spot_img
spot_img

ಲೇಖನ : ಬಲಿಯಾಗದಿರಲಿ ಬಾಲ್ಯ

Must Read

spot_img
- Advertisement -

ರೆರೆ, ಬಾಲ್ಯ ಬಲಿಯಾಗದಿರುವುದು ಅಂದರೆ ಏನು? ಎನ್ನುವ ಪ್ರಶ್ನೆ ಕಾಡ್ತಿದೆಯಾ ಸಹಜವಾಗಿ ಅನ್ಸತ್ತೆ ಅದೇನದು ಅನ್ನುವಂತದ್ದು. ಬಾಲ್ಯ ಅನ್ನುವಂತದ್ದು ಪ್ರತಿಯೊಬ್ಬರ ಜೀವನದ ಅತ್ಯಮೂಲ್ಯ ಘಟ್ಟ ಅಲ್ವಾ. ಹೌದು ಇಲ್ಲ ಅಂದವರು ಯಾರು ಬಾಲ್ಯ ಎನ್ನುವುದೇ ಹಾಗೆ ಏನೋ ಗೊತ್ತಿಲ್ಲದ ಖುಷಿ ತಂದುಕೊಡೊವಂತಹ ಹರ್ಷಭರಿತವಾದ ಸುವರ್ಣಕಾಲವೆಂದೇ ಹೇಳಬಹುದು. ಆಟ, ಪಾಠ, ಊಟ,ಗೆಳೆತನ, ಏಳೋದು, ಬೀಳೋದು ಎಲ್ಲವೂ ಏನೋ ಒಂಥರಾ ಮಜಾ ಕೊಡುವ ದಿನಗಳವು. ಹಾಗೆ ಮತ್ತೆಂದೂ ತಿರುಗಿ ಬಾರದೇ ಇರುವ ದಿನಗಳು ಹೌದು. ಅಂತಹ ಬಾಲ್ಯವನ್ನು ಯಾರು ತಾನೇ ಕಳ್ಕೋತಾರೆ ಅಂದುಕೊಳ್ತೀರಾ ನಿಜ ಈ ಹಿಂದೆ ಅದೇನೇ ಕಷ್ಟನಷ್ಟಗಳಿರಲಿ ಬಾಲ್ಯವನ್ನು ಅಕ್ಷರಶಃ ಬಾಲ್ಯದಂತೆ ಕಳೆದವರು ಸಾಕಷ್ಟು ಹಿರಿಯರು ಮನೆಯ ಮುಂದೆ ಅಂಗಳಕ್ಕೆ ಕುಳಿತು ಆ ದಿನಗಳನ್ನ ಮೆಲುಕು ಹಾಕ್ತಾ ಇದ್ರೆ ಇದೇನಪ್ಪಾ ನಾವ್ ಕಳೆದ ದಿನಗಳೇ ಅದ್ಭುತ ಅನ್ಕೊಂಡ್ರೆ ಅವರ ಬಾಲ್ಯದ ದಿನಗಳ ಮುಂದೆ ನಮ್ಮ ಬಾಲ್ಯ ಏನಿಲ್ಲ, ಅದರಲ್ಲೂ ಈಗಿನವರ ಬಾಲ್ಯವಂತೂ ಏನೇನಿಲ್ಲ ಎನಿಸಿತು.

ಬಹುತೇಕ ಈಗಿನ ಮಕ್ಕಳಿಗೆ ಬಾಲ್ಯ ಹೇಗಿತ್ತು ಅಂದ್ರೆ ಹೇಳೋಕೆ ಆಗದೆ ಇರುವಷ್ಟು ಭಿನ್ನವಾಗಿ ಇರತ್ತೆ ಅದು ನಮಗೂ ಕಾಣಿಸತ್ತೆ. ಅಪ್ಪಟ ಮಣ್ಣಿನ ಆಟಗಳು ಕಳೆದು ಹೋಗಿವೆ, ತುಂಟಾಟ, ತಂಟೆ, ತಕರಾರುಗಳು ಮಾಸಿ ಹೋಗಿವೆ, ಹುಸಿ ಮುನಿಸು, ಕೋಪ, ಕ್ಷಣಾರ್ಧದಲ್ಲಿ ಮತ್ತೆ ಒಂದುಗೂಡಿ ಆಡುವ, ಎಲ್ಲರೊಂದಿಗೂ ಬೆರೆಯುವ ಆ ದಿನಗಳೇ ಬೇರೆ. ಚುರುಕುತನ, ಅಷ್ಟೇ ಮೊಂಡುತನ, ಹಠಮಾರಿತನಗಳು ಮೆಚ್ಚುಗೆಯಾಗ್ತಿದ್ವು, ದೊಡ್ಡವರನ್ನು ಗೊಳೋಯ್ಕೊಳೋದು, ವಾರದ ಕೊನೆಗೆ ರಜಾದಿನಗಳು ಬಂತೆಂದರೆ ಖುಷಿಗೆ ಪಾರವೇ ಇಲ್ಲ. ರಜಾ ದಿನಗಳು ಬಂತೆಂದರೆ ಆಗಿನ ಮಕ್ಕಳ ಪಾಲಿಗೆ ಆಟದ ಖುಷಿಯ ಪರ್ವವೇ ಸರಿ. ಬೆಳಗಾಯ್ತು ಅಂದ್ರೆ ಅಪ್ಪ ಅಮ್ಮನ ಸುಪ್ರಭಾತ ನಾಲ್ಕು ಮನೆಯಾಚೆಗೆ ಕೇಳ್ತಿತ್ತು, ಅಕ್ಕಪಕ್ಕದ ಮನೆಯವರ ಮಾತುಗಳಂತು ಕಿವಿಯೊಳಗೆ ತಮಟೆ ಬಾರಿಸಿದಂತೆ ಗಟ್ಟಿಯಾಗಿ ಕೇಳ್ತಿತ್ತು, ಅಷ್ಟಾದರೂ ಚಾದರ ಹೊದ್ದು ಮಲಗಿದ್ರೆ ಕಿವಿಗೆ ಮಾತುಗಳು ತಾಕದಿರಲಿ ಅಂತ ಗಟ್ಟಿಯಾಗಿ ಚಾದರ ಸುತ್ತಿದ್ರೂ ಅಮ್ಮ ಬಂದು ಎದ್ದೇಳು ಮೂದೇವಿ ಹೊತ್ತು ನೆತ್ತಿಮ್ಯಾಲೆ ಬಂದೈತೆ ಅಂತ ಚಾದರ ಕಿತ್ರು ಕೂಡ ಅಜ್ಜಿ ತಾತ ಆ ಮಗಿಗೆ ಯಾಕ್ ಆಟು ಹಿಂಸೆ ಕೊಡ್ತಿದ್ದೀ ಏನ್ ಬೆಟ್ಟ ಕಡಿಯೋದೈತೇನು ಎದ್ದು ಮಲಗಲಿ ಬಿಡು ದೊಡ್ಡವರಾದ್ಮೇಲೆ ಮುಂಜಾನೆಗೆ ಎದ್ದು ಕಾಪ್ರ(ಕೆಲಸ)ಮಾಡೋದು ಇದ್ದೆ ಐತಿ ಅಂದಾಗ ಅಮ್ಮ ಅಜ್ಜಿ ತಾತನಿಗೂ ಸೇರಿಸಿ ಹೋಲ್ಸೇಲ್ ಆಗಿ ಉಗಿತಿದ್ಲು ನೀವು ಒಂದು ಬಾಕಿ ಇದಿರಿ ಅಂತ ಆದ್ರೂ ನನ್ನ ಪರವಾಗಿ ಅಜ್ಜಿ ತಾತ ಅವ್ರೆ ಅನ್ಕೊಂಡು ಮತ್ತೆ ಮುದುರ್ಕೊಂಡು ಮಲಗೋದ್ರಲ್ಲಿ ಇದ್ದ ಖುಷಿ ಬೇರೆಯೇ ಬೇರೆ.

