ಬೆನ್ನತಟ್ಟುವರ ಸಭೆಯೊಳಗ ಅಣ್ಣಯ್ಯ
ಹೊನ್ನ ತುಂಬುವರ ಉಡಿಯೊಳಗ.”ಎಂಬ ಜಾನಪದ ಗರತಿಯರ ನುಡಿಗಡಣದಂತೆ ಡಾ.ಶಶಿಕಾಂತ ಪಟ್ಟಣರವರು ಬೆನ್ನೆಲುಬಿನಂತೆ ಹುರಿದುಂಬಿಸಿ ಈ ಕೃತಿಯನ್ನು ಪ್ರಕಟಿಸಲು ಕವಯಿತ್ರಿಯರ ತುಂಬಾ ವರುಷಗಳ ಉತ್ಕಟ ಹೆಬ್ಬಯಕೆಯ ಕನಸು ನನಸಾಗಿ ಸಾಕಾರಗೊಂಡು ಬೀದರಿನ ಬಸವಕಲ್ಯಾಣದಲ್ಲಿ ಬಿಡುಗಡೆಯಾದ ನಂತರ ಸಹೃದಯರ ಕೈಸೇರುವಂತಾದುದು ರೋಮಾಂಚನಕಾರಿ ಸಂಗತಿಯೇ ಸರಿ.
ಬಾಡದಿರಲಿ ಸ್ನೇಹ ಪ್ರೀತಿ, ಮುಗುಳು ನಗೆ ಮಲ್ಲಿಗೆ, ಹೆಣ್ಣು ಬಾಳ ಹೊನ್ನು,ಅವ್ವನ ಮಡಿಲು,ಮುಗುಳು ನಗೆಗೆ ಮುಪ್ಪಿಲ್ಲ, ತುತ್ತಿನೊಳಗೊಂದು ಮುತ್ತು, ಬಿರಿದ ನೆಲ ನಕ್ಕಿತು, ಕತ್ತಲೆಯ ಏಣಿ,ಕುದಿಯುತ್ತಿದೆ ಕಡಲು, ಇಳೆಗೆ ಉಡುಗೊರೆ, ಸೂರು ಕಳೆದುಕೊಂಡವರು, ಮುಪ್ಪು, ಬಳಲಿದ ಭೂಮಿ,ಮೌನ ವೀಣೆ ಮಿಡಿಯಿತು, ಬಾಳಿನ ಬೆಳಕು ನನ್ನವ್ವ,ಜೀವಂತ ಶವ, ಶಾಂತಿಯ ಲೋಕ, ಇತ್ಯಾದಿ ಒಟ್ಟು ಎಂಭತ್ತು ಕವನಗಳನ್ನೊಳಗೊಂಡಿರುವ ಕ್ರೃತಿಯಾಗಿರುತ್ತದೆ.
ಬದುಕಿನ ಪಯಣದಲ್ಲಿ ಜೋಡೆತ್ತಿನ
ಬಂಡಿಯಾಗುವ ಆಸೆ ಪ್ರೀತಿಯ
ಇಬ್ಬನಿಗಾಗಿ ಹಂಬಲಿಸಿಹ
ಪ್ರೀತಿಯ ಸಾಗರವೆ ಕೈಗೆಟುಕಿದರೆ
ಮನಸು ಬಯಸುವುದು
ಒಂದೇ ಬಾಡದಿರಲಿ ಪ್ರೀತಿ
ಬಾಡದಿರಲಿ ಸ್ನೇಹ
ಆರದಿರಲಿ ಪ್ರೀತಿಯ ಕಾವು
‘ ಬಾಡದಿರಲಿ ಸ್ನೇಹ ‘ ಶೀರ್ಷಿಕೆಯುಳ್ಳ ಈ ಕವನದ ಸಾಲುಗಳು ಓದುಗರ ಮನಂಬುಗುವಂತೆ ಚಿತ್ರಣಗೊಂಡಿರುತ್ತವೆ. ಭೂಲೋಕದಲ್ಲಿ ಉತ್ಪಾದಿಸುವ ಪ್ರತಿಯೊಂದೂ ಒಂದಿಲ್ಲೊಂದು ರೂಪದಲ್ಲಿ ಬಾಡುವಂತಹವುಗಳೇ ಆದರೆ ಸ್ನೇಹ ಮಾತ್ರ ಬಾಡದಿರುವಂತಹದು ಎಂಬ ಕವಿಯಿತ್ರಿಯ ಪರಿಕಲ್ಪನೆ ‘ನಿತ್ಯಂ ಪೊಸತು’ ಉಕ್ತಿಯಂತೆ ಸದಾಕಾಲ ಹಚ್ಚಹಸಿರು ಆಗಿಯೇ ಕಂಗೊಳಿಸುವಂತಹದೆಂಬುದಕ್ಕೆ ಶ್ರೀಕ್ರೃಷ್ಣ- ಸುಧಾಮ, ದುರ್ಯೋಧನ-ಕರ್ಣ ಮೊದಲಾದವರ ಸ್ನೇಹ ಸಾಂಗತ್ಯ ಇಂದಿಗೂ ಬಾಡದಂತೆ ಉಳಿದು ಬಂದಿರುವುದು ಸರ್ವರಿಗೂ ಅನುಭವಗೋಚರವಾದುದು.
