ಅದೊಂದು ಏಕೋಪಾಧ್ಯಾಯ ಶಾಲೆ.ಅಲ್ಲಿದ್ದ ಶಿಕ್ಷಕರ ಬಗ್ಗೆ ಆ ಊರಿನ ಜನರಿಗೆ ಬಹಳ ಪ್ರೀತಿ.ಮಾಸ್ಟ್ರು ಶ್ರೀಕಂಠ ಮೂರ್ತಿ ಅವರ ಕುಟುಂಬವೇ ಗುರು ಕುಟುಂಬ.ಅವರ ತಂದೆ ಹನುಮಂತ ಮೂರ್ತಿ ಅವರು ಅದೇ ಗ್ರಾಮದಲ್ಲಿ ಐವತ್ತು ವರ್ಷಗಳ ಹಿಂದೆ ಅಕ್ಷರ ದಾನ ಕೇಂದ್ರ (ಅಂದಿನ ಭಾಷೆಯಲ್ಲಿ ಕೂಲಿಮಠ ) ನಡೆಸುತ್ತಿದ್ದರು.ಗ್ರಾಮದ ನೂರಾರು ಮಕ್ಕಳಿಗೆ ಅಕ್ಷರ ಕಳಿಸಿದ್ದರು.ಅವರ ಮಗ ಅದೇ ಗ್ರಾಮದ ಶಾಲೆಗೆ ಸರ್ಕಾರಿ ಶಿಕ್ಷಕರಾಗಿ ಬಂದಿದ್ದರು.ಹೀಗಾಗಿ ಊರವರಿಗೆ ಈ ಮಾಸ್ಟರ್ ಮೇಲೆ ಅಪಾರ ಪ್ರೀತಿ.
ಶಿಕ್ಷಕ ಶ್ರೀಕಂಠ ಮೂರ್ತಿ ಅವರು ತಾವು ಸೇವೆ ಸಲ್ಲಿಸಿದ ಎಲ್ಲ ಶಾಲೆಗಳ ಮುಂಭಾಗದಲ್ಲಿ ಎರಡೆರಡು ತೆಂಗಿನ ಸಸಿ ನೆಟ್ಟಿದ್ದರು.ಈ ಶಾಲೆಯ ಮುಂಭಾಗದಲ್ಲಿ ಯೂ ಎರಡು ತೆಂಗಿನ ಸಸಿ ನೆಟ್ಟಿದ್ದರು.ಸಸಿ ಚಿಗುರಿ ದೊಡ್ಡ ಮರವಾಗಿತ್ತು.ಒಂದು ದಿನವೂ ರಜ ಹಾಕದೆ ಶಾಲೆಗೆ ಬಂದು ಮಕ್ಕಳಿಗೆ ಪ್ರಾಮಾಣಿಕವಾಗಿ ಪಾಠ ಮಾಡುತ್ತಿದ್ದ ಮೂರ್ತಿ ಮಾಸ್ಟರ್ ಬಗ್ಗೆ ಊರಿನವರಿಗೆ ಅಪಾರ ಗೌರವ ಇತ್ತು.
ಒಂದು ದಿನ ಆ ಗ್ರಾಮಕ್ಕೆ ಸ್ಥಳೀಯ ಶಾಸಕರು ಯಾವುದೋ ಖಾಸಗಿ ಕಾರ್ಯಮಕ್ಕೆ ಆಗಮಿಸಿದರು. ಶಾಸಕರ ಬೆಂಬಲಿಗ ಒಬ್ಬ ಶಾಲೆಯ ಬಳಿ ಬಂದು ಮಾಸ್ಟರ್ ನಮ್ಮ ಎಂ.ಎಲ್. ಎ. ಗ್ರಾಮಕ್ಕೆ ಬಂದಿದ್ದಾರೆ. ನೀವು ಬಂದು ಅವರಿಗೆ ಗೌರವ ಕೊಡಿ ಎಂದು ಒತ್ತಾಯಿಸಿದರು.
ಈ ಶಾಲೆಗೆ ನಾನು ಒಬ್ಬನೇ ಶಿಕ್ಷಕ ಇರೋದು.ನನ್ನ ಮಕ್ಕಳೇ ನನಗೆ ಹೆಚ್ಚು. ಅವರ ಭವಿಷ್ಯ ವೆ ನನಗೆ ಮುಖ್ಯ. ನಾನು ಎಂ.ಎಲ್. ಎ. ನೋಡಲು ಬರೋದಿಲ್ಲ ಎಂದು ಶಿಕ್ಷಕ ಶ್ರೀಕಂಠ ಮೂರ್ತಿ ಅವರು ಉತ್ತರ ನೀಡಿದರು.