ಇನ್ನು ಬೆಳಗಾಗ್ತಿದ್ದಂಗೆ ಅಲ್ಲೊಂದು ಕರ ಕೂಗೋ ಕೂಗು, ಇಲ್ಲೊಂದು ನಾಯಿ ಬೊಗಳೋ ಸದ್ದು, ಕಾಲಲ್ಲೊಂದು ಕೈಯಲ್ಲೊಂದು ಅನ್ನೋ ಹಾಗೆ ಮ್ಯಾಂವ್ ಮ್ಯಾಂವ್ ಅನ್ನೋ ಬೆಕ್ಕು ಅವುಗಳೊಂದಿಗಿನ ಚಿನ್ನಾಟ ಹೊಸ ಪ್ರಪಂಚವನ್ನೇ ತೆರೆಯುತ್ತಿದ್ವು. ನಮ್ ಮನೆಯಲ್ಲಿರೋ ಪ್ರಾಣಿಗಳನ್ನ ನೋಡಿ ಬೇರೆ ಮಕ್ಕಳು ಅಥವಾ ಬೇರೆ ಮನೆಯಲ್ಲಿ ಇರೋ ನಾಯಿನೋ, ಬೆಕ್ಕನ್ನೋ ನೋಡಿದಾಗ ನಾವು ತರೋಣ ಅಂತ ಹಠ ಮಾಡಿ ಊಟ ಬಿಟ್ಟು ತರಿಸ್ಕೊಂಡು ನಮ್ಮನೇಲೂ ಐತೆ ಅಂತ ಹೇಳ್ಕೊಂಡ್ ಓಡಾಡೋದ್ರಲ್ಲಿ ಏನೋ ಒಂಥರಾ ಥ್ರಿಲ್ ಇರ್ತಿತ್ತು. ಸಾಲದಕ್ಕೆ ದೊಡ್ಡಪ್ಪ, ಚಿಕ್ಕಪ್ಪ ಅಂತ ಅವರ ಮಕ್ಕಳುಗಳು ಸುತ್ತ ಮುತ್ತಲಿನ ಮಕ್ಕಳೆಲ್ಲ ಸೇರ್ಕೊಂಡು ಆಡ್ತಿದ್ದ ಆ ದಿನಗಳು ಹೇಗೆ ತಾನೆ ಮರಿಯೋಕೆ ಸಾಧ್ಯವಾಗತ್ತೆ ಸಾಧ್ಯನೇ ಇಲ್ಲ. ಶಾಲೆಗೆ ಹೊರಟು ನಿಂತ್ರೆ ಅಪ್ಪಾನೋ, ಅಮ್ಮಾನೋ, ಅಜ್ಜಿನೋ, ತಾತನೋ ಕೈಗೆ ರೂಪಾಯಿ ಕೊಟ್ರೆ ಸಾಕು ಕೋಟಿ ಕೈಗಿಟ್ಟಂಗೆ ಅನ್ಸ್ತಿತ್ತು. ಮಳೆ ಬಂದ್ರೆ ಸಾಕು ತೋಯ್ಸ್ಕೊಂಡು ನಿಂತ ನೀರಲ್ಲಿ ಕುಣಿದು ಕುಪ್ಪಳಿಸಿ ಏನೂ ಗೊತ್ತಿಲ್ಲದವರಂತೆ ಮನೆ ಬಾಗಿಲ ಬಳಿ ಬಂದು ನಿಂತ್ರೆ ಹಾಳು ಮಳೆ ಮಗು ತೋಯೋತರ ಮಾಡ್ಬಿಡ್ತು ಅಂತ ಅಜ್ಜಿ ಬಟ್ಟೆ ತಗೊಂಡು ತಲೆ ಒರಿಸ್ತಾ ಬೈತಿದ್ರೆ ಒಳಗೊಳಗೇ ಖುಷಿ ಆಗ್ತಿತ್ತು. ತಕ್ಷಣ ಬಿಸಿ ಬಿಸಿ ಏನಾದ್ರು ತಿಂಡಿ, ಕಾಫಿ ಕೊಟ್ಟು ನೋಡ್ಕೊಂಡು ಬರೋದಲ್ವಾ ಕಂದ ಅಂತಿದ್ರೆ ಹೂಂ ಅಂತ ಗುನುಗಿ ಸುಮ್ಮನೆ ಆಗೋವಷ್ಟರಲ್ಲಿ ಅಜ್ಜ ಅಜ್ಜಿಯ ಬಿಸಿ ಅಪ್ಪುಗೆ ಅಬ್ಬಬ್ಬಾ ನಿಜವಾಗಿಯೂ ಬಾಲ್ಯದೊಂದಿಗೆ ಜೀವಿಸೋದು ಅಂದ್ರೆ ಇದೆ ಅನಿಸುತ್ತದೆ.

- Advertisement -

ಬಾಲ್ಯ ಕೇವಲ ಬಾಲ್ಯ ಆಗಿರುತ್ತಿರಲಿಲ್ಲ. ಅದು ಬದುಕಿನ ಭಾಗವಾಗಿರುತ್ತಿತ್ತು. ಬಾಲ್ಯದಲ್ಲೇ ರಟ್ಟೆಯಲ್ಲಿ ಗಟ್ಟಿತನವನ್ನ ತುಂಬುವ ಅಪ್ಪಟ ಮಣ್ಣಿನ ಗತ್ತನ್ನು, ಗಟ್ಟಿತನವನ್ನು ಅಜ್ಜಿ ತಾತನೆಂಬ ಅತಿಮಾನುಷ ಶಕ್ತಿಗಳು ತಮ್ಮ ಗರಡಿಯಲ್ಲಿ ಪಳಗಿಸಿ ಕೈಬಿಡುತ್ತಿದ್ದವು. ಮಾತು ಬಾರದೆ ತೊದಲಾಡುವ ಸಮಯದಲ್ಲಿ ಕೊಕ್ಕರೆಯಂತೆ ತಲೆಯಾಡಿಸುತ್ತಾ ಮುದ್ದು ಮುದ್ದಾಗಿ ಮಾತನಾಡುವ ಅಜ್ಜ, ಅಜ್ಜಿ, ಅಪ್ಪ ಅಮ್ಮನ ಮಾತುಗಳು ಕಿವಿಗೆ ಬೀಳ್ತಿದ್ವು. ನಾ ಮುಂದು ತಾ ಮುಂದು ಎನ್ನುತ್ತಾ ಒಬ್ಬರಾದ ನಂತರ ಒಬ್ಬರು ಎತ್ಕೊಳೋದು, ಆಡ್ಸೋದು ಅವೆಲ್ಲವೂ ನಮ್ಮ ಪಾಲಿನ ಅದೃಷ್ಟವೇ ಸರಿ. ಬೆಳಿತಾ ಬೆಳಿತಾ ಹೆಜ್ಜೆ ಮೇಲೆ ಹೆಜ್ಜೆ ಇಟ್ಟಾಗ ನಮ್ಮ ನಡಿಗೆ ಸಂಭ್ರಮಿಸುವ ತುಂಬು ಕುಟುಂಬದ ಸಂಭ್ರಮ, ಹಾಲ್ಗೆನ್ನೆ ಸವರಿ, ಹಿಂಡಿ ನಾವು ಮಕ್ಕಳಿದ್ದಾಗ ನಗು ಮತ್ತು ಅಳುವನ್ನು ಸಂಭ್ರಮಿಸಿದ ನಮ್ಮವರ ಮೊಗದಲ್ಲೊಂದು ಸಣ್ಣ ನಗೆ ತರಿಸುವ ಬಾಲ್ಯ ಎಷ್ಟು ಚಂದ.

