Homeಲೇಖನಭಾಮಿನಿ ಕೀರ್ತನೆಗಳು: ಕವನ ಸಂಕಲನ ವಿಮರ್ಶೆ 

ಭಾಮಿನಿ ಕೀರ್ತನೆಗಳು: ಕವನ ಸಂಕಲನ ವಿಮರ್ಶೆ 

                ‘ಭಾಮಿನಿ ಕೀರ್ತನೆಗಳು’ ಇದೊಂದು ಅಪರೂಪದ ಕವನ ಸಂಕಲನ.ಭಾಮಿನಿ ಷಟ್ಪದಿಯಲ್ಲಿ ರಚಿಸಲ್ಪಟ್ಟ ಈ ಕವನ ಸಂಕಲನದ ಕರ್ತೃ ಶ್ರೀಮತಿ ಸಾವಿತ್ರಿ ಹಟ್ಟಿಯವರು. ಶ್ರೀಕ್ರಷ್ಣನ ಅಪ್ಪಟ ಪರಮ ಭಕ್ತೆಯಾದ ಲೇಖಕಿ ಸಾವಿತ್ರಿ ಹಟ್ಟಿ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದವರು. ಪತಿ ಪ್ರಭಾಕರ ಡಿ.ಸಿ.ತಂದೆ ವೆಂಕಪ್ಪ-ತಾಯಿ ಸತ್ಯಮ್ಮ.ಕೃಷಿಕ ಕುಟುಂಬದಲ್ಲಿ ಜನಿಸಿದ ಇವರು ಗ್ರಾಮೀಣ ಬದುಕು ಪ್ರಿಯರು. ಈಗ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ನಾಗಸಂದ್ರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಥೆ,ಕವನ, ಪ್ರಬಂಧ ಬರಹಗಾರರಾಗಿರುವರು.ಸಂಯುಕ್ತ ಕರ್ನಾಟಕ, ಹಾಯ್ ಬೆಂಗಳೂರು,ಕನ್ನಡ ಪ್ರಭ, ಪಂಜು, ವಿಜಯವಾಣಿ, ಸಖಿ, ಪ್ರೇರಣಾ, ಪ್ರಾಫಿಟ್ ಪ್ಲಸ್ ಇತ್ಯಾದಿ ಪತ್ರಿಕೆಗಳಲ್ಲಿ ಈ ಶಿಕ್ಷಕಿಯ ಹಲವಾರು ಬರಹಗಳು ಪ್ರಕಟವಾಗಿರುತ್ತವೆ.
‘ವಿನಾಯಕನಿಗೆ ಸತ್ಯಭಾಮೆಯ ಸ್ವಾಗತ, ‘ಸತ್ಯವಾನ ಸಾವಿತ್ರಿ ದೇವಿಯ ಚರಿತಾಮ್ರತ’, ಗಂಗಾ ಮಾತಾ ಸ್ತುತಿ’ ‘,ಸತ್ಯ ಮಾಧವನೆಂಥ ಮಹಿಮನು,’ ‘ಮಾನ್ಯನೊಬ್ಬನೆ ದೇವ ದೇವನು,’ ‘ಸೊಲ್ಲು ಸೊಲ್ಲಿಗು ಹರಿಯ ನೆನೆಯುತ,’ ‘ದಿಟ್ಟಿಯಾಗಿದೆ ಚಲುವ ಶಾಮಗೆ’, ‘ಕೇಶವನ ದಯದಿ,’ ಇತ್ಯಾದಿ ಅಯಸ್ಕಾಂತದಂತಹ ಶೀರ್ಷಿಕೆಯಲ್ಲಿ ಒಟ್ಟು ಇಪ್ಪತ್ತೈದು ಕೀರ್ತನೆಗಳು ಹರಿಯ ಮಹಾ ಮಹಿಮೆಯನ್ನು ಈ ಕ್ರತಿಯುದ್ದಕ್ಕೂ ಸಾರಿ ಸಾರಿ ಅರುಹುವಂತಿವೆ.
   ಓದಿಸಿಕೊಂಡು ಹೋಗುತ್ತಾ ಕುತೂಹಲ ಕೆರಳಿಸುವ ಬರವಣಿಗೆಯ ಶೈಲಿ ಮತ್ತೆ ಮತ್ತೆ ಓದಬೇಕೆಂಬ ಹಂಬಲ ಸ್ಫುರಿಸುವಂತಿರುವ ಕೀರ್ತನ ಕುಸುಮಗಳನ್ನು ರಚಿಸಿರುವ ಲೇಖಕಿಯ ಕಲಾಕೌಶಲ್ಯವುಳ್ಳ ಕೃತಿಯೆಂಬುದರಲ್ಲಿ ಉತ್ಪ್ರೇಕ್ಷೆಯೇನಿಲ್ಲ.

