ಜೊಲ್ಲೆಗೆ ಪುನಃ ಸಚಿವ ಸ್ಥಾನ: ಸಿಐಟಿಯು ಖಂಡನೆ “ಅಂಗನವಾಡಿ ಕಾರ್ಯಕರ್ತೆಯರಿಗೆ ಸೌಲಭ್ಯ ಒದಗಿಸಬೇಕು”

0
469

ಬೀದರ – ರಾಜ್ಯದಲ್ಲಿ ಮೊಟ್ಟೆ ಖರೀದಿಯಲ್ಲಿ ಅವ್ಯವಹಾರ ಎಸಗಿದ ಶಶಿಕಲಾ ಜೊಲ್ಲೆ ಅವರಿಗೆ ಪುನಃ ಮಹಿಳಾ ಮಕ್ಕಳ ಅಭಿವೃದ್ದಿ ಖಾತೆ ಸಚಿವ ಸ್ಥಾನ ನೀಡುವ ಮೂಲಕ ಸರ್ಕಾರ ಭ್ರಷ್ಟಾಚಾರಿಗಳಿಗೆ ಮಣೆ ಹಾಕುತ್ತದೆ ಎಂಬುದಕ್ಕೆ ಸಾಕ್ಷಿ ಎಂದು ಸಿ.ಐ.ಟಿ.ಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಸುನಂದಾ ಗಂಭೀರ ಆರೋಪ ಮಾಡಿದರು.

ಜಿಲ್ಲೆಯ ಹುಮನಬಾದ ತಾಲ್ಲೂಕಿನಲ್ಲಿ ಶನಿವಾರ ಏರ್ಪಡಿಸಿದ್ದ ಅಂಗನವಾಡಿ ಕಾರ್ಯಕರ್ತೆಯರ ತಾಲ್ಲೂಕು ಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಬಹುಪ್ರತಿಶತ ಮಕ್ಕಳು ಅಪೌಷ್ಠಿಕತೆ ಕೊರತೆಯಿಂದ ಬಳಲುತ್ತಿರುವುದಕ್ಕೆ ಸರ್ಕಾರ ಫಲಾನುಭವಿ ಖಾತೆಗೆ ನೇರವಾಗಿ ಹಣ ಹಾಕುತ್ತಿರುವುದೇ ಕಾರಣ.

ಮೊದಲಿನಂತೆ ಆಹಾರ ಪದಾರ್ಥಗಳನ್ನು ಪೂರೈಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಯೋಜನಾ ಆಯೋಗ ರದ್ದುಗೊಳಿಸುವ ಮೂಲಕ ಯೋಜನಾರಹಿತ ಅಭಿವೃದ್ದಿಗೆ ಮುಂದಾಗಿರುವುದು ದೇಶದಲ್ಲಿನ ಹಲವು ಸಮಸ್ಯೆ ಉದ್ಭವಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.

ಕೊರೋನಾ ಮೊದಲನೆ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ಕೋವಿಡ್ ಅಲ್ಲದೆ ಹೃದಯಾಘಾತ, ಬಿಪಿ ಸೇರಿದಂತೆ ವಿವಿಧ ರೋಗಗಳಿಗೆ ಸುಮಾರು ೯೫ ಅಂಗನವಾಡಿ ಕಾರ್ಯಕರ್ತೆಯರನ್ನು ನಾವು ಕಳೆದುಕೊಂಡಿದ್ದೇವೆ ಎಂದ ಅವರು, ಪ್ರಧಾನ ಮಂತ್ರಿಗಳು ಮನ್ ಕಿ ಬಾತ್ ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಶಹಭಾಶ್ ಹೇಳುತ್ತಾರೆ, ಯಡಿಯೂರಪ್ಪ ಅವರೂ ಹೊಗಳುತ್ತಾರೆ ಇದರಿಂದ ಏನೇನೂ ಲಾಭವಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಕ್ತ ಸೌಲಭ್ಯಗಳನ್ನು ನೀಡಬೇಕು ಎಂದು ಸುನಂದಾ ಆಗ್ರಹಿಸಿದರು.

ಜಿಲ್ಲಾ ಘಟಕ ಕಾರ್ಯಾಧ್ಯಕ್ಷೆ ಶಾಂತಾ ಎನ್.ಘಂಟೆ, ಜಿಲ್ಲಾ ಅಧ್ಯಕ್ಷೆ ಸುಶೀಲಾ ಹತ್ತಿ, ಕಾರ್ಯದರ್ಶಿ ಶ್ರೀದೇವಿ ಚಿವಡೆ, ಕೋಶಾಧ್ಯಕ್ಷೆ ಪದ್ಮಾವತಿ ಸ್ವಾಮಿ, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಮಾಳ್ಗೆ ಮಾತನಾಡಿದರು.

ಶಕುಂತಲಾ, ಉಷಾದೇವಿ, ಜಯಶ್ರೀ, ವಿಜಯಲಕ್ಷ್ಮಿ, ಶಾಂತಾ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಭು ಸಂತೋಷಕರ್ ಇದ್ದರು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