ಊಟ ಮಾಡೋಕೆ ಹಠ ಮಾಡಿದಾಗ ಗೊಗ್ಗಯ್ಯ ಬರ್ತಾನೆ, ನಿನ್ನ ಚಿಕ್ ಮಗು ಅಂತ ಹಿಡ್ಕೊಂಡು ಹೋಗ್ತಾರೆ, ಅಲ್ನೋಡು ಚಂದಮಾಮ ಅಂತ ಏನೇನೋ ಜಗತ್ತಿನಲ್ಲಿ ಇಲ್ಲದೆ ಇರೋವಂತ ಅತಿ ಸುಂದರವಾದ ಸುಳ್ಳನ್ನ ಹೇಳಿ ಅಮ್ಮ ಮಾಡ್ಸೋ ಕೈತುತ್ತು ಅದರ ಗಮ್ಮತ್ತು ಆ ಚಂದಮಾಮನಿಗೂ ಗೊತ್ತಿತ್ತು. ಇನ್ನು ಹಠ ಮಾಡಿ ಕಣ್ತುಂಬ ನೀರು ತಂದುಕೊಂಡ್ರೆ ಅಣ್ಣನಿಗೆ ಹೊಡಿಯೋಣ, ಅಪ್ಪನಿಗೆ ಹೊಡಿಯೋಣ ಅಂತ ಹೇಳಿ ಹೊಡೆದಂತೆ ನಟಿಸಿ ನಗಸ್ತಿದ್ದ ಅಮ್ಮ ಅವಳಿಗೆ ಅವಳೇ ಸಾಟಿ. ಹುಷಾರು ತಪ್ಪಿದ್ರೆ ಯಾವ ಮಾರಿ ಮಸಣಿ ಕಣ್ಣು ತಾಕಿತ್ತೋ ನನ್ ಕಂದಮ್ಮನ ಮೇಲೆ ಅಂತ ಆಕೆ ದೃಷ್ಟಿ ತೆಗಿಯೋ ರೀತಿಗೆ ನಮಗೆ ಗೊತ್ತಿಲ್ದೆ ಅವಳ ಅಭಿಮಾನಿ ಆಗುವಂತೆ ಮಾಡಿದ ಜಗತ್ಪ್ರಸಿದ್ಧ ಜಾದುಗಾರಳ ಮಾಯೆ ಕಂಡು ಬೆರಗಾದ ಆ ದಿನಗಳು ಅದ್ಭುತವೇ ಸರಿ. ಸಂಜೆಯಾದ್ರೆ ಸಾಕು ಅಜ್ಜ ಅಜ್ಜಿ ಅಂಗಳಕ್ಕೆ ಕೂತು ಅವರದೇ ಬದುಕಿನ ಶೈಲಿಯನ್ನು ಕಥೆಗಳನ್ನಾಗಿ ರೂಪಿಸಿ ಆ ಕಥೆಯಲ್ಲಿ ರಾಜ, ರಾಣಿ, ಕಳ್ಳ, ರೈತ, ದೇವರು, ಜನಸಾಮಾನ್ಯರು ಹೀಗೆ ಬದುಕಿನ ಕಥೆಗಳನ್ನೆಲ್ಲ ನಿರೂಪಕರಂತೆ ಅವುಗಳನ್ನು ಒಂದೊಂದಾಗಿ ಎಳೆ ಎಳೆಯಾಗಿ ಹೇಳ್ತಿದ್ರೆ ಅನುಭವಗಳಿಂದ ಕಟ್ಟಿದ ಕಥೆಗಳು ಬದುಕಿಗೂ ಆದರ್ಶವಾಗುವಂತೆ ಕೂಡಿರುತ್ತಿದ್ದವು. ಇನ್ನು ಮನೆಮಂದಿಗೆಲ್ಲಾ ನಿದ್ರೆ ಬಂದ್ರು ಕಣ್ಣು ಬಿಟ್ಟು ಪಿಳಿ ಪಿಳಿ ನೋಡ್ತಾ ಚಂಡಿಯಂತೆ ಯಾವುದಕ್ಕೋ ಹಠ ಮಾಡ್ತಾ ಕೂತ್ರೆ ಅಪ್ಪ ಸಮಾಧಾನ ಮಾಡ್ತಾ ಅವರ ಎದೆಯ ಸಾಮ್ರಾಜ್ಯದ ಮೇಲೆ ಮಲಗಿಸಿ ಬೆನ್ ತಟ್ಟುತ್ತಾ ಇದ್ರೆ ಅದಕ್ಕಿಂತ ನೆಮ್ಮದಿಯ ಜಾಗ ಪ್ರಪಂಚದಲ್ಲೇ ಇಲ್ಲ ಅನ್ನಿಸ್ತಾ ಇತ್ತು. ಶಾಲೆಗೆ ಹೋಗೋಕೆ ಮಾರಿಯಂತೆ ಹಠ ಮಾಡ್ತಿದ್ರೆ ಓದದೇ ಹೋದ್ರೆ ದನ ಕಾಯೋಕೆ ಕಳ್ಸ್ಬೇಕಾಗತ್ತೆ, ನಿನ್ನನ್ನ ಮನೆಯಿಂದ ಹೊರಗೆ ಹಾಕ್ತಿವಿ ಅಂತ ಬೆದರಿಸಿ ಶಾಲೆಗೆ ಅಭ್ಯಾಸ ಮಾಡಿಸಿದ ಆ ದಿನಗಳು ಇಂದಿಗೂ ಹಸಿರು. ಶಾಲೆಯಿಂದ ಬಂದ ತಕ್ಷಣ ಪಾಠಿಚೀಲ ಮನೆಯಲ್ಲಿ ಇಟ್ಟು ಆಡಲು ಹೊರಟರೆ ಬಾಲ್ಯದ ಸ್ನೇಹಿತರ ದಂಡೇ ಸೇರ್ತಾ ಇತ್ತು. ಒಬ್ಬರನ್ನು ಚೋರ್(ಕಳ್ಳ)ನೆಂದು ಕರೆದು ಉಳಿದವರೆಲ್ಲ ಬಚ್ಚಿಟ್ಟುಕೊಂಡು ಕಳ್ಳ ಅವರನ್ನು ಹುಡುಕಿದರೆ ಮೊದಲು ಸಿಕ್ಕವರು ಕಳ್ಳ ಆಗುವಂತ ಮತ್ತು ಕಳ್ಳನಾಗಿದ್ದವರ ಬೆನ್ನಿಗೆ ಕೊನೆಗುಳಿದ ಒಬ್ಬ ಬೆನ್ ತಟ್ಟಿದ್ದರೆ ಅವನೇ ಚೋರ್ ಆಗುತ್ತಿದ್ದ ಆಟ, ಒಂದು ಕೋಲು ಹಿಡಿದು ಮತ್ತೊಂದು ಕೋಲಿನಿಂದ ನೆಲ ತಾಕದೆ ಬಂಡೆಗಳ ಮೇಲೆ ಅದನ್ನು ತಳ್ಳುತ್ತಾ ಒಬ್ಬರ ಕೋಲನ್ನು ಮತ್ತೊಬ್ಬರು ಮುರಿದು ಹಾಕುವ ಆಟ, ಮಣ್ಣಿನಲ್ಲಿ ಬಳೆ ಚೂರುಗಳನ್ನು ಬಚ್ಚಿಡುವ ಮತ್ತು ಹುಡುಕುವ ಆಟ, ಅಳಿಗುಳಿ ಮನೆಯಾಟ, ಕುಂಟೆಬಿಲ್ಲೆ, ಚಿನ್ನಿದಾಂಡು, ನಾ ಮೊದಲು ತಾ ಮೊದಲು ಅಂತ ಗಾಲಿ ನೂಕುವ ಆಟ, ವಾರದ ಕೊನೆಯಲ್ಲಿ ಭಾನುವಾರದ ರಜೆಯಲ್ಲಂತೂ ಮನೆ ಸೇರದೆ ಮರವೇರಿ ಕುಳಿತು ಆಡುವ ಮರಕೋತಿಯಾಟ, ತೆಂಗಿನಮರದ ಮಟ್ಟೆಯ ಮೇಲೆ ಕುಳಿತು ಎಳೆಯುವ ಆಟ, ಕಲ್ಲಿನ ಮೇಲೆ ಕಲ್ಲು ಜೋಡಿಸಿ ದೂರದಲ್ಲಿ ನಿಗದಿಪಡಿಸಿದ ಉದ್ದಿ(ಜಾಗ)ಯಲ್ಲಿ ನಿಂತು ಗುರಿಯಿಟ್ಟು ಹೊಡೆಯುವ ಆಟ, ಬಗ್ಗು ಬುಗುರಿ ಅಂದ್ರೆ ಒಬ್ಬರ ತಿರುಗುವ ಬುಗುರಿಯನ್ನು ಮತ್ತೊಬ್ಬರು ಬುಗರಿಯಿಂದ ಹೊಡೆಯುವುದು ಅಥವಾ ಯಾರದು ಹೆಚ್ಚು ಸಮಯ ತಿರುಗುತ್ತದೋ ಅವರೇ ಗೆಲ್ಲುವ ಆಟ, ಗೋಲಿಯಾಟ, ಬಗ್ಗ ಬಣ್ಣದ ಆಟ ಅಂದ್ರೆ ಒಬ್ಬರು ಇಬ್ಬರು ಮೂರು ಹೀಗೆ ಕೈ ಕೈ ಜೋಡಿಸಿ ಹಿಡಿದು ತಿರುಗಿ ತಲೆ ಸುತ್ತು ಬರುವಂತೆ ತಿರುಗಿದ ಆಟ,ಕೆಸರು ಗದ್ದೆಯಲ್ಲಿ ಓಡುವ ಆಟ, ನಾ ಮೊದ್ಲು ನೀ ಮೊದಲು ಅಂತ ಸೈಕಲ್ ತುಳಿಯೋ ಓಟ, ನೀ ನನಗೆ ತೂಗಬೇಕು, ನಾ ನಿನಗೆ ತೂಗಬೇಕು ಅಂತ ಮರಕ್ಕೆ ಜೋಕಾಲಿ ಕಟ್ಟಿ ತೂಗಿದ ಆಟ,ಮಳೆ ಬಂದು ನಿಂತ ನೀರಲ್ಲಿ ಕಾಗದಗಳ ಡೋಣಿ(ದೋಣಿ)ಮಾಡಿ ಅಲ್ಲೂ ನಾ ಮೊದಲು ತಾ ಮೊದಲು ಎಂದು ನೀರಿಗೆ ಹರಿಬಿಡುವ ಆಟ, ಗೋಣಿ ಚೀಲದಲ್ಲಿ ನಿಂತು ಹೆಗರುವ ಆಟ, ಅತ್ತ ಒಂದಷ್ಟು ಮಕ್ಕಳು ಇತ್ತ ಒಂದಷ್ಟು ಮಕ್ಕಳು ಕೂಡಿ ಹಗ್ಗ ಜಗ್ಗುವ ಆಟ, ಗಾಳಿ ಪಟಗಳನ್ನು ಹಾರಿಸಿ ಮತ್ತೊಬ್ಬರ ಗಾಳಿ ಪಟವನ್ನು ಹರಿಸುವುದು, ಕಣ್ಣಾಮುಚ್ಚಾಲೆ ಆಟ ಹೀಗೆ ಲೆಕ್ಕಕ್ಕಿಲ್ಲದಷ್ಟು ಆಟಗಳನ್ನು ಆಡಿ ಮನೆಗೆ ಬಂದ್ರೆ ಅಜ್ಜಿ, ತಾತ ಹೇಳೋ ಕಥೆಗಳು, ಆನೆ ಬಂತೊಂದಾನೆ ಅಂತ ಅಜ್ಜ ಬೆನ್ನಮೇಲೇರಿಸಿ ಆಡಿಸ್ತಾ ಅಮ್ಮ ಕೈತುತ್ತು ತಿನ್ನಿಸ್ತಾ ಇದ್ರೆ ಸ್ವರ್ಗಕ್ಕೆ ಮೂರೇ ಗೇಣು ಅನ್ನುವಷ್ಟು ಖುಷಿಯಾಗ್ತಿತ್ತು. ಇನ್ನು ಮನೆಯ ಮುಂದೆ ಇರೋ ಅಂಗಳದಲ್ಲಿ ಎದ್ನೋ, ಬಿದ್ನೋ ಅಂತ ಆಟ ಆಡ್ತಾ ಇದ್ರೆ ಮೈತುಂಬಾ ಮಣ್ಣು ಮೆತ್ಕೊಂಡು ವಾರಿಗೆಯ ಸ್ನೇಹಿತರೊಂದಿಗೆ ಕುಣಿದು ಕುಪ್ಪಳಿಸ್ತಾ ಇದ್ರೆ ಯಾವಾಗ್ಲೂ ಮಣ್ಣಲ್ಲೇ ಇರ್ತವೆ ಸಾಕಾಗಿದೆ, ಮಣ್ಣು ಗಿಣ್ಣು ತಿಂದುಬಿಟ್ಟಿಯ, ಮೈಕೈ ನೋಡೋ ಹಾಗಿಲ್ಲ ಬಾ ಅಂತ ಅಮ್ಮ ಎಳ್ಕೊಂಡು ಹೋದ್ರೆ ಅಜ್ಜಿ ತಾತ ಮಕ್ಕಳು ಎಲ್ಲ ಆಟಗಳನ್ನ ಆಡ್ಬೇಕು, ಮಣ್ಣಿಂದಲೇ ಬಂದಿದೀವಿ ಅಂದ್ರೆ ಮಣ್ಣಲ್ಲಿ ಆಡೋದ್ರಲ್ಲೇನಿದೆ ಮಗು ಆಡ್ಲಿಬಿಡಮ್ಮ ಅಂತ ಅಮ್ಮನಿಗೆ ಅಂದ್ರೆ ಏನಾದ್ರು ಮಾಡ್ಕೊಳಿ ಅಂತ ಅಮ್ಮ ಆಕೆ ಕೆಲಸಕ್ಕೆ ಆಕೆ ಹೋಗ್ತಿದ್ಲು, ಸಾಕಾಗೋವರೆಗೂ ಮಣ್ಣಲ್ಲಿ ಆಟ ಆಡಿ ಮನೆಗೆ ಹೋದ್ರೆ ಒಳಗೊಂದು ಬಾ ನಿನಗೆ ಹೇಳೋರಿಲ್ಲ, ಕೇಳೋರಿಲ್ಲ ಅನ್ಕೊಂಡಿದೀಯ, ಕಾಲು ಮುರೀತೀನಿ ಅಂತ ಅಮ್ಮ ಬೈತಿದ್ರೆ ಕೇಳೋಕೆ ಹಿತ ಅನ್ಸ್ತಿತ್ತು. ಸಪ್ಪೆ ಮೋರೆ ಹಾಕಿ ಬಾಗ್ಲಲ್ಲೆ ಹೊಸ್ತಿಲ ಹೊರಗೆ ಕೂತ್ಕೊಂಡಿರೋದನ್ನ ನೋಡಿ ಇರ್ಲಿ ಒಳಗೆ ಕರಿಯೇ ಅಂತ ಅಪ್ಪ ಹೇಳಿದಾಗ ನಂಗೇನು ಪ್ರೀತಿ ಇಲ್ವಾ, ನನಗು ಇದೆ ಆದ್ರೆ ಒಬ್ಬರದ್ದಾದ್ರೂ ಭಯ ಇರ್ಬೇಕು ಅಂತ ಹೀಗ್ ಮಾಡ್ತಿರ್ತೀನಿ ಅಂತ ಹೇಳಿ ಬಾ ಕಂದ ಅಂತ ಒಳಗ್ ಕರೆದು ಬಿಸಿ ಕೆನೆ ಹಾಲನ್ನ ಊದುತ್ತಾ ತಲೆ ನೇವರಿಸಿ ಆಕೆಯ ಸೀರೆ ಸೆರಗಿನಿಂದ ಮುಖ ಒರಿಸ್ತಾ ಹಾಲು ಕುಡಿಸಿ ತೊಡೆ ಮೇಲೆ ಮಲಗಿಸಿ ಕೆನ್ನೆ ಸವರುತ್ತಿದ್ರೆ ಜಗತ್ತಿನಲ್ಲಿ ಎಲ್ಲೂ ಸಿಗದ ನೆಮ್ಮದಿ ಅಲ್ಲಿ ಸಿಗ್ತಾ ಇತ್ತು. ಅದೇನೇ ಇರಲಿ ಆ ದಿನಗಳೆಂದರೆ ಎಂದೂ ಮಾಸದ ದಿನಗಳು.

