುಸ್ವಾಮಿ ಅಯ್ಯಂಗಾರ್ ಬದುಕು ಬರಹ ಕುರಿತು ಬರೆಯಲು ಹೇಳಿ ಬರೆದು ಅದರಲ್ಲಿದೆ. 3 ನೇ ಬಾರಿ ಅವರು ಅವರು ಕಸಾಪ ಚುನಾವಣೆಗೆ ನಿಂತು ಸೋತಾಗ ನಾನು ಅವರ ಜೊತೆಗೆ ಇರಲಿಲ್ಲ. ಇದಕ್ಕಾಗಿ ಅವರಿಗೆ ನನ್ನ ಮೇಲೆ ಬೇಸರವಿರಬಹುದು. ಆದರೂ ಉದಯರವಿ, ನೀವು ನಿಮ್ಮ ಜೀವನದ ಅನೇಕ ಏಳು ಬೀಳುಗಳ ನಡುವೆಯೂ ಇಂದಿಗೂ ಕ್ರಿಯಾಶೀಲರಾಗಿದ್ದಿರಿ. ಇದೇ ನಿಮ್ಮ ಜೀವನದ ಯಶಸ್ಸಿನ ಗುಟ್ಟು.

ಗೊರೂರು ಅನಂತರಾಜು,
ಹಾಸನ
9449462879

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group