“ಕವಿಯ ಹ್ರದಯವೊಂದು ವೀಣೆ, ಲೋಕವದನು ಮಿಡಿವುದು.” ಸೃಜನಶೀಲ ಕವಿ ಮನಸ್ಸು ಲೋಕದ ಎಲ್ಲಾ ಆಗುಹೋಗುಗಳಿಗೆ ಸ್ಪಂದಿಸುತ್ತದೆ ಎಂಬ ಕವಿವಾಣಿಯು ಹೃದಯಂಗಮವಾಗಿದೆ. ಅತಿಸೂಕ್ಷ್ಮ ಹಾಗೂ ಗಂಭೀರ ಭಾವನೆಗಳನ್ನು ಆರು ಸಾಲಿನಲ್ಲಿ ಅಭಿವ್ಯಕ್ತಪಡಿಸಿರುವ ಭಾವಪೂರ್ಣ ಭಾಷಾಶೈಲಿ ಬದ್ಧತೆ ಧ್ವನಿಸುವ ಸಂಗೀತಾತ್ಮಕತೆ ಮನೋಜ್ಞವಾದಂತಹವು ಎಂಬುದು ಶ್ರೀಮತಿ ಶಾಲಿನಿ ರುದ್ರಮುನಿಯವರ ಅಭಿಪ್ರಾಯವಾಗಿದೆ.

ಧರಿಸಿ ರುಳಿಯನು ಬಾಳೆ ನಲಿದಳು
ಮೆರೆಸಿ ಮೆಂಟಿಯ ಪಾದ ಕಮಲಕೆ
ಒರೆಸಿನೆಲವನುನಸುಕಿನಲ್ಲಿಹಸನುಗೊಳಿಸಿದಳು!”
ಹೀಗೆ ಪ್ರಾರಂಭವಾಗುವ ಕಾವ್ಯ ಮಾಲೆಯು ಸಂಪ್ರದಾಯದಂತೆ ಕಾವ್ಯದ ಒಳಹೋಗುವ ಮುನ್ನ ಗಣನಾಯಕನಿಗೆ  ಸತ್ಯಭಾಮೆ ಸ್ವರೂಪಿಣಿ ಕವಿಯಿತ್ರಿ ಸ್ವಾಗತಿಸುವ  ಷಟ್ಪದಿಯ ಪರಿ ಮನಮೋಹಕವಾಗಿದೆ. ಎಲ್ಲಕ್ಕಿಂತ ಗಮನ ಸೆಳೆದಿದ್ದು ಬಜ್ಜಿ ಬೋಂಡಾ ವಸ್ತುವುಳ್ಳ ಕೀರ್ತನೆಯು ಸರ್ವರ ಬಾಯಲ್ಲಿ ನೀರೂರಿಸುವಂತಹದಾಗಿದೆ !.ಉದಾ-

“ಶಾಲೆ ಬಿಡುತಲೆ ಮಳೆಯು ಹಿಡಿಯಲು
ನಲ್ಲೆ ಬಂದಳು ಮನೆಗೆ ನಡಗುತ
ನಲ್ಲಕೇಳಿದಬಜಿಯಮಾಡೆಲೆಬಾಲೆಕೋಮಲೆಯೆ!
ಒಲ್ಲೆ ಎನಲು ಮನಸು ಬಾರದೆ
ಮೆಲ್ಲ ಮೆಲ್ಲನೆ ಹದವ ಜೋಡಿಸಿ
ಬಲ್ಲಿದವನನು ಮನದಿ ನೆನೆದಳು ನಲ್ಲೆ ಶಾಮಲೆಯು!”.

“ಹೆಸರು ಕಾಳಿನ ಜೊತೆಗೆ ಸೇರಿಸಿ
ತುಸುವೆ ಅಲಸಂದಿಯನು ಕೂಡಿಸಿ
ಹಸಿಯಕಡಲೆಯಬೇಳೆಬೆರೆಸಿದಹಿಟ್ಟುಕಲೆಸಿದಳು!
ಎಸಳು ಈರುಳ್ಳಿಯನು ಸೇರಿಸಿ
ಹಸಿಯ ಕೊತ್ತಂಬರಿಯ ಬೆರಸುತ
ತುಸುವೆಜೀರಿಗೆಮೆಣಸುಉಪ್ಪನುಹದಕೆಬಳಸಿದಳು!”

ಮಳೆಗಾಲದ ತಂಪೆನಿಸುವ ದಿನಗಳಲ್ಲಿ ಶಾಲೆ ಬಿಟ್ಟು ಮನೆಗೆ ಬಂದರೆ ಬೋಂಡಾ ಬಜಿಯ ಘಮ ಘಮ ಸುವಾಸನೆಯ ಅಮಲು ಶಬ್ದಾಲಂಕಾರ ಸ್ವರೂಪದಲ್ಲಿದ್ದು  ಅದರ ರುಚಿ ಮನಸೂರೆಗೊಳ್ಳುವಂತೆ ಚಿತ್ರಿತವಾಗಿದೆ.

   ಹಾಗೆ ರಾತ್ರೋರಾತ್ರಿ ಪ್ರಸಿದ್ದಿ ಪಡೆದ ಕುಂಭಮೇಳದ ಮೊನಾಲಿಸಾಳ ಷಟ್ಪದಿಯೂ ಕೂಡಾ ಗಮನ ಸೆಳೆಯುವಂತಿದೆ. ಲೇಖಕಿ ತಾನು  ನಿತ್ಯ ಸೇವೆ ಗೈವ ಶಾಲೆಯ ಬಗ್ಗೆಯೂ ವಸ್ತು ವಿಷಯ ಬಳಸಿ ಷಟ್ಪದಿಯಲ್ಲಿ ಕಟ್ಟಿಕೊಟ್ಟಿರುವದು ಯಥೋಚಿತವಾಗಿದೆ.

ಕವಯಿತ್ರಿಯ ಎಂಥ ಅತ್ಯದ್ಭುತ ಪರಿಕಲ್ಪನೆಯ ಷಟ್ಪದಿಗಳಿವು ನೋಡಿ!. ಕನ್ನಡ ಭಾಷೆಯನ್ನು ಅದರ ಕಾವ್ಯ ಪರಂಪರೆಯನ್ನು ಅತ್ಯಂತ ಕಾಳಜಿಪೂರ್ವಕ ಅಭಿಮಾನದಿಂದ ರಚಿಸಿದ ರೀತಿಯು ,’ ರೀತಿರಾತ್ಮಾ ಕಾವ್ಯಸ್ಯ’ ವ್ಯಾಖ್ಯೆಯನ್ನು ಧ್ವನಿಸುವಂತಿದೆ.ಹೀಗೆ ಪ್ರತಿ ಕವನವು ಹೊಸತನವನ್ನು ತೊಟ್ಟು ನಿಂತಾಗಲೂ ನದಿಯ ಗಮ್ಯ ಶರಧಿ ಎಂಬಂತೆ ಕೊನೆಗೆ ಬಂದು ಸೇರುವುದು ಆ ಸಾಗರ ನಿವಾಸಿ ವಿಷ್ಣುವಿನಲ್ಲಿಯೇ.

ನಮ್ಮ ಹಳಗನ್ನಡ ನಡುಗನ್ನಡ ಕಾವ್ಯ ಸಂಪತ್ತು ಕಣ್ಮರೆಯಾಗಿ ಮುಕ್ತ ಛಂದಸ್ಸಿನ ಕವನಗಳ ರಚನೆಯಲ್ಲಿ ನಿರತರಾಗಿರುವ ಈ ಕಾಲಘಟ್ಟದಲ್ಲಿ ಇದಕ್ಕೆ ಸವಾಲೆಂಬಂತೆ ಅಧ್ಯಯನ ಅಧ್ಯಾಪನ ಪ್ರಿಯರಾದ ಲೇಖಕಿ ಮತ್ತೆ ಷಟ್ಪದಿ ಕಾವ್ಯ ಪಳೆಯುಳಿಕೆ ಪರಂಪರೆಯ ತಾಂತ್ರಿಕ ಯುಗದ ಮಹಿಳಾ ರೂವಾರಿಯಾಗಿರುವದು ಸ್ತುತ್ಯರ್ಹವಾದುದು.