‘ಮುಗುಳುನಗೆ ಮಲ್ಲಿಗೆ’ಈ ಕವನದಲ್ಲಿ ಮೂಡಿರುವ ವಿಶಿಷ್ಟ ಭಾವ ಹೀಗಿದೆ-
ಪ್ರಸವ ವೇದನೆಯನ್ನು ನುಂಗಿ
ಮಗುವಿಗೆ ಜನ್ಮ ನೀಡಿ ನಿದ್ದೆ
ಗಣ್ಣಲ್ಲಿ ಮುಗುಳು ನಗೆ ನಗುವ
ಕಂದನ ನೋಡಿ ಮರಿತಾಳ
ತನ್ನೆಲ್ಲ ನೋವಾ ಮಡದಿ
ಮುಗುಳು ನಗೆ ನಗತಾರ
ಮಗುವಿನ ಜನ್ಮದಾತ
ನಗು ತುಂಬಿರಲು ಮಲ್ಲಿಗೆಯಂತೆ ನಗುವ
ಮಗುವೆ ಮುಗುಳು ನಗೆ ಮಲ್ಲಿಗೆ
ಕವಿ ಸಮಯದಲ್ಲಿ ಚಿಲುಮೆಯಂತೆ ಚಿಮ್ಮಿರುವ ದೃಷ್ಟಾಂತದಿಂದೊಡಗೂಡಿರುವ ಸಹಜಾನುಭವವುಳ್ಳ ಈ ಕವನದ ವಸ್ತು ವಿಷಯ ಸಾರ್ವಕಾಲಿಕವಾದುದು.
ಸಿಂದಗಿ ತಾಲೂಕಿನ ಹಿರಿಯ ಅನುಭವಿಗಳಾದ ಶ್ರೀಮತಿ ಬಸಮ್ಮ ಭರಮಶೆಟ್ಟಿಯವರು ಬಸವಾದಿ ತತ್ವಗಳನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಅದನ್ನು ಜನಸಾಮಾನ್ಯರಿಗೆ ತಲುಪಿಸಲು ಮಾಡುತ್ತಿರುವ ಕಾರ್ಯ ಅತ್ಯಂತ ಶ್ಲಾಘನೀಯ.ಎಲ್ಲ ಶರಣ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸಬೇಕೆಂಬ ಮಹಾನ್ ಕಾಳಜಿಯುಳ್ಳ ಇವರು ಸಾಮಾಜಿಕ ಹಾಗೂ ತಾತ್ವಿಕ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ಅನೇಕ ಕವನಗಳನ್ನು ರಚಿಸಿದ್ದಾರೆ.ಈ ಎಲ್ಲಾ ಕವನಗಳು ಆಡುನುಡಿ ಸೊಗಡಿನಲ್ಲಿ ಅತ್ಯುತ್ತಮ ಶೈಲಿಯಲ್ಲಿ ನಿರಕ್ಷರರಿಗೂ ಸರಳವಾಗಿ ಅರ್ಥವಾಗುವ ಭಾಷೆಯಲ್ಲಿ ನಿರೂಪಿಸಿರುವದರಿಂದ ಸರ್ವರ ಮನಮುಟ್ಟುವಂತೆ ಹೃದಯ ತಟ್ಟುವಂತಿರುತ್ತವೆಯಲ್ಲದೇ ಶರಣ ತತ್ವದ ಆಧಾರಿತ ಆಧ್ಯಾತ್ಮಕ ಸಂಘದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅನೇಕ ಹಿರಿಯ ಸಾಹಿತಿಗಳ ಚಿಂತಕರ ಒಡನಾಟದ ಪರಿಸರವುಳ್ಳ ಸಾಹಿತ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದು ಈ ಕವನ ಸಂಕಲನದ ಬರಹಗಾರರಾದ ಶ್ರೀ ನಿತ್ಯಾನಂದ ಶಿವಯೋಗಿಗಳು ಶ್ರೀ ಸಂಗನ ಬಸವೇಶ್ವರ ಆರೂಢ ಮಠ ರಾಂಪೂರ ಪಿ.ಏ.ಈ ಪರಮ ಪೂಜ್ಯರ ಅಮೂಲ್ಯ ಮುನ್ನುಡಿ ಹಾಗೂ ಈ ಕವನ ಸಂಕಲನದ ಪ್ರಕಟಣೆಗೆ ಸಹಕರಿಸಿ ಬಿಡುಗಡೆಗೆ ರಹದಾರಿ ಹುಟ್ಟು ಹಾಕಿ ಬೆನ್ನುಡಿ ಬರೆದು ಬೆಂಬಲಿಸಿರುವ ಆಧುನಿಕ ಬಸವಣ್ಣರೆಂದೆ ಜನಜನಿತರಾಗಿರುವ ಸರ್ವರ ಅಣ್ಣ ಡಾ.ಶಶಿಕಾಂತ ಪಟ್ಟಣವರ ಉತ್ಸಾಹಪೂರಿತ ಪ್ರೋತ್ಸಾಹ ಸ್ಮರಣೀಯವಾದುದು.
—**—

—ಪ್ರೊ. ಶಕುಂತಲಾ.ಚನ್ನಪ್ಪ ಸಿಂಧೂರ
ಸಾಹಿತ್ಯ ಸಂಶೋಧಕರು,ವಿಮರ್ಶಕರು,
ಗದಗ.