‘ಅನುಭವ ಕಳಶ ಅಮೃತ ವರುಷ’: ಅಭಿನಂದನ ಗ್ರಂಥ ವಿಮರ್ಶೆ ಲೇಖನ.

Must Read
            ‘ಅನುಭವ ಕಳಶ ಅಮೃತ ವರುಷ’  ಎಪ್ಪತೈದು ವಸಂತಗಳ ಸವಿನೆನಪಿಗಾಗಿ ‘ಅಮೃತ ಮಹೋತ್ಸವ’ ಆಚರಣೆಯ ಪ್ರತಿಬಿಂಬದಂತಿಹ ಅಭಿನಂದನ ಗ್ರಂಥವಿದು. ಗುಲಬುರ್ಗಾ ವಿ ವಿ ಯ ಪ್ರಾಣಿಶಾಸ್ತ್ರ ವಿಭಾಗದ  ಮುಖ್ಯಸ್ಥರು,ಕಲಬುರ್ಗಿಯ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಸರಸ್ವತಿ ಪಾಟೀಲ ಅವರು ಈ ಕೃತಿಯ ಗೌರವ ಸಂಪಾದಕರು.ಬಸವ ತತ್ವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರದ ಸಂಸ್ಥಾಪಕರು, ರಾಮದುರ್ಗ-ಪುಣೆಯ ಡಾ.ಶಶಿಕಾಂತ ಪಟ್ಟಣ ಅವರು ಪ್ರಧಾನ ಸಂಪಾದಕರು. ಡಾ.ಗೌರಮ್ಮ ನಾಶಿ, ಡಾ.ಜಯಶ್ರೀ ಪಟ್ಟಣ, ಡಾ.ವೀಣಾ.ಹೂಗಾರ, ಶ್ರೀಮತಿ ಜಯಶ್ರೀ ಆಲೂರ, ಶ್ರೀಮತಿ ಉಮಾ ಬಾಗಲಕೋಟ, ಶ್ರೀಮತಿ ಸುಜಾತಾ ಪಾಟೀಲ,ಡಾ.ದಾನಮ್ಮ ಝಳಕಿ ಈ ಶರಣೆಯರು ಸಂಪಾದಕ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸಿರುವರು.
ಸಮಾಜದಲ್ಲಿನ ಆದರ್ಶ ವ್ಯಕ್ತಿ ಎಂದು ನಾವು ಪರಿಗಣಿಸಬೇಕಾದರೆ ಅವರ ಸಾಧನೆ ದಾಸೋಹ ಭಕ್ತಿ ಸಮಾಜ ಮುಖಿ ಚಿಂತನೆ ಮತ್ತು ಕಾರ್ಯಗಳು ಅನುಕರಣೀಯ. ಮನುಷ್ಯ ತನಗಾಗಿ ಬದುಕದೆ ಇತರರಿಗಾಗಿ ಬದುಕುವ ಕೆಲವೇ ಕೆಲವು ಜನರಲ್ಲಿ ನಾವು ಪ್ರೊ. ಶಾರದಾ ಪಾಟೀಲ( ಮೇಟಿ )ಅಂಥವರನ್ನು ಕಾಣಬಹುದು.

ವಿಜ್ಞಾನ ಸ್ನಾತಕೋತ್ತರ ಪದವಿಧರೆಯಾದರೂ ಸಹಿತ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಜೀವನದಲ್ಲಿ ಸಕ್ರಿಯವಾಗಿ ದುಡಿಯುವ ಹಿರಿಯ, ಜೀವ ಮಾನವ ಮೌಲ್ಯಗಳಿಗೆ ನಿರಂತರ ತುಡಿತವುಳ್ಳ ಅಪರೂಪದ ವ್ಯಕ್ತಿತ್ವ ಪ್ರೊ  ಶಾರದಾ ಮೇಡಂ ಅವರದು. ಅಧ್ಯಯನ ಪರಿಸರ ಪ್ರೇಮ, ಆರೋಗ್ಯ ಚಿಂತನೆ,ಗ್ರಾಮೀಣ ಅಭಿವೃದ್ಧಿ, ಶೈಕ್ಷಣಿಕ ಗುಣಮಟ್ಟ ಹೀಗೆ ಅನೇಕ ರಂಗಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡು ಸದಾ ಹಸನ್ಮುಖಿಯಾಗಿರುವ ಮಾತೆ  ‘ಅನುಭವ ಕಳಶ ಅಮೃತ ವರುಷ’ ಎಂಬ ಅಭಿನಂದನ ಗ್ರಂಥದ ಕಥಾನಾಯಕಿ.

ಒಂದು ಶಿಲ್ಪಕೃತಿ ಹಲವು ಪೆಟ್ಟು ಉಳಿಯಿಂದ ತಿಂದಾಗಲೇ ಮೂರ್ತಿಯಾದಂತೆ ಪ್ರೊ. ಶಾರದಾ ಪಾಟೀಲ ಅವರು ಶ್ರೀಮಂತ ಮನೆತನದಲ್ಲಿ ಹುಟ್ಟಿದರೂ ಕೂಡ ತಮ್ಮ ತಂಗಿಯರ ಜವಾಬ್ದಾರಿ, ಗಂಡನ ಮನೆಯ ಕಾರ್ಯ ಜವಾಬ್ದಾರಿ ನಿರ್ವಹಣೆ, ಮಕ್ಕಳ ಓದು ಮದುವೆ,  ಮೊಮ್ಮಕ್ಕಳ ಶಿಕ್ಷಣ ಹೀಗೆ ನಿರಂತರವಾಗಿ ಗುರುತರ ಜವಾಬ್ದಾರಿ ನಿಭಾಯಿಸುತ್ತ ಕ್ರಿಯಾಶೀಲರಾಗಿರುವರು. ಇವರು ಬಸವನಬಾಗೇವಾಡಿಯ ಕರಬಂಟನಾಳದಲ್ಲಿ ಜನಿಸಿದರು. ತಂದೆಯವರು ಅಂದಿನ ಬ್ರಿಟಿಷ್ ಸರಕಾರದಲ್ಲಿ ಉನ್ನತ ಹುದ್ದೆವುಳ್ಳವರಾಗಿದ್ದರು. ತಮ್ಮ  ಸ್ನಾತಕೋತ್ತರ ಶಿಕ್ಷಣದ ನಂತರ ನರೇಗಲ್ಲಿನ ಶ್ರೀ ಅನ್ನದಾನೇಶ್ವರ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ ಅದೇ ಕಾಲೇಜಿನ ಭೌತಶಾಸ್ತ್ರದ ಪ್ರಾಧ್ಯಾಪಕರಾದ ಪ್ರೊ. ಹಣಮರೆಡ್ಡಿ ರಾಮರೆಡ್ಡಿ ಮೇಟಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ನಾಂದಿ ಹಾಡಿದರು.ಪ್ರೊ. ಹಣಮರೆಡ್ಡಿ ರಾಮರೆಡ್ಡಿ ಮೇಟಿ ಅವರು ವಿಶ್ವವಿದ್ಯಾಲಯದ ಎನ್ ಎಸ್ ಎಸ್ ಸಂಯೋಜಕರಾಗಿ ಸೇವೆಗೈದ ನಂತರ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ. ದಾನ ಧರ್ಮ, ಸಮಾಜಮುಖಿ,ಸಾಂಸ್ಕೃತಿಕ ಸೇವೆಯಲ್ಲಿ ನಿರತರಾದ  ಇವರಿಗೆ ಇರ್ವರು ಮಕ್ಕಳು. ಒಬ್ಬ ಮಗಳು-ಅಳಿಯರು ಬಾದಾಮಿಯಲ್ಲಿ ವೈದ್ಯರು.ಇನ್ನೋರ್ವ ಮಗಳು ಕೂಡ ಅಮೇರಿಕಾದಲ್ಲಿ ದಂತ ವೈದ್ಯರಾಗಿರುವರು.ತುಂಬು ಕುಟುಂಬದ ಸಂತಸ ಸಂತೃಪ್ತಿ ಸಮೃದ್ಧಿ ನೆಮ್ಮದಿ ಇದ್ದರೂ ಕೂಡ ಏನಾದರೂ ಬಸವ ತತ್ವ ಪ್ರಚಾರಕ್ಕೆ  ತಮ್ಮ ಬದುಕನ್ನು ಮೀಸಲಾಗಿರಿಸಿರುವ  ಕೀರ್ತಿಶಾಲಿಗಳಾಗಿದ್ದಾರೆ ಎಂಬುದು  ಸಂಪಾದಕೀಯ ನುಡಿಬರಹಗಾರರಾದ ಡಾ.ಶಶಿಕಾಂತ ಪಟ್ಟಣ ಅವರ ಅಭಿಪ್ರಾಯವಾಗಿದೆ.
   ವಿಜ್ಞಾನದಲ್ಲಿ ಭಾರತೀಯ ಮಹಿಳೆಯರು, ಕರ್ನಾಟಕದ ಮ್ಯಾಕ್ಸ ಮುಲ್ಲರ್ ವಚನ ಪಿತಾಮಹ ಡಾ ಫ.ಗು.ಹಳಕಟ್ಟಿ ಒಂದು ನೆನಪು,ಮುಸ್ಸಂಜೆಯ ಹೊತ್ತಿನಲ್ಲಿ,ಸ್ನೇಹಮಯಿ-ಸಮಾಜಮುಖಿ ಶಾರಕ್ಕ,ಕನ್ನಡ ಸಾಹಿತ್ಯದಲ್ಲಿ ಆತ್ಮಕತೆಗಳು, ಬಂಧು-ಬಾಂಧವರು ಇತ್ಯಾದಿ ನಲವತ್ತೇಳು ಲೇಖಕ/ಕಿಯರು ತಮ್ಮ ವೈಚಾರಿಕ ಲೇಖನಗಳನ್ನು  ಈ ಕ್ರತಿಯಲ್ಲಿ ದಾಖಲಿಸಿದ್ದಾರೆ. ನಾಡುನುಡಿ, ಸಂಸ್ಕೃತಿ, ಸಾಹಿತ್ಯ, ವಿಜ್ಞಾನ, ತತ್ವಶಾಸ್ತ್ರ ವೈವಿಧ್ಯಮಯ ವಸ್ತು ವಿಷಯಗಳನ್ನೊಳಗೊಂಡಿರುವ, ಪ್ರೊ.ಶಾರದಮ್ಮನವರ ಸಂಘರ್ಷಮಯ ಸದಾಶಯವುಳ್ಳ,ಅರಿವು ಆಚಾರ ಅನುಭಾವ ನೆಲೆ ಸೆಲೆಗಳ ಹಿನ್ನೆಲೆಯಲ್ಲಿ ಪ್ರಕಟವಾದ ಅತ್ಯಂತ ಸುಂದರ ಕ್ರತಿ ಎಂಬ ಬೆನ್ನುಡಿ ಅಮೂಲ್ಯ ಬರಹಗಾರರು,ಪ್ರಖ್ಯಾತ ಸಂಶೋಧಕರು ಮತ್ತು ಜಾನಪದ ತಜ್ಞರಾದ ಡಾ.ವೀರಣ್ಣ ದಂಡೆ ಅವರ ಅಭಿಪ್ರಾಯ ಸ್ವಾರಸ್ಯಕರವಾಗಿದೆ.