ಪ್ರತಿಯೊಬ್ಬರ ಬದುಕಿನಲ್ಲಿ ಬಾಲ್ಯದ ನೆನಪುಗಳು ಒಂದಲ್ಲ ಒಂದು ಕಾರಣಕ್ಕೆ ಕಾಡಬಹುದು, ಕಾಡಲೇಬೇಕಲ್ವಾ, ಆ ದಿನಗಳು ಒಮ್ಮೆಯೂ ನೆನಪಿಗೆ ಬಂದಿಲ್ಲವೆನ್ನುವವರಿದ್ರೆ ಅವರು ಬಾಲ್ಯವನ್ನು ಜೀವಿಸಿಯೇ ಇಲ್ಲವೆಂದರ್ಥ. ಆ ದಿನಗಳೇ ಹಾಗೆ ನಿರಭ್ರ, ನಿಷ್ಕಲ್ಮಶ ಪ್ರೀತಿ, ದ್ವೇಷ ಅಸೂಯೆಗಳಿಗೆ ಅವಕಾಶವೇ ಇಲ್ಲ, ಎಲ್ಲರೂ ಒಂದೇ ಎಂಬ ಭಾವನೆ ಹೀಗೆ ನೂರಾರು ನೆನಪುಗಳು ಎಂದೂ ಮರೆಯದ ದಿನಗಳಾಗಿ ಉಳಿಯುತ್ತವೆ. ಇನ್ನು ಶಾಲೆಗೆ ಹೊರಟಾಗ ಒಂದೇ ಸೈಕಲ್ ಮೇಲೆ ಮೂರು ಜನ ಕೂತ್ಕೊಂಡು, ಅಲ್ಲೆಲ್ಲೋ ಕೂತ್ಕೊಂಡು ಬಟಾಣಿ ಮಾರೋ ಅಜ್ಜಿ ಹತ್ರ ಒಂದೆರಡು ರುಪಾಯಿಗೆ ಬಟಾಣಿ ತಗೊಂಡು ಬಾಯಲ್ಲಿ ಹಾಕೊಂಡ್ ತಿಂತಾ ಗೆಳೆಯರೊಂದಿಗೆ ಸೈಕಲ್ ಓಡಿಸ್ತಾ ಇದ್ರೆ ಅಬ್ಬಬ್ಬಾ ಹೇಳ್ಕೊಳೋಕಾಗ್ದಿರೋ ಖುಷಿ ಒಳಗೊಳಗೇ ಆಗ್ತಿತ್ತು. ಇನ್ನು ವಾರಕ್ಕೊಮ್ಮೆ ಎಲ್ಲರೂ ಸೇರಿ ಒಬ್ಬರ ಮನೆಯಲ್ಲಿ ಹುಣಸೆ ಹಣ್ಣು, ಇನ್ನೊಬ್ರು ಹಸಿ ಮೆಣಸಿನಕಾಯಿ, ಮತ್ತೊಬ್ಬರು ಜೀರಿಗೆ, ಉಪ್ಪು ಬೆಲ್ಲ ಒಬ್ಬೊಬ್ಬರು ಒಂದೊಂದನ್ನ ದೊಡ್ಡವರಿಗೆ ಗೊತ್ತಾಗದೆ ತಂದು ಒಂದು ಬಂಡೆಗೆ ನೀರು ಹಾಕಿ ಚನ್ನಾಗಿ ಶುದ್ಧ ಮಾಡಿ ಎಲ್ಲ ಹಾಕಿ ಅದನ್ನ ಜಜ್ಜಿ ಕಡ್ಡಿಗೆ ಉಪ್ಪುಹುಣಸೆ ಹಚ್ಚಿ ತಿಂತಿದ್ದ ದಿನಗಳು ಬೆನ್ನಲ್ಲೇ ಕೆಮ್ಮಾಯ್ತು ಅದನ್ನ ತಿಂದು ಅಂದಾಗ ಎಲ್ಲಿಲ್ಲದ ಪದಗಳನ್ನು ಹೆಕ್ಕಿ ತಂದು ಅಮ್ಮ ಮಾಡ್ತಿದ್ದ ಮಂಗಳಾರತಿ ವಾವ್ಹ್ ಮರಿಯೋಕೆ ಸಾಧ್ಯನೇ ಇಲ್ಲ. ಇನ್ನು ಸೀಸನ್ ನಲ್ಲಿ ಕಾರೆಹಣ್ಣು, ಕವಳೇ ಹಣ್ಣು, ಸಣ್ಣ ಬಾರೇಹಣ್ಣು, ನೇರಳೆ ಹಣ್ಣಿಗೆ ಚೀಲಗಳನ್ನು ಹಿಡಿದು ಹೊಲಗಳಿಗೆ ಕುಣಿಯುತ್ತಾ ಹೋಗಿ ನಾ ಹೆಚ್ಚು ನೀ ಹೆಚ್ಚು ಅಂತ ಕಲ್ಲು ಬಿಸಿ ಆರಿಸಿ ಹಂಚಿಕೊಂಡು ತಂದು ತಿನ್ನುವಾಗ ಆ ಸಂಭ್ರಮಕ್ಕೆ ಎಲ್ಲೆಯೇ ಇಲ್ಲ. ಇನ್ನು ಪಾಠದಲ್ಲೂ ಅಷ್ಟೇ ಶ್ರದ್ದೆ ಮತ್ತು ಭಕ್ತಿ ಮುಖ್ಯವೆಂದು ಕೆಲವರು ಓದಿಲ್ಲದೆ ಇದ್ದರೂ ತಂದೆ ತಾಯಿಗಳು ಮಕ್ಕಳಾದರೂ ಅಕ್ಷರ ಕಲಿಲಿ ಅಂತ ಅವರ ಓದಿಗಾಗಿ ಪರಿತಪಿಸುತ್ತಾ ಬೆಳಗ್ಗೆ ನಾಲ್ಕಕ್ಕೆ ಬೆಳಗಾಯ್ತೆಳು ಓದ್ಕೋ, ಬರ್ಕೊ ಅಂತ ಅಲಾರಾಂ ಇರದ ಸಮಯದಿಂದಲೂ ಅಪ್ಪ ಅಮ್ಮ ಎದ್ದೇಳಿಸ್ತ ಇದ್ದಾಗ ನಿದ್ರೇಲೆ ಎದ್ದು ಅವರು ದನ, ಕರ, ಮನೆಗೆಲಸ ಅಂತ ಮಾಡ್ತಾ ಎಷ್ಟೇ ಕಷ್ಟ ಇದ್ರೂ ತೋರಿಸ್ಕೊಳ್ದೆ ನಮ್ಮನ್ನ ನಮ್ಮ ಹಾಗೆ ಬಿಟ್ಟು ತಿದ್ದಿ ತೀಡಿ ತಿಳಿ ಹೇಳ್ತಿದ್ದ ದಿನಗಳು ಮತ್ತೆ ಬಾರದ ದಿನಗಳು. ಹೀಗೆ ಹೆಜ್ಜೆ ಹೆಜ್ಜೆಗೂ ಬಾಲ್ಯವನ್ನು ಜೀವಿಸಿದ ದಿನಗಳು ಅವು. ಮನೆಯ ಹೊರಗಿನ ಆಟಗಳು, ಚೇಷ್ಟೆಗಳು ಒಂದು ತರವಾದರೆ, ಎಷ್ಟೇ ಕಷ್ಟದ ಕೆಲಸ ಮಾಡಿ ಬಂದಿದ್ರು ನಮಗಾಗಿ ಸಮಯ ಕೊಟ್ಟು ಮನೆಯ ಒಳಗೆ ಅಜ್ಜಿ, ತಾತ, ಅಪ್ಪ, ಅಮ್ಮ ಎಲ್ರು ಕುಳಿತು ಚೌಕಾಬಾರ ಆಡೋದು, ಹುಣಸೆ ಬೀಜಗಳನ್ನು ಬೊಗಸೆ ಹಿಡಿದು ಬೆಸ, ಸರಿ ಗುರುತಿಸುವ ಆಟ ಒಂದಾ ಎರಡ ಹೀಗೆ ಪ್ರತಿದಿನವೂ ಬಾಲ್ಯದ ಹಬ್ಬ. ಆದರೆ ಅಂತಹ ಬಾಲ್ಯ ಬಹತೇಕ ಇಂದಿನ ಮಕ್ಕಳು ಕಂಡಿಲ್ಲ, ಕಾಣಲಿಕ್ಕೆ ಸಾಧ್ಯವಿಲ್ಲವೇನೋ ಅನಿಸುತ್ತದೆ. ಕಾಲ ಬದಲಾಗಿದೆ, ಒತ್ತಡದ ಬದುಕು ಎಲ್ಲರಿಂದ ಎಲ್ಲವನ್ನೂ ಕಸಿದುಕೊಳ್ಳುತ್ತಿದ್ದೆ. ಇತ್ತೀಚಿನ ಮಕ್ಕಳಿಗೆ ಬಾಲ್ಯದ ದಿನಗಳನ್ನು ಮೆಲುಕು ಹಾಕಬೇಕು ಅಂದ್ರು ಆಗಿನಂತೆ ಬಾಲ್ಯ ಈಗಿನ ಮಕ್ಕಳಿಗೆ ಇಲ್ಲದಾಗಿದೆ. ದೊಡ್ಡವರು ಕೆಲಸದ ಮೇಲೆ ನಿರತರಾಗಿದ್ದಾರೆ, ಮಕ್ಕಳಿಗೂ ಹೋಂ ವರ್ಕ್ ಆಯ್ತು ಕಾನ್ವೆಂಟ್, ಸ್ಕೂಲ್ ಆಯ್ತು, ಕನಿಷ್ಠಪಕ್ಷ ರಜೆಗಾದರೂ ಹಳ್ಳಿಯಲ್ಲಿರೋ ಅಜ್ಜಿ ತಾತಂದಿರನ್ನು ಅಪರೂಪಕ್ಕೂ ಕಾಣದಂತಹ ಪರಿಸ್ಥಿತಿ. ಹಬ್ಬ, ಹುಣಿವೆಯ ಪರಿವೆಯೂ ಇಲ್ಲ. ಇನ್ನು ಮಣ್ಣಿನ ಸೊಗಡಿನ ಬಾಲ್ಯದ ಆಟಗಳು ಈಗಿನ ಮಕ್ಕಳಿಗೆ ಮರೀಚಿಕೆಯಾಗಿವೆ. ಕೈಯಲ್ಲೊಂದು ಮೊಬೈಲ್, ಮಕ್ಕಳು ಅತ್ತರೂ, ಹಠ ಮಾಡಿದರು, ಊಟ ಮಾಡದೆ ಹೋದರು ಈಗಿನ ಬಹುತೇಕ ಪೋಷಕರು ಮಕ್ಕಳ ಕೈಗೆ ತಾವೇ ಮೊಬೈಲ್ ಕೊಡುವಂತದ್ದು. ಮಕ್ಕಳು ಮೊಬೈಲ್ ಅಂದ್ರೆ ಸಾಕು ಬೇರೇನೂ ಬೇಕಿಲ್ಲ, ಪಕ್ಕದಲ್ಲಿ ಹುಲಿ ಬಂದು ನಿಂತರು ಲೆಕ್ಕಿಸೋ ಮಾತೆ ಇಲ್ಲ.