ಮೇಷ್ಟ್ರೇ ನಮ್ಮ ಎಂ.ಎಲ್. ಏ.ಗೆ ಅವಮಾನ ಮಾಡ್ತೀರ. ನಿಮಗೆ ಸರಿಯಾಗಿ ಬುದ್ಧಿ ಕಲಿಸ್ತೇನೆ ಅಂತ ಬುಸುಗುಡುತ್ತ ಶಾಸಕರ ಬೆಂಬಲಿಗ ತೆರಳಿದ.
ಅಣ್ಣ ಆ ಮಾಸ್ಟ್ರು ನಿಮ್ಮ ನ್ನು ಭೇಟಿ ಮಾಡಲು ಬಾ ಅಂದ್ರೆ ತಲಹರಟೆ ಮಾತನಾಡುತ್ತಾನೆ ಅಂತ ಚಾಡಿ ಹೇಳಿದ.
ಈ ಬಗ್ಗೆ ಎಂ.ಎಲ್. ಏ. ತಾಲೂಕು ಶಿಕ್ಷಣ ಅಧಿಕಾರಿಗೆ ತಿಳಿಸಿದ. ಬಿ.ಇ.ಓ. ಸದರಿ ಶಿಕ್ಷಕರ ಮೇಲೆ ವಿಚಾರಣೆ ಮಾಡಿ ವರದಿ ಮಾಡುವಂತೆ ಅಂದಿನ ಶಿಕ್ಷಣಾಧಿಕಾರಿ ಗಳಾಗಿದ್ದ ಅಣ್ಣಾಜಿ ಗೌಡರಿಗೆ ಸೂಚಿಸಿದರು. ಅಣ್ಣಜಿಗೌಡರು ಸದರಿ ಗ್ರಾಮಕ್ಕೆ ತನಿಖೆಗೆ ಬಂದರು.
ಇದೇ ಗ್ರಾಮದ ಜನತೆ ಶಿಕ್ಷಕ ಶ್ರೀಕಂಠ ಮೂರ್ತಿ ಅವರ ಪರ ನಿಂತರು.ನಮ್ಮೂರಿನ ಮಕ್ಕಳು ಅಭಿವೃದ್ಧಿಯಾಗಲು ಈ ಮೇಷ್ಟ್ರೇ ಬೇಕು ಅಂತ ವಿಚಾರಣಾ ಅಧಿಕಾರಿಗಳಿಗೆ ಬರೆದುಕೊಟ್ಟರು.ಸದರಿ ಅಧಿಕಾರಿ ಅಣ್ಣಾಜಿ ಗೌಡ ಅವರು ಬಿ.ಇ.ಓ. ಅವರಿಗೆ ಇಡೀ ಗ್ರಾಮ ಶ್ರೀಕಂಠ ಮೂರ್ತಿ ಅವರ ಹಿಂದೆ ನಿಂತಿದ್ದಾರೆ.ಅವರು ಬರಿ ಮಾಸ್ಟ್ರು ಮಾತ್ರ ಆಗಿಲ್ಲ ಆ ಊರಿನ ಮನೆ ಮಗನಂತೆ ಇದ್ದಾರೆ.ಅವರು ಖಾಸಗಿ ಕಾರ್ಯಕ್ರಮಕ್ಕೆ ಹೋದ ಶಾಸಕರಿಗೆ ಭೇಟಿ ಮಾಡಲು ಹೋಗದೆ ಇದ್ದದ್ದು ತಪ್ಪಲ್ಲ.ಅದು ಸರ್ಕಾರಿ ಕಾರ್ಯಕ್ರಮ ಅಲ್ಲ.ಅವರ ವರ್ತನೆ ತಪ್ಪಲ್ಲ ಎಂದು ವರದಿ ನೀಡಿದರು.
ಅಧಿಕಾರಸ್ಥ ರಾಜಕಾರಿಣಿಗಿಂತ ನನಗೆ ಮಕ್ಕಳ ಭವಿಷ್ಯವೆ ಮುಖ್ಯ ಎಂದು ಸಾರಿದವರು ನನ್ನ ತಂದೆ ಹಾಗೂ ಶಿಕ್ಷಕರಾದ ಬಿ.ಹೆಚ್. ಶ್ರೀಕಂಠ ಮೂರ್ತಿ ಅವರು.ಅವರ ದಕ್ಷತೆಗೆ ಒಂದು ಸಲಾಂ
ಭೇರ್ಯ ರಾಮಕುಮಾರ್
ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಪುರಸ್ಕೃತರು
ಸಾಹಿತಿಗಳು ,ಮೈಸೂರು