ಬಸವಣ್ಣನವರ ಜನ್ಮಭೂಮಿ ವಿಜಯಪುರದಲ್ಲಿ ಜನಿಸಿದ ತಾಯಿ ಪ್ರೊ‌.ಶಾರದಮ್ಮನವರು  ನಡೆ-ನುಡಿ ಒಂದಾಗಿಸಿ ಕೊಂಡು,ಕಾಯಕ ನಿಷ್ಠೆಯಲ್ಲಿ ಜಾಗ್ರತರಾಗಿ ಪಾವನ ಬದುಕನ್ನು ತಮ್ಮದಾಗಿಸಿಕೊಂಡವರು ಎಂಬುದು ಗುಳೇದಗುಡ್ಡದ ಶ್ರೀ.ಮ.ನಿ.ಪ್ರ.ಒಪ್ಪತ್ತೇಶ್ವರ ಮಹಾಸ್ವಾಮೀಜಿಯವರು ಆಶಯ ನುಡಿಗಳನ್ನು ಅಭಿವ್ಯಕ್ತಪಡಿಸಿರುವರು.

ಅಕ್ಕನ ಅರಿವು, ವಚನ ಅಧ್ಯಯನ ವೇದಿಕೆಗಳ ಸಂಯುಕ್ತ ಸಂಯೋಜನೆಯಲ್ಲಿ ಪ್ರೊ.ಶಾರದಮ್ಮನವರ ಅಮೃತ ಮಹೋತ್ಸವ ಏರ್ಪಡಿಸಿ ಅವರ ಜೀವನ ಗಾಥೆಯನ್ನು ಈ ಕ್ರತಿಯ ಮೂಲಕ ಪರಿಚಯಿಸಿರುವ ಕಾರ್ಯ ಶ್ಲಾಘನೀಯವಾಗಿದೆ. ನಮ್ಮ ಜನ್ಮಕ್ಕೆ ಜೀವ ಕೊಟ್ಟು ತಿದ್ದಿ ಬುದ್ದಿ ಹೇಳಿ ಸಮಾಜದಲ್ಲಿ ಗಣ್ಯ ವ್ಯಕ್ತಿಯನ್ನಾಗಿಸಿ ಮೂರ್ತಿ ಮಾಡಿರುವ ಮಕ್ಕಳು, ಮೊಮ್ಮಕ್ಕಳು,ಅಳಿಯರನ್ನು ಒಡಹುಟ್ಟಿದ ಮಕ್ಕಳಿಗಿಂತ ಮಿಗಿಲಾಗಿ ಪೋಷಿಸಿರುವ ಹೆತ್ತವರ ಪಾತ್ರ ಮಾದರಿಯಾದುದು. ಸ್ಪರ್ಧಾತ್ಮಕ ಜಗತ್ತಿನ ಪರಿಚಯ ಮಾಡಿ ನಮ್ಮೆಲ್ಲರ ಬದುಕಿಗೆ ಬೆಂಬಲವಾಗಿ ನಿಂತು ಕಾಮಧೇನು ಕಲ್ಪವೃಕ್ಷ ವಾಗಿರುವ,ಪರದೇಶದಲ್ಲಿದ್ದರೂ ನಿತ್ಯ ನಮಗಾಗಿ ಮಿಡಿಯುವ ಪ್ರಾಮಾಣಿಕ ಮಾತೆ  ಮಮತೆಯ ಪುತ್ಥಳಿ ಅವ್ವಾ ಸಾಹಿತ್ಯ ಸಂಸ್ಕೃತಿ ಸಮಾಜಮುಖಿ ಜೀವಿಯಷ್ಟೆ ಅಲ್ಲದೆ ಪ್ರಿಯ ಸಖಿಯಂತಿರುವದು ನಮ್ಮ ಸೌಭಾಗ್ಯ.ಬಸವಾದಿ ಶರಣರ ಸಂತರ ಶುಭಾಶೀರ್ವಾದ ಅವರಿಗೆ ಸದಾಕಾಲವಿರಲಿ ಎಂಬುದು ಡಾ.ಪ್ರೀಯದರ್ಶಿನಿ ಸುರೇಶ, ಆಶಿಷ, ಅನಿಫ ಉಗಲವಾಟ ಮತ್ತು ಡಾ.ಪ್ರತಿಭಾ, ವಿನಯ, ಮಾಹಿನ, ಮಾನಸ್ವಿ ಕುಟುಂಬ ಬಾಂಧವರ ಶುಭ ಹಾರೈಕೆಗಳಾಗಿವೆ.