- Advertisement -

ಇನ್ನು ಟಿವಿ ಮುಂದೆ ಕಾರ್ಟೂನ್ ಹಾಕಿ ಕುಳಿತರೆ ಮುಗ್ದೆ ಹೋಯ್ತು ಬೇರೆ ಚಾನಲ್ ಚೇಂಜ್ ಮಾಡೋಹಾಗಿಲ್ಲ. ಪ್ರೀತಿಯ ಅಪ್ಪುಗೆಯಿಂದ ಮುದ್ದುಗರೆದು ತಾವೇ ನೇಯ್ದ ಕಥೆಗಳನ್ನು ಹೇಳೋಣ ಅಂತ ಅಜ್ಜಿ ತಾತ ಹತ್ರ ಕರ್ದ್ರೆ ಅಯ್ಯೋ ನಂಗೆ ಹೋಂ ವರ್ಕ್ ಇದೆ ಅಜ್ಜ, ನಾನು ಶಾಪಿಂಗ್ ಹೋಗ್ಬೇಕು ಅಜ್ಜಿ ಹೀಗೆ ಈಗಿನ ಕಾಲದ ಮಕ್ಕಳ ಬಾಲ್ಯವಿದೆ. ಎಲ್ಲವೂ ಡಿಜಿಟಲ್ ಯುಗವಾದ ಈ ಆಧುನಿಕ ಕಾಲದಲ್ಲಿ ಬಂಧ ಬೆಸೆದ ಬಾಂಧವ್ಯದ ಕೊಂಡಿ ಕಳಚುತ್ತಿದೆ. ಅಕಸ್ಮಾತ್ ಮಕ್ಕಳು ಹೊರಗ್ ಹೋದ್ರು ಅಯ್ಯಯ್ಯೋ ಗಲೀಜು ಹೊರಗೆಲ್ಲ ತಿರುಗಾಡಬಾರದು ಅನ್ನೋ ಪೋಷಕರು ಮಣ್ಣಿನ ಆಟಗಳಾದ ಚಿನ್ನಿದಾಂಡು, ಲಗೋರಿ ಇಂತಹ ಎಷ್ಟೋ ಆಟಗಳನ್ನ ತಾವು ಆಡಿದ್ರು ಮರೆತು, ಮಕ್ಕಳನ್ನು ಆಡೋಕು ಬಿಡದೆ ಮಣ್ಣು ಮುಟ್ಟಿದ್ರೆ ಕಾಯಿಲೆ ಬರತ್ತೆ ಅದ್ರಲ್ಲಿ ಗಲೀಜು ಇರತ್ತೆ ಅಂತ ಹೇಳ್ತಾರೆ. ಸ್ವಲ್ಪ ಮಳೆ ಬಂದ್ರು ಹಿಂದಿನವರು ಮಕ್ಕಳನ್ನ ನೆನೆಯೋಕು ಬಿಡ್ತಿದ್ರು ಹಾಗೆ ಬೈದು ಮುದ್ದಿಸುತ್ತಲೂ ಇದ್ರೂ, ಮಕ್ಕಳ ಖುಷಿ ಕಾಣ್ತಿದ್ರು, ಅವರು ಕುಣಿದು ಕುಪ್ಪಳಿಸಿದ ಹಾಗೆ ನಾವು ಕುಣಿಯೋಕಾಗತ್ತ ಅಂತ ಅಂತಿದ್ರು. ಆದ್ರೆ ಇಂದಿನವರು ಅಯ್ಯೋ ಕೋಲ್ಡ್ ಆಗತ್ತೆ, ಫೀವರ್ ಬರತ್ತೆ ಅಂತಿದ್ರು, ನಮ್ಮ ಹಿರಿಯರು ಮಳೆ, ಗಾಳಿ ಚಳಿಗೆ ಮಕ್ಕಳು ಮೈವೊಡ್ಡಬೇಕು ಆಗಲೇ ಮಕ್ಕಳಲ್ಲಿ ಗಟ್ಟಿತನ ಬರತ್ತೆ ಅಂತ ಹೇಳ್ತಿದ್ರು ಆದ್ರೆ ಈಗ ಹಾಗಲ್ಲ ಮಳೆ ಇದ್ರೆ ಮಳೆ ಇದೆ ಹೊರಗ್ ಹೋಗ್ಬಾರ್ದು, ಬಿಸಿಲಿದ್ರೆ ಬಿಸಿಲಿದೆ ಹೋಗ್ಬಾರ್ದು, ಚಳಿ ಇದ್ರೆ ಚಳಿ ಇದೆ ಹೋಗ್ಬಾರ್ದು ಹೀಗೆ ಬಹುತೇಕ ತಂದೆ ತಾಯಿಗಳು ಮಕ್ಕಳನ್ನ ಕೀ ಕೊಟ್ರೆ ಆಡೋ ಬೊಂಬೆಗಳನ್ನಾಗಿ ಬೆಳೆಸ್ತಾ ಇದಾರೆ. ಇನ್ನು ನಗರ ಪ್ರದೇಶಗಳಲ್ಲಿ ಬೆಳಿಯೋ ಮಕ್ಕಳಂತೂ ಬಾಲ್ಯದ ಆಟಗಳನ್ನು ಆಡುವುದು ಇರಲಿ, ಕನಿಷ್ಠಪಕ್ಷ ಇಂತಹ ಆಟಗಳಿವೆ ಎಂಬುದು ಸಹ ಬಹುತೇಕ ಮಕ್ಕಳಿಗೆ ತಿಳಿದೇ ಇಲ್ಲ. ಕೇವಲ ಅಂಕ ಗಳಿಸುವತ್ತ ಮಕ್ಕಳನ್ನು ಸಿದ್ದಗೊಳಿಸುತ್ತಿದ್ದಾರೆ ಎನಿಸುತ್ತದೆ. ಆದರೆ ಮುಂದೊಂದು ದಿನ ಇರುವ ಸಂಪನ್ಮೂಲ ಎಲ್ಲವೂ ಕಳೆದುಹೋದಾಗ ನಮ್ಮ ಮೂಲ ಹೀಗಿತ್ತು, ಹೆಜ್ಜೆ ಇಟ್ಟಲ್ಲೆಲ್ಲಾ ಬದುಕಿನ ದಾರಿ ಇತ್ತು. ಆದರೆ ಈಗ ದಾರಿ ಇದ್ದರೂ ಹೋಗುವ ದಾರಿ ಸರಿ ಇಲ್ಲವೇನೋ ಎನಿಸುತ್ತಿದೆ. ಹುಟ್ಟಿದ ಮೇಲೆ ಮನುಷ್ಯ ಸಾಯಲೇಬೇಕು ಆದರೆ ಆ ನಡುವೆ ಬದುಕನ್ನ ಅಕ್ಷರಶಃ ಬದುಕಿನಂತೆ ಬದುಕಿದ್ದೇವಾ ಎಂಬ ಪ್ರಶ್ನೆ ಕೊನೆ ಕೊನೆಗೆ ಕಾಡಬಹುದು. ಎಲ್ಲವೂ ಇದ್ದು ಏನೂ ಇಲ್ಲವೆಂಬಂತಹ ಬದುಕು ಬದುಕಿದೆವು ಎನ್ನುವ ಕಾಲವೂ ಬಿಟ್ಟೂ ಬಿಡದೆ ಕಾಡಬಹುದು. ಮಾನಸಿಕವಾಗಿ ಎಷ್ಟು ಸಧೃಡರಾಗಿರುತ್ತೆವೋ ಅಷ್ಟೇ ದೈಹಿಕವಾಗಿಯೂ ಸಧೃಡರಾಗಿರಬೇಕು ಎಂದರೆ ಎಲ್ಲವೂ ಸಕಾಲದಲ್ಲಿ ಪೂರ್ತಿಯಲ್ಲದಿದ್ದರೂ ಅಲ್ಪವಾದರೂ ಸಿಗಬೇಕು. ನನ್ನಜ್ಜ ಆಗಾಗ ಒಂದು ಮಾತು ಹೇಳ್ತಿದ್ರು, ಏನಾದ್ರು ಅವರು ಕೆಲಸ ಹೇಳಿದಾಗ ಅಜ್ಜ ನನ್ ಕೈಲಾಗಲ್ಲ ಅಂದ್ರೆ ಅರೇ ಮಾತು ಬರತ್ತಾ ಆಡ್ಲಿಕ್ಕೆ, ಕೆಲಸ ಬರಲ್ವಾ ನನ್ನಿಂದ ಇದು ಬರಲ್ಲ ಅಂತ ಹೇಳ್ಬಾರ್ದು, ಯಾರ ಮೇಲೇಯೂ ಅವಲಂಬಿತ ಆಗಬಾರದು ಹೇಗೆ ಬೆಳೀಬೇಕು ನೀ ಅಂದ್ರೆ ಬೆಳೆದು ನಿಂತ ಮರ ತನ್ನ ಬೇರುಗಳನ್ನ ಹೇಗೆ ಗಟ್ಟಿಯಾಗಿ ನೆಲಕ್ಕೆ ಬಿಟ್ಟುಕೊಂಡು ಮಳೆ, ಗಾಳಿ, ಚಳಿ ಅನ್ನದೇ ಜಗ್ಗದೆ ಇರ್ತದೋ ಹಂಗೆ ಗಟ್ಟಿಯಾಗಬೇಕು.