ಈ ಕೃತಿಯ ಕೀರ್ತನೆಗಳುದ್ದಕ್ಕೂ ಬಿತ್ತರಿಸಿರುವ ಭಾವಗಳಲ್ಲಿ ತವರೂರನ್ನು ನೆನೆಯುವ ಮಗಳಾಗಿ, ಶಾಲಾಮಕ್ಕಳ ಭವಿಷ್ಯದ ದಿಕ್ಸೂಚಿ ಮಾರ್ಗದರ್ಶಕಿಯಾಗಿ, ಶಾಲಾ ಮಕ್ಕಳು ರಜೆಯಲ್ಲಿ ದೂರವಾದಾಗ ಅವರಿಗಾಗಿ ಹಂಬಲಿಸುವ ತಾಯಿಯಾಗಿ,ಪತಿ ಪ್ರಭುವಿನ ಸವಿ ಖಾದ್ಯ ಸಿದ್ಧಪಡಿಸುವ ಮನದರಸಿಯಾಗಿ, ಎಲ್ಲಕ್ಕಿಂತ ಮಿಗಿಲಾಗಿ ಈ ಲೋಕನಾಥನ ಪರಮಪ್ರಿಯ ಸದ್ಭಕ್ತಳಾಗಿ, ಬಡತನದ ಬವಣೆಯ ಬದುಕಿನ ಕಷ್ಟಕಾರ್ಪಣ್ಯಗಳಲ್ಲಿ’ ಈಸಿ ಜೈಸಿದ ‘ ಸಾವಿತ್ರಿಯ ಜೀವನೋತ್ಸಾಹ ಪ್ರಶಂಸಾರ್ಹವಾದುದು.