ಮೈಸೂರಿನ ಶ್ರೇಷ್ಠ ವಿಭಾ ಪ್ರಕಾಶಕರು ಬಸವಾಭಿಮಾನಿಗಳಾದ ತಾರಾ ಪ್ರಿಂಟರ್ಸ್ ಮಾಲಿಕರಾದ  ಶಶಿಕುಮಾರ, ಕಾರ್ತಿಕ್ ಅವರು ಈ ಪುಸ್ತಕ ಪ್ರಕಟಿಸಿರುವರು. ಶ್ರೀಮತಿ ಜ್ಯೋತಿ  ಅವರು ಅಕ್ಷರ ಜೋಡಣೆಗೈದಿರುವರು. ಸುಂದರ ಅರ್ಥಪೂರ್ಣ ಮುಖಪುಟ ವಿನ್ಯಾಸವನ್ನು  ಅನಂತ ಅವರು ಸ್ರಜಿಸಿದ್ದಾರೆ. ಔಚಿತ್ಯ ಪೂರ್ಣ ಅನ್ವರ್ಥಕನಾಮದಂತಹ ಶೀರ್ಷಿಕೆಯುಳ್ಳ ಆಕರ ಗ್ರಂಥಪುಷ್ಪವಿದು.ನಾಡಿನ ಹಿರಿಯ ಜೀವ ಕಾಯಕ ಯೋಗಿನಿ ದಾಸೋಹ ಮೂರ್ತಿ ಪ್ರೊ.ಶಾರದಾ ಪಾಟೀಲ-ಲಿಂ.ಪ್ರೊ. ಹಣಮರಡ್ಡಿ ರಾಮರಡ್ಡಿ ಮೇಟಿ ಇವರಿಗೆ ಸಂಪಾದಕ ಮಂಡಳಿಯವರು ಗೌರವಪೂರ್ವಕವಾಗಿ ಈ ಗ್ರಂಥ ಪುಷ್ಪ ಅರ್ಪಣೆ ಮಾಡಿರುವರು .ಅಧ್ಯಯನಾಸಕ್ತರಿಗೆ, ಸಂಶೋಧಕರಿಗೆ ಮಾರ್ಗದರ್ಶನವೀಯುವಂತಹ ಸರ್ವರೂ ಓದಲೇಬೇಕಾದ ಅತ್ಯುಪಯುಕ್ತ ವಿಚಾರಧಾರೆಯ ಆಕರ ಗ್ರಂಥವಿದು ಎಂಬುದರಲ್ಲಿ  ಎರಡು ಮಾತಿಲ್ಲ.
–**–
ಪ್ರೊ. ಶಕುಂತಲಾ.ಚನ್ನಪ್ಪ. ಸಿಂಧೂರ.
ಸಾಹಿತ್ಯ ಸಂಶೋಧಕರು, ವಿಮರ್ಶಕರು.ಗದಗ 

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...

More Articles Like This

error: Content is protected !!
Join WhatsApp Group