ನಾವು ಮನೆಯಲ್ಲಿ ಕುಂಡದಲ್ಲಿ ಡಬ್ಬಿಯಲ್ಲಿ ಬೆಳೆಸಿದ ಗಿಡದ ಹಾಗೆ ಇನ್ನೊಬ್ಬರ ಆರೈಕೆ, ಆಶ್ರಯದಲ್ಲೇ ಇರಬಾರದು ಅಂತ ಹಂಗಂದ್ರೆ ಹೆಂಗ್ ಅಜ್ಜ ಅಂದ್ರೆ ಹೂ ಪ್ಯಾಟ್ಯಾಗ್ ಬೆಳೆದ ಬಹುತೇಕ ಈಗಿನ ಮಕ್ಕಳು ಹಂಗೆ ಪಾಪ ಅವು ಸೂಕ್ಷ್ಮವಾಗಿ ಬೆಳ್ದಿರ್ತಾವೆ ನಿಮ್ಮಂಗೆ ಗಟ್ಟಿಮುಟ್ಟು ಬರಾಕಿಲ್ಲ ಅಂತಿದ್ರು ಯಾಕೆ ಅಂದ್ರೆ ಹಳ್ಳಿಯಾಗ ಕೈಬಿಟ್ಟು ಮಣ್ಣು, ನೀರು, ಕಲ್ಲು ಅಂತ ಆಡಿದ್ ಮಕ್ಕಳು ಬಂದಷ್ಟು ಗಟ್ಟಿ ಅವು ಬರಾಕಿಲ್ಲ, ಇತ್ತೀಚಿಗಂತೂ ಹಳ್ಳಿ ಹ್ಯಾಂಗ್ ಇರ್ತದಂತ ಈಗಿನ ಬಾಳ ಮಕ್ಕಳಿಗೆ ಗೊತ್ತಿಲ್ಲ ಅಂದ್ರು. ಹೌದಲ್ವಾ ಅಂತ ನನಗು ಅನ್ಸ್ತು. ಅವರು ಇನ್ನು ಒಂದು ಮಾತನ್ನ ಹೇಳ್ತಿದ್ರು “ಮೂರು ವರ್ಷದ ಬುದ್ಧಿ ನೂರು ವರುಷದ ತನಕ” ಅಂತ ಅಂದ್ರೆ ನಾವು ಬಾಲ್ಯದಲ್ಲಿ ಕಳೆದ ದಿನ, ನೆನಪು ಮಧುರವಾದವು. ನಿಷ್ಕಲ್ಮಶವಾಗಿ, ಯಾರನ್ನು ದ್ವೇಷಿಸದೆ ಬೆಳೆದ ದಿನಗಳವು ಆಗ ರೂಪಗೊಳ್ಳುವ ನಮ್ಮ ವ್ಯಕ್ತಿತ್ವ ಮುಂದೆ ನೂರರ ಸಮಯದಲ್ಲೂ ಮಗು ಮನಸ್ಸು ಜೀವಂತವಾಗಿರತ್ತೆ ಅಂತ. ಅದು ನಿಜಕ್ಕೂ ಆ ದಿನಗಳನ್ನು ಅನುಭವಿಸಿರುವಬವರಿಗೆ ಈ ಮಾತನ್ನು ಹಿರಿಯರು ಹೇಳಿರಬಹುದು ಎನಿಸಿತು ಏಕೆಂದರೆ ವಯಸ್ಸಾಗ್ತಾ, ಆಗ್ತಾ ಹಿರಿಯರು ಮಕ್ಕಳಾಗುತ್ತಾರೆ ಎಂಬ ಮಾತಿದೆ ಅಂದ್ರೆ ಅವರ ವಯಸ್ಸು ನೂರಾದರೂ ಮನಸ್ಸು ಮೂರರಂತೆ ಇರುತ್ತದೆ. ಆ ಕುಚೇಷ್ಟೆಗಳು, ಹಲ್ಲು ಉದುರಿದ ಬಾಯಲ್ಲಿ ಮುತ್ತಂತೆ ಬರುವ ಮಾತುಗಳು ಮತ್ತೆ ಅವರಲ್ಲಿ ಈ ಬಾಲ್ಯ ನೆನಪಿಸುವಂತೆ ಮಾಡುತ್ತದೆ. ಹಾಂ, ಹಾಗಾದರೆ ಚಿರವಲ್ಲದ ಈ ಬದುಕಿನಲ್ಲಿ ಯಾರಿಗಾಗಿ ಬದುಕು, ಯಾತಕ್ಕಾಗಿ ಬದುಕು ನಮಗಾಗಿ ಅಲ್ವಾ! ನಾವೇ ಸಂಭ್ರಮಿಸಿಲ್ಲ ಪ್ರತಿ ಹಂತ, ಪ್ರತಿ ದಿನಗಳನ್ನ ಅಂದ್ರೆ ಹೇಗೆ ಮರಳಿ ಬಾರದ ಆ ದಿನಗಳನ್ನು ನೀವು ಮೆಲುಕು ಹಾಕಿ. ಯಾವುದೋ ಕಾರಣಕ್ಕೆ ಬೇಸರ, ಇನ್ನ್ಯಾವುದೋ ಕಾರಣಕ್ಕೆ ನೋವು ಉಂಟಾದಾಗ ಕೊಂಚ ಮರೆಸುವ ಔಷಧಿ ಗುಣವಿರುವುದು ನಾವು ಕಳೆದ ಹಿಂದಿನ ದಿನಗಳು ಬಾಲ್ಯ ಮಾತ್ರ. ದಿನ ಕಳೆದಂತೆ ಕಳೆದುಹೋದ ದಿನಗಳೇ ಎಷ್ಟೋ ಚಂದ ಎನಿಸುತ್ತದೆ. ಅಂದೆನಿಸಿದಾಗ ನೆನಪಿಸಿಕೊಳ್ಳಲು ಆ ದಿನಗಳು ಬೇಕಲ್ಲವೇ ಹೌದು ಪ್ರತಿ ಕ್ಷಣವನ್ನೂ ಖುಷಿಪಡಿ. ಚಂದದ ಬಾಲ್ಯದ ದಿನಗಳನ್ನು ನಾಳೆಗಳನ್ನು ಮಕ್ಕಳಿಗಾಗಿ ಸೃಷ್ಟಿಮಾಡಿ. ಬಾಲ್ಯದಲ್ಲಿ ಸಾಧ್ಯವಾದಷ್ಟು ಮಕ್ಕಳನ್ನು ಮನೆಯವರೊಂದಿಗೆ, ಅಜ್ಜಿ, ತಾತ, ನೆರೆಹೊರೆಯವರೊಂದಿಗೆ ರಜಾ ದಿನಗಳಲ್ಲಾದರೂ ಸಮಯ ಕಳೆಯಲು ಬಿಡಿ. ಪಾಠದ ಜೊತೆಗೆ ಆಟಕ್ಕೂ ಅವಕಾಶವಿರಲಿ. ಮೊಬೈಲ್ ಗೆ ಗುಡ್ ಬೈ ಹೇಳಿ ಮಕ್ಕಳೊಂದಿಗೂ ನೀವು ಬೆರೆತು ಮಕ್ಕಳಂತೆ ಸ್ವಲ್ಪ ಸಮಯ ಕಳೆಯಿರಿ. ಬಾಲ್ಯವನ್ನು ಬಲಿಕೊಡಬೇಡಿ ಬಾಲ್ಯವನ್ನು ಪ್ರತಿಯೊಬ್ಬರೂ ಜೀವಿಸಿ. ನಿಮ್ಮ ಬಾಲ್ಯ ನೆನಪಾದಾಗ ಅವುಗಳು ಕೊಂಚ ಸಮಯವಾದರೂ ಖುಷಿ ನೀಡುವಂತಿರಲಿ. ಬಾಲ್ಯ ಬಲಿಯಾಗದಿರಲಿ.

ಡಾ ಮೇಘನ ಜಿ
ಉಪನ್ಯಾಸಕರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಬಸವಣ್ಣ ನಮಗೇಕೆ ಬೇಕು ?

ಬಸವಣ್ಣ ಜಗವು ಕಂಡ ಶ್ರೇಷ್ಠ ಸಾರ್ವಕಾಲಿಕ ಸಮಕಾಲೀನ ಸಮತೆಯ ಶಿಲ್ಪಿ ಸತ್ಯ ಶಾಂತಿ ಪ್ರೀತಿ ಅನುಪಮ ಮಾನವ ಮೌಲ್ಯಗಳನ್ನು ಮರ್ತ್ಯದಲ್ಲಿ ಬಿತ್ತರಿಸಿದ. ಪ್ರಾಯಶ ಎಲ್ಲಾ ಹಂತದಲ್ಲೂ...
- Advertisement -

More Articles Like This

- Advertisement -
close
error: Content is protected !!
Join WhatsApp Group