ಹೆತ್ತ ತಾಯಿಗಿಂತ ಮಿಗಿಲಾಗಿ ಪೋಷಕರಾಗಿ ತನ್ನ ಬಾಳಿಗೆ ಬೆಳಕಾದ ಆತ್ಮೀಯ ಸಹೋದರಿ ದಿ.ಮಹಾದೇವಿ ಅಕ್ಕ ಮತ್ತು ಪೂಜ್ಯ ಗುರುಮಾತೆ ದಿ.ಕಾಶೀಬಾಯಿ ಸಿದ್ಧೋಪಂತ ಇವರೀರ್ವರ ಸಂಸ್ಮರಣೆಗಾಗಿ ಈ ಕೃತಿರತ್ನವನ್ನು ಲೇಖಕಿ ಹೃತ್ಪೂರ್ವಕವಾಗಿ ಭಕ್ತಿಯಿಂದ  ಸಮರ್ಪಿಸಿ ಕೃತಾರ್ಥರಾಗಿರುವರು. ಶ್ರೀಮತಿ ಶಾಲಿನಿ ರುದ್ರಮುನಿಯವರ ಮುನ್ನುಡಿ ಮತ್ತು ಶ್ರೀಮತಿ ಪ್ರಮೀಳಾ ಸವಡಿ ಇವರ ಬೆನ್ನುಡಿಯ ಅಮೂಲ್ಯ ಬರಹಗಳು ಈ ಕೃತಿಗೆ ಕಳಶಪ್ರಾಯದಂತಿವೆ.ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದೇವನಹಳ್ಳಿ ಗ್ರಾಮದ ಅಚ್ಯುತ ಪ್ರಕಾಶನದವರು ಈ ಕವನ ಸಂಕಲನವನ್ನು ಆಕರ್ಷಕ ಮುಖಪುಟ ವಿನ್ಯಾಸದೊಂದಿಗೆ ಪ್ರಕಟಿಸಿದ್ದಾರೆ. ಅಂತರ್ಜಾಲದ ಹುಚ್ಚು ವ್ಯಾಮೋಹದ ಪರಿಸರದಲ್ಲಿರುವ ಇಂದಿನ ಯುವ ಬರಹಗಾರರಿಗೆ ಭಾಮಿನಿ ಷಟ್ಪದಿಯನ್ನೊಳಗೊಂಡಿರುವ ಆದಿಪ್ರಾಸದಿಂದೊಡಗೂಡಿರುವ ಪ್ರತಿಯೊಂದು   ಕೀರ್ತನೆಗಳಲ್ಲಿ ಲೇಖಕಿಯ ಸರಳ ಸಹಜ ಭಾಷಾ ಸೊಗಡಿನ ವೈಖರಿ ತುಂಬಾ ಸ್ವಾರಸ್ಯಕರವಾಗಿ ಒಡಮೂಡಿಬಂದಿರುತ್ತದೆ. ಔಚಿತ್ಯಪೂರ್ಣ ಶೀರ್ಷಿಕೆಯುಳ್ಳ , ಶ್ರೀ ಕೃಷ್ಣನ ವೈವಿಧ್ಯಮಯ ಮಹಿಮೆಯನ್ನು ಕೃತಿಯುದ್ದಕ್ಕೂ ಲೇಖಕಿ ಕೊಂಡಾಡಿರುವದು ಅವರ ಅಧ್ಯಾತ್ಮದೊಲವಿಗೆ ಹಿಡಿದ ಕೈಗನ್ನಡಿಯಂತಾಗಿದೆ. ನವೋದಯ, ನವ್ಯ ಸಾಹಿತ್ಯ, ಪ್ರಿಯರಾಗಿರುವ ಈ ಯುಗದ ಸಾಹಿತಿಗಳು ಛಂದೋಲಯಬದ್ಧ ಕೃತಿ ರಚನೆಯಿಂದ ಬಲು ದೂರವಾಗಿರುವ ಇಂದಿನ ದಿನಮಾನದಲ್ಲಿ ನನ್ನ ಅಚ್ಚುಮೆಚ್ಚಿನ ವಿದ್ಯಾರ್ಥಿನಿಯು ಭಾಮಿನಿ ಷಟ್ಪದಿಯಲ್ಲಿ ಹರಿಸಿರುವ ವಿಶಿಷ್ಟ ಅನುಭಾವ ಲಹರಿ ‘ಭಾಮಿನಿ ಕೀರ್ತನೆಗಳು’ ಎಂಬ ಈ ಕೃತಿಯು ಕನ್ನಡ ಸಾಹಿತ್ಯದ ಸಾಹಿತಿಗಳಿಗೆ ಅತ್ಯಂತ ಅಪೂರ್ವ ಅತ್ಯುಪಯುಕ್ತ ವಿಚಾರಧಾರೆಯುಳ್ಳ ಮಾದರಿ ಪುಸ್ತಕವೆಂಬುದರಲ್ಲಿ ಅತಿಶಯೋಕ್ತಿಯೇನಿಲ್ಲ ಎಂಬ ಇನ್ನೋರ್ವ ವಿದ್ಯಾರ್ಥಿನಿ ಸಖಿ, ಶಿಕ್ಷಕಿ ಪ್ರಮೀಳಾ ಸವಡಿ ಅವರ ಅಭಿಪ್ರಾಯ ಚೋತೋಹಾರಿಯಾಗಿದೆ.ಛಂದೊಬದ್ಧ ಕಾವ್ಯ ರಚನೆ ಸಾವಿತ್ರಿಯ ಅದಮ್ಯ ಸುಪ್ತ ಪ್ರತಿಭೆಗೆ ಸಾಕ್ಷಿಯಂತಿದೆಯಲ್ಲದೆ ಷಟ್ಪದಿ ಬರಹಗಾರರಿಗೆ ಸ್ಪೂರ್ತಿಯ ಸೆಲೆಯೇ ಆಗಿದ್ದು ಸರ್ವರೂ ಓದಲೇಬೇಕಾದ ಅನುಪಮ ಕಾವ್ಯ ಸಂಕಲನವೆಂಬುದು ಅಕ್ಷರಶಃ ಸತ್ಯ.ಸಾವಿತ್ರಿಯವರ ಈ ಸಂಕಲನದ ಭಾಮಿನಿ ಷಟ್ಪದಿಯ ಕೀರ್ತನೆಗಳು ಕನ್ನಡಿಗರ ಮನೆ ಮನಗಳನ್ನು ತಲುಪಿ ಸಹೃದಯ ಗಾಯಕರ ಮನಮಿಡಿಯುವದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ ಎಂಬುದಂತೂ ಅಕ್ಷರಶಃ ಸತ್ಯ !!

 ಮುಂದಿನ ದಿನಮಾನಗಳಲ್ಲಿ ಇನ್ನಷ್ಟು ಮತ್ತಷ್ಟು ಪ್ರಬುದ್ಧ,ಆಳವಾದ ಅನುಭವಪೂರಿತ ಸೃಜನಶೀಲ ಸಾಹಿತ್ಯ ನನ್ನೊಲವಿನ ವಿದ್ಯಾರ್ಥಿನಿಯಿಂದ  ಸೃಜಿಸುವಂತಾಗಲಿ ಎಂದು ಶುಭ ಹಾರೈಸುವೆನು.
*****—-*****
ಪ್ರೊ. ಶಕುಂತಲಾ.ಚನ್ನಪ್ಪ. ಸಿಂಧೂರ.
ಸಾಹಿತ್ಯ ಸಂಶೋಧಕರು, ವಿಮರ್ಶಕರು.ಗದಗ
